ಚಾಮರಾಜನಗರ: ಭಾರತೀಯರ ಸೈನ್ಯದ ಮಹಾ ಶಕ್ತಿಯನ್ನು ವಿಶ್ವಕ್ಕೆ ಸಾರಿದ್ದು ಕಾರ್ಗಿಲ್ ಕದನ. ನಮ್ಮ ಭಾರತೀಯ ಸೈನಿಕರ ದೃಢ ದೇಶಭಕ್ತಿಯನ್ನು ಸದಾ ಗೌರವಿಸಬೇಕು ಎಂದು ವೃತ್ತ ನಿರೀಕ್ಷಕ ಶ್ರೀಕಾಂತ್ ರವರು ತಿಳಿಸಿದರು.
ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಹಾಗೂ ಯೋಧರಿಗೆ ನಮಿಸೋಣ ಬನ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೆರೆಯ ಪಾಕಿಸ್ತಾನ ದೇಶದ ಸೈನಿಕರು ಭಾರತದ ಕಾರ್ಗಿಲ್ ಹಾಗೂ ಇತರ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ ಸಂಕಷ್ಟ ವಾತಾವರಣದಲ್ಲೂ ಭಾರತೀಯರು ಸೈನಿಕರು ಸ್ಪೂರ್ತಿ, ದೇಶ ನಿಷ್ಠೆಯಿಂದ ಹೋರಾಡಿದ ೧೯೯೯ ಘಟನೆಯನ್ನು ಭಾರತೀಯರು ಹೆಮ್ಮೆಯಿಂದ ವಿಜಯ ದಿವಸವನ್ನೂ ಆಚರಿಸುತ್ತಿರುವುದು ದೇಶಭಕ್ತಿಯ ಪ್ರತೀಕ ಎಂದರು.
ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈಹಿಂದ್ ಪ್ರತಿಷ್ಠಾನ ಸದಾ ದೇಶ, ಸಂಸ್ಕೃತಿ, ಪರಂಪರೆ, ರಾಷ್ಟ್ರದ ಹುತಾತ್ಮರ ಬಗ್ಗೆ ಕಾರ್ಯಕ್ರಮ ರೂಪಿಸಿ ಯುವಕರಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರ ಜತೆ ದೇಶ, ಸರ್ಕಾರ, ಹಾಗೂ ಸಾರ್ವಜನಿಕರು ಸದಾ ಕಾಲ ಇರಬೇಕು. ಕಾರ್ಗಿಲ್ ಪ್ರದೇಶದ ಒಂದೊಂದು ಪರ್ವತವು ಬಹಳ ದುರ್ಗಮವಾದ ಪ್ರದೇಶವಾಗಿತ್ತು. ಭಾರತೀಯ ಸೈನಿಕರು ತಮ್ಮ ಶಕ್ತಿ, ಯುಕ್ತಿ, ಪರಾಕ್ರಮ, ಸಾರ್ವಜನಿಕ ಬೆಂಬಲ, ಸರ್ಕಾರದ ದೃಢ ಸಂಕಲ್ಪ ಗೆಲುವು ತಂದಿತು ಎಂದರು.
೧೯೯೯ ಜುಲೈ ೨೬ ಕಾರ್ಗಿಲ್ ವಿಜಯ ದಿವಸ್ ಆಗಿ ಆಚರಿಸುವ ಮೂಲಕ ಹುತಾತ್ಮರಾದ ೫೩೭ ವೀರ ಯೋಧರಿಗೆ ಗೌರವಾರ್ಪಣೆ, ಶಾಂತಿ ಕೋರುವ ಕಾರ್ಯ ದೇಶದ ಜನರಿಂದ ಆಗುತ್ತಿದೆ. ಗಡಿ ಕಾಯುವ ಸೈನಿಕರಂತೆ ದೇಶದ ಒಳಗೂ ರಕ್ಷಣೆ ಮಾಡುತ್ತಿರುವ ಪೊಲೀಸರಿಗೆ ಸಮಾಜ ಋಣಿಯಾಗಿರಬೇಕು. ದೇಶದ ಹೊರಗೆ ಹಾಗೂ ಒಳಗೆ ದೇಶದ್ರೋಹಿಗಳ ಸಂಹಾರ ಮಾಡುವ ಪೊಲೀಸ್ ಇಲಾಖೆಗೆ ಸದಾ ಬೆಂಬಲ ನೀಡೋಣ. ಅವರ ಕಾರ್ಯಕ್ಕೆ ರಾಷ್ಟ್ರದ ಗೌರವ ಸಲ್ಲಿಸೋಣ ಎಂದರು.
ಜೈಹಿಂದ್ ಘೋಷಣೆಯ ಮೂಲಕ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ವೃತ್ತ ನಿರೀಕ್ಷಕ ಶ್ರೀಕಾಂತ್ ರವರಿಗೆ ಜೈಹಿಂದ್ ಪ್ರತಿಷ್ಠಾನ ವತಿಯಿಂದ ಖಾದಿಯಿಂದ ನಿರ್ಮಿಸಿರುವ ವಿಶೇಷ ರಾಷ್ಟ್ರಧ್ವಜದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ, ದ.ರಾ.ಬೇಂದ್ರೆ ಕನ್ನಡ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ್, ನಿವೃತ್ತ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮೀ, ಓಂ ಶಾಂತಿ ನ್ಯೂಸ್ ಆರಾಧ್ಯ, ಶಂಕರಪುರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿ, ಸುರೇಶ್ಗೌಡ, ಕಸಾಪ ಸದಸ್ಯ ರಾಧಾಕೃಷ್ಣ, ಉಪನ್ಯಾಸಕ ಮೂಡ್ಲೂಪೂರ ಶಿವಸ್ವಾಮಿ, ದೊಡ್ಡಮೋಳೆ ಯುವಕರ ಸಂಘದ ಸುರೇಶ್, ಜಾಲಹಳ್ಳಿಹುಂಡಿ ಮಹದೇವ, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
