ಲೇಖನ:ಮಹೇಶ್ ನಾಯಕ್
ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯ ಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನಕ್ಕಿಂದು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ.
ಸಾಂಸ್ಕ್ರತಿಕ ನಗರ ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಎ. ರವರು ಮೈಸೂರು ತಾಲ್ಲೂಕು ಸಿಂದುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಪ್ರೌಢ ಶಾಲಾ ವ್ಯಾಸಂಗ ಮಾಡಿ ಬಳಿಕ ಐ.ಟಿ.ಐ ಆಟೋ ಮೊಬೈಲ್ ತರಬೇತಿ ಪಡೆದು ಮೈಸೂರಿನ ಪ್ರತಿಷ್ಟಿತ ಕಾರ್ ಶೋ ರೂಂ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದು, ಇದೀಗ ತನ್ನದೇ ಸ್ವಂತ ಸಣ್ಣ ಕುಷನ್ ವರ್ಕ್ ಶಾಪ್ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಕವಿ, ಸಮಾಜ ಸೇವಕರೂ ಆಗಿರುವ ಅಕ್ಬರ್ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವ ಬರೆಯುವ ಹವ್ಯಾಸ ಮಾಡಿಕೊಂಡಿದ್ದು, ಇದುವರೆಗೆ ಹಲವಾರು ಚುಟುಕುಗಳು, ಕವನಗಳನ್ನು ಬರೆಯುವ ಮೂಲಕ ಅಕ್ಷರ ಪ್ರೇಮಿಯಾಗಿ ಸಾಹಿತ್ಯ ಕ್ಷೇತ್ರ ಮತ್ತು ಪರಿಸರದ ಕಾಳಜಿ ಹೊಂದಿ ಸಂರಕ್ಷಣೆಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ಇದೆಲ್ಲದರ ನಡುವೆ ಇವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು, ಕಸ ಮುಕ್ತ ಕರ್ನಾಟಕ ಆಗದಿದ್ದರೂ ಕಸ ಮುಕ್ತ ಕಲ್ಯಾಣಗಿರಿ ನಗರ ಮಾಡಬೇಕು ಎಂಬ ಛಲಹೊಂದಿದ್ದಾರೆ. ಇದಕ್ಕಾಗಿಯೇ ಇವರು ದಿನ ನಿತ್ಯ ಒಂದು ತಾಸು ಚಳಿ, ಮಳೆ ಎನ್ನದೆ ತಾನು ವಾಸ ಮಾಡುತ್ತಿರುವ ನಗರದ ರಸ್ತೆ ಬದಿಗಳಲ್ಲಿ ಸ್ವಚ್ಛತೆಗೆ ಮೀಸಲಿಡುತ್ತಿದ್ದಾರೆ.
ಯಾರು ಏನೇ ಹೇಳಿದರೂ ಇವರು ಮುಜುಗರವಿಲ್ಲದೆ ಮೋರಿಯ ಸ್ವಚ್ಚತೆಯಾಗಿರಬಹುದು, ಕಸದ ಸಮಸ್ಯೆಯಾಗಿರಲಿ ತನ್ನಷ್ಟಕ್ಕೆ ತಾನು ಕೆಲಸ ಮುಗಿಸಿ ಹೊರಟು ಹೋಗುತ್ತಾರೆ. ಇವರು ಸಾಕಷ್ಟು ಬಾರಿ ನಗರ ಪಾಲಿಕೆ ಸಿಬ್ಬಂದಿಗಳಿಗೆ ಗಮನಕ್ಕೂ ತಂದರೂ ಯಾವುದೇ ಪ್ರಯೋಜವಾಗದೇ ಸ್ಥಳೀಯ ಪಾಲಿಕೆ ಸದಸ್ಯರಿಗೆ ಕರೆ ಮಾಡಿದರೂ ಯಾವ ಸ್ಪಂದನೆ ನೀಡದೆ ಪ್ರಯೋಜನವಾಗದೆ ಇದ್ದಾಗ ತಾನೇ ಖುದ್ದು ಸಾರ್ವಜನಿಕರಿಗೆ ಸ್ವಚ್ಛತೆ ಪಾಠ ಹಾಗೂ ಪರಿಸರದ ಜಾಗೃತಿ ಬಗ್ಗೆ ಮಕ್ಕಳಿಗೆ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸಲು ಮುಂದಾಗುವುದು ಇವರ ವಿಶೇಷತೆಯಾಗಿದೆ.

ತನ್ನ ಸ್ವಂತ ಹಣದಿಂದ ಕೆಲಸಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ತೆಗೆದುಕೊಂಡು ಸೇವೆಗೆ ಸಿದ್ದರಾಗುತ್ತಾರೆ. ಸುತ್ತಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದು, ಜನ ಮನಗೆದ್ದಿದ್ದಾರೆ. ಮೊದ ಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು, ನಾವು ಓಡಾಡುವ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಯಾಗಿಟ್ಟು ಕೊಳ್ಳುವುದು ತುಸು ಕಠಿಣವಾಗಬಹುದು. ಆದರೆ ದಿನಗಳು ಕಳೆದಂತೆ, ಪ್ರತಿ ದಿನವೂ ನಾವು ಸ್ವಚ್ಛತೆ ಕಾಪಾಡಿಕೊಂಡು ಬಂದರೆ ಅದು ನಮಗೇ ಅರಿವಿಲ್ಲದಂತೆ ನಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತದೆ ಎಂಬುದು ಇವರು ಕಂಡುಕೊಂಡ ಸತ್ಯವಾಗಿದೆ.
ದಿನನಿತ್ಯ ಪೌರಕಾರ್ಮಿಕರು (ಬ್ಲಾಕ್ಸ್ಪಾಟ್) ತುಂಬಿರುವ ರಾಶಿ, ಕೊಳೆಯನ್ನು ಶುಚಿ ಮಾಡುತ್ತಾರೆ. ಆದರೂ, ಮಾರನೆಯ ದಿನ ಇಡೀ ನಗರ ಕಸದಲ್ಲಿ ಮಿಂದೇಳುತ್ತಿರುತ್ತದೆ. ಪೌರಕಾರ್ಮಿಕರ ಶ್ರಮವನ್ನು ಅರ್ಥ ಮಾಡಿಕೊಳ್ಳದ ನಗರದ ನಾಗರಿಕರು ಸ್ವಚ್ಛತೆಗೂ ತಮಗೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ವರ್ತಿಸುವುದು, ಎಲ್ಲೆಂದರಲ್ಲಿ ಕಸ ಎಸೆಯುವುದು ಖಂಡಿತ ನಾಗರಿಕ ಲಕ್ಷಣವಲ್ಲ. ಹಸಿ ಕಸ, ಒಣ ಕಸವನ್ನು ಬೇರ್ಪಡಿಸದವರು, ಕಸದಡಬ್ಬಿ ಇಟ್ಟುಕೊಳ್ಳದವರು ಬ್ಲಾಕ್ಸ್ಪಾಟ್ಗಳಲ್ಲಿ ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ಕಸ ಹಾಕುತ್ತಾರೆ. ಸರ್ಕಾರದವರು ಗುಂಪು ಮನೆ ಯೋಜನೆಯಲ್ಲಿ ಹಲವರಿಗೆ ವಾಸ ಮಾಡಲು ಮನೆ ನೀಡಿದ್ದು ಅಲ್ಲಿನ ನಿವಾಸಿಗಳು ಕಸ ಎಸೆಯಲು ಕೆಳಗೆ ಇಳಿಯದೆ ಮೇಲಿಂದಲೇ ತಮ್ಮ ಕಸ ಎಸೆಯುತ್ತಿದ್ದು. ಅಂತಹವರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಾರೆ.]

ನಗರ ಪಾಲಿಕೆಯವರು ಈ ಬಗ್ಗೆ ಹೆಚ್ಚು ಗಮನ ನೀಡಿ ಸಾರ್ವಜನಿಕರಲ್ಲಿ ಅರಿವು ಉಂಟು ಮಾಡಬೇಕು. ಇಲ್ಲವಾದಲ್ಲಿ ಅಪಾರ್ಟ್ಮೆಂಟ್ ರೀತಿಯಲ್ಲಿ ಕಸದ ರಾಶಿಯೂ ಮೇಲೇಳುತ್ತದೆ. ಹಾಗಾಗಿ ಕಸ ಹಾಕುವವರನ್ನು ಹಿಡಿದು ದಂಡ ಹಾಕುವ ಕೆಲಸವಾಗಬೇಕು. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು. ಸಾರ್ವಜನಿಕರು ರಸ್ತೆಯ ಬದಿ ಎಲ್ಲೆಂದರಲ್ಲಿ ಕಸ ಎಸೆಯುವ ಮೊದಲು ಕಸ ಸ್ವಚ್ಛ ಮಾಡುವವರ ಪರಿಸ್ಥಿತಿ, ಆರೋಗ್ಯ ಸ್ಥಿತಿಯನ್ನು ಅರಿತುಕೊಳ್ಳಬೇಕು. ಸ್ವಚ್ಛತೆಗಾಗಿ ಪೌರಕಾರ್ಮಿಕರು ಹಾಕುತ್ತಿರುವ ಶ್ರಮವನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಪೌರಕಾರ್ಮಿಕರ ಶ್ರಮವನ್ನು ಅರಿತರೆ, ನಗರವು ತಾನಾಗಿಯೇ ಸ್ವಚ್ಛವಾಗುತ್ತದೆ. ಮುಂದಿನ ಪೀಳಿಗೆಯು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಕ್ಬರ್. ಇದೇ ರೀತಿ ಅವರ ಸಮಾಜ ಸೇವೆ ಮುಂದುವರೆಯಲಿ ಎಂದು ಆಶಿಸೋಣ.
ಅಕ್ಬರ್ ಎ. ಕಲ್ಯಾಣಗಿರಿ ಮೊ: ೯೫೯೧೩ ೨೦೦೦೭