ಚಾಮರಾಜನಗರ: ಲೋಕಸಭಾ ಚುನಾವಣೆಯು ಅಭಿವೃದ್ದಿ ಹಾಗೂ ಸರ್ವರ ಏಳಿಗೆಗಾಗಿ ನಡೆಯುತ್ತಿರುವ ಚುನಾವಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ, ದೇಶದ ಅಭಿವೃದ್ದಿಯೇ ಚಿತ್ರನವೇ ಬದಲಾಗುತ್ತದೆ. ಹೀಗಾಗಿ ಬಿಜೆಪಿಗೆ ಮತ ಹಾಕುವ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.
ತಾಲೂಕಿನ ಹರವೆ ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಗಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕೇವಲ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ದಿಯನ್ನು ಮರೆತು ಹೋಗಿದೆ. ರೈತರ ಯೋಜನೆಗಳಿಗೆ ಹಣ ನೀಡಿಲ್ಲ. ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಮೀಸಲಾಗಿದ್ದ 27 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಕೆ ಮಾಡಿ ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಇದನ್ನು ಮರೆಮಾಚುವ ಸಲುವಾಗಿ ಬಿಜೆಪಿ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯಾದ್ಯಂತ ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಯಾವುದೇ ಕಾರಣಕ್ಕೆ ನಮ್ಮ ಪಕ್ಷದ ಚುನಾವಣೆ ಬದಲಾವಣೆ ಮಾಡುವ ಪ್ರಸ್ತಾಪವನ್ನು ಇಟ್ಟಿಲ್ಲ. ಅಂಬೇಡ್ಕರ್ ಅವರೇ ಮತ್ತೆ ಬಂದರು ಸಹ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಸ್ಪಷ್ಟ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಇನ್ನು ಸಹಿಸಿಕೊಳ್ಳಲು ಅಗದ ಕಾಂಗ್ರೆಸ್ ಮುಖಂಡರು ಮೋದಿ ಅವರ ವಿರುದ್ದ ಇನ್ನಾವುದ ಅಸ್ತ್ರ ಬಳಸಲು ಸಾಧ್ಯವಿಲ್ಲ ಎಂದು ಈಗ ಸಂವಿಧಾನ ಬದಲಾವಣೆಯ ಹಳೆ ಪ್ಲೇಟ್ ತಿರುಗಿಸಲು ಮುಂದಾಗಿದ್ದಾರೆ. ಇಂಥ ಬಲಿಶವಾದ ಹೇಳಿಕೆಗಳಿಗೆ ಯಾರು ಸಹ ಸೊಪ್ಪು ಹಾಕಬೇಡಿ. ದೇಶದ ಭದ್ರತೆ ಹಾಗೂ ವಿಶ್ವ ಶೇಷ್ಟವಾದ ಆಡಳಿತಕ್ಕಾಗಿ, ರಾಜ್ಯ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಎನ್ಡಿಎ ವನ್ನು ಗೆಲ್ಲಿಸಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡೋಣ ಎಂದರು.
20 ಕೆರೆಗಳಿಗೆ ನೀರು ತುಂಬಿಸಿದ್ದು ಬಿಜೆಪಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಈ ಭಾಗದ 20 ಕೆರೆಗಳಿಗೆ ಕಬಿನಿಯಿಂದ ನೀರು ತುಂಭಿಸುವ ಮೂಲಕ ಶಾಶ್ವಾತ ಬರ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಿದರು. ಅವರು ಅಂದು ಮನಸ್ಸು ಮಾಡಿ, 220 ಕೋಟಿ ರೂ. ನೀಡಿ, ಕಾಮಗಾರಿಯನ್ನು ಆರಂಭಿಸಿ. ಯೋಜನೆಗೆ ಇದ್ದ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸಿ, ಈ ಭಾಗದ ಕೆರೆಗಳಿಗೆ ನೀರು ತುಂಬಿಸಿ, ಜನ ಜಾನುವಾರುಗಳಿಗೆ ಕುಡಿಯುವ ನೀರು ಕೊಟ್ಟರು. ಇಂಥ ಯೋಜನೆಯನ್ನು ತಂದ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷವನ್ನು ತಾವೆಲ್ಲರು ಬೆಂಬಲಿಸುವ ಮೂಲಕ ಬಾಲರಾಜುಗೆ ಹೆಚ್ಚು ಲೀಡ್ ಕೊಟ್ಟು ಲೋಕಸಭೆಗೆ ಕಳುಹಿಸಿಕೊಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಗುಂಡ್ಲುಪೇಟೆ ಮಂಡಲದ ಅಧ್ಯಕ್ಷ ಮಹದೇವಪ್ರಸಾದ್, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹರವೆ ಮಹೇಶ್, ಎಪಿಎಂಸಿ ಸದಸ್ಯ ಮಹದೇವಪ್ರಸಾದ್, ಗ್ರಾ.ಪಂ. ಸದಸ್ಯ ಗಿರೀಶ್, ಸುಬ್ಬನಾಯಕ, ಹರವೆ ಮಾದಪ್ಪ, ಎಚ್.ಎಲ್. ಸುರೇಶ್, ವಕೀಲ ಮಂಜು, ಚುಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ, ಮಲೆಯೂರು ನಾಗೇಂದ್ರ, ಮಲ್ಲೇಶ್, ಜೆ.ಎಲ್. ಸುರೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಮಲೆಯೂರು ಕಮಲಮ್ಮ, ಉತ್ತುವಳ್ಳಿ ಪದ್ಮ, ಮೊದಲಾದವರು ಇದ್ದರು.
ಚಾಮರಾಜನಗರ ತಾಲೂಕಿನ ಹರವೆ ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಅಭ್ಯರ್ಥಿ ಎಸ್. ಬಾಲರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ಕುಮಾರ್ ಉದ್ಗಾಟಿಸಿದರು.