ಚಾಮರಾಜನಗರ: ಜಿಲ್ಲೆಯ ೧೬೧ ಗಿರಿಜನ ಹಾಡಿಗಳಲ್ಲಿ ಅನಿಮೀಯಾ ಮುಕ್ತ ಭಾರತ ಕಾರ್ಯಕ್ರಮದ ಮಾರ್ಗಸೂಚಿಯನ್ವಯ ವಿಶೇಷವಾಗಿ ಮಹಿಳೆಯರಿಗೆ ರಕ್ತಹೀನತೆಯ ಬಗ್ಗೆ ಇಮೋಗ್ಲೋಬಿನ್ ಪರೀಕ್ಷೆ ಮಾಡುವ ಸಲುವಾಗಿ ಚಾಮರಾಜನಗರ ತಾಲೂಕಿನ ಕನ್ನೇರಿ ಕಾಲೋನಿಯಲ್ಲಿ ಸೆಪ್ಟೆಂಬರ್ ೪ರಂದು ಬೆಳಿಗ್ಗೆ ೧೦ ಘಂಟೆಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ಆಗಮಿಸಿ ಚಾಲನೆ ನೀಡಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಗಿರಿಜನರ ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆಯ ನಂತರ ಸಿಬ್ಬಂದಿಗಳು ಪ್ರತಿ ೩ ತಿಂಗಳಿಗೊಮ್ಮೆ ಮನೆ ಮನೆ ಭೇಟಿ ನೀಡಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಚಾಮರಾಜನಗರ ತಾಲೂಕಿನ ೨೮ ಗಿರಿಜನರ ಹಾಡಿಗಳಲ್ಲಿ ೧೪೦೩ ಮನೆಗಳಿದ್ದು, ೪೧೨೯ ಜನಸಂಖ್ಯೆಯಿರುತ್ತದೆ. ಗುಂಡ್ಲುಪೇಟೆ ತಾಲೂಕಿನ ೨೯ ಗಿರಿಜನ ಹಾಡಿಗಳಲ್ಲಿ ೧೩೮೫ ಮನೆಗಳಿದ್ದು, ೩೫೫೪ ಜನಸಂಖ್ಯೆ, ಕೊಳ್ಳೇಗಾಲ ತಾಲೂಕಿನ ೭ ಗಿರಿಜನ ಹಾಡಿಗಳಲ್ಲಿ ೩೭೯ ಮನೆಗಳಿದ್ದು, ೯೧೩ ಜನಸಂಖ್ಯೆ, ಯಳಂದೂರು ತಾಲೂಕಿನ ೯ ಗಿರಿಜನ ಹಾಡಿಗಳಲ್ಲಿ ೭೦೯ ಮನೆಗಳಿದ್ದು, ೨೦೮೯ ಜನಸಂಖ್ಯೆ ಸೇರಿದಂತೆ ಒಟ್ಟು ಜಿಲ್ಲೆಯ ೧೬೦ ಹಾಡಿಗಳಲ್ಲಿ ೭೫೧೭ ಮನೆಗಳಲ್ಲಿನ ೨೦೫೮೮ ಜನರ ಆರೋಗ್ಯ ತಪಾಸಣೆಯನ್ನು ಈ ಶಿಬಿರದಲ್ಲಿ ನಡೆಸಲಾಗುತ್ತದೆ.
ಶಿಬಿರಕ್ಕೆ ೨೩ ವೈದ್ಯಾಧಿಕಾರಿಗಳು, ೩೦ ಪ್ರಾಥಮಿಕ ಆರೋಗ್ಯ ಸುರಕ್ಷತ ಅಧಿಕಾರಿಗಳು, ೩೭ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ೭೫ ಆಶಾ ಕಾರ್ಯಕರ್ತೆಯರು ನಿಯೋಜಿಸಲಾಗಿದೆ. ಆಯಾ ತಾಲೂಕಿನ ಆರೋಗ್ಯ ಅಧಿಕಾರಿಗಳನ್ನು ತಪಾಸಣೆ ಶಿಬಿರದ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.