ಚಾಮರಾಜನಗರ: ಬಡ ಮಕ್ಕಳಿಗೆ ಅನ್ನ ದಾಸೋಹ ಜೊತೆಗೆ ಅಕ್ಷರ ದಾಸೋಹವನ್ನು ಕಲ್ಪಿಸಿಕೊಡುವ ಮಹಾನ್ ಸಂತ ಶ್ರೀ ರಾಜೇಂದ್ರಸ್ವಾಮಿಗಳು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಬಣ್ಣಿಸಿದರು.
ನಗರದ ಹೊರವಲಯದ ಮರಿಯಾಲ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಜೆಎಸ್ಎಸ್ ಗ್ರಾಮೀಣ ಇನ್ಕ್ಯುಬೇಷನ್ ಮತ್ತು ಕೌಶಲ್ಯ ಅಭಿವೃದ್ದಿ ಕೇಂದ್ರ ಸಹಯೋಗದಲ್ಲಿ ಪರಮಪೂಜ್ಯ ಶ್ರೀ ಡಾ.ಶಿವರಾತ್ರಿ ರಾಜೇಂದ್ರ್ರಸ್ವಾಮಿಗಳ 108ನೆಯ ಜಯಂತಿ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜೇಂದ್ರಶ್ರಿಗಳು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಲಕ್ಷಾಂತರ ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ, ದಾಸೋಹ, ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತು ನೀಡಿದ್ದರು. ಮೂಲಭೂತ ಸೌಲಭ್ಯಗಳಾದ ಆಹಾರ ಎಲ್ಲರಿಗೂ ದೊರೆಯಬೇಕೆಂಬ ಉದ್ದೇಶದಿಂದ ದಾಸೋಹ ವನ್ನು ಆರಂಭಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಹಸಿವಿನಿಂದ ಕಲಿಕೆಗೆ ಹಿನ್ನಡೆಯಾಗಬಾರೆಂದು ಎಂದು ಹಾಸ್ಟೆಲ್ಗಳನ್ನು ಆರಂಭಿಸಿದ್ದರು. ಅಲ್ಲದೇ ಉತ್ತಮ ಆರೋಗ್ಯ ಕ್ಕಾಗಿ ಅಸ್ಪತ್ರೆಯನ್ನು ಆರಂಭಿಸಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಡುಕನಪುರದ ಹಲವಾರ ಮಠಾಧ್ಯಕ್ಷರಾದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪರಮ ಪೂಜ್ಯ ರಾಜೇಂದ್ರಶ್ರೀಗಳು ಮಹಾನ್ ತಪಸ್ವಿಗಳು ಸಮಾಜದ ಚಿಂತನೆಯೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದು ಪರಿವರ್ತನೆಯಲ್ಲಿ ಜೊತೆಗಿದ್ದವರು.
ಅವರ ತಂದ ಕಾಂತ್ರಿಕಾರಿ ಬದಲಾವಣೆಗಳು ಬಸವವಾಧಿ ಶರಣರು ಒಪ್ಪುವಂತೆ ಇದ್ದವು. ರಾಜೇಂದ್ರಸ್ವಾಮಿಗಳು ನಿಸ್ವಾರ್ಥ ಸೇವೆ ಸಲ್ಲಿಸಿದ ಫಲವಾಗಿ ಇಂದು ನಮ್ಮೆಲ್ಲರ ಮನದಲ್ಲಿ ಇದ್ದಾರೆ. ಅವರ ಸೇವೆ ಅನನ್ಯವಾಗಿದ್ದು. ಗ್ರಾಮಾಂತರ ಪ್ರದೇಶದ ಜನರ ಬಗೆಗೆ ಅವರ ಅಪಾರವಾದ ಪ್ರೀತಿ ಇತ್ತು. ಹೀಗಾಗಿ ಅವರ ಆಲೋಚನಾ ಶಕ್ತಿಯು ಸಹ ಆ ಜನರ ಮೇಲೆ ಹೆಚ್ಚಾಗಿತ್ತು. ಹೀಗಾಗಿ ಆ ಕಾಲದಲ್ಲಿ ಸರ್ಕಾರಿ ಶಾಲೆ ಇಲ್ಲದ ಹಾಗೂ ಬಸ್ಗಳು ಹೋಗದ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆದು ಅಲ್ಲಿನ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟರು ಎಂದು ಅವರ ಸೇವೆಯನ್ನು ಗುಣಗಾನ ಮಾಡಿದರು.
ಜೆಎಸ್ಎಸ್ ಕಾಲೇಜಿನ ಉಪನ್ಯಾಸಕಿ ಎಸ್. ಅಂಬಿಕಾ ದೇವಿ ನುಡಿ ನಮನ ಸಲ್ಲಿಸಿ, ಡಾ. ರಾಜೇಂದ್ರಶ್ರಿಗಳ ಬಾಲ್ಯ ಹಾಗೂ ಜೀವನದಲ್ಲಿ ನಡೆದ ಪ್ರಮುಖ ಘಟನಾವಳಿಗಳು ಮತ್ತು ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು.
ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜೇಂದ್ರಶ್ರಿಗಳು ಬಹಳ ಶ್ರಮಪಟ್ಟು ಜೆಎಸ್ಎಸ್ ವಿದ್ಯಾಪೀಠವನ್ನು ಸ್ಥಾಪನೆ ಮಾಡಿದ್ದರು. ಅವರ ಕಟ್ಟಿ ಬೆಳೆಸಿದ ಸಂಸ್ಥೆ ಇಂದು ವಿಶ್ವ ವಿಖ್ಯಾತವಾಗಿದೆ. ಇದಕ್ಕೆ ಕಾರಣ ಅವರು ಅಂದು ಪಟ್ಟ ಶ್ರಮ ಮತ್ತು ದೂರದೃಷ್ಟಿ ಕಾರಣವಾಗಿದೆ. 1981ರಲ್ಲಿ ಚಾಮರಾಜನಗರದಲ್ಲಿ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರ ಜೀವನಕ್ಕೆ ದಾರಿ ಮಾಡಿಕೊಂಡಿತ್ತು. ಇಂದು ನಮ್ಮ ಭಾಗದಲ್ಲಿ ಕೈಗಾರಿಕಾರಿಗಳು ಸ್ಥಾಪನೆಯಾಗುತ್ತಿದೆ. ಐಟಿಐ ತರಭೇತಿ ಪಡೆದವರು ಬೆಂಗಳೂರು ಮೈಸೂರಿಗೆ ಉದ್ಯೋಗ ಆರಿಸಿ ಹೋಗಬೇಕಾಗಿತ್ತು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಅದರದಲ್ಲಿಯೂ ಐಟಿಐ ತರಬೇತಿ ಪಡೆದ ಎಲ್ಲರಿಗೂ ಬೇಡಿಕೆ ಇದೆ. ಈ ಅವಕಾಶವನ್ನು ಸದ್ಬಳಕೆಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಸಂಸ್ಥೆಯ ಪ್ರಾಚಾರ್ಯ ವೈ.ಎಂ. ರವಿಚಂದ್ರ, ಜೆಎಸ್ಎಸ್ ಸಂಯೋಜಾಧಿಕಾರಿ ಬಿ.ಎಂ. ಚಂದ್ರಶೇಖರ್, ಮುಖಂಡರಾದ ಮರಿಯಾಲ ವೀರತ್ತಪ್ಪ, ಸಂಸ್ಥೆಯ ಮಹದೇವಸ್ವಾಮಿ, ಮಂಜುನಾಥ್, ಸೌಮ್ಯ, ಚಂದ್ರಪ್ಪ, ಮಹೇಶ್,ಕುಸುಮರಾಣಿ, ಪ್ರದೀಪ್ಕುಮಾರ್, ಸದಾಶಿವಮೂರ್ತಿ, ಸಿದ್ದೇಶಕುಮಾರ್, ಜಗದೀಶಬಾಬು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.