
ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾ ರಥೋತ್ಸವವು ಜುಲೈ 10ರಂದು ನಡೆಯಲಿರುವ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರಾದ ರಾಮದಾಸ್ ಅವರು ದೇವಸ್ಥಾನದ ಸುತ್ತಲಿನ ಸ್ಥಳಗಳು ಹಾಗೂ ರಥ ಸಾಗುವ ರಸ್ತೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹಾಗೂ ರಥ ಸಾಗುವ ರಸ್ತೆಗಳ ಸ್ವಚ್ಚತೆ, ರಥಬೀದಿಯ ಬೀದಿದೀಪಗಳು, ಚರಂಡಿ ವ್ಯವಸ್ಥೆ, ವಾಹನ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ವೀಕ್ಷಿಸಿ ರಥೋತ್ಸವ ಸಿದ್ದತೆಗಾಗಿ ಅಗತ್ಯ ಕ್ರಮಗಳನ್ನು ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿ ಸಿಬ್ಬಂದಿಗೆ ಸೂಚಿಸಿದರು.
ಇದೇ ವೇಳೆ ರಥೋತ್ಸವದ ಸಿದ್ದತೆ ಬಗ್ಗೆ ಮಾತನಾಡಿದ ಪೌರಾಯುಕ್ತ ಎಸ್.ವಿ. ರಾಮದಾಸ್ ಅವರು ಆಷಾಢ ಮಾಸದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ವಾಹನ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಚಾಮರಾಜೇಶ್ವರಸ್ವಾಮಿ ರಥೋತ್ಸವವು ಸಾಗುವ ರಸ್ತೆಗಳಲ್ಲಿ ಯಾವುದೇ ಅಡೆತಡೆಗಳು ಆಗದಂತೆ ನೋಡಿಕೊಳ್ಳಬೇಕು. ರಸ್ತೆ ಬದಿಯ ಮರದ ರೆಂಬೆ ಕೊಂಬೆಗಳನ್ನು ತೆರವುಗೊಳಿಸಬೇಕು. ರಥ ಚಲಿಸುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು. ರಥ ಸರಾಗವಾಗಿ ಸಾಗುವಂತೆ ಅನುಕೂಲವಾಗಲು ರಥಬೀದಿಯಲ್ಲಿ ಮರಳು ಹಾಕಬೇಕು. ಚರಂಡಿಗಳ ಕಸ ವಿಲೇವಾರಿಯನ್ನು ಆದ್ಯತೆ ಮೇರೆಗೆ ನಿರ್ವಹಿಸಬೇಕು ಎಂದು ರಾಮದಾಸ್ ಅವರು ತಿಳಿಸಿದರು.
ಪೊಲೀಸ್ ಸಬ್ಇನ್ಸ್ಪೆಕ್ಟರ್ ಅಯ್ಯನ್ ಗೌಡ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ವಿಶ್ವ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಪರಿಸರ ಇಂಜಿನಿಯರ್ ರೂಪಾ, ಇತರರು ಇದೇ ಸಂದರ್ಭದಲ್ಲಿ ಇದ್ದರು.