ಚಾಮರಾಜನಗರ: ಹಿಂದುಳಿದ ವರ್ಗಗಳು ಶೋಷಿತ ಜನಾಂಗದ ಸಮಗ್ರ ಅಭಿವೃದ್ದಿಗೆ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ಅಪಾರ ಕೊಡುಗೆಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸು ಅವರು ಸದಾ ಸ್ಮರಣೀಯರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ೧೦೮ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳು, ಶೋಷಿತ ವರ್ಗಗಳ ಅಭಿವೃದ್ದಿಗೆ ಸಾಕ? ಶ್ರಮಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪಿಸಿದರು. ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳ ಸಮುದಾಯಗಳ ಸಮೀಕ್ಷೆ ನಡೆಸಿ ಅನುಕೂಲ ಕಲ್ಪಿಸಿಕೊಟ್ಟರು. ರಾಜಕೀಯದಲ್ಲಿ ಹೊಸ ಹಾದಿಯನ್ನು ತೋರಿಸಿಕೊಟ್ಟರು ಎಂದರು.

ಯಾರನ್ನು ಸಹ ನಿಷ್ಠೂರ ಮಾಡಿಕೊಳ್ಳದೇ ಎಲ್ಲರ ವಿಶ್ವಾಸಗಳಿಸಿ ಉತ್ತಮ ಕೆಲಸಗಳನ್ನು ಅರಸು ಅವರು ಕೈಗೊಂಡರು. ವಯೋವೃದ್ದರಿಗೆ ಮಾಸಾಶನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಜಾರಿ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಶೋಷಿತ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಡಿ. ದೇವರಾಜ ಅರಸು ಅವರು ಮೌನಕ್ರಾಂತಿಯ ಮೂಲಕ ಹೆಸರುವಾಸಿಯಾಗಿ ರಾಷ್ಟ್ರದಾದ್ಯಂತ ಖ್ಯಾತಿ ಹೊಂದಿದರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ಡಿ. ದೇವರಾಜ ಅರಸು ಅವರು ಬಾಲ ಕಾರ್ಮಿಕ ಪದ್ದತಿ ಹಾಗೂ ಸಮಾಜದಲ್ಲಿನ ಕಟ್ಟುಪಾಡು ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಶ್ರಮಿಸಿದರು. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅವರು ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಅರಸು ಅವರ ಉತ್ತಮ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಗೀತಾ ಹುಡೇದ ಅವರು ಮಾತನಾಡಿ ಭಾರತ ಕಂಡ ಧೀಮಂತ ನಾಯಕ ಡಿ. ದೇವರಾಜ ಅರಸು. ಅವರ ೨೧ ಅಂಶಗಳ ಕಾರ್ಯಕ್ರಮಗಳು, ಹಾವನೂರು ಆಯೋಗದ ರಚನೆ, ಜೀತ ವಿಮುಕ್ತಿ, ಉಳುವವನೇ ಭೂ ಒಡೆಯದಂತಹ ಯಶಸ್ವಿ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹಿಂದುಳಿದ ವರ್ಗಗಳ ಏಳಿಗೆಗಾಗಿ ಅರಸು ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಇರಸವಾಡಿ ಸರ್ಕಾರಿ ಪ್ರೌಢಶಾಲೆ ಅಧ್ಯಾಪಕರಾದ ಗೋವಿಂದರಾಜು ಅವರು ಸಾಮಾನ್ಯ ಮನೆತನದಿಂದ ಹುಟ್ಟಿ ಎಲ್ಲರ ಮನಸ್ಸಿನಲ್ಲಿ ಹೆಸರು ಮಾಡಿದ್ದ ಧೀಮಂತ ನಾಯಕ ಡಿ. ದೇವರಾಜ ಅರಸು. ಸಾಮಾಜಿಕ ಆರ್ಥಿಕ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಚಿಂತಿಸಿದವರು. ನೊಂದ ಸಾಮಾಜಿಕ ಧ್ವನಿಗಳಿಗೆ ಜೊತೆಗೂಡಿ ಅನೇಕ ರಂಗದಲ್ಲಿ ಉನ್ನತ ಅವಕಾಶಗಳನ್ನು ಕಲ್ಪಿಸಿದರು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದ ಬಳಿ ಡಿ. ದೇವರಾಜು ಅರಸು ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಟಿ. ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಭಾಗಿಯಾಗಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಎ. ರಾಜೇಂದ್ರ ಪ್ರಸಾದ್, ದೇವರಾಜ ಅರಸು ನಿಗಮದ ಅಧಿಕಾರಿ ಚೈತ್ರಾ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
