: ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ
ಚಾಮರಾಜನಗರ: ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿ ಇದೇ ತಿಂಗಳ ಮಾ. 16ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್ನಲ್ಲಿ 31,267 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು ಈ ವಿಷಯ ಹೇಳಿದರು.
ಜನಸಾಮಾನ್ಯರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಈ ಬಾರಿ ನಡೆದ ಲೋಕ್ ಅದಾಲತ್ನಲ್ಲಿ 195 ಸಿವಿಲ್, 1635 ಕ್ರಿಮಿನಲ್ ಹಾಗೂ ವ್ಯಾಜ್ಯ ಪೂರ್ವ 29,437 ಪ್ರಕರಣಗಳು ಸೇರಿದಂತೆ ಒಟ್ಟು 31,267 ಪ್ರಕರಣಗಳು ಇತ್ಯರ್ಥವಾಗಿವೆ. ಚಾಮರಾಜನಗರ ನ್ಯಾಯಾಲಯದಲ್ಲಿ 19,875, ಯಳಂದೂರಿನಲ್ಲಿ 2178, ಕೊಳ್ಳೇಗಾಲದಲ್ಲಿ 5839, ಗುಂಡ್ಲುಪೇಟೆಯಲ್ಲಿ 3375 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದರು.
ಈ ಬಾರಿ ಗರಿಷ್ಠ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಲೋಕ ಅದಾಲತ್ನಲ್ಲಿ ಇಷ್ಟು ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆಯಾಗಿದೆ. ದಂಡದ ಮೊತ್ತ, ಅಪಘಾತಗಳಿಂದ ಕ್ಲೈಮು, ತೆರಿಗೆ ವಸೂಲಿ, ಕಾರ್ಮಿಕರಿಗೆ ಪರಿಹಾರ, ಪಿಂಚಣಿ, ಇತರೆ ಸೇರಿದಂತೆ ಒಟ್ಟು 8,36,94,538 ರೂ. ಗಳು ಇತ್ಯರ್ಥಗೊಂಡ ಪ್ರಕರಣಗಳಿಂದ ಸಂಗ್ರಹವಾದ ಮೊತ್ತವಾಗಿದೆ. ಇದರಲ್ಲಿ ದಂಡದ ಹಣ ಸರ್ಕಾರಕ್ಕೆ ಪಾವತಿಯಾಗಲಿದ್ದು, ಪರಿಹಾರದ ಮೊತ್ತ ಸಂತ್ರಸ್ತರಿಗೆ ತಲುಪಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 10-15 ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡು ಜನರು ಅದಾಲತ್ ಅನ್ನು ಸದ್ಭಳಕೆ ಮಾಡಿಕೊಂಡಿದ್ದಾರೆ. ಲೋಕ್ ಅದಾಲತ್ ಯಶಸ್ವಿಯಾಗಲು ವಕೀಲರು, ಕಕ್ಷಿದಾರರು, ವಿವಿಧ ಇಲಾಖೆಗಳು ನೆರವಾಗಿದ್ದಾರೆ. ಲೋಕ್ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾಧಗಳನ್ನು ಜಿಲ್ಲಾ ನ್ಯಾಯಾಧೀಶರಾದ ಭಾರತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ಅವರು ಮಾತನಾಡಿ ರಾಜಿಯಾಗಬಲ್ಲ ಪ್ರಕರಣಗಳನ್ನು ಗುರುತಿಸಿ ವಿವಿಧ ಇಲಾಖೆಗಳಲ್ಲಿ ಜನರಿಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಕಳೆದೆ ಎರಡೂವರೆ ತಿಂಗಳಿಂದ ಪೂರ್ವ ಸಮಾಲೋಚನೆ ನಡೆಸಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಲೋಕ್ ಅದಾಲತ್ ಮೂಲಕ ಜನರು ರಾಜಿ ಸಂಧಾನದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರುತ್ತಿರುವುದು ಶ್ಲಾಘನೀಯ. ಎಲ್ಲರ ಸಹಕಾರ ನಿರಂತರವಾಗಿರಲಿ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ ಆರಂಭದ ಲೋಕ್ ಅದಾಲತ್ನಲ್ಲಿ 500 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿತ್ತು. ಪ್ರತಿ ಅದಾಲತ್ನಿಂದ ಅದಾಲತ್ಗೆ ಪ್ರಕರಣಗಳ ಇತ್ಯರ್ಥ ಸಂಖ್ಯೆ ಹೆಚ್ಚಾಗುತ್ತಿವೆ. ಜನರಿಗೆ ನ್ಯಾಯಾಂಗದಲ್ಲಿ ನಂಬಿಕೆ ಉಳಿದಿದೆ. ಎಲ್ಲರ ಸಹಕಾರದಿಂದ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಪರಸ್ಪರ ಕಕ್ಷಿದಾರರ ಮನವೊಲಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.