39 ದಿನಗಳಲ್ಲಿ 200 ಕೋಟಿ ರೂ. ಮೀರಿದ ಶಬರಿಮಲೆ ಆದಾಯ

31 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಅಯ್ಯಪ್ಪ ಸ್ವಾಮಿಯ ದರ್ಶನ
ಕೇರಳ: ಶಬರಿಮಲೆಗೆ ಭಾರೀ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದು, ದೇಗುಲದ ಆದಾಯ ಈವರೆಗೆ 200 ಕೋಟಿ ರೂಪಾಯಿ ದಾಟಿದೆ ಎಂದು ಅಯ್ಯಪ್ಪ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ದೇಶಾದಾದ್ಯಂತ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಇದರಿಂದ ದೇಗುಲದ ಆದಾಯವೂ ಕೂಡಾ ಹೆಚ್ಚಾಗಿದೆ. ಮಂಡಲಪೂಜೆ ನಿಮಿತ್ತ ಗಿರಿಗೆ ಭೇಟಿ ನೀಡುತ್ತಿರುವ ಅಯ್ಯಪ್ಪ ಭಕ್ತರಿಂದ ಕಳೆದ 39 ದಿನಗಳಲ್ಲಿ 200 ಕೋಟಿಗೂ ಹೆಚ್ಚು ಆದಾಯ ಬಂದಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಟಿಡಿಬಿ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ಅವರು, ಈ ವರ್ಷ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೆಚ್ಚೆಚ್ಚು ಭಕ್ತ ಸಮೂಹ ಆಗಮಿಸುತ್ತಿದೆ. ಕಾಣಿಕೆ, ಪ್ರಸಾದ ಮಾರಾಟ ಸೇರಿದಂತೆ ಈವರೆಗೆ 200 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ ಇನ್ನೂ ಕೆಲ ಕಾಣಿಕೆ ಹುಂಡಿಗಳನ್ನು ಎಣಿಸಲಾಗಿಲ್ಲ. ಅದರ ಲೆಕ್ಕಾಚಾರದ ಬಳಿಕ ಆದಾಯದ ಮೊತ್ತವು ಹೆಚ್ಚಾಗಲಿದೆ. ಒಟ್ಟು 204.30 ಕೋಟಿ ರೂಪಾಯಿ ಆದಾಯದಲ್ಲಿ 63.89 ಕೋಟಿ ಕಾಣಿಕೆಯಿಂದ ಬಂದಿದ್ದರೆ, ಅರವಣ (ಪ್ರಸಾದ) ಮಾರಾಟದ ಮೂಲಕ 96.32 ಕೋಟಿ ರೂ. ಬಂದಿದೆ. ಜತೆಗೆ ಅಪ್ಪಂ ಮಾರಾಟದಿಂದ 12.38 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ತಿಳಿಸಿದರು.

ವಾರ್ಷಿಕ ತೀರ್ಥಯಾತ್ರೆಯ ಈ ಋತುವಿನಲ್ಲಿ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಜನದಟ್ಟಣೆ ಕಂಡು ಬರುತ್ತಿದೆ. ಡಿಸೆಂಬರ್ 25ರ ವರೆಗೂ 31,43,163 ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುವ ಮೂಲಕ ದೇವರ ದರ್ಶನ ಪಡೆದಿದ್ದಾರೆ. ಇಲ್ಲಿಗೆ ಬರುತ್ತಿರುವ ಭಕ್ತರಿಗೆ ಟಿಡಿಬಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಮಂಡಳಿಯು ತನ್ನ ಅನ್ನದಾನ ಮಂಡಲಂ ಮೂಲಕ ಡಿಸೆಂಬರ್ 25ರವರೆಗೆ 7,25,049 ಜನರಿಗೆ ಉಚಿತ ಆಹಾರವನ್ನು ಒದಗಿಸಿದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ 27 ರಂದು ಮಂಡಲ ಪೂಜೆಯ ನಂತರ, ದೇವಾಲಯವನ್ನು ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಮಕರ ಜ್ಯೋತಿ ಆಚರಣೆಗಾಗಿ ಡಿಸೆಂಬರ್ 30 ರಂದು ಮತ್ತೆ ದೇಗುಲವನ್ನು ತೆರೆಯಲಾಗುತ್ತದೆ. ಜನವರಿ 15 ರಂದು ಮಕರಜ್ಯೋತಿ ಆಚರಣೆ ನಡೆಯಲಿದೆ ಎಂದು ಪ್ರಶಾಂತ್ ತಿಳಿಸಿದರು.

Leave a Reply

Your email address will not be published. Required fields are marked *