ಸ್ಟಾಲಿನ್ ಓಲೈಸಲು ಸಿದ್ದು, ಡಿಕೆಶಿ ಯಿಂದ ತಮಿಳುನಾಡಿಗೆ ಕಾವೇರಿ ನೀರು : ಪಾಪು ಆರೋಪ

ಚಾಮರಾಜನಗರ: ಕರ್ನಾಟಕ ಬಂದ್ ಬೆಂಬಲಿಸಿ ನಗರದ ಭುವನೇಶ್ವರಿ ವೃತ್ತದಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಮುಖಂಡ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಧರಣಿ ನಡೆಸಿ, ರಾಜ್ಯ ಹಾಗೂ ತಮಿಳುನಾಡು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಶಾಮಿಯಾನ ಹಾಕಿ ಧರಣಿ ನಡೆಸಿದ ಸಮಿತಿಯ ಮುಖಂಡರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಹಾಗೂ ಕಾವೇರಿ ನ್ಯಾಯಾಧೀಕರಣದ ವಿರುದ್ದ ಘೋಷಣೆ ಮಾಡಿದರು.

ದಲಿತ ಹಿರಿಯ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಇಂಡಿಯಾ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ದ ವರಿಷ್ಠರ ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನ್ಯಾಯಾದೀಕರಣದ ತೀರ್ಪು ಬರುವ ಮುನ್ನವೇ ರಾಜ್ಯ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ, ಶಿವಕುಮಾರ್ ಸಿಎಂ. ಸ್ವಾಲಿನ್ ಅನ್ನು ತೃಪಿಪಡಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ಓಲೈಯಿಸಿ ಹೆಚ್ಚಿನ ಸೀಟುಗಳನ್ನು ಪಡೆದುಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ರಾಜ್ಯ ಜನರ ಹಿತವನ್ನು ಬಲಿ ಕೊಟ್ಟಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಇದೇ ರೀತಿ ತಮಿಳುನಾಡಿಗೆ ನೀರು ಹರಿಸಿದರೆ ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಹ ಸಿಗುವುದಿಲ್ಲ .ತಕ್ಷಣ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು. ರಾಜ್ಯ ರೈತರ ಹಿತ ಕಾಯಬೇಕು. ನಮಗೆ ಒಂದು ಬೆಳೆಗೂ ನೀರು ಇಲ್ಲ. ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಹರಿಸುವುದು ಯಾವ ನ್ಯಾಯ. ಇದು ರೈತ ವಿರೋಧಿ ಸರ್ಕಾರ. ಈ ಬಂದ್ ಕೊನೆಯಲ್ಲ. ಆರಂಭ. ದಿನದಿಂದ ದಿನಕ್ಕೆ ಚಳವಳಿಯನ್ನು ತೀವ್ರ ಸ್ವರೂಪ ನೀಡುವುದಾಗಿ ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಯಜಮಾನ ನಾಗರಾಜು, ಉಮೇಶ್ ಕುಮಾರ್, ಮೂಡ್ನಾಕೂಡು ಪ್ರಕಾಶ್, ವಕೀಲ ದಲಿತ್‌ರಾಜ್, ಸೂರ್ಯಬಾಲರಾಜು, ಮಹೇಶ್, ಓಂ ಶಾಂತಿ ಮಂಜುನಾಥ ಆರಾಧ್ಯ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *