ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ನಾವು ಮಾರ್ಚ್ ಮಾಸಕ್ಕೆ ಕಾಲಿಡುತ್ತಿದಂತೆ ಮಹಿಳಾ ದಿನವೆಂದು ಉದ್ಗಾರವೆತ್ತಿ ಎಲ್ಲೆಲ್ಲು ಮಹಿಳೆಯನ್ನು ಕುರಿತು ಮಾತಾಡುವ, ಅವಳ ಪರವಾಗಿ ದನೆ ಎತ್ತುವ ಮಂದಿಗೇನು ಕಮ್ಮಿ ಇಲ್ಲ. ಮಹಿಳೆಯ ಅಸ್ಮಿತೆಯ-ಸ್ತ್ರೀ ಸಂವೇದನೆ ಕುರಿತ ಧೋರಣೆಯನ್ನು ಅಂತಃಕರಣದಿಂದ ಅವಲೋಕಿಸುವ ನಿಟ್ಟಿನಲ್ಲಿ ಬರಹವನ್ನು ಕೈಗೊಳ್ಳಲಾಗಿದೆ. “ಮನೆ ಬೆಳಗುವ ನಂದಾದೀಪವೆಂದರೆ ಹೆಣ್ಣು.” ದೇವತಾಕಾರ್ಯ, ಮಂಗಳ ಕಾರ್ಯ, ಹಬ್ಬ-ಹುಣ್ಣಿಮೆ ಆದಾವುದೇ ಆಚರಣೆಯಿರಲಿ, ಜಗ-ಮಗಿಸುವ ಅದೆಷ್ಟೇ ವಿದ್ಯುತ್ ಅಲಂಕಾರವಿರಲಿ, ಹೂವು- ಹಣ್ಣು, ತಳಿರು-ತೋರಣದ ಶೃಂಗಾರ ಮನಮೋಹಕವಾಗಿ, ಕಣ್ಣು-ಕುಕ್ಕಿಸುವಂತಿರಲಿ…., ನೂಲಿನಂತಹ ಸಣ್ಣ ಎಳೆಯ ಬತ್ತಿಯಿಂದ ನಂದಾದೀಪ ಉರಿಯುತ್ತಿದ್ದರೆ ಮಾತ್ರ, ಆ ಕಾರ್ಯಕ್ಕೊಂದು ಶೋಭೆ. ಈ ದೀಪ ಬೆಳಗುವವಳೆಂದರೆ ಹೆಣ್ಣು. ಅದಕ್ಕೆ ಹೇಳುವುದು ಹೆಣ್ಣು ಸಮಾಜದ ಕಣ್ಣು, ತಾಯಿಯ ಗರ್ಭದಿಂದಲೇ ಸೆಳೆಸುತ್ತಾ ಹುಟ್ಟು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡು ಒಂದೇ ಜನುಮದಲ್ಲಿ ಎರಡು ಮನೆಗಳನ್ನು ಬೆಳಗುವ ಹಣತೆ. ಸೌಂದರ್ಯದ ಸೆರೆಯಲ್ಲಿ ಗಂಡು ಜೀವವನ್ನು ಸೂರೆ ಮಾಡಿ ತರಗೆಲೆಯಾಗಿಸುವ ತರುಣಿ. ಕರುಣೆಯನ್ನು ಹೊತ್ತವಳು-ಮಮತೆಯನ್ನು ಹೆತ್ತವಳು, ಸಹನಶೀಲತೆಯಲ್ಲಿ ಬದುಕು ಸವೆಸುವ ಶಾಂತಚಿತ್ತ ದೇವತೆ, ಮೀನನ ಹೆಜ್ಜೆ ಹುಡುಕುವುದು ಹೆಣ್ಣಿನ ಮನಸ್ಸನ್ನು ಅರಿಯುವುದು ಅಸಾಧ್ಯವಾದುದು ಎಂಬ ಬಲ್ಲವರ ಮಾತು ಆಕೆಯ ಚಂಚಲತೆಯನ್ನು ತಿಳಿಸುತ್ತದೆ. ಯಾಕೆ ಈ ಬಗೆಯಲ್ಲಿ ವ್ಯಕ್ತಪಡಿಸುತ್ತಾರೆ ಎಂದರೆ ಆಕೆಯ ಪ್ರೀತಿ, ದೃಷ್ಟಿ, ಒಲುಮೆಯ ಚಿಲುಮೆ ಯಾರೆಡೆಗೆ ಯಾವಾಗ ಚಿಮ್ಮುತ್ತದೆ ಎಂದು ನಿರ್ದಿಷ್ಟ ಪಡಿಸಿ ಹೇಳಲಾಗದು. ಈಗ ಇಷ್ಟವಾಗಿರುವುದು ಮರು ಕ್ಷಣ ಒಲ್ಲೆನೆಂಬ ಉದ್ಗಾರ ಬರಬಹುದು ಅದೇ ರೀತಿ ಈಗ ಒಲ್ಲೆನೆಂಬ ತಿರಸ್ಕಾರ ಪುರಸ್ಕಾರದಲ್ಲಿ ಮಾನ್ಯತೆ ಪಡೆಯಬಹುದು. ಈ ದೃಷ್ಟಿಯಿಂದಲೇ ಹೆಣ್ಣನ್ನು ಮಾಯಾಜಿಂಕೆ, ಚಂಚಲೆ, ವಿಚಲಿತ ಸ್ವಾಭಾವದವಳು ಎಂದಿದ್ದಾರೆ. ಕವಿವರ್ಯರು ಹಾಡಿ ಹೊಗಳಿದ್ದಾರೆ, ಕವಿತೆಗಳ ಗೀಚಿದ್ದಾರೆ, ನಾದ ಲಹರಿ ಹೊಮ್ಮಿಸಿದ್ದಾರೆ. ಗಂಡಿಗೆ ಸೋಲದ ಹೆಣ್ಣಿರಬಹುದು ಸೃಷ್ಟಿಯಲ್ಲಿ ಆದರೆ ಹೆಣ್ಣಿಗೆ ಸೋಲದ ಗಂಡು ಸಿಗುವುದು ಕಷ್ಟ. ದೈಹಿಕ ಬಲದಲ್ಲಿ ಗಂಡಿಗಿಂತ ಬಲಹೀನಳು ಎನಿಸಿದರು ಮನಸ್ಸಿನಾಳದಲ್ಲಿ ಆತನಿಗಿಂತಲೂ ಗಟ್ಟಿಗಿತ್ತಿ ಎಂದು ತೋರಿಸಿದ್ದಾಳೆ.
ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಕೈಗೊಂಡಿರುವ ಅದ್ವಿತೀಯ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಾಗುತ್ತದೆ. ಅಂತೆಯೇ ಆಕೆಗೆ ಬೇಕಾಗಿರುವ ಸ್ವಾವಲಂಬಿ ಜೀವನ ಹಾಗೂ ಮಹಿಳಾ ಸಬಲೀಕರಣದ ಕುರಿತಾಗಿ ಗಮನಹರಿಸುವ ಬಗೆಯಲ್ಲಿ ಚರ್ಚಿಸಲಾಗುತ್ತದೆ. ಅಮೇರಿಕದಲ್ಲಿ ಸಮಾಜವಾದಿ ಮಹಿಳೆಯರು 1908ರಂದು ಮೊದಲಬಾರಿಗೆ ಮಹಿಳಾ ದಿನವನ್ನು ಆರಿಸಲಾಯಿತು. ಆಗಲೇ ಮಹಿಳಾ ಪರವಾಗಿನ ಘೋಷಣೆ ವ್ಯಕ್ತಗೊಂಡು ಅವರ ಹಕ್ಕು ಬಾಧ್ಯತೆಗಳ ದೀರ್ಘ ಸಮಾಲೋಚನೆಗಳು ನಡೆದವು.
ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್ನಲ್ಲಿ ಕ್ಲಾರಾ ಜೆಟ್ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ,ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷ ದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ ಮಹಿಳೆಯ ಬಗ್ಗೆ ಕಾಳಜಿ ವಹಿಸಿ ಅವಳು ಪಡುತ್ತಿರುವ ಸಂಕಷ್ಟಗಳನ್ನು ನೆನಪಿಸಲು ಮಾರ್ಚಿ 8ರಂದು ಒಂದು ದಿನ ಮೀಸಲಾಗಿದ್ದು, ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ಅಂದಿನಿಂದ ಇಂದಿನತನಕ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯಕ್ಕೆ ಬಂದು ಇಷ್ಟು ವರ್ಷ ಕಳೆದರೂ ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಸ್ತ್ರೀ ಅಂದರೆ ಶಬ್ದಕೋಶದಲ್ಲಿರುವ ಕೇವಲ ಒಂದು ಪದವಲ್ಲ. ಅದೊಂದು ಶಕ್ತಿ. ಮಮತಾ ಮಯಿಯಾದವಳು, ಕರುಣೆಗೆ ಮತ್ತೊಂದು ಹೆಸರವಳು, ಅಪ್ಪ-ಅಮ್ಮನ ಮುದ್ದಿನ ಮಗಳು. ಅಜ್ಜ-ಅಜ್ಜಿಯ ಒಲವಿನ ಕೂಸವಳು, ಅಕ್ಕರೆಯ ಅಕ್ಕ, ಒಲವಿನ ಸಹೋದರಿ, ನಲ್ಮೆಯ ಗೆಳತಿ, ಮನೆ-ಮನಗಳಲಿ ಭರವಸೆಯ ಬೆಳಕು ತುಂಬುವ ಮೆಚ್ಚಿನ ಮಡದಿ, ಹರುಷದ ಹೊನಲು, ಉತ್ಸಾಹದ ಬುಗ್ಗೆಯವಳು. ಪಾದರಸದ ಚುರುಕುತನ ಅವಳಿಗಿದೆ. ಅದ್ಯಾವುದೋ ಕ್ಷೇತ್ರದಲ್ಲಿ ಸೋತು ಕೈಚೆಲ್ಲಿ ಕೂತವರಿಗೆ ಸ್ಫೂರ್ತಿಯ ಸೆಲೆಯಾದವಳು. ಕುಟುಂಬದಲ್ಲಾಗಲಿ, ಸಮಾಜದಲ್ಲಾಗಲಿ ಹೆಣ್ಣಿನ ಪಾತ್ರ ಬಹಳ ಹಿರಿದಾದುದು
ಸಮಾಜ ನಿಂತ ನೀರಾಗದೆ ಅನುಗಾಲ ಸಂಚರಿಸುವ ತೊರೆ.” ತೊಟ್ಟಿಲು ತೂಗುವ ಕೈಗಳಿಂದು ಜಗತ್ತನ್ನು ಆಳುತ್ತದೆ ಎಂಬ ಮಾತು ಅಕ್ಷರಶಃ ಸತ್ಯವಾಗಿಸಿದ್ದಾರೆ ನಮ್ಮ ಮಹಿಳೆಯರು. ಅಂದರೆ ಕಾಲಕ್ಕೆ ತಕ್ಕಂತೆ ತಾನು ಕೂಡ ಬದಲಾದ ಸಮಾಕ್ಕೆ ಹೊಂದಿಕೊಂಡು ಬದುಕನ್ನು ಕಟ್ಟಿಕೊಂಡು ಸಾಗುವ ಯಾನ ಅನುಪಮವಾದುದು. “ಹೆಣ್ಣು ಸಂಸಾರದ ಕಣ್ಣು.. ಎನ್ನುತ್ತಿದ್ದ ಮಂದಿಗೆ ಸಮಾಜದ ಕಣ್ಣು-ದೇಶದ-ವಿಶ್ವದ ಕಣ್ಣಾಗುವ ನಿಟ್ಟಿನಲ್ಲಿ ಆಕೆಯ ಘನಕಾರ್ಯಗಳು ನಿತ್ಯ ನಿರಂತರ ಘಟಿಸುತ್ತಲೇ ಇವೆ. ಅಷ್ಟೇ ಅಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಮಾಜ ಸೇವಕಿಯಾಗಿ ಶಿಕ್ಷಕಿಯಾಗಿ, ಅಧಿಕಾರಿಯಾಗಿ, ರಾಜಕಾರಣಿಯಾಗಿ, ಕ್ರೀಡಾಪಟುವಾಗಿ, ಆಕೆಯ ಪಾತ್ರ ಹತ್ತು ಹಲವಾರು ಎಲ್ಲಾ ಬಗೆಯ ಪಾತ್ರಗಳಲ್ಲು ತನ್ನ ಇರುವಂತಿಕೆಯನ್ನು ವ್ಯಕ್ತಪಡಿಸಿ ತನ್ನದೇ ವಿಶಿಷ್ಟ ಚಾಪು ಮೂಡಿಸಿದ್ದಾಳೆ.
ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಎದೆಯಲ್ಲಿ ಬಚ್ಚಿಕೊಂಡು ನಂಬಿದವರಿಗೆ ನೆರಳಾಗಿ, ಮನೆಗೆ ಮನವಾಗಿ, ಕತ್ತಲಿನ ಕಣ್ಣುಗಳಿಗೆ ಬೆಳಕಾಗಿ, ಅಜ್ಞಾನದ ಆತ್ಮಗಳಿಗೆ ಸುಜ್ಞಾನದ ದೀಪ್ತಿಯು ಅವಳಾಗಿದ್ದಾಳೆ. ತನಗೆ ಇಲ್ಲದಿದ್ದರೂ ತನ್ನವರು ಚೆನ್ನಾಗಿರಬೇಕು ಎಂದು ಬಯಸುವ ಹೃದಯ ಶ್ರೀಮಂತಿಕೆ ಹೊತ್ತ ವಿಶಾಲ ಭಾವಕೋಶದ ಜೀವವೂ ಅವಳೇ ಆಗಿದ್ದಾಳೆ.
ಕೆಲವು ವೇಳೆ ಮುದ ಸಂತೋಷವನ್ನು ಧಾರೆ ಎರೆಯುವಂತೆ ನೋವಿನ ಹೊದಿಕೆಯನ್ನು ಹೊದ್ದು, ಮುಜುಗರದ ಭಾವವನ್ನು, ಇರಿಸು ಮುರುಸನ್ನು ತರುವುದುಂಟು. ದಾರ್ಶನಿಕರ ಮಾತಿನಲ್ಲಿ ಹೇಳಿದರೆ ಪ್ರತಿ ಪುರುಷ ಯಶಸ್ಸಿನಲ್ಲಿ ಒಂದು ಹೆಣ್ಣು ಇರುವಂತೆ ಆತನ ಅವನತಿಯ ಹಾದಿಯಲ್ಲಿ ನಡೆಯುವಂತೆ ನೋಡುಕೊಂಡವಳು ಅವಳೇ ಆಗಿರುವುದು ವಿಪರ್ಯಾಸ. ಹಾಸ್ಯ ಋಷಿ ಬೀಚಿ ಅವರು ಹೇಳುವಂತೆ ಮನೆ ನಿಂತರೆ ಹೆಣ್ಣಿನ ಮೇಲೆ ನಿಂತಿರುತ್ತದೆ. ಬಿದ್ದರೆ ಮಾತ್ರ ಅದು ಗಂಡಿನ ಮೇಲೆ ಬೀಳುತ್ತದೆ. ದೇವರು ಒಂದು ಬಾಟಲಿನಲ್ಲಿ ಅರ್ಧ ಅಮೃತ, ಅರ್ಧ ವಿಷ ತುಂಬಿ ಅದಕ್ಕೆ ಹೆಣ್ಣು ಎಂದು ಪಟ್ಟಿ ಅಂಟಿಸಿ ಭೂಮಿಗೆ ಕಳುಹಿಸಿಕೊಟ್ಟನಂತೆ. ಈ ಬಗೆಯ ಮಾತುಗಳು ಕೆಲವರ ಬಾಳಿನಲ್ಲಿ ಸತ್ಯವಾಗಿಯೂ ಇರಬಹುದು. ಯಾವುದೇ ಬೆಲೆಬಾಳುವ ಮಾತುಗಳು ಅನುಭವದಿಂದ ವ್ಯಕ್ತವಾಗಿರುತ್ತವೆ. ಅಲ್ಲಮ ದೃಷ್ಟಿಯಲ್ಲಿ ಹೆಣ್ಣು ಮಾಯೆ, ಸೃಷ್ಟಿಯಲ್ಲಿ ಹರಡಿದೆ ವಿಶಿಷ್ಟ ಛಾಯೆ, ಪ್ರತಿ ಜೀವಸಂಕುಲಕ್ಕೂ ಆಕೆ ತಾಯಿಯೇ.
ಈ ಮೇಲಿನ ವಿಚಾರ ಸಂಗತಿಗಳ ಹೆಣ್ಣು- ಸ್ತ್ರೀ ಎಂಬ ಸೀಮೀತ ವ್ಯಾಪ್ತಿಯಲ್ಲಿ ರೂಪು ತಳೆದ ಬರಹ. ಇಂದು ವಿಶಾಲ ವ್ಯಾಪ್ತಿಯ ಹಂದರಲ್ಲಿಟ್ಟು ನೋಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆಕೆಯನ್ನು ಮಹಿಳೆಯಾಗಿ ಕಾಣುವುದಾದರೆ ಆಕೆ ಮಹಾ ಇಳೆಯಾಗಿ ಗೋಚರಿಸಿ; ಒಂದು ನಾಡಿನ, ಒಂದು ದೇಶದ, ಒಂದು ವಿಶ್ವದ ಮಾತೆಯ ರೂಪದಲ್ಲಿ ಕಂಡು ಹಿರಿದಾದ ಗೌರವಕ್ಕೆ ಪಾತ್ರಳಾಗುತ್ತಾಳೆ. ದೇಶದ ಒಳಿತು-ಕೆಡಕುಗಳ ಕುರಿತು ತೀರ್ಮಾನಿಸುವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕಾರ್ಯದಲ್ಲಿ ಸಫಲಳಾಗಿದ್ದಾಳೆ. ಆರ್ಥಿಕ ಸ್ವಾವಲಂಬಿಯಾಗಿ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ. ಲೆಕ್ಕದಲ್ಲಿ ಪಕ್ಕ ಎನ್ನುವಂತೆ ಲೆಕ್ಕಪರಿಶೋಧಕಳಾಗಿದ್ದಾಳೆ, ಸಾಮಾಜಿಕ ಕಾರ್ಯವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತನ್ನ ಏಳಿಗೆಗೆ ಬೇಕಾದ ಸಬಲತೆಯನ್ನು ಹಾಗೂ ಆತ್ಮಬಲವನ್ನು ತಾನೇ ನಿರ್ಮಿಸಿಕೊಂಡಿದ್ದಾಳೆ. ಸಿನಿಮಾ ಕ್ಷೇತ್ರದಲ್ಲಿ ಮೆರಗು ತಂದಿದ್ದಾಳೆ, ಗಗನಸಖಿಯಾಗಿದ್ದಾಳೆ- ವಿಮಾನ ಪೈಲಟ್ ಆಗಿ ಹಕ್ಕಿಯಂತೆ ಹಾರಾಡುತ್ತಿದ್ದಾಳೆ, ಪೋಲೀಸ್ ಅಧಿಕಾರಿಯಾಗಿ, ವಿಜ್ಞಾನಿಯಾಗಿ, ತಂತ್ರಜ್ಞೆಯಾಗಿ, ನ್ಯಾಯಾಧಿಶೆಯಾಗಿ ಆಧುನಿಕ ಸಮಾಜದಲ್ಲಿ ಮಹೋನ್ನತ ಕಾರ್ಯವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಕುಟುಂಬದಲ್ಲಿ ಆಕೆ ಯಾವುದೇ ಪ್ರತಿಫಲ ಬಯಸದೆ ನಿಷ್ಠೆಯಿಂದ ಮನೆಯ ಹೊರಗೆ ಒಳಗೆ ದುಡಿದು ಮಗುವಿನ ಸರ್ವಾಂಗೀಣ ಶ್ರೇಯಸ್ಸಿನಲ್ಲಿ, ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಂತ ಆಕೆಯ ನಿಸ್ವಾರ್ಥ ಸೇವೆಗೆ ನಮ್ಮ ತುಂಬು ಮನದ ಧನ್ಯವಾದವನ್ನು ಹೇಳಲೇಬೇಕು.
ಹೆಣ್ಣು-ಕಣ್ಣು
ಹೆಣ್ಣು ಸಮಾಜದ ಕಣ್ಣು
ಲಾಲನೆ-ಪಾಲನೆಯ ಜನನಿ
ಒಲುಮೆಯ ಸಹೋದರಿ
ಪತಿಗೆ ಪೂರ್ಣತ್ವದ ಅರ್ಧಾಂಗಿ
ಬಾಂಧವ್ಯ ಬೆಸೆಯುವ ಮಗಳು,
ಮನೆಗೆ ಮನವನ್ನು ಮುಡಿಸಿದ ಅಲಂಕಾರಿಣಿ,
ಜೀವಕೋಶದ ಭಾವಜೀವಿ,
ನಾನಾ ಚಮತ್ಕಾರದ ಗೃಹಮಂತ್ರಿ,
ಕರುಣೆಯ ಕಡಲು,
ಕರುಣಾಮಯಿ ಒಡಲು,
ಅಂತಃಕರಣದ ಅಧಿದೇವತೆ,
ಮನೆಗೆ ಸಿರಿತನದ ಮಹಾಲಕ್ಷ್ಮಿ,
ಜ್ಞಾನವ ಉಣ ಬಡಿಸುವ ಸರಸ್ವತಿ,
ಹಸಿವನ್ನು ಕೊಲ್ಲುವ ಅನ್ನಪೂರ್ಣೆ,
ಕಲ್ಮಶಗಳನ್ನು ನೀಗಿಸುವ ನಿರ್ಮಲೆ,
ವ್ಯಕ್ತಿ ಅಲ್ಲ ಅವಳು ಶಕ್ತಿ,
ಸರ್ವ ಭಾವಗಳ ತವರು-ನಮ್ಮ ಜೀವದ ಉಸಿರು.
ಕರುಣೆಯ ಕರುಣಾಳು-ಮಮತೆಯ ಮಡಿಲು,
ಕರುಳ ಬಳ್ಳಿಯ ಸೊಲ್ಲು,
ಅಮೃತತ್ವದಿ ಮಧುರ ಭಾವದ ನೆಲ್ಲು.
ಮಹಿಳೆ ಮಹಾ ಇಳೆಯಾಗಿ,
ಸಹನೆಯ ಸಂಜೀವಿನಿಯಾಗಿರುವವಳು ಹೆಣ್ಣು.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಹಿಂದೂಸ್ಥಾನ್ ಕಾಲೇಜು
ಹಾಗೂ ಹವ್ಯಾಸಿ ಬರಹಗಾರರು
ಮೈಸೂರು.