ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ನೀರಾವರಿ (ಪಿ.ಎಂ.ಕೆ.ಎಸ್.ವೈ) ಯೋಜನೆಯಡಿ 2025-26ನೇ ಸಾಲಿನ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳಾದ ಅರಿಶಿಣ, ಬಾಳೆ, ಈರುಳ್ಳಿ, ಟೊಮೆಟೊ, ಪಪ್ಪಾಯ, ಕಲ್ಲಂಗಡಿ, ತೆಂಗು ಹಾಗೂ ತರಕಾರಿ, ಹೂವಿನ, ತೋಟದ, ಹಣ್ಣಿನ ಬೆಳೆಗಳಿಗೆ ಹನಿ ನೀರಾವರಿ ಪದ್ದತಿ (ಡ್ರಿಪ್ ಇರಿಗೇಷನ್) ಅಳವಡಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹನಿ ನೀರಾವರಿ ಉತ್ಪಾದಕರ ಸಂಸ್ಥೆ, ಕಂಪನಿಯು ಸರ್ಕಾರದಿಂದ ಅನುಮೋದನೆಯಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆ, ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ (ಆರ್.ಟಿ.ಸಿ) ಕಂಪನಿಯಿಂದ ದರಪಟ್ಟಿ ಮತ್ತು ನಕ್ಷೆ, ಚೆಕ್ಬಂದಿ, ಆಧಾರ್ ಕಾರ್ಡ್, ಆರ್.ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಬೇಬಾಕಿ (ಎನ್ಓಸಿ), ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಗಳೊಂದಿಗೆ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಕಾರ್ಯಾದೇಶವನ್ನು (ವರ್ಕ್ ಆರ್ಡರ್) ಪಡೆದು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Like this:
Like Loading...
Related