ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಹಿಂಭಾಗವಿರುವ ಸರ್ಕಾರಿ ಭೂಮಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರಸಭೆ ಅಧಿಕಾರಿಗಳ ಜೊತೆ ಪರಿಶೀಲಿಸಿದರು.
ಸಿಮ್ಸ್ ಹಿಂಭಾಗದ ಸರ್ವೆ ಸಂಖ್ಯೆ ೧೧೨ ರಲ್ಲಿ ೩೦ ಎಕರೆ ಸರ್ಕಾರಿ ಭೂಮಿಯಿದ್ದು, ಇದನ್ನು ಅಭಿವೃದ್ಧಿಪಡಿಸಿ ನಗರದ ನಿವೇಶನ ರಹಿತರಿಗೆ ವಿತರಿಸುವ ಸಂಬಂಧ ಪರಿಶೀಲಿಸಿದ ಶಾಸಕರು, ಭೂಮಿಯನ್ನು ಸಮತಟ್ಟು ಮಾಡಿ ನಿವೇಶನವಾಗಿ ಪರಿವರ್ತಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಸಹಸ್ರಾರು ಮಂದಿ ಬಡವರು ಸ್ವಂತ ನಿವೇಶನ ಹಾಗೂ ಮನೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ನಮಗೆ ನಿವೇಶನ ಕೊಡಿಸಿ ಎಂದು ನನಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಈ ಜಾಗದಲ್ಲಿ ನಿವೇಶನ ರಚಿಸಲು ಅಗತ್ಯ ಕ್ರಮ ವಹಿಸಬೇಕು ತಹಶೀಲ್ದಾರ್ ಗಿರೀಜಾ ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಕಂದಾಯ ಅಧಿಕಾರಿ ಶರವಣ, ಇಂಜಿನಿಯರ್ ಕುಮಾರ್ ಆರಾಧ್ಯ ಅವರಿಗೆ ಸೂಚಿಸಿದರು.
ನಂತರ ನಗರಸಭೆ ಕಚೇರಿಗೆ ಆಗಮಿಸಿದ ಶಾಸಕರು ಅಧಿಕಾರಿಗಳ ಸಭೆ ನಡೆಸಿದರು. ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು. ಒಳಚರಂಡಿ ಸಮಸ್ಯೆಯಾಗಬಾರದು. ಕುಡಿಯುವ ನೀರಿನ ಮೋಟಾರ್ಗಳು ಕೆಡದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ನಗರಕ್ಕೆ ೨ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲು ಮುಖ್ಯಮಂತ್ರಿ ಅವರಿಗೆ ೨ ಬಾರಿ ಮನವಿ ಮಾಡಿದ್ದೇನೆ. ಅದು ಜಾರಿಯಾದರೆ ನೀರಿಗೆ ಸಮಸ್ಯೆಯಾಗದು ಎಂದರು.
ನಗರದ ವ್ಯಾಪ್ತಿಯಲ್ಲಿ ಏನೇನು ಅಭಿವೃದ್ದಿ ಕಾರ್ಯಗಳಾಗಬೇಕು ಹಾಗೂ ಯಾವುವು ನನೆಗುದಿಗೆ ಬಿದ್ದಿವೆ ಎಂಬುದರ ಬಗ್ಗೆ ಚರ್ಚಿಸಲು ಇನ್ನೊಂದು ವಾರದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಸದಸ್ಯರಾದ ಬಸವಣ್ಣ, ಮಹೇಶ್, ಭಾಗ್ಯಮ್ಮ, ಕುಮುದಾ ಇತರರಿದ್ದರು.
