ಅಹಂಕಾರದ ಬದುಕು ಎಂದೂ ಶೋಭಿಸದು

ಬದುಕು ಕನ್ನಡಿ ಇದ್ದಂತೆ. ಜೋಪಾನವಾಗಿ ಬಳಸಿದರೆ ಬಾಳಿಕೆಗೆ ಬರುತ್ತದೆ. ಇಲ್ಲವಾದರೆ ಅದು ನುಚ್ಚು ನೂರಾಗಿ ಗುಜರಿವರು ಕೂಡ ಒಲೆವು ನಾವು’ ಎಂದು ನಿರಾಕರಿಸುವ ಮಟ್ಟಕ್ಕೆ ತಲುಪುತ್ತದೆ. ಜೀವನ ನೂರು ಪುಟದ ಒಂದು ಪುಸ್ತಕ, ಮೊದಲನೇ ಪುಟವನ್ನು ಭಗವಂತನೇ ಬರೆದಿದ್ದಾನೆ ಕೊನೆಯ ಪುಟವನ್ನು ಆ ಭಗವಂತನೇ ಬರೆದಿದಾನೆ, ಮೊದಲನೇ ಪುಟ-ಜನನ ಕೊನೆಯ ಪುಟ-ಮರಣ ಉಳಿದ ತೊಂಬತ್ತೆಂಟು ಪುಟವನ್ನು ನಾವೇ ಬರೆದುಕೊಳ್ಳಲ್ಲಿ ಎಂದು ಖಾಲಿ ಉಳಿಸಿದ್ದಾನೆ. ಆ ತೊಂಬತ್ತೆಂಟು ಪುಟದಲ್ಲಿ ಶುದ್ಧವಾದ, ಅಂದವಾದ ಬರಹದಿಂದ ಬರೆದದ್ದೆ ಆದರೆ ಅದು ಮಹಾಕಾವ್ಯವಾಗುತ್ತದೆ ಇಲ್ಲವಾದರೆ ರದ್ದಿ ಕಾಗದವಾಗುತ್ತದೆ. ಈ ತೊಂಬತ್ತೆಂಟು ಪುಟಗಳು ಮತ್ತೊಬ್ಬರು ಅನುಸರಿಸಬೇಕಾದ, ಹೊಗಳುವ ಬದುಕನ್ನು ಬದುಕಬೇಕೆ ವಿನಃ ಎಲ್ಲರೂ ಛೀ ಥೂ ಎಂದು ಉಗುಳಿಸಿಕೊಳ್ಳುವ ಬದುಕು. ನಮ್ಮದಾಗಬಾರದು ಇದಕ್ಕೆ ಒಂದು ಕತೆ ಈ ಕ್ಷಣದಲ್ಲಿ ನೆನಪಾಗುತ್ತಿದೆ.

ಸ್ಪೂರ್ತಿಯ ಸೆಲೆ: ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ಹಳೆಯ ಪಾದರಕ್ಷೆಗಳನ್ನು ನೀಡಿ ಹೇಳಿದ. ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಅದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯ ಕ್ರಿಯೆ ನೆರವೆರಿಸು! ಎಂದು ಹೇಳುತ್ತಾನೆ. ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣಿರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ. ತಂದೆಯು ಕೊನೆಯುಸಿರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚನ್ನಲಿ ತೊಡಿಸಲು ಕೋರುತ್ತಾನೆ ಅದರೆ ಪಂಡಿತರು ಸಾಧ್ಯವೇ ಇಲ್ಲ ಇದು ಅಂತ್ಯಕ್ರಿಯೇ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವೇ ಆಗುವುದಿಲ್ಲ! ಈ ವಿಚಾರವಾಗೇ ಊರಿನ ಮಂದಿಯಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ. ಆಷ್ಯರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ ಹೇಳುತ್ತಾನೆ. ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವನ್ನು ನನ್ನ ಮಗನಿಗೆ ನನ್ನ ಅಂತ್ಯ ಸಂಸ್ಕಾರದ ಕೊನೆಗಳಿಗೆಯಲ್ಲಿ ನೀಡಲು ತಿಳಿಸಿದ್ದರು ಎಂದು ಹೇಳುತ್ತಾನೆ.

ತುಂಬಾ ಕೂತುಹಲದಿಂದ ಆ ಪತ್ರವನ್ನು ತೆರೆದು ನೋಡಿದಾಗ ಅವರ ತಂದೆ ಬರೆದಿರುತ್ತಾರೆ ಪ್ರಿಯ ಪುತ್ರನೇ ನೋಡಿದೆಯಾ? ದೊಡ್ಡ ಪ್ಯಾಕ್ಟರಿ ಭವ್ಯ ಬಂಗಲೆ, ಕಾರು, ಚಿನ್ನ, ಒಡವೆ, ಫಾರಂ ಹೌಸ್ ಇದೆಲ್ಲರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೊಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ, ಇಷ್ಟೇ ಬದುಕಿನ ಸತ್ಯ! ನಿನಗೂ ಒಂದು ದಿನ ಸಾವು ಹತ್ತಿರವಾಗುತ್ತದೆ, ನೀನು ಕೇವಲ ಬಿಳಿ ಬಟ್ಟೆಯಲ್ಲಿ ಇಹಲೋಕ ತ್ಯಜಿಸಬೇಕು, ಈಗಲೇ ಎಚ್ಚರಗೊಳ್ಳು ದುಡ್ಡಿಗಾಗಿ ಯಾರನ್ನು ನೋಯಿಸಬೇಡಾ, ಪಿಡಿಸಬೇಡ ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ, ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ, ಇಲ್ಲದವರಿಗೆ ದಾನ ಮಾಡು, ಸತ್ಕಾರ್ಯಗಳಿಗೆ ಹಣವನ್ನು ಬಳಸು ಸತ್ತಾಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ’ ಎಂದು ಪತ್ರ ಮುಗಿಸುತ್ತಾನೆ.

ನನ್ನ ಕಣ್ಣುಗಳು ತುಂಬಿ ಬಂದವು. ಮನುಷ್ಯ ಎಷ್ಟೇ ಗಳಿಸಿದರು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಏನೇ ಆಗಿದ್ದರು ಏಕಿಷ್ಟು ಆಹಂಕಾರ, ನೀಚತನ ಕ್ರೂರತನ ಅಂತ ಯೋಚಿಸುತ್ತಿರುವಾಗ ಗೆಳೆಯ ರಾಘವೇಂದ್ರ ಅವರ ಮಾತಿನ ಮಾಧುರ್ಯ ಇಳಗೆ ಎಳೆದು ತಂದಿತು. ನಡೆದಾಡುವ ದೇವರು, ಜ್ಞಾನಯೋಗಿ ಎಂದು ಕರೆಸಿಕೊಳ್ಳುವ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರು ಒಂದು ಕಡೆ ಹೇಳುತ್ತಾರೆ ಮನುಷ್ಯನಿಗೆ ಹೇಳಬೇಕಾಗಿರುವುದನ್ನೆಲ್ಲಾ ಹೇಳಿ ಆಗಿದೆ ಇನ್ನು ಏನೇ ಇದ್ದರು ಅದನ್ನು ಅನುಸರಿಸಬೇಕು ಅಷ್ಟೆ ಅಶಾಶ್ವತವಾದ ಜಗತ್ತಿನಲ್ಲಿ ಶಾಶ್ವತ ನೆಲೆಗಾಗಿ ಬಡಿದಾಡುತ್ತಾ ಅಹಂಕಾರದ ಮನೆಯಲ್ಲಿ ವಾಸಿಸುತ್ತಾ ಕೆಸರಿನ ಕಾರ್ಯಗಳನ್ನೇ ಕೈಗೊಳ್ಳುತ್ತಿರುತ್ತೇವೆ. ಅಂತರಂಗ ಪರಿಶುದ್ಧವಿಲ್ಲದೆ ಅಹಂಕಾರದಿಂದ ಮಾಡುವ ಯಾವುದೇ ಕೆಲಸವು ನಮ್ಮ ಕೀರ್ತಿಯನ್ನು ವೃದ್ಧಿಗೊಳಿಸಲಾಲರದು ಅದಕ್ಕೆ ಬಸವಣ್ಣನವರು ಹೇಳುತ್ತಾರೆ
ನೂರನೋದಿ ನೂರ ಕೇಳಿದರೇನು?

ಆಸೆ ಹರಿಯದು ರೋಷ ಬಿಡದು ಮಜ್ಜನಕ್ಕೆರದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ-ಡೊಂಬರ
ನೋಡಿ ನಗುವನಯ್ಯ ಕೂಡಲಸಂಗಮದೇವರು.

ಇಲ್ಲಿ ವಿಶ್ವಗುರು ಬಸವಣ್ಣನವರು ಮನುಷ್ಯನಿಂದ ಬದಲಾವಣೆಯನ್ನು ಬಯಸುತ್ತಾ ಅಂತರಂಗ ಶುದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ವೇದ-ಶಾಸ್ತ್ರಗಳು ಆಗಮ-ಪುರಾಣಗಳು, ಉಪನಿಷತ್ತುಗಳು ಧರ್ಮಗ್ರಂಥಗಳು, ಸಾಧು ಸಂತರು, ವಚನಕಾರರು, ದಾಸವರಣ್ಯರು ಶತ ಶತಮಾನಗಳಿಂದ ಸಾರಿ ಹೇಳಿದ ಮಾತು ಒಂದೇ ಮನುಷ್ಯ ದೇಹ ಮನಸ್ಸು ಒಂದೇ ಬಗೆಯಾಗಿರಬೇಕೆಂದು, ತೋರಿಕೆಯ ಭಾವನೆ ಎಂದಿಗೂ ಸಲ್ಲದು ಅಂತರಂಗ ಬಹಿರಂಗ ಶುದ್ಧಿಯಾಗಿದ್ದರೆ ನಾವು ಮಾಡುವ ಪ್ರಾಮಾಣಿಕ ಕಾರ್ಯಗಳು ನಮ್ಮನ್ನು ಬಹಳ ಎತ್ತರಕ್ಕೆ ತಂದು ನಿಲ್ಲಿಸುತ್ತವೆ. ಬೇವನ್ನು ಬೆಲ್ಲದಲ್ಲಿ ಅದ್ದಿದರೆ ಅದು ಸಿಹಿಯಾಗಲು ಎಂದಿಗೂ ಸಾಧ್ಯವಿಲ್ಲ ಅಂತೆಯೇ ನಾವು ಅಂತರಂಗದಿದ್ದ ಪರಿಶುದ್ಧವಾಗಿರಬೇಕು ಪುಲಿಗೆರೆ ಸೋಮನಾಥ ತನ್ನ ಸೋಮೇಶ್ವರ ಶತಕದಲ್ಲಿ ಹೇಳುವಂತೆ
ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲು ತಾಂ ಶುದ್ದನೇನಪ್ಪನೇ|
ಎಂಬ ಮಾತಿಗೆ ಸರಿಸಾಟಿ ಎನ್ನುವಂತೆ ಹಿತೋಕ್ತಿಯ ಕಥೆ ಹೀಗಿದೆ. ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, “ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ” ಎಂದು ಹೇಳಿ ಯಾತ್ರೆಗೆ ಅನುಮತಿ ಕೋರಿದರು. ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು? ಎಂದು ಗುರುಗಳು ತಮ್ಮ ಶಿಷ್ಯರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಶಿಷ್ಯರು, “ಗುರುಗಳೇ ನಾವು ಅಂತರಂಗಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು. “ಸಂತೋಷ ಹೋಗಿ ಬನ್ನಿ ಶುಭವಾಗಲಿ” ಎಂದ ಗುರುಗಳು, ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು, “ಈ ಕಾಯನ್ನೂ ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲ ಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನು ಇಟ್ಟು ಪೂಜೆ ಮಾಡಿಸಿಕೊಂಡು ಬನ್ನಿ” ಎಂದು ತಿಳಿಸಿದರು. ಸರಿ ಎಂದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟು ಒಂದು ವಾರದ ಬಳಿಕ ಹಿಂತಿರುಗಿದರು. ಶಿಷ್ಯರನ್ನು ಕಂಡ ಗುರುಗಳು, “ಏನು ಕ್ಷೇತ್ರ ದರ್ಶನದಿಂದ ನೀವೆಲ್ಲ ಪುನೀತರಾದಿರಾ ನಿಮ್ಮ ಅಂತರಂಗ ಶುದ್ಧಿಯಾಯಿತೇ?” ಎಂದು ಕೇಳಿದರು. ಎಲ್ಲ ಶಿಷ್ಯರೂ ಒಕ್ಕೊರಲಿನಿಂದ ಹೌದೆಂದರು. ಆಗ ಗುರುಗಳು “ನೀವು ಯಾತ್ರೆಗೆ ಹೊರಡುವಾಗ ನಾನು ಕೊಟ್ಟಿದ್ದ ಹಾಗಲಕಾಯಿಗಳಿಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದಿರಾ?, ದೇವರ ಬಳಿ ಇಟ್ಟು ಪೂಜೆ ಮಾಡಿಸಿದಿರಾ?” ಎಂದು ಕೇಳಿದರು. ಶಿಷ್ಯರು ಹೌದೆಂದರು.

“ಸರಿ ಹಾಗಾದರೆ ಈ ಕಾಯಿಗಳನ್ನು ಹಾಕಿ ಇಂದು ಅಡುಗೆ ಮಾಡಿಸಿ” ಎಂದು ಅಪ್ಪಣೆ ಕೊಡಿಸಿದರು. ಊಟಕ್ಕೆ ಕುಳಿತಾಗ ಹಾಗಲ ಕಾಯಿ ತಿಂದ ಗುರುಗಳು, “ಅಯ್ಯೋ! !!.. ಇದೇನು ಇಷ್ಟು ಕಹಿಯಾಗಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಉತ್ತರ ಕೊಟ್ಟ ಶಿಷ್ಯ “ಅಲ್ಲ ಗುರುಗಳೇ ಹಾಗಲ ಕಾಯಿಯ ಗುಣವೇ ಕಹಿ ಅದು ಸಿಹಿ ಆಗಲು ಹೇಗೆ ಸಾಧ್ಯ?” ಎಂದು ಕೇಳಿದರು. ಆಗ ಗುರುಗಳು ಹೇಳಿದರು “ಪವಿತ್ರ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮಾತ್ರಕ್ಕೆ ನಿಮ್ಮ ಅಂತರಂಗಶುದ್ಧಿ ಆಗುವುದಾದರೆ ಈ ಹಾಗಲ ಕಾಯಿಯೂ ನಿಮ್ಮೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತವಾಗಿದೆ. ದೇವರ ದರ್ಶನದಿಂದ ಇದರ ಅಂತರಂಗ ಶುದ್ಧಿ ಆಗಿರಬೇಕಲ್ಲ. ಹಾಗಾದರೆ ಸಿಹಿ ಆಗುವ ಬದಲು ಕಹಿ ಏಕಾಯಿತು?” ಎಂದು ಪ್ರಶ್ನಿಸಿದರು. ಗುರುಗಳ ಅಂತರ್ಯ ಅರಿತ ಶಿಷ್ಯರು ತಲೆ ತಗ್ಗಿಸಿ ನಿಂತರು. ಆಗ ಗುರುಗಳು ಹೇಳಿದರ “ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಬಳಿ ಹೋದರೆ ನೀವು ಪುನೀತರಾಗುವುದಿಲ್ಲ ನಿಮ್ಮಲ್ಲಿ ದುರ್ಗುಣ ತುಂಬಿಕೊಂಡು ಪುಣ್ಯ ಸ್ನಾನ ಮಾಡಿದರೆ ನಿಮ್ಮ ಅಂತರಂಗ ಶುದ್ಧಿ ಆಗುವುದಿಲ್ಲ. ಮೊದಲು ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ. ಸತ್ಯವನ್ನೇ ನುಡಿಯಿರಿ, ಧರ್ಮದಿಂದ ನಡೆಯಿರಿ, ಎಲ್ಲರನ್ನೂ ನಿಮ್ಮಂತೆಯೇ ಕಾಣಿ. ಮೋಸ, ವಂಚನೆ ಮಾಡಬೇಡಿ, ಜಗತ್ತಿನಲ್ಲಿರುವ ಎಲ್ಲವೂ ನನಗೇ ಬೇಕು ಎಂದು ಕೂಡಿಡುವ ಮನೋಸ್ಥಿತಿ ಬಿಡಿ (ಭ್ರಷ್ಟಾಚಾರ), ನಿಮ್ಮ ಬದುಕನ್ನು ಪರೋಪಕಾರಕ್ಕೆ ಮೀಸಲಿಡಿ. ಆಗ ಭಗವಂತನೂ ಮೆಚ್ಚುತ್ತಾನೆ. ಎಂಬ ದಿವ್ಯ ಸಂದೇಶ ಪ್ರಸ್ತುತ ಪ್ರಪಂಚಕ್ಕೆ ಅತಿ ಅಗತ್ಯವಾಗಿ ಬೇಕಾಗಿದೆ. ನಾವು ಪರಿಶುದ್ಧಿವಾಗಿದ್ದರೆ ನಾಡು ಪರಿಶುದ್ಧವಾಗಿರುತ್ತದೆ. ನಿಜಕ್ಕೂ ಈ ಕಥೆಯು ಅಂತಃಕರಣ ಪರಿಶುದ್ಧವಿಲ್ಲದೆ ಕಪಟಿಗಳಂತೆ ವರ್ತಿಸುತ್ತಾ ಅಲಂಕಾರದ ಬದುಕನ್ನು ಅಹಂಕಾರಕ್ಕೆ ಒಳಗು ಮಾಡಿ ಬದುಕನ್ನು ಬರ್ಬರ ಹತ್ಯೆಯಾಗಿಸಿಕೊಳ್ಳುವ ಮಂದಿಗೆ ಸರಿಯಾದ ಸೂಕ್ತ ನಿಯಮಗಳನ್ನು ಜೀವನದಲ್ಲಿ ರೂಢಿಸಿಕೊಂಡು ಬದುಕಲು ದಾರಿದೀಪವಾಗುತ್ತದೆ.

ಬದುಕುವುದಾದರೆ ಬೆಳಕಿನೊಂದಿಗೆ ಬದುಕೋಣ
ಕತ್ತಲಿನ ಚಿಂತೆ ನಮಗೇಕೆ,
ಬದುಕುವುದಾದರೆ ಜ್ಯೋತಿಯೊಂದಿಗೆ ಬದುಕೋಣ
ಬೆಂಕಿನ ಸಹವಾಸ ನಮಗೇಕೆ,
ಬದುಕುವುದಾದರೆ ತಿಳಿನೀರಿನೊಂದಿಗೆ ಬದುಕೋಣ
ನಿಂತನೀರಿನ ವಾಸನೆ ನಮಗೇಕೆ,
ಬದುಕುವುದಾದರೆ ಖುಷಿ-ಸಂತೋಷ-ನಗುವಿನ ಒಡವೆಯೊಂದಿಗೆ ಬದುಕೋಣ
ಅಳುವಿನ ಲೋಕದಗೊಡವೆ ನಮಗೇಕೆ,
ಬದುಕುವುದಾದರೆ ಆರೋಗ್ಯದಿಂದ ಬದುಕೋಣ
ಹೊಟ್ಟೆಕಿಚ್ಚಿನ ಅನಾರೋಗ್ಯದ ಬಾಧೆ ನಮಗೇಕೆ,
ಬದುಕುವುದಾದರೆ ಸಜ್ಜನರೊಂದಿಗೆ ಬದುಕೋಣ
ಕೊಳಕು ಮನಸ್ಸಿ ಹಾವುಗಳೊಂದಿಗಿನ ಸರಸ ನಮಗೇಕೆ,
ಬದುಕುವುದಾದರೆ ಇವತ್ತು ಬದುಕೋಣ
ನೆನ್ನೆಗಳ ಚಿಂತೆ ನಾಳೆಗಳ ಭ್ರಮೆ ನಮಗೇಕೆ,
ಬದುಕುವುದಾದರೆ ತಂಗಾಳಿಯೊಂದಿಗೆ ಬದುಕೋಣ
ಬಿರುಗಾಳಿಯ ಬಿರುಸು ನಮಗೇಕೆ,
ಮಗುವಿನಂತ ಮನಸಿರಲಿ ಎದೆಯಲ್ಲಿ ನಿಷ್ಕಲ್ಮಶವಿರಲಿ
ಹೃದಯದಲ್ಲಿ ಎಂದಳು ನನ್ನವ್ವ ಸಾಕವ್ವ

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹವ್ಯಾಸಿ ಬರಹಗಾರ, ಮೈಸೂರು.

Leave a Reply

Your email address will not be published. Required fields are marked *