ಬಸವಮಾರ್ಗದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ ಆಯೋಜನೆ

ಮೈಸೂರು : ವ್ಯಸನಿಗಳಿಗೆ ಕೌಟುಂಬಿಕ, ಸಾಮಾಜಿಕ ಜವಾಬ್ದಾರಿ ಅರಿವಿಗೆ ಬರಬೇಕು ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಎಚ್.ಎ.ಶಶಿರೇಖಾ ಸಲಹೆ ನೀಡಿದರು.
ಬಸವಮಾರ್ಗ ವ್ಯಸನಮುಕ್ತ ಕೇಂದ್ರದಿಂದ ಆಯೋಜಿಸಿರುವ 10 ದಿನಗಳ ಕುಡಿತ ಬಿಡಿಸುವ ಉಚಿತ ಶಿಬಿರದ ಹಿನ್ನೆಲೆಯಲ್ಲಿ
ನಗರದ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವ್ಯಸನದಿಂದ ಬದುಕು ನರಕವಾಗುತ್ತದೆ. ಸಂಸಾರ ಬೀದಿಗೆ ಬರುತ್ತದೆ. ಮಕ್ಕಳ ಭವಿಷ್ಯ ಹಾದಿ ತಪ್ಪುತ್ತದೆ. ಈ ಸಾಂಸಾರಿಕ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಗೆ ನಿಮಗೆ ಇರಬೇಕು. ಮನಸ್ಸಿಗಿಂತ ದೊಡ್ಡದು ಯಾವುದು ಇಲ್ಲ. ಹಾಗಾಗಿ ಗಟ್ಟಿ ಮನಸ್ಸು ಮಾಡಿ ಕುಡಿತದಿಂದ ಹೊರಬೇಕು ಎಂದು ಸಲಹೆ ನೀಡಿದರು.
ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ. ಆರೋಗ್ಯ ಚೆನ್ನಾಗಿ ಇರದೆ ಇದ್ದರೆ ಎಷ್ಟೇ ಸಂಪತ್ತು ಇದ್ದರೂ ಏನು ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ನಿತ್ಯ ದಿನಚರಿ ಸರಿಯಾಗಿರಬೇಕು ಎಂದು ತಿಳಿಸಿದರು.
ಬ್ರಾಹ್ಮಿ ಮುಹೂರ್ತದಲ್ಲಿ ಮೊದಲು ಎದ್ದೇಳುವುದನ್ನು ಅಭ್ಯಾಸ ಮಾಡಬೇಕು. ಲಘುವಾದ ಯೋಗಾಸನ ಮಾಡಬೇಕು. ಪ್ರಾಣಾಯಾಮ ಹಾಗೂ ಧ್ಯಾನವನ್ನು ಕಡ್ಡಾಯವಾಗಿ ಮಾಡಲೇಬೇಕು. ಈ ಅಭ್ಯಾಸಗಳಿಂದ ವ್ಯಸನದಿಂದ ಹೊರಬರಲು ಸಾಧ್ಯವಾಗುತ್ತದೆ. ಆದಷ್ಟು ಉತ್ತಮರ ಸಂಘ ಮಾಡಬೇಕು. ದೇವರ ಧ್ಯಾನ, ಉತ್ತಮ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಕೊಳ್ಳಬೇಕು. ಇದರಿಂದ ಮನಸ್ಸು ಪರಿವರ್ತನೆಯಾಗುತ್ತದೆ ಎಂದು ತಿಳಿಹೇಳಿದರು.
ಜೀರ್ಣವಾಗದ ಆಹಾರವನ್ನು ಸೇವಿಸಬೇಡಿ, ಆದಷ್ಟು ಸೊಪ್ಪು, ತರಕಾರಿ, ಮೊಳಕೆಕಾಳಿಗೆ ಆದ್ಯತೆ ನೀಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಅವತ್ತಿನ ಹೊತ್ತಿನ ಊಟವನ್ನು ಆ ಸಮಯದಲ್ಲೇ ಮಾಡಿ, ತಂಗಳು, ಫ್ರಿಡ್ಜ್ ನಲ್ಲಿ ಇಟ್ಟಿರುವ ಆಹಾರವನ್ನು ಸೇವನೆ ಮಾಡಬೇಡಿ. ಇದರಿಂದ ಆರೋಗ್ಯದಲ್ಲಿ ವ್ಯತ್ಯಸವಾಗಿ ನಾನಾ ಕಾಯಿಲೆಗಳು ಆವರಿಸುತ್ತದೆ ಎಂದು ತಿಳಿಹೇಳಿದರು.
ಗಾಣದ ಎಣ್ಣೆಗೆ ಹೆಚ್ಚಿನ ಒತ್ತು ನೀಡಿ, ಕೊಬ್ಬರಿ ಎಣ್ಣೆ, ಸೈಂದವ ಲವಣ, ಕೆಂಪು ಅಕ್ಕಿಯನ್ನು ಊಟದಲ್ಲಿ ಬಳಸಿ. ಎಣ್ಣೆಯಲ್ಲಿ ಮಾಡಿದ ಹಾಗೂ ಬೇಕರಿ ಆಹಾರವನ್ನು ಆದಷ್ಟು ತ್ಯಜಿಸಿ. ಇದರ ಬದಲು, ದೇಸಿ ಹಸುವಿನ ಹಾಲು, ಕ್ಯಾರೆಟ್ ಜ್ಯೂಸ್, ಬಿಟ್ರೋಟ್ ಜ್ಯೂಸ್, ಸೊಪ್ಪಿನ ಪಲ್ಯಗಳನ್ನು ಸೇವನೆ ಮಾಡಿ. ಜವೆ ಗೋಧಿ, ಜೋಳ, ಹೆಸರು ಕಾಳು, ಕಡಳೆಕಾಳುಗಳನ್ನು ಬಳಸಿ ಎಂದು ಸಲಹೆ ನೀಡಿದರು.
ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಬಸವಮಾರ್ಗ ಸಂಸ್ಥೆಯಿಂದ ಇದುವರೆಗೆ 49 ಉಚಿತವಾಗಿ ಕುಡಿತ ಬಿಡಿಸುವ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗಿದೆ. ಇದು 50 ನೇ ಶಿಬಿರವಾಗಿದೆ. ಈ ಶಿಬಿರ ಮತ್ತಷ್ಟು ವಿಶೇಷವಾಗಿದೆ. ಈ ಶಿಬಿರದಲ್ಲಿ ಯೋಗ, ಜಿಮ್, ಕೌನ್ಸಲಿಂಗ್, ಔಷಧೋಪಚಾರ, ಕ್ರೀಡೆ, ಸಂಗೀತ, ಸತ್ಸಂಗ ಸೇರಿದಂತೆ ನಾನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿಬಿರಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಬಾಲಸುಬ್ರಹ್ಮಣ್ಯಂ, ಎಚ್.ಪಿ.ನವೀನ್ ಕುಮಾರ್, ಸಂಜಯ್ ಗೌಡ, ಪ್ರಶಾಂತ್ ಮಧು, ರಾಘು ಸೇರಿದಂತೆ ಇತರರು ಇದ್ದರು.
ಡಾ.ಎ.ಎಚ್. ಶಶಿರೇಖಾ ಅವರು ಕಾರ್ಯಕ್ರಮದಲ್ಲಿ ಆಯುರ್ವೇದ ಗಿಡ ಮೂಲಿಕೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ಅದರಿಂದ ಸಿಗುವ ಲಾಭಗಳ ಮಾಹಿತಿಯನ್ನು ಸವಿಸ್ತಾರವಾಗಿ ನೀಡಿದರು. ನಮ್ಮ ಸುತ್ತಮುತ್ತಲ ಜಾಗದಲ್ಲೇ ಈ ಗಿಡ ಮೂಲಿಕೆಗಳನ್ನು ಬೆಳೆಸಿಕೊಳ್ಳಬಹುದು. ಇದರ ಬಳಕೆ ಮತ್ತು ಸೇವನೆಯಿಂದ ದೇಹ ಮತ್ತು ಮನಸ್ಸು ಆರೋಗ್ಯವಾಗಿ ಇರುತ್ತದೆ ಎಂದು ತಿಳಿ ಹೇಳಿದರು.
ಅಮೃತ ಬಳ್ಳಿ, ಅರಿಶಿಣ, ನೆಲ ನಲ್ಲಿ, ಅಗಸೆಬೀಜ, ಅಳಲೆಕಾಯಿ, ಶಂಕಪುಷ್ಪ, ಹಿಪ್ಪಲಿ, ಸೊಗದೆಬೇರು, ಪ್ರಷ್ಕರ ಮೂಲ, ಜಠಮಾಮ್ಸಿ ಸೇರಿದಂತೆ ಇತರೆ ಮೂಲಿಕೆಗಳನ್ನು ತೋರಿಸಿ ಅದರಿಂದ ಆಗುವ ಲಾಭಗಳ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.