ಅರಣ್ಯದೊಳಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ: 2 ಹಂತದ ತಪಾಸಣೆ ಜಾರಿ-ಈಶ್ವರ ಖಂಡ್ರೆ

ಚಾಮರಾಜನಗರ: ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಚಮಚ ಇತ್ಯಾದಿ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ತಡೆಯಲು ಅರಣ್ಯದೊಳಗೆ ಸಾಗುವ ಮಾರ್ಗದಲ್ಲಿ 2 ಹಂತದ ತಪಾಸಣೆ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಂಡೀಪುರದಲ್ಲಿಂದು ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಉದ್ಘಾಟಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೆಕ್ಕನಹಳ್ಳ, ಮೂಲೆಹೊಳೆ, ಮದ್ದೂರು ಗೇಟ್, ಮೇಲಕಾಮನಹಳ್ಳಿ ಗೇಟ್ ಬಳಿ ಪ್ರತಿನಿತ್ಯ 30-35 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಪ್ರತಿ ವರ್ಷ ಈ ನಾಲ್ಕು ತಪಾಸಣಾ ಕೇಂದ್ರಗಳಲ್ಲಿ ಸುಮಾರು 11ರಿಂದ 12 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಇದೆ. ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಇಳಿದು ಪ್ಲಾಸ್ಟಿಕ್ ಸಂಗ್ರಹಿಸುವಾಗ ವನ್ಯಜೀವಿ ದಾಳಿ ಮಾಡುವ ಹಾಗೂ ಹಾವು ಕಚ್ಚುವ ಅಪಾಯ ಇರತ್ತೆ. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ದ್ವಾರದಲ್ಲೇ ತಡೆಯುವ ವ್ಯವಸ್ಥೆ ಮಾಡಿ ಎಂದರು.

ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿಗಳಲ್ಲಿ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ 2 ಹಂತದ ತಪಾಸಣೆ ವ್ಯವಸ್ಥೆ ಜಾರಿ ಮಾಡಬೇಕು. ಮೊದಲ ಹಂತದಲ್ಲಿ ಒಂದು ದೊಡ್ಡ ಬುಟ್ಟಿ ಇಟ್ಟು ಏಕ ಬಳಕೆ ಪ್ಲಾಸ್ಟಿಕ್ ಬಾಟಲಿ, ಲೋಟ, ತಟ್ಟೆ, ಕ್ಯಾರಿ ಬ್ಯಾಗ್ ಅನ್ನು ಅದರಲ್ಲಿ ಸ್ವಯಂ ಪ್ರೇರಿತವಾಗಿ ಹಾಕಲು ವಾಹನದಲ್ಲಿರುವವರಿಗೆ ತಿಳಿಸಬೇಕು. ನಂತರ ಎರಡನೇ ಹಂತದಲ್ಲಿ ವಾಹನ ತಪಾಸಣೆ ಮಾಡಿ, ವಾಹನಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಇದ್ದರೆ ದಂಡ ವಿಧಿಸುವಂತೆ ಎಂದು ಸೂಚಿಸಿದರು.

ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿದ್ದರೂ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬರುವ ಬೇಸಿಗೆಯಲ್ಲಿ ಅರಣ್ಯದೊಳಗೆ ನೀರು ಮತ್ತು ಮೇವಿನ ಕೊರತೆ ಆಗದಂತೆ ಈಗಿನಿಂದಲೇ ಕ್ರಮ ವಹಿಸಿ, ನೀರು ಗುಂಡಿಗಳಲ್ಲಿ ನೀರು ಸಂಗ್ರಹಣೆಗೆ ಆದ್ಯತೆ ನೀಡಿ. ಅಗತ್ಯಬಿದ್ದರೆ ಕೊಳವೆ ಬಾವಿಗಳಿಗೆ ಸೌರ ವಿದ್ಯುತ್ ಪಂಪ್ ಅಳವಡಿಸಿ ನೀರು ಹರಿಸಿ ಎಂದು ಸೂಚಿಸಿದರು.
ಲಂಟನಾ, ಸೆನ್ನಾ ಕಳೆಗಳು ವ್ಯಾಪಕವಾಗಿ ಬೆಳೆಯುತ್ತಿದ್ದು, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಆಗುತ್ತಿದೆ. ಈ ಕಳೆ ತೆಗೆಯಲು ಸಮಗ್ರ ಯೋಜನೆ ರೂಪಿಸಿ, ಪರಿಹಾರ ಕಂಡು ಹಿಡಿಯಿರಿ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತರ ಅಹವಾಲು ಆಲಿಸಿದ ಸಚಿವರು ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *