ಚಾಮರಾಜನಗರ: ವಿಶೇಷ ನ್ಯೂನತೆವುಳ್ಳ ಬಾಲಕನೊಬ್ಬನಿಗೆ 5-6 ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಲು ತೊಡಕಾಗಿದ್ದು, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಕಾಳಜಿ ಮೇರೆಗೆ ಬಾಲಕನ ಆಧಾರ್ ಕಾರ್ಡ್ ನೊಂದಣಿ ಯಶಸ್ವಿಯಾಗಿದೆ.
ಕೊಳ್ಳೇಗಾಲ ಪಟ್ಟಣದ ಕರುಣಾಲಯ ಫೌಂಡೇಷನ್ ಗೆ ಕಳೆದ 9 ವರ್ಷಗಳ ಹಿಂದೆ ಮಹಿಳೆಯೊಬ್ಬರು ವಿಶೇಷ ನ್ಯೂನತೆವುಳ್ಳ ಮಗುವನ್ನು ಸಂಸ್ಥೆಗೆ ತರಬೇತಿಗಾಗಿ ಪ್ರವೇಶಾತಿ ಮಾಡಿಸಿರುತ್ತಾರೆ. ನಂತರ ಆ ಮಹಿಳೆ ಆಗಾಗ ಮಗುವಿನ ಯೋಗ ಕ್ಷೇಮ ವಿಚಾರಿಸಿ ಮಗುವಿನ ಜೊತೆ ಸಮಯ ಕಳೆದು ಹೋಗುತ್ತಿದ್ದರು. ಬಳಿಕ ಆ ಮಹಿಳೆ ಮತ್ತೆ ಬರದಿದ್ದರಿಂದ ಆ ಮಗುವಿನ ವಿಳಾಸ ಸರಿಯಾಗಿಲ್ಲದ ಕಾರಣ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗಿರಲಿಲ್ಲ.
ಈ ಬಾಲಕನ ಸಮಸ್ಯೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಮತ್ತು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಶಿಫಾರಸ್ಸಿನ ಮೇರೆಗೆ ಇ-ಆಡಳಿತ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ಆ ಬಾಲಕನ ಆಧಾರ್ ಕಾರ್ಡ್ ನೋಂದಣಿ ಯಶಸ್ವಿಯಾಗಿದೆ.
ಕಳೆದ 5-6 ವರ್ಷಗಳಿಂದ ಬಾಲಕನಿಗೆ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗದ ಈ ಕಾರ್ಯಕ್ಕೆ ಸಹಾಯ, ಸಹಕಾರ ನೀಡಿದ ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜು, ಸ್ಟೇಟ್ ಆಧಾರ್ ಕೋ ಆರ್ಡಿನೇಟರ್ ಪ್ರಭುಸ್ವಾಮಿ ಹಾಗೂ ಜಿಲ್ಲಾ ಇ-ಆಡಳಿತ ಸಮಾಲೋಚಕರಾದ ಜಿ. ಮಧುಕೇಶ್ ಅವರ ಕಾರ್ಯವನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಶ್ಲಾಘಿಸಿದ್ದಾರೆ.