ಸ್ವಾತಂತ್ರ್ಯ ಪ್ರಜ್ಞೆ ಮತ್ತು 77ರ ಸ್ವತಂತ್ರ ಭಾರತದ ಸಂದರ್ಭದ ಸಂಕಲ್ಪ

*ಚಿದ್ರೂಪ ಅಂತಃಕರಣ* ಎಲ್ಲಿಯವರೆಗೆ ನನ್ನ ಅಧೀನದಲ್ಲಿ ಹಲವರನ್ನು ಅಥವಾ ಒಬ್ಬರನ್ನಾದರೂ ಆಳಬೇಕು ಎನ್ನುವ ನಿರಂಕುಶ ಆಲೋಚನೆ ಎಲ್ಲಿಯಾದರೂ ಸರಿಯೇ!

ಪ್ರತಿಯೊಬ್ಬರ ಮನ ಭೂಮಿಕೆಯಲ್ಲಿ ಹುಟ್ಟು ಮತ್ತು ನಾನಾ ಬಗೆಯಾಗಿ ಬೆಳೆವಣಿಗೆಯನ್ನು ಪಡೆಯುತ್ತಿರುತ್ತದೋ ಅಲ್ಲಿಯವರೆಗೆ ಈ ಸ್ವಾತಂತ್ರ್ಯ ಎನ್ನುವುದು ಮರುಭೂಮಿಯ ಮರೀಚಿಕೆಯಾಗಿರುತ್ತದೆ. ಹೀಗಿರುವಲ್ಲಿ ಸ್ವಾತಂತ್ರ್ಯದ ದಾಹ ಯಾರೊಬ್ಬರಿಗೂ ಎಂದಿಗೂ ಸೀಮಾಂತ ತುಷ್ಟಿಯಾಗುವುದಿಲ್ಲ.

ಹೌದು ಭಾರತ ಸ್ವತಂತ್ರ ರಾಷ್ಟ್ರ. ಈ ಸ್ವಾತಂತ್ರ್ಯ, ದೇಶದ ಯಾವ ವಿಚಾರಕ್ಕೆ ಎಂದು ನೋಡಿದಾಗ; ‘ವಿಶ್ವದ ಇತರ ರಾಷ್ಟ್ರಗಳ ಅಧೀನದಿಂದ ಮುಕ್ತರಾಗಿದ್ದೇವೆ’, ‘ಎದುರಾಳಿಗಳಿಗೆ ಎದೆಗಾರಿಕೆಯ ಭಂಟರಾಗಿದ್ದೇವೆ’, ‘ಕಾನೂನಿನ ವ್ಯವಸ್ಥೆಯಲ್ಲಿ ಭದ್ರಕೋಟೆಯ ಬೃಹತ್ ಸಾಂವಿಧಾನಿಕ ಪರಿಧಿಯನ್ನು ಹೊಂದಿದ್ದೇವೆ’ ಎನ್ನುವ ಹಲವು ಸಂಗತಿಗಳು ಇರಬಹುದು.

ಆದರೆ ಈ ಸ್ವಾತಂತ್ರ್ಯದ ನಿರ್ಮಿತಿ ಒಳಗೆ ಮತ್ತು ಅನುಕೂಲ ಪರಿಧಿಯ ಒಳಗೆ ನಾವು ಉಸಿರುಗಟ್ಟಿಸುವ ಮಿತಿಗಳನ್ನು ಭಾರತ ಸ್ವತಂತ್ರವಾದ (೧೯೪೭) ಸಂದರ್ಭಕ್ಕೂ ಬಿಡದೆ ಅನುಸರಣೆ ಮಾಡಿಕೊಂಡು ಈವರೆಗೂ ಹೆಚ್ಚಿನ ಅಪಾಯಗಳಲ್ಲೇ ಜೀವಿಸುತ್ತಿರುವುದು; ‘ನಾವು ಇನ್ನೊಬ್ಬರನ್ನು ನಮ್ಮ ತೆಕ್ಕೆಗೆ ತೆಗೆದುಕೊಂಡು ಬಾಳುವ ಅಥವಾ ನಾವುಗಳೇ ನಮ್ಮ ಸ್ವಾರ್ಥ ಮತ್ತು ಬಲಹೀನತೆಗಳಿಂದಾಗಿ ಮತ್ತೊಬ್ಬರ ದಾಸ್ಯದಲ್ಲಿ ಬದುಕುಳಿಯುವ ಸ್ಥಿತಿಗೆ ಮುಗಿಬೀಳುತ್ತಿರುವುದು ಸುಲಭ ಗ್ರಹಿಕೆಯ ಭಾರತ ಜನತೆಯ ಸನ್ನಿವೇಶವಾಗಿದೆ’. ಇದೊಂದು ರೀತಿಯದ್ದು ನಡೆಯುತ್ತಿದೆ. ಇದರ ನಡುವೆ ಚಾರಿತ್ರಿಕ ಸತ್ಯಾನ್ವೇಷಣೆಯನ್ನು ಲಾಭದ ಸಗಟನ್ನಾಗಿ ಬಳಸಿಕೊಳ್ಳುತ್ತಿರುವ ಸಾಮಾಜಿಕ ಭ್ರಷ್ಟರು ಇನ್ನೊಂದು ಕಡೆ ಪಾರ್ಥೇನಿಯಂ ಗಿಡದಷ್ಟೇ ಹರಡಿಕೊಂಡಿದ್ದಾರೆ. ಎಷ್ಟು ಕಿತ್ತರೂ ಮತ್ತೆ ಅವರೇ ಎಲ್ಲೆಡೆ ಜನ್ಮವೆತ್ತುತ್ತಿದ್ದಾರೆ.

ಈ ಚಾರಿತ್ರಿಕ ವಧೆಯ ರಕ್ತಬೀಜಾಸುರರು, ಚರಿತ್ರೆಯ ಸತ್ಯ ಸುಳ್ಳುಗಳನ್ನು ತಮಗಿಷ್ಟ ಬಂದಂತೆ ಪೋಣಿಸುವವರು ಸ್ವಾತಂತ್ರ್ಯವೆಂಬ ತಾಯಿಯ ಗರ್ಭಕ್ಕೆ ವಿಷಪ್ರಾಶನ ಮಾಡಿಸುತ್ತಿರುವರು. ಇನ್ಮುಂದೆ ಹುಟ್ಟುವವರೆಲ್ಲ ನಮ್ಮಂತೆಯೇ ಆಗಿಹೋಗಲಿ ಎಂದು. ಹೀಗೊಂದು ಉದಾಹರಣೆ ಬಗೆಯಾಗಿ; ‘ಮಹಾತ್ಮ ಗಾಂಧೀಜಿ ಅವರನ್ನು ಶೋಧಿಸುತ್ತಿರುವ ಪರಿಯಲ್ಲಿ ತೇಜೋವಧೆಗೆ ಕಾದುಕುಳಿತವರಿಗೆ ಒಂದು ಕಿವಿ ಮಾತು; ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ಸಿದ್ಧಾಂತ, ದೇಸಿ ಪ್ರಜ್ಞೆ, ಶಿಕ್ಷಣ ನೀತಿ, ಇಂತಹುಗಳನ್ನು ಎಷ್ಟು ಹೆಕ್ಕಿದರೂ ಒಳ್ಳೆಯ ಬಿತ್ತನೆಯ ಕಾಳುಗಳೇ ನೆನಪಿರಲಿ. ಇರಬಹುದು, ಇಲ್ಲದೆಯೂ ಇರಬಹುದಾದ ಊಹಾಪೋಹ ಅಪವಾದಗಳನ್ನು ಕಿಂಚಿತ್ತು ಕೆದಕಿದರೂ ತಿಪ್ಪೆ ಕೆದಕಿ ಪರಿಸರ ಹಾಳು ಮಾಡಿದಂತೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ತಿಳಿಸಿದ “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ನುಡಿಯಂತೆ ಇಂದು ಇತಿಹಾಸವನ್ನು ಕಾಣಲು ಹೊರಟಿರುವವರ ಸಂಖ್ಯೆ ವಿರಳ.

ಶೋಷಣೆ, ಅಸಮಾನತೆ, ಭ್ರಷ್ಟತೆ, ವಂಚನೆಗಳ ವಿರುದ್ಧ ನ್ಯಾಯ ನೆಲೆಸುವಂತೆ ಇತಿಹಾಸವನ್ನು ನೆನಪಿಟ್ಟುಕೊಳ್ಳಬೇಕೇ ವಿನಃ ಜಾತಿನಿಂದನೆ, ಮತ ಭೇದ, ವರ್ಣ ತಾರತಮ್ಯ, ಬಡವ – ಶ್ರೀಮಂತ ಎನ್ನುವುಗಳ ಉರುಳಿಗೆ ಸಮಾಜದ ಶಿರವನ್ನು ನೀಡುವಂತಲ್ಲ. ಹದಗೆಟ್ಟ ಸಮಾಜದ ಒಟ್ಟಾರೆ ಚಟುವಟಿಕೆ ನಿಸರ್ಗದ ಪೂರ್ಣ ಆಪತ್ತಲ್ಲ ಬದಲಿಗೆ ನಿಸರ್ಗದೊಳಗೆ ಮಾನವ ವಿಕಸನಗಳ ಧಾರುಣ ನೆಲಸಮ. ಸಮಾಜ ಎನ್ನುವುದು ಹಲವು ವ್ಯವಸ್ಥೆಗಳ ಗೂಡು. ಈ ಗೂಡಿನಲ್ಲಿ ಮಾನವ ಶಾಸ್ತ್ರ ಸಿದ್ಧಾಂತಗಳು, ಬೌದ್ಧಿಕ ಸೆಲೆಗಳು, ವಿಕಸನಗಳು ನೆಲೆಗೊಂಡ ಬಗೆಯು ಔದಾರ್ಯ. ಈ ಸಮಾಜವು ವಿಶ್ವದ ೧೯೬ ದೇಶಗಳಲ್ಲೂ ಒಂದೇ ತೆರನಾಗಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ, ರಷ್ಯಾ, ಚೀನಾ, ಉಕ್ರೇನ್, ಶ್ರೀಲಂಕಾ ಈ ದೇಶಗಳ ಹಾಗು ಹೋಗುಗಳು ನಮಗೀಗಾಗಲೇ ಕರೋನ ತೆರೆಯ ಹಿಂದೆ ಮುಂದೆ ತುಂಬಾ ವಸ್ತುನಿಷ್ಠವಾಗಿ ಬಣ್ಣಿತವಾಗಿವೆ.

ದಿವಾಳಿತನದ ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗಳನ್ನು ಒಳಗೊಂಡ ಈ ತರಹದ ದೇಶಗಳ ವರ್ಗ ಸಂಘರ್ಷಗಳು ಮಾನವ ಕ್ರೌರ್ಯತೆಗೆ ಹೆಸರುವಾಸಿ. ಈ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಎಷ್ಟೋ ಅನುಕೂಲತೆಗಳ ಅಗ್ರಪಂಕ್ತಿಯಲ್ಲಿ ಉಳಿಯುತ್ತದೆ. ಕಾರಣ ಈ ನೆಲದ ಅಧ್ಯಾತ್ಮಿಕ, ಧಾರ್ಮಿಕ ಜ್ಞಾನ ಪರಂಪರೆಯ ಕೊಡುಗೆ, ಇನ್ನೂ ಅದರ ಜೀವಂತಿಕೆ, ಅನುಸರಣೆ ಎನ್ನಬಹುದು.

ವಿಶ್ವದ ಚಿಂತನೆಯಲ್ಲಿ ಭಾರತ ವಿಶಿಷ್ಟ ಶಕ್ತಿಯುತ ರಾಷ್ಟ್ರ. ಏನಾದರೂ ವಿದೇಶಿಯರು ಒಳಿತಿನ ಕಡೆ ಮುಖಮಾಡಬೇಕೆಂದು ನಿರ್ಧರಿಸಿದರೆ ಭಾರತ ಅವರಿಗೆ ಮೊದಲ ಆಯ್ಕೆಯಾಗಿರುತ್ತದೆ. ಇಂತಹ ರಾಷ್ಟ್ರದಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ನಮ್ಮ ಸೌಭಾಗ್ಯ. ಈ ಪ್ರಶಂಸೆ ನಾವು ಹೊರಗಿನವರೊಂದಿಗೆ ಹೋಲಿಸಿಕೊಳ್ಳುವಾಗಷ್ಟೇ ಎನ್ನುವುದು ಅಷ್ಟೇ ಸತ್ಯ. ದೇಶದ ಒಳಗೆ ಈಗಾಗಲೇ ಈ ಪ್ರಶಂಸೆಗಳ ವಿರುದ್ಧವಾಗಿ ಮೂಲ ಅಸ್ಥಿತ್ವವನ್ನು ಮರೆತು ನಡೆದುಕೊಳ್ಳುತ್ತಿರುವುದು ವ್ಯಥೆಯ ದುಗುಡಾಗಿದೆ.

ಈ ದುಗುಡು ಪ್ರಜ್ಞಾವಂತರ ದಮ್ಮಡಿಯಾಗಿ ಎಲ್ಲೆಡೆ ಎಚ್ಚರಿಕೆಯ ಘಂಟೆಯಾಗಿ ಮೊಳಗಲು ಈ ಶತಮಾನದ ತಂತ್ರಜ್ಞಾನ ಕ್ರಾಂತಿಯಾದ ಮಾಧ್ಯಮವೇನಿದೆ ಇದು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಮಾಧ್ಯಮ ಮಾರಾಟವಾದ ಹಿನ್ನಲೆಯಲ್ಲೇ ಒಂದಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಮಾಧ್ಯಮಗಳು ಉತ್ತಮ ರೀತಿಯಲ್ಲಿ ಬಳಕೆಯಾದ ಬೆನ್ನಲ್ಲೇ ಭ್ರಷ್ಟರ ವ್ಯಕ್ತಿತ್ವ ಬಯಲಾಗಿವೆ. ಆದರೂ ಏನು? ಪ್ರಯೋಜನವೆಂಬಂತೆ! ಸಾವಿರ ತಪ್ಪುಗಳನ್ನು ಎಸಗುತ್ತಿರುವ ನೂರರಲ್ಲಿ ನಾನೂ ಒಬ್ಬ ಎನ್ನುವ ಮನಸ್ಥಿತಿಯಲ್ಲಿ ಬಂಡ – ಪುಂಡರ ಹಾವಳಿ ಹೆಚ್ಚಾಗಿದೆ. ಹೀಗಿರುವಾಗ ೭೭ರ ಭಾರತ ಸ್ವಾತಂತ್ರ್ಯ ಸಂದರ್ಭದಲ್ಲಿ ನಾವುಗಳು ತೊಡಬೇಕಾದ ಬಹುದೊಡ್ಡ ಸಂಕಲ್ಪ ಇದಾಗಿರಲಿ. ನಾವುಗಳು ಕಲಿಯುವ ಒಳಿತುಗಳು ಕೇವಲ ನಾಟಕೀಯವಾಗಿರದೆ, ಲಾಭದಾಯಕ ಕೆಲಸಗಳಿಗೆ ಮೀಸಲಾಗಿರದೆ, ನೈಜ ಮತ್ತು ಸೇವಾ ಮನಸ್ಸಿನ ಜೀವನ ಅನ್ವಯವಾಗಿರಲಿ.

ಇದಕ್ಕೊಂದು ಘಟನೆ ತಿಳಿಸುವೆ; ನನ್ನ ಮಿತ್ರನೊಬ್ಬ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವನು. ಆತ ಮೊನ್ನೆ ತನ್ನ ಕುಟುಂಬದ ಆರ್ಥಿಕ ಮತ್ತು ಅನಾರೋಗ್ಯದ ಸಮಸ್ಯೆಗೆ ಕುರಿತಂತೆ ಮಾನಸಿಕ ಸಮಾಧಾನಕ್ಕಾಗಿ, ಸಮಸ್ಯೆಗೆ ಪರಿಹಾರಕ್ಕಾಗಿ ನನಗೆ ದೂರವಾಣಿ ಕರೆ ಮಾಡಿದ್ದ. ನಾನು ಹೇಳಿದ ಒಂದು ಮಾತು ಆತನಿಗೆ ಚಿಂತನೆಗೆ ಹಚ್ಚಿತ್ತು. “ನೀವು ಶಿಕ್ಷಕರು ಪುಸ್ತಕದಲ್ಲಿರುವ ಪಠ್ಯವನ್ನು ಚೆನ್ನಾಗಿಯೇ ಬೋಧಿಸುತ್ತೀರ ಆದರೆ ನೀವೇ ಕಿಂಚಿತ್ತು ಅಲ್ಲಿರುವ ನೀತಿಯನ್ನು ಪಾಲಿಸಲು ಪಣತೊಡುವುದಿಲ್ಲ”.

“ಪುರಂದರದಾಸರ ಬಗ್ಗೆ ತಿಳಿಸುವಾಗ ನಾನೆಷ್ಟು ಪುರಂದರನಾಗಿ ಸರಳನಾಗಿದ್ದೇನೆ” ಎನ್ನುವುದು ಮುಖ್ಯ. “ಸ್ವಲ್ಪವೂ ಪುರಂದರನಾಗದೆ ಪುರಂದರದಾಸರ ಬಗ್ಗೆ ಬೋಧಿಸಿದರೆ, ಬದುಕಿದರೆ ಏನು ಪ್ರಯೋಜನ” ಎಂದೆ. ಆತ ಅರೆಕ್ಷಣ ಮೌನವಾಗಿದ್ದುಬಿಟ್ಟ. ಹೌದೌದು ನೀನು ಹೇಳುವುದು ನಿಜ. ನಾವು ಹಗುರಾಗದೆ, ಬೇಡದ ವಿಚಾರಗಳನ್ನು ಬಿಡದೆ, ಸ್ವಂತಕ್ಕಲ್ಲದಿದ್ದರೂ ಪರರ ಸ್ವತ್ತಿಗಾದರೂ ನಾವು ಪುರಂದರನಾಗದಿದ್ದರೆ ಪ್ರಯೋಜನವಿಲ್ಲ.

ಜೊತೆಗೆ ನನಗೆ ಒದಗಿರುವ ಸಮಸ್ಯೆಗಳು ಸುದೀರ್ಘವಾಗಿಬಿಡುತ್ತವೆ ಎಂದು ಮನ ಅರಿವಿನೊಂದಿಗೆ ನುಡಿದ. ದೇಶದ ಸ್ವಾಸ್ಥ್ಯಕ್ಕೂ ಇದೇ ಮಂತ್ರ ನಾವು ಕಲಿತ ಒಳಿತುಗಳಂತೇ ಬದುಕಿದರೆ ಸ್ವಾತಂತ್ರ್ಯ ಎನ್ನುವುದು ಅದರ ಅಸ್ತಿತ್ವಕ್ಕೆ ಈ ದೇಶದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತದೆ.

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಯುವಸಾಹಿತಿ, ಲೇಖಕರು. ಎಚ್.ಡಿ. ಕೋಟೆ ಮೈಸೂರು. ದೂರವಾಣಿ ಸಂಖ್ಯೆ:

8884684726 Gmail I’d: manjunathabr709@gmail.com

Leave a Reply

Your email address will not be published. Required fields are marked *