ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 74ನೇ ವರ್ಧಂತಿ ಮಹೋತ್ಸವ

ಚಾಮರಾಜನಗರ: ಭಕ್ತ ಜನರಿಗೆ ಶಾಂತಿ ,ನೆಮ್ಮದಿ ,ಆನಂದ, ತೃಪ್ತಿ, ಸನ್ಮಾರ್ಗದ ಮಾರ್ಗದರ್ಶನ ಪುಣ್ಯಕ್ಷೇತ್ರ ದರ್ಶನ ಹಾಗೂ ಗುರುಗಳ ಆಶೀರ್ವಾದದಿಂದ ಸಾಧ್ಯವೆಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಶಾರದಾ ಭಜನಾ ಮಂಡಳಿ, ಶಾರದಾ ಶಂಕರ ಭಕ್ತ ಮಂಡಲಿ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 74ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಶೃಂಗೇರಿ ಪುಣ್ಯಭೂಮಿ ಮತ್ತು ಪುಣ್ಯಕ್ಷೇತ್ರ. ಶಂಕರಾಚಾರ್ಯರ ತಪೋಭೂ ಮಿಯಾಗಿ 1200 ವರ್ಷಗಳಿಂದಲೂ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಶ್ರೀಮಠದ ಪೀಠಾಧಿಪತಿಗಳ ಪರಂಪರೆ ಹಾಗೂ 36ನೇ ಪೀಠಾಧಿಪತಿಗಳಾದ 74 ವರ್ಷದ ಭಾರತಿ ತೀರ್ಥ ಮಹಾಸ್ವಾಮಿಗಳವರ ಆದರ್ಶ, ಸನ್ಮಾರ್ಗ, ಸರ್ವರಿಗೂ ಅನುಕರನೀಯವೆಂದರು.

ತಮ್ಮ ದಿವ್ಯ ಆಧ್ಯಾತ್ಮಿಕ ಚಿಂತನೆಯ ಮೂಲಕ ಪುಣ್ಯಕ್ಷೇತ್ರ ಶೃಂಗೇರಿಯನ್ನು ಅಭಿವೃದ್ದಿ ಪಡಿಸಿ ಪವಿತ್ರ ಕ್ಷೇತ್ರವನ್ನಾಗಿ ರೂಪಿಸಿದರು. ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಶೈಕ್ಷಣಿಕ ,ಧಾರ್ಮಿಕ ಮತ್ತು ಲೋಕ ಕಲ್ಯಾಣದ ಕಾರ್ಯಗಳಿಂದ ಭಕ್ತ ಜನರ ಹೃದಯದಲ್ಲಿ ಸದಾ ಕಾಲ ನೆಲೆಸಿದ್ದಾರೆ. ಶ್ರೀ ಶಂಕರಾಚಾರ್ಯರ ಅದ್ವೈತ ತತ್ವಗಳನ್ನು ವಿಶ್ವ ಮಾನ್ಯಗೊಳಿಸಿ, ಮಾನವ ಕಲ್ಯಾಣಕ್ಕಾಗಿ ತತ್ವಗಳ ಅನುಸರಣೆ ಹಾಗೂ ಅನುಷ್ಟಾನಕ್ಕೆ ಹೆಚ್ಚು ಮಹತ್ವವನ್ನು ನೀಡಿದವರು ಭಾರತೀ ತೀರ್ಥರು. ಸನಾತನ ಧರ್ಮದ ಜಾಗೃತಿ ಮೂಡಿಸುತ್ತಿರುವ ಭಾರತೀಯ ತೀರ್ಥರ ಸೇವೆ ಅಪಾರವಾದದ್ದು. 74 ವರ್ಷದ ಶ್ರೀ ಶ್ರೀಗಳವರು ಶೃಂಗೇರಿಯ ಶ್ರೇಷ್ಠ ಪರಂಪರೆಯನ್ನು ಬೆಳೆಸಿದವರು ಎಂದು ತಿಳಿಸಿ, ದಕ್ಷಿಣ ಭಾರತದ ಶೃಂಗೇರಿ ಇಂದು ವಿಶ್ವ ಪ್ರಸಿದ್ಧವಾಗಿದೆ. ಗುರುಗಳಿಗೆ ಶರಣಾಗಿ, ಗುರು ಮಾರ್ಗದರ್ಶನದಲ್ಲಿ ಎಲ್ಲವನ್ನು ಕಾಣಬಹುದು. ಮಾನವ ಜ್ಞಾನಮಾರ್ಗದಿಂದ ಸಂಪೂರ್ಣ ಅಧ್ಯಯನ ಶೀಲರಾಗಿ ಜ್ಞಾನ ಪಡೆದಾಗ ಮಾತ್ರ ನೈಜ ಅರಿವು ಉಂಟಾಗಲಿದೆ ಎಂದು ತಿಳಿಸಿದರು.

ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ವಹಿಸಿದ್ದರು. ಇಂದು ಎಲ್ಲೆಡೆ ಶೃಂಗೇರಿ 36ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಭಾರತಿ ತೀರ್ಥರ ವರ್ಧಂತಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಭಜನೆ, ಸ್ತೋತ್ರ ,ಪಾರಾಯಣ, ಅಷ್ಟೋತ್ತರ, ಹಾಡುಗಾರಿಕೆ ಹಾಗೂ ತತ್ವಪದಗಳ ಅರ್ಥ ತಿಳಿಯುವ ಮೂಲಕ ಸುಖ ಸಂತೋಷವನ್ನು ಕಾಣಬಹುದು ಎಂದರು.

ಬ್ರಾಹ್ಮಿ ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ರಾಜಗೋಪಾಲ್ ಉದ್ಘಾಟಿಸಿದರು.

ಬ್ರಾಹ್ಮಿ ಮಹಿಳಾ ಸಂಘದ ವಿಜಯಲಕ್ಷ್ಮಿ, ಶಾರದಾ ಭಜನಾ ಮಂಡಳಿಯ ಕುಸುಮ ಋಗ್ವೇದಿ, ಪಾರ್ವತಿಸುದರ್ಶನ್, ಮಾಲಾ ರವಿ, ಭಾರತಿ ನಾಗರಾಜು, ಋಗ್ವೇದಿ ಯೂತ್ ಕ್ಲಬ್ ಶರಣ್ಯ, ಸಾನಿಕ, ಶ್ರಾವ್ಯ ಋಗ್ವೇದಿ ಇದ್ದರು.

Leave a Reply

Your email address will not be published. Required fields are marked *