ಸೆ. 25ಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹ ನಿಗದಿ

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮುಂದೂಡಲಾಗಿದ್ದ ಉಚಿತ ಸಾಮೂಹಿಕ ವಿವಾಹವನ್ನು ಸೆಪ್ಟೆಂಬರ್ ೨೫ರಂದು ನಿಗದಿಪಡಿಸಲಾಗಿದೆ.

ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಆಗಸ್ಟ್ ೨೮ರಂದು ನಿಗದಿಪಡಿಸಲಾಗಿತ್ತು. ಈಗಾಗಲೇ ಪ್ರಾಧಿಕಾರದ ಕಚೇರಿಯಿಂದ ೧೦೦ಕ್ಕೂ ಅಧಿಕ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ ವಿವಿಧ ದಾಖಲಾತಿಗಳನ್ನು ಒಳಗೊಂಡ ೬೫ ಅರ್ಜಿಗಳು ಸ್ವೀಕೃತವಾಗಿದೆ. ಉಳಿದ ಅರ್ಜಿದಾರರು ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.

ಕಳೆದ ಸಾಲಿನಲ್ಲಿ ವರನಿಗೆ ಪಂಚೆ, ಷರ್ಟು, ಟವಲ್ ಹಾಗೂ ವಧುವಿಗೆ ೨ ಗ್ರಾಂ ತೂಕವುಳ್ಳ ಚಿನ್ನದ ತಾಳಿಯನ್ನು ನೀಡಲಾಗಿತ್ತು. ಇದು ಹೆಚ್ಚಿನ ದಿನಗಳು ಬಾಳಿಕೆ ಬಾರದೆ ಇರುವುದನ್ನು ಮನಗಂಡು ಈ ಬಾರಿ ೪ ಗ್ರಾಂ ತೂಕವುಳ್ಳ ಚಿನ್ನದ ತಾಳಿ ನೀಡಲು ಉದ್ದೇಶಿಸಲಾಗಿದೆ. ಇನ್ನೂ ಅರ್ಜಿಗಳು ಬರುತ್ತಿರುವುದರಿಂದ ಉಚಿತ ಸಾಮೂಹಿಕ ವಿವಾಹವನ್ನು ಸೆಪ್ಟೆಂಬರ್ ೨೫ಕ್ಕೆ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಿರುವ ವಧು-ವರರು, ಸಾರ್ವಜನಿಕರು ಪ್ರಾಧಿಕಾರದೊಂದಿಗೆ ಸಹಕರಿಸುವಂತೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *