ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ…..ನಾವೇ…

*ಚಿದ್ರೂಪ ಅಂತಃಕರಣ
ಸಮಾಜದಲ್ಲಿ ನಡತೆಗೆಟ್ಟ ಸಾಲಿಗೆ ಸ್ತ್ರೀಯನ್ನೇ ಗುರಿಮಾಡುತ್ತಿರುವ ನಿರ್ದಯಿ ಸಮಾಜದ ಚಾರಿತ್ರಿಕ ರೂಢಿಗೆ ಈಗ ಮತ್ತಷ್ಟು ಕಿಚ್ಚು ತಾಕುತ್ತಿದೆ. ಸ್ತ್ರೀ ಸಮಾಜದ ಮೇಲಿನ ಅಪವಾದದಲ್ಲಿ ಪುರುಷನೋರ್ವ ಸದಾ ಪ್ರಾಮಾಣಿಕ, ನಿಷ್ಠಾವಂತ ಎನ್ನುತ್ತಿರುವುದು ಆತನ ಹಲವು ಮುಖವಾಡಗಳ ನಾಟಕವೆಂಬುದನ್ನು ಸಾಬೀತು ಪಡಿಸುವಲ್ಲಿ ಭಾಗಷಃ ಸ್ತ್ರೀಯೇ ಹೆಚ್ಚಿನದಾಗಿ ನ್ಯಾಯಪರ ವಾದಿಸಬೇಕಾದ ಸ್ಥಿತಿ ಮತ್ತು ಈ ಸ್ಥಿತಿಯಲ್ಲಿ ಸ್ತ್ರೀವರ್ಗದ ಸೋಲು ಪುರುಷನ ಎಲ್ಲಾ ಬಗೆಯ ಮೋಸದ, ಸ್ವಾರ್ಥದ, ದರ್ಪದ ಜಾಲವಾಗಿದೆ.

ಇವತ್ತಿನ ಸ್ತ್ರೀ ವಿಷಯವಾಗಿ ಹಸಿ-ಬಿಸಿ ಸುದ್ದಿ; ಹೆಣ್ಣು ಅರೆ ನಗ್ನಳಾಗಿ ನಟಿಸಿ ಹಣಮಾಡುತ್ತಿದ್ದಾಳೆ, ಹಣ ಗಳಿಸಿದ ಪುರುಷನ ಬೆನ್ನತ್ತಿ ಸಂಪತ್ತಿನ ಮಾದಕತೆಯಲ್ಲಿದ್ದಾಳೆ, ಪ್ರೀತಿ ವಿಷಯವಾಗಿ ಯುವಕರನ್ನು ವಂಚಿಸುತ್ತಿದ್ದಾಳೆ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರಾಟವಾಗುತ್ತಿದ್ದಾಳೆ. ಈ ರೀತಿ ಅರೆ ನಗ್ನಳಾಗಿ ನಟಿಸಲು ಕೋರಿದ, ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಸಿದ, ತಮ್ಮ ವಿಕೃತ ಅಭಿರುಚಿಗೆ ಸಿನಿ ಪ್ರದರ್ಶನ ಕೇಳಿದ, ನಿರ್ದೇಶಕ, ನಿರ್ಮಾಪಕ, ಸಿನಿ ನೋಡುಗ ಮತ್ತು ಪ್ರಸ್ತುತ ಸಮಾಜದ ವಾಸ್ತವ, ಪಾತ್ರದ ನೈಜತೆ, ಸಹಜ ಅಭಿನಯ ಹಾಗಾಗಿ ಇವೆಲ್ಲ ನಿನ್ನ ಬೆಳೆವಣಿಗೆಗೆ ಪೂರಕ ಎಂದು ಉತ್ತೇಜಿಸಿದ ಪೋಷಕರು ಮತ್ತು ಸ್ನೇಹಿತರು ಕೂಡ ಯಾರ ನೇರ ದೂಷಣೆಗೂ ಸಿಗುತ್ತಿಲ್ಲ. ಏಕೆಂದರೆ ಇವರೆಲ್ಲರ ಮುಖವಾಡ! ಸಮಾಜದಲ್ಲಿ ಏನು ನಡೆಯುತ್ತಿದೆ ಅದನ್ನು ತೋರಿಸುವ ನಿರ್ದೇಶಕ, ಈ ಕೆಲಸಕ್ಕೆ ಸಹಕಾರ ನೆವವಾದ ನಿರ್ಮಾಪಕ, ಇದನ್ನು ನೋಡಿ ಮನರಂಜಿಸಿ ಪ್ರತಿಕ್ರಿಯಿಸುವ ಸಿನಿರಸಿಕ, ಸಮಾಜ ಹೇಗಿದೆ ಹಾಗೆ ನಾವಿರಬೇಕು ಎನ್ನುವ ಪೋಷಕರು ಮತ್ತು ಸ್ನೇಹಿತರು. ಜೊತೆಗೆ ಈ ವಿಚಾರದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾದು ಕುಳಿತ ರಣಹದ್ದುಗಳಂತಿರುವ ಕೆಲ ಮಾಧ್ಯಮಗಳು. ಇಲ್ಲಿ ತನ್ನ ಪೂರ್ಣ ನಿರ್ಧಾರ, ಸ್ವಂತ ಆಯ್ಕೆಯೊಂದಿಗೆ ಹಲವು ಪಾತ್ರದ ಅಥವಾ ವ್ಯಕ್ತಿತ್ವದ ಮುಖವಾಡಗಳೇ ಅಲ್ಲದ ಸ್ತ್ರೀಗೆ ನೈತಿಕ ಭ್ರಷ್ಟಳು ಎನ್ನುವ ಅಪವಾದ.

ಅನೇಕರ ಪ್ರಶ್ನೆ ಹೀಗಿದೆ; ಆಕೆ ಇದನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕು? ಈ ರೀತಿಯಲ್ಲೇ ಯಾಕೆ ಬದುಕಬೇಕು? ಎಂದು ಹೊರನೋಟಕ್ಕೆ ಹೇಳುವ ನೀವು ಮತ್ತು ತನ್ನ ಆಸೆಗೆ ಎಟುಕದ, ದಕ್ಕದ ಹೆಣ್ಣಿನ ಮೇಲೆ ಗೂಬೆ ಕೂರಿಸುವ ಅಸಹನೀಯ ಅಸೂಯೆಯ ಜನರು, ಆಕೆಗೆ ನೀವು ಈ ಬಗೆಯಾಗಿ ಕೇಳುವ ಪ್ರಶ್ನೆಗೆ ಬದಲಾಗಿ ಪ್ರತಿ ಪ್ರಶ್ನೆಯನ್ನು ನೀವೇ ನಿಮಗೆ ಕೇಳಿಕೊಳ್ಳಿ. ಆಕೆಯ ಸ್ವಂತಿಕೆಗೆ ನಾವೆಷ್ಟು ಸ್ವಾತಂತ್ರ್ಯ ನೀಡಿದ್ದೇವೆ. ಆಕೆಯ ಹಕ್ಕಿಗೆ ನಾವೆಷ್ಟು ಮುಕ್ತರಾಗಿ ಸಹಕರಿಸಿದ್ದೇವೆ. ಸ್ತ್ರೀಯನ್ನು ನಮ್ಮ ಕಾಮನೆಗಳ ಮಿತಿಯಲ್ಲೇ ಉಳಿಸಿಕೊಳ್ಳುವಲ್ಲಿ, ಬಳಸಿಕೊಳ್ಳುವಲ್ಲಿ ನಮ್ಮ ಪುರುಷ ಸಮಾಜದ ವರ್ತನೆಗಳೇನಿವೆ? ಎಂದು. ಇಂದಿಗೂ ಸ್ತ್ರೀ, ಪುರುಷ ಸಮಾಜದ ದರ್ಪದ ಕಡಿವಾಣದಲ್ಲೇ ಇದ್ದಾಳೆ. ಅದು ನೈತಿಕ ನಡೆಯೇ ಇರಲಿ ಅಥವಾ ಅನೈತಿಕ ನಡೆಯೇ ಇರಲಿ. ಕುಟುಂಬವೇ ಕಡಿವಾಣ ಹಾಕಿರಬೇಕು ಎಂದಲ್ಲ. ಆಕೆಯಿರುವ ಸಮಾಜವು ಯಾವ ಬಗೆಯಾಗಿ ತನ್ನ ಕಡಿವಾಣದಲ್ಲಿ ಸ್ತ್ರೀಯನ್ನು ಇರಿಸಿದೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅನೈತಿಕತೆಗೆ ಸೆಳೆದಿದೆ, ಬಲವಂತವಾಗಿ ನೂಕಿ ಆ ಪ್ರವೃತ್ತಿಗೆ ಆಕೆಯನ್ನು ಒಗ್ಗಿಸಿದೆ ಎನ್ನುವುದೇ ಗಮನಾರ್ಹ.

ಸಾಂವಿಧಾನಿಕ ಸ್ತ್ರೀ ಕಾನೂನುಗಳಿಗೆ, ಹಕ್ಕುಗಳಿಗೆ, ಕರ್ತವ್ಯಗಳಿಗೆ ರಾಜಕೀಯವಾಗಿ ಯಾವ ಬಗೆಯಾಗಿ ರಕ್ಷಣೆ ಸಿಗುತ್ತಿದೆ ಎಂದು ದಿನನಿತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲೇ ಗೊತ್ತಾಗುತ್ತಿದೆ. ಇದರ ಜೊತೆಗೆ ಲೈಂಗಿಕ ಅಶಿಸ್ತಿನ ರಾಜಕೀಯ ನಾಯಕರ, ಅಧಿಕಾರಿಗಳ ನಿಜರೂಪ ಬಯಲಾದ ಬೆನ್ನಲ್ಲೇ ಹೆಣ್ಣನ್ನು ನೇರವಾಗಿ ದೂಷಿಸುತ್ತಿರುವ ಪುರುಷ ಸಮಾಜದ ಹಲವರಿಗೆ ನಾಚಿಕೆ ಎನಿಸುವುದಿಲ್ಲವೆ?.
ನೆನ್ನೆ ಮೊನ್ನೆಯ ಸುದ್ದಿಗಳು; ಕುಖ್ಯಾತ ಲೈಂಗಿಕ ಕಳ್ಳಸಾಗಾಣಿಕೆದಾರ ಸ್ಯಾಂಟ್ರೋ ರವಿ ಪ್ರಕರಣ, ದೇಶದ, ರಾಜ್ಯದ ಸೇವೆಗೆಂದೇ ಸ್ಥಾಪಿತವಾದ ಸದನದಲ್ಲೇ ಅಶ್ಲೀಲ ವಿಡಿಯೋ ನೋಡಿದ ಪ್ರಕರಣ, ಸೌಜನ್ಯಳಂತಹ ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣ, ಶಿಕ್ಷಕನಿಂದಲೇ ಕಾಮಪಾಠ, ಮಠಾಧೀಶನಿಂದಲೇ ಅಥವಾ ಜಗದ್ಗುರುವಿನಿಂದಲೇ ಕಾಮಕ್ರೀಡಾ ಪ್ರಕರಣ, ಖಾಸಗಿ ಉದ್ಯಮಗಳು ವಿಸ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಜಾಹಿರಾತಿನ ಮೂಲಕ ಪ್ರಚಾರಕ್ಕೆ ಇಟ್ಟು ಹಣದ ದಂಧೆಗೆ ಇಳಿದಿರುವ ಉದ್ಯಮಿಗಳು, ಈ ರೀತಿ ನೈತಿಕ ಸಮಾಜವನ್ನೇ ಬುಡಮೇಲು ಮಾಡಲು ಹೊರಟಿರುವ ಘಟನೆಗಳು ಒಂದಾ, ಎರಡಾ ಎತ್ತ ನೋಡಿದರೂ ಲೈಂಗಿಕ ಅಶಿಸ್ತಿನ ವರ್ತನೆಗಳು. ಇದರಲೆಲ್ಲಾ ಮುಖ್ಯಪಾತ್ರ ಯಾರದೆಂದು ಒಮ್ಮೆ ಯೋಚಿಸಿದರೆ ಆಕೆ ಒಳ್ಳೆಯವಳೇ.

ಮೊನ್ನೆ ತೆರೆಕಂಡ ತೆಲುಗಿನ ರಾಜೇಶ್ ನೀಲಂ ಅವರ ಕಥೆ ಮತ್ತು ನಿರ್ದೇಶನದ ಮತ್ತು ಶ್ರೀನಿವಾಸ ಕುಮಾರ್ ನಾಯ್ಡು ಅವರ ನಿರ್ಮಾಣದ ಬೇಬಿ ಸಿನಿಮಾ ತುಂಬಾ ಸ್ತ್ರೀ ವಿಚಾರವಾಗಿ ಸುದ್ದಿಯಲ್ಲಿದೆ. ಯುವ ಮನಸುಗಳಲ್ಲಿ ತುಂಬಾ ವಿಷಬಿತ್ತನೆಯನ್ನೇ ಬಿತ್ತುತ್ತಿದೆ. ಇದೇ ರೀತಿ ಲವ್ ಟುಡೇ ಸಿನಿಮಾ ಕೂಡ ತೆರೆಕಂಡು ಯುವ ಜನತೆಯ ಜೀವನಶೈಲಿಗೆ ಕನ್ನಡಿ ಹಿಡಿದಿತ್ತು, ಆ ಮೂಲಕ ಹೆಣ್ಣು ಮತ್ತು ಗಂಡಿನ ನಡುವೆ ಅಪನಂಬಿಕೆಗಳ ಅಡಿಗಲ್ಲಾಗಿ ಕೆಲಸ ಮಾಡಿತ್ತು. ಹೆಣ್ಣನ್ನೇ ಮೋಸದ ಪಾತ್ರದಲ್ಲಿ ಗುರುತಿಸಿ ಈ ಸಮಾಜದ ಅವ್ಯವಸ್ಥೆಯನ್ನು ಸರಿಪಡಿಸುವುದೇನಿದೆ. ಅನೈತಿಕಳಾದ ಅಥವಾ ಹೀಗೆ ಸುಳ್ಳು ಅಪವಾದದ ಸುಳಿಯಲ್ಲಿ ಸಿಲುಕಿರುವ ಹೆಣ್ಣಿಗೆ ಕಾರಣೀಭೂತನಾಗಿ ಹಿಂದೆ ನಿಂತಿರುವುದು ನಮ್ಮಲ್ಲೇ ಹಲವರು ಹೌದಲ್ಲವೇ!. ಆಕೆಯನ್ನು ಮದ್ಯದ ಅಂಗಡಿಗೆ, ಸಿನಿಮಾಗೆ, ಪಾರ್ಕ್’ಗೆ, ರೆಸ್ಟೋರೆಂಟ್’ಗೆ, ವೇಶ್ಯೆವಾಟಿಕೆಗೆ, ಕರೆದೋಯ್ದವರು ಯಾರೆಂದು ಯೋಚಿಸಿ? ನೀವು ಯಾರ ಮಗಳನ್ನೋ, ಸಹೋದರಿಯನ್ನೋ, ಸಂಗಾತಿಯನ್ನೋ ಕರೆದೋಯ್ದಿರಿ ಹಾಗೆಯೇ ನಿಮ್ಮ ಮಗಳನ್ನು, ಸಹೋದರಿಯನ್ನು, ಸಂಗಾತಿಯನ್ನು ಇನ್ಯಾರೋ ಕರೆದೊಯ್ಯುತ್ತಿದ್ದಾರೆ. ಈಗ ಹೇಳಿ ಹೀಗೆ ಕರೆದೊಯ್ಯುತ್ತಿರುವ ಸಮಾಜದಲ್ಲಿ ಆಕೆ ಮೋಸಗಾತಿಯೇ?, ಆಕೆ ಅನೈತಿಕಳೇ?. ಸರಿ ಎನಿಸಿದರೆ ಇಬ್ಬರೂ ಸರಿಯೇ. ತಪ್ಪು ಎಂದರೆ ಇಬ್ಬರೂ ತಪ್ಪೇ. ಆದರೆ ಬಹುಪಾಲು ತಪ್ಪು ಪುರುಷ ವರ್ಗದ ಹಲವರದ್ದು ಎನ್ನಲು ನನಗೆ ಯಾವ ಅಂಜಿಕೆ ಇಲ್ಲ.
ಸತಿಸಾವಿತ್ರಿಗೆ ಯಾವುದೇ ಸ್ಥಾನಮಾನಗಳು ಕಷ್ಟದ ಲಭ್ಯ; ನಡತೆ ಹೀನಳಿಗೆ ಎಲ್ಲವೂ ಅಂಗೈ ಪ್ರಪಂಚ. ಈಗ ಹೇಳಿ ಆಕೆ ಬದುಕಲು ಯಾವ ಆಯ್ಕೆಗೆ ಮನಸ್ಸಾಗಬೇಕು. ಮೊನ್ನೆ ರಾಷ್ಟ್ರೀಯ ಮಹಿಳಾ ಕ್ರೀಡಾ ಪಟುಗಳು ತಮ್ಮ ಪ್ರತಿಭೆಗೆ ಸೂಕ್ತ ಸ್ಥಾನ ಪಡೆಯಲು ಮಂಚ ಹತ್ತಬೇಕು ಇಲ್ಲ ಮನೆಕಡೆ ಮುಖಮಾಡಬೇಕು ಎನ್ನುವ ಪರಿಸ್ಥಿತಿಯ ವಿರುದ್ಧ ಬೀದಿಗಿಳಿದು ನ್ಯಾಯ ಸಿಗದೆ ಕಳಂಕಳಾಗಿಯೇ ಕೂತದ್ದು ಮಾನವೀಯತೆಯ ಕಗ್ಗೊಲೆ. ಇಂತಹ ಸ್ಥಿತಿಯಲ್ಲಿ ಹೆಣ್ಣನ್ನು ಪದೇ ಪದೇ ಮಾನಹೀನಳು ಎಂದು ತೆಗಳುವುದಕ್ಕೆ ನಿಮಗೆ ಮನಸ್ಸೇಗಾದರೂ ಬರುತ್ತದೆ. ನಿಜಕ್ಕೂ ನಿಮ್ಮ ಅಂತಃಕರಣದಲ್ಲಿ ನ್ಯಾಯದೇವತೆ ನೆಲೆಸಿದ್ದರೆ, ಆ ನಿಮ್ಮಲ್ಲಿನ ನ್ಯಾಯ ದೇವತೆಗೆ ಒಂದಿಷ್ಟು ಮಾನವೀಯ ಕಾನೂನು ಮತ್ತು ವಾಸ್ತವ ಪ್ರಜ್ಞೆ ತಿಳಿದಿದ್ದರೆ ದಯವಿಟ್ಟು ಹೆಣ್ಣನ್ನು ನಿಂದಿಸುವುದನ್ನು ನಿಲ್ಲಿಸಿ. ಒಂದು ನಾವುಗಳು ಸರಿಯಾಗೋಣ, ಇಲ್ಲವೇ ಆಕೆಯನ್ನು ಹಲವು ಬಗೆಯಲ್ಲಿ ದೂರುವುದನ್ನು ಇಂದಿಗೇ ನಿಲ್ಲಿಸಿಬಿಡೋಣ. ಹೆಣ್ಣಿಗೆ ಸಮಾನ ಗೌರವ, ಸ್ವಾತಂತ್ರ್ಯ ತೋರುವವರಿಗೆ ಈ ಲೇಖನವಲ್ಲ. ಹೆಣ್ಣನ್ನು ತನ್ನದೆಷ್ಟೋ ತಪ್ಪುಗಳಿದ್ದು ದೂರುವ ಇನ್ಹಲವರಿಗೆ.


ಮಂಜುನಾಥ ಬಿ.ಆರ್ (ಚಿಮಬಿಆರ್)
ಯುವಸಾಹಿತಿ, ಲೇಖಕ, ವಿಮರ್ಶಕ
ದೂರವಾಣಿ ಸಂಖ್ಯೆ:8884684726

Gmail I’d:- manjunathabr709@gmail.com

Leave a Reply

Your email address will not be published. Required fields are marked *