ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂಬುದು ಅಂಬೇಡ್ಕರ್ ಅವರ ಕನಸು: ನರ್ಗೀಸ್‍ಬಾನು

ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ನಗರದಲ್ಲಿ ಸ್ಕೇಟಿಂಗ್ ಮ್ಯಾರಥಾನ್

ಚಾಮರಾಜನಗರ: ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಹಾಗೂ ಎಲ್ಲರಲ್ಲೂ ಸಮಾನತೆ ಕಾಣಬೇಕೆಂಬುದು ಡಾ.ಅಂಬೇಡ್ಕರ್ ಅವರ ಕನಸಾಗಿತ್ತು. ಅದನ್ನು ನನಸಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷೆ ನರ್ಗೀಸ್‍ಬಾನು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನದ ಅಂಗವಾಗಿ ನಗರದಲ್ಲಿ ಚಾಲೆಂಜರ್ ಸ್ಕೇಟ್ ಅಕಾಡೆಮಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಸ್ಕೇಟಿಂಗ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ಹೇಗೆ ಬದುಕುತ್ತಿದ್ದೇವೆ ಅನ್ನೋದಕ್ಕಿಂತ ನಮ್ಮಿಂದ ನಾಲ್ಕು ಜನ ಹೇಗೆ ಬದುಕುತ್ತಿದ್ದಾರೆ ಎಂಬುದರ ಮೇಲೆ ನಮ್ಮ ಬದುಕು ನಿರ್ಧಾರ ಆಗುತ್ತದೆ. ನಾವು ನಮ್ಮಿಂದಾದ ಅಳಿಲು ಸೇವೆಯಿಂದ ಒಬ್ಬರಿಗೆ ಒಳ್ಳೆದು ಮಾಡುವುದೇ ಬಾಬಾ ಸಾಹೇಬ್ ಅವರಿಗೆ ನಾವು ಕೊಡುವ ಗೌರವ ಅಭಿಮಾನ ಎಂದರು.

ನೂರಾರು ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಅವರಿಗೆ ಶಿಕ್ಷಣ ಕಲಿಯುವ ಹಕ್ಕು ಕೊಟ್ಟವರು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರ ಹಲವಾರು ಸಿದ್ದಾಂತಗಳಲ್ಲಿ ಎಲ್ಲರಲ್ಲೂ ಸಮಾನತೆ ಕಾಣಬೇಕು ಎಂಬುದು ಒಂದಾಗಿತ್ತು. ಇದನ್ನು ನನಸಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.

‘ಸ್ಕೇಟಿಂಗ್ ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು, ಶಿಕ್ಷಣಕ್ಕೆ ಕೊಡುವ ಆಧ್ಯತೆಯನ್ನು ಕ್ರೀಡೆಗೂ ನೀಡಿದಾಗ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆ ಕ್ರೀಡೆಗಳಿಗೆ ಹೆಸರು ವಾಸಿಯಾಗಿದ್ದು, ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ಸಂಬಂಧ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ಸ್ಕೇಟಿಂಗ್ ಕ್ರೀಡೆ ಆಟಗಾರರಲ್ಲಿ ಉಲ್ಲಾಸ ಮೂಡಿಸುತ್ತದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಬಹುದುಎಂದರು.

ಇದೇ ವೇಳೆ ಜಿಲ್ಲಾಡಳಿತ ಭವನದ ಆವರಣದಿಂದ ರಾಮಸಮುದ್ರ ಅಂಬೇಡ್ಕರ್ ಪುತ್ಥಳಿವರಗೆ ಸ್ಕೇಟಿಂಗ್ ಮ್ಯಾರಥಾನ್ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ್, ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್, ಸ್ಕೇಟಿಂಗ್ ತರಬೇತುದಾರ ಪುರ್ಖಾನ್ ಪಾಷಾ, ಅನ್ಸರ್‍ಖಾನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *