ಚಾಮರಾಜನಗರ: ನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ವಿದ್ಯಾಗಣಪತಿಯನ್ನು ಭಾನುವಾರದಂದು ದೊಡ್ಡರಸನ ಕೊಳದಲ್ಲಿ ಶ್ರದ್ದಾಭಕ್ತಿಯಿಂದ,ಪೂಜಾ ವಿಧಿ-ವಿಧಾನಗಳೊಂದಿಗೆ ವಿಸರ್ಜಿಸಲಾಯಿತು.
ಇದಕ್ಕೂ ಮುಂಚೆ ನಗರದ ಚೆನ್ನಿಪುರದಮೋಳೆಯ ಸೇವಾಭಾರತಿ ಪಬ್ಲಿಕ್ ಶಾಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ,ಶಂಕರಪುರದ ವಿಎಚ್ ಪಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 60 ಗಣಪತಿ,ಕೋರ್ಟ್ ರಸ್ತೆಯ ಸೇವಾಭಾರತಿ ನರ್ಸರಿ ಶಾಲೆಯ ಗಣಪತಿ ಸೇರಿದಂತೆ ಅಂಗಶಾಲೆಗಳ ಮೂರು ಗಣಪತಿಗಳು ನಗರದ ಹೃದಯ ಭಾಗ ಭುವನೇಶ್ವರಿ ವೃತ್ತದಲ್ಲಿ ಸಮಾಗಮಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳಿಂದಲೇ ರಚಿತವಾದ ಸಾಂಸ್ಕೃತಿಕ ಕಲಾತಂಡಗಳಾದ ಹುಲಿ ವೇಷ,ಡೊಳ್ಳು ಕುಣಿತ,ಕೋಲಾಟ,ದೇವರ ಭಜನಾ ತಂಡಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ತಾಳಕ್ಕೆ ಸರಿಯಾಗಿ ನೃತ್ಯ ಮಾಡುತ್ತಾ ಶ್ರದ್ದಾಭಕ್ತಿಯಿಂದ ದೊಡ್ಡರಸನ ಕೊಳ ತಲುಪಿತು ನಂತರ ವಿದ್ಯಾಗಣಪತಿಯನ್ನು ಭಕ್ತಿಪೂರಕವಾಗಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್,ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯಂ,ಆಡಳಿತಾಧಿಕಾರಿ ರಮೇಶ್,ಖಜಾಂಚಿ ಮಂಜುನಾಥ್ (ಮಧು) ಆಡಳಿತ ಮಂಡಳಿ ಸದಸ್ಯರಾದ ಚುಡಾ ಬಾಲಸುಬ್ರಹ್ಮಣ್ಯಂ, ವೆಂಕಟನಾಗಪ್ಪಶೆಟ್ಟಿ, ಮುರುಗೇಂದ್ರ, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಅಂಗ ಶಾಲೆ-ಕಾಲೇಜುಗಳ ಪ್ರಾಂಶುಪಾಲರಾದ ಡಾ.ನಿರ್ಮಲ, ಲೋಕೇಶ್, ರಾಧಿಕಾಗುಪ್ತಾ, ಮುಖ್ಯ ಶಿಕ್ಷಕರರಾದ ಶ್ರೀನಿವಾಸ್, ಶೇಖರ್,ಜೆ.ಎ.ಮಂಜುನಾಥ್,ಮಂಜು, ಮಹೇಂದ್ರ ಸೇರಿದಂತೆ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಅಂಗ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು,ಪೋಷಕರು, ಹಾಗೂ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಣಪತಿ ವಿಸರ್ಜನೆಯ ನಂತರ ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಸಹ ನಡೆಯಿತು. ಗೌರಿ-ಗಣೇಶ ಹಬ್ಬದ ದಿನವಾದ ಸೋಮವಾರದಂದು ಸೇವಾಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ವಿದ್ಯಾ ಗಣಪತಿಯನ್ನು ಪ್ರತಿ ದಿನ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಗೌರಿ-ಗಣೇಶನನ್ನು ಪೂಜಿಸಿ ಪ್ರತಿನಿತ್ಯ ಶಾಲೆಗಳಲ್ಲಿ ಭಜನೆ,ಗಣಪತಿ ಸ್ತೋತ್ರ, ಭಕ್ತಿಗೀತೆ ಗಾಯನ,ನೃತ್ಯದೊಂದಿಗೆ ಶ್ರದ್ದಾಭಕ್ತಿಯಿಂದ ಪೂಜಿಸಿ ವಿದ್ಯಾರ್ಥಿಗಳು ವಿದ್ಯಾ ಗಣಪತಿಯ ಕೃಪೆಗೆ ಪಾತ್ರರಾದರು.