
ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿ, ತಮ್ಮದೇ ನೆಲೆಯಿಂದ ಯುಗಮಾನದ ಶಕ್ತಿಯಾಗಿ, ವಿಶ್ವಗುರು, ಭಕ್ತ ಭಂಡಾರಿ, ನಡೆದಾಡಿದ ದೈವ, ಜಗಜ್ಯೋತಿಯಾಗಿ ನಿಂತಿರುವ ಸಾಂಸ್ಕೃತಿಕ ನಾಯಕರೆಂದರೆ ಬಸವಣ್ಣನವರು. ಜೀವ ಚೈತನ್ಯದ ಚಿಲುಮೆಯ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಉದಯಿಸಿದ ಮಾನವೀಯ ರೂಪದ ಅವತಾರ ಪುರುಷರಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು.
ಹಲವರ ಪರಿಶ್ರಮದ ಫಲಿತಾಂಶ, ಕೆಲವರ ವೈಭವದ ಜೀವನಕ್ಕೆ ಮೆಟ್ಟಿಲಾಗುತ್ತಿರುವುದು. ಬದುಕಿ ಬದುಕಿಸುವ ತನವನ್ನು ಮರೆ ಮಾಡಿ, ಪರಿಶ್ರಮಕ್ಕೆ ಸಲ್ಲಬೇಕಾದ ಪ್ರತಿಫಲ ಇದರ ನಾಮಕ ವ್ಯವಸ್ಥೆಯ ಉಸ್ತುವಾ ರಿಗೆ ಸಲ್ಲುತ್ತಿರುವುದು ಎಷ್ಟರಮಟ್ಟಿಗೆ ನ್ಯಾಯವಾಗಿದೆ…..? ಇಂತಹ ಸ್ಥಿತಿಗತಿಯು ಅಂದಿನಿಂದಲೂ ಪ್ರಸ್ತುತದವರೆಗೂ ಸರ್ವೇ ಸಾಮಾನ್ಯವಾಗಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ, ಅನೈಕ್ಯ, ಅನಾಚಾರ, ಅವೈಜ್ಞಾನಿಕ ಕಾಲಘಟ್ಟದ ಸುಧಾರಣೆಯಲ್ಲಿ ಅವತರಿಸಿದ ಅನೇಕ ಪೂಜ್ಯನೀಯ ಮಾನವತಾವಾದಿಗಳಲ್ಲಿ ಅಗ್ರಗಣ್ಯರಾಗಿ ಮುಂಚೂಣಿಯಲ್ಲಿ ನೆಲೆಯಾಗಿದ್ದವರು ಬಸವಣ್ಣನವರು. ಏಕೆಂದರೆ ಸರ್ವರಲ್ಲೂ ಗೌರವಿತವಾದ ಸುಜ್ಞಾನವನ್ನು ಬೆಳೆಸಿ, ಸಾಮಾನ್ಯ ಜನರು ಸಮಾನತೆಯಿಂದ, ಸಹಕಾರ, ಸಹ ಬಾಳ್ವೆಯಿಂದ ಅದಮ್ಯವಾದ ಜೀವನವನ್ನು ನಡೆಸಲು ಇವರು ನೀಡಿದ ಮಾನವತವಾದವು ಬಣ್ಣಿಸಲು ಅಸದಳವಾದುದು. ಅಲ್ಲದೆ ಹನ್ನೆರಡನೆಯ ಶತಮಾನವು ಐತಿಹಾಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಾತ್ಮಕವಾಗಿ ಸೂರ್ಯ ಚಂದ್ರಾರ್ಕವಾಗಿ ಶಾಶ್ವತವಾಗಿ ನೆಲೆಗೊಳ್ಳಲು ಬಸವಣ್ಣನವರ ಚಿಂತನೆ, ವೈಚಾರಿಕ ಪ್ರಜ್ಞೆ, ಕಾಯಕ ತುಂಬಾ ಆದರಣೀಯ, ಅನುಸರಣೀಯ, ಪೂಜ್ಯನೀಯವಾಗಿದೆ.
ಆದಿ ಬಸವಣ್ಣ ಅನಾದಿ ಲಿಂಗವೆಂದೆಂಬರು
ಹುಸಿ ಹುಸಿ ಈ ನುಡಿಯ ಕೇಳಲಾಗದು
ಆದಿಲಿಂಗ ಅನಾದಿ ಬಸವಣ್ಣನು
ಲಿಂಗವು ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಪ್ರಸಾದವು ಬಸವಣ್ಣನನುಕರಿಸಲಾಯಿತು
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣ ನೆಂದರಿದೆನಯ್ಯ ಕೂಡಲ ಚನ್ನ ಸಂಗಮ ದೇವ
ಚನ್ನಬಸವಣ್ಣನವರು ಈ ವಚನದ ಮೂಲಕ ಬಸವಣ್ಣನವರು ಸಕಲ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಮೌಢ್ಯವನ್ನು ತಿರಸ್ಕರಿಸಿ, ಚಿನ್ಮಯ ಜ್ಞಾನವನ್ನು ಸಾರಿದ್ದನ್ನು, ಸಾಮಾಜಿಕ ಸಾಮರಸ್ಯಕ್ಕೆ ಕಾರಣೀಭೂತರಾದುದನ್ನು ತಿಳಿಯಪಡಿಸಿದ್ದಾರೆ.
ಅಧರ್ಮ ಮಾರ್ಗದ ಅನುಸರಣೆ, ಸಾಮಾನ್ಯ ಜನರ ಶೋಷಣೆ, ಸಾಮಾಜಿಕ ಕಳಕಳಿಯಿಲ್ಲದ, ಮೂಢ ಆಚರಣೆಗಳು ಜನರ ಜೀವನವನ್ನು ದಿಕ್ಕು ತಪ್ಪಿಸಿ ಅಜ್ಞಾನದ ಕೂಪದಲ್ಲಿ ಭವದ ಯಾನವನ್ನು ನಡೆಸುತ್ತಿದ್ದ ಸಂದರ್ಭವದು. ಆಧ್ಯಾತ್ಮದ ಮೂಲಕ, ಆರಾಧ್ಯನಲ್ಲಿ ಆತ್ಮ ಜ್ಯೋತಿಯನ್ನು ಹೊತ್ತಿಸಿ, ನಿಜ ಕಾಯಕದಲ್ಲಿ ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸಿ ಸಾರ್ಥಕತೆಯನ್ನು ಪಡೆಯಲು ಅವರೇ ಹುಟ್ಟು ಹಾಕಿದ ಇಷ್ಟ ಲಿಂಗದ ಕಲ್ಪನೆ ಮತ್ತು ಧಾರಣೆಯ ವಿಧಾನ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ
ದೇಹವೇ ದೇಗುಲ
ಶಿರವೆ ಹೊನ್ನ ಕಲಶವಯ್ಯ
ಕೂಡಲ ಸಂಗಮ ದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ಎಂಬ ವಚನ ಸಾರದ ಮೂಲಕ ತನುವ ದೇವಾಲಯ ಮಾಡಿ , ಕರದಲ್ಲಿ ಲಿಂಗ ವಿಡಿದು, ಮನವು ಏಕಾಗ್ರತೆಯಿಂದ ಆತ್ಮ ಜ್ಯೋತಿಯ ಹೊತ್ತಿಸಿ , ನಯನದಲ್ಲಿ ಲಿಂಗ ಚಿತ್ತ ದರ್ಶನ ಮಾಡಿ, ಕರದಲ್ಲಿ ಆರಾಧ್ಯನ ಸ್ಮರಣೆಯ ಮೂಲಕ ಇರುವಲ್ಲೇ ಆತ್ಮ ಸಾಕ್ಷಾತ್ಕಾರ ವನ್ನು ಪಡೆಯುವ ಸರಳ ಸುಲಲಿತ ದಿವ್ಯಸಾರವನ್ನು ಜಗತ್ತಿಗೆ ಉಣಬಡಿಸಿ, ತನು ಮನ ಆತ್ಮಗಳೆಂಬ ತ್ರಿಕರಣವನ್ನು ತ್ರಿವಿಧದ ಮೂಲಕ ಶುದ್ಧಿಗೊಳಿಸುವ ಸೇತುವೆಯನ್ನು ಶರಣ ಮತ್ತು ಆಧ್ಯಾತ್ಮ, ಶಕ್ತಿ ಮತ್ತು ಮುಕ್ತಿ ಯ ಮಾರ್ಗಗಳಿಗೆ ಪ್ರಾಯೋಗಿಕವಾಗಿ ಪ್ರಚಾರಪಡಿಸಿದ ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಧ್ಯಾತ್ಮದ ಗುರು ಬಸವಣ್ಣನವರಾಗಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಜನಪದರ ಮಾತಿನಂತೆ ಎಳೆತನದಲ್ಲಿಯೇ ಬಸವಣ್ಣನವರು ವಿಮರ್ಶಾ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದರು. ಬಾಲ್ಯದಲ್ಲಿ ನೀಡುವ ವಿದ್ಯಾಭ್ಯಾಸವು ವೈಚಾರಿಕ ವಿಚಾರಕ್ಕೆ ಆದ್ಯತೆ ನೀಡಬೇಕು ಎಂಬ ಮಹತ್ವಕಾಂಕ್ಷೆಯನ್ನು ಹೊಂದಿದ್ದವರು. ಇವರ ಕಾಲದಲ್ಲಿದ್ದ ಕಂಠಪಾಠ ಕಲಿಕೆಗೆ ತಿಲಾಂಜಲಿ ಯನ್ನು ಹೇಳಿ ಪ್ರತಿಯೊಂದು ವಿಚಾರಕ್ಕೂ ಅರ್ಥ ವಿವರ ಕೇಳುವ ಪ್ರಶ್ನಾ ಮನೋಭಾವವನ್ನು ಹೊಂದಿ ವಿಚಾರವಂತಿಕೆಯ ಸಂಗ್ರಹ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರು. ವಿಷಯ ಸಂಗ್ರಹಣೆ, ಜ್ಞಾನಾರ್ಜನೆಗೆ ಕಂಠಪಾಠವು ಮೂಲ ಸಾಧನವಲ್ಲ ಎಂಬ ವಿಚಾರವಂತಿಕೆಯನ್ನು ಗುರುಕುಲ ಶಿಕ್ಷಣದಲ್ಲಿ ತಿಳಿಸಿದ ಶಿಕ್ಷಣ ತಜ್ಞರಾಗಿದ್ದಾರೆ. ಗಳಿಸಿದ ಜ್ಞಾನ ಅಂಕ ಗಳಿಕೆಗೆ ಮಾತ್ರ, ಜೀವನದ ನೈಜ ಆಚರಣೆಗಲ್ಲ ಎಂಬ ಪ್ರಸ್ತುತದ ವಿದ್ಯಾವಂತರ ಮನೋಧರ್ಮವನ್ನು ಬಲವಾಗಿ ವಿರೋಧಿಸಿದ ಸಿದ್ಧಾಂತಿ ಬಸವಣ್ಣನವರು. ‘ಸರ್ವೇ ಜನ ಸುಖಿನೋ ಭವಂತು’ ಎಂಬ ಬಾಲ್ಯದ ಕಲಿಕೆಯ ನಿಜ ಅರ್ಥವನ್ನು ಅನುಸರಿಸಿದ ಬಾಲ್ಯದ ಉದಾಹರಣೆಯನ್ನು ಸ್ಮರಿಸಲೇಬೇಕು. ಹೊರ ಕೇರಿಯ ಕೇತ ಎಂಬುವವನು ಶಿವಕಥೆಯನ್ನು ಕೇಳಲು ಅನುವು ಮಾಡಿಕೊಟ್ಟು, ಇವನ ತಂದೆ ತೀವ್ರ ಅನಾರೋಗ್ಯದಿಂದ ನರಳುವಾಗ ಸಂತೈಸಿ, ಅಗತ್ಯ ವಸ್ತುಗಳನ್ನು ನೀಡಿ ಅಂದಿನ ಬಲವಾದ ವಿರೋಧ ಮಾರ್ಗಗಳನ್ನು ಖಂಡಿಸಿ, ಬಾಲ್ಯದ ಕಲಿಕೆಗೆ ನಿಜ ಅರ್ಥವನ್ನು ತುಂಬಿದರು.
ವೈಚಾರಿಕ ಬುದ್ಧಿವಂತಿಕೆಯನ್ನು ಬಾಲ್ಯದಲ್ಲಿಯೇ ತಮ್ಮದಾಗಿಸಿಕೊಂಡಿದ್ದ ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಬಾಲ್ಯದಲ್ಲಿಯೇ ಬಲವಾಗಿ ಬೆಂಬಲಿಸಿದರು. ವೇದ ಶಾಸ್ತ್ರಗಳಲ್ಲಿ ಹೆಂಗಸರಿಗೆ ಸಂಸ್ಕಾರವಿಲ್ಲದ್ದನ್ನು ಬಲವಾಗಿ ವಿರೋಧಿಸುತ್ತಾ, ಅಕ್ಕ ನಾಗಮ್ಮಳಿಗಿಲ್ಲದ ಉಪನಯನ ನನಗೂ ಬೇಡ ಎಂದು ತಿರಸ್ಕಾರ ಮಾಡಿ ಬಾಲ್ಯದಲ್ಲಿಯೇ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದರು. ಅಲ್ಲದೆ ಇಂತಹ ಸಮಾಜದೊಂದಿಗಿನ ಬದುಕು ನನಗೆ ನಿರರ್ಥಕ ಎಂದು ಅಲ್ಲಿಂದ ಎಳೆಯ ವಯಸ್ಸಿನಲ್ಲಿಯೇ ಮನೆಮಠ ಬಿಟ್ಟು ಕೂಡಲಸಂಗಮದತ್ತ ಪಯಣ ಬೆಳೆಸಿದರು.
ಕೂಡಲಸಂಗಮದಲ್ಲಿ ಇವರು ಪಡೆದ ವಿದ್ಯಾಭ್ಯಾಸವು ದೇಹವನ್ನು ದಂಡಿಸದೆ ದೇವರ ಹೆಸರಿನಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜನರ ನಡವಳಿಕೆ, ಕೆಳವರ್ಗದವರನ್ನು ಮೇಲೆತ್ತದ, ಅಸಮಾನತೆಯಿಂದ ಕಾಣುವ ವಿಚಾರಗಳು, ವಿದ್ಯೆ ಕಲಿಯಲು ಸರ್ವರಿಗೂ ಹಕ್ಕುಗಳಿಲ್ಲದಿರುವುದು ಇವೇ ಮುಂತಾದ ವಿಚಾರಗಳು ಇವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನುಂಟು ಮಾಡುತ್ತದೆ. ಈ ವಾತಾವರಣವೂ ಸಮಾನತೆ, ಸ್ವಾತಂತ್ರ್ಯ, ಭಾತೃತ್ವ ವಿಚಾರಗಳಿಗೆ ವಿರೋಧವಾಗಿದೆ ಎಂದೆಣಿಸಿ, ಮಾನವ ಕುಲಕ್ಕೆ ಉಪಯೋಗವಿಲ್ಲದ ಅರಿವಿನ ಶಿಕ್ಷಣ, ಆಧ್ಯಾತ್ಮ, ಶಾಸ್ತ್ರ, ಭಾಷೆ , ಧರ್ಮ ವ್ಯರ್ಥ ಎಂದು ಮನ ಗಂಡು ಜನರಾಡುವ ಮಾತಿನಲ್ಲಿ ಹೃದಯಕ್ಕೆ ನಾಟುವಂತಹ ಸರಳ ಭಾಷೆ ಕನ್ನಡದಲ್ಲಿ ಕೂಡಲಸಂಗಮ ದೇವ ಅಂಕಿತದೊಂದಿಗೆ
ದಯವಿಲ್ಲದ ಧರ್ಮವಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯ ಎಂಬಂತಹ ಎಣಿಸಲಾರದಷ್ಟು ವಚನಗಳನ್ನು ವಾಸ್ತವ ನಿದರ್ಶನಗಳೊಂದಿಗೆ ರಚಿಸುತ್ತಾರೆ. ಸಮಾಜದಲ್ಲಿನ ಅವ್ಯವಸ್ಥೆಗಳನ್ನು ಬಿಂಬಿಸುತ್ತ, ಸಾಮಾನ್ಯ ಜನರ ಉದ್ಧಾರಕ್ಕಾಗಿ ಶ್ರಮಿಸುತ್ತ, ಮಡಿ ಮೈಲಿಗೆಯ ಸಮಾಜವನ್ನು ವಿರೋಧಿಸುತ್ತಾ ನವ ಸಮಾಜದ ನಿರ್ಮಾಣದಲ್ಲಿ ನವ ಮುನ್ನುಡಿಯನ್ನು ಬರೆಯುತ್ತಾರೆ.
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಬಂದೆಡೆ ಕೊಲ್ಲೆಂಬರು
ಉಂಬ ಜಂಗಮ ಬಂದೆಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು
ನಮ್ಮ ಕೂಡಲ ಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲು ತಾಗಿದ ಮಿಟ್ಟೆಯಂತಿಪ್ಪರಯ್ಯ ಕೂಡಲಸಂಗಮದೇವ
ಹಸಿದವನಿಗೆ ಅನ್ನವನ್ನು ನೀಡಬೇಕು, ಉಣ್ಣದ ಕಲ್ಲಿಗಲ್ಲ ಎಂಬ ಸಾರವನ್ನು ತಿಳಿಸಿ ಮೂಢನಂಬಿಕೆಗಳನ್ನು ದೂರಿಕರಿಸುವ, ಸಮಾಜದ ಓರೆ ಕೋರೆಗಳನ್ನು ತಿದ್ದಿ, ಮಾನವ ತತ್ವವನ್ನು ಅರಿತು ಬದುಕುವ ಪ್ರಣತೆಯನ್ನು ಹಚ್ಚಿ ಅಂದಿನ ಅರಾಜಕತೆಯನ್ನು ಹೋಗಲಾಡಿಸಿ, ತಳಮಟ್ಟದಿಂದ ಸರ್ವ ಜನಾಂಗವನ್ನು ಉದ್ದರಿಸುವ ಸಮಾಜ ಕ್ರಾಂತಿಯ ಹರಿಕಾರಕರಾಗಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಹೆಸರಿನಲ್ಲಿ ನೈಜತೆಯನ್ನು ಮರೆತು ಅಧಿಕಾರದ ಲಾಲಾಸೆಯಿಂದ ಪ್ರಜೆಗಳ ಕಲ್ಯಾಣವನ್ನು ಮರೆತು ವೈಯಕ್ತಿಕ ಆಸೆಯಿಂದ ಆಡಳಿತವನ್ನು ದಿಕ್ಕು ತಪ್ಪಿಸಿ ಅನ್ಯ ಮಾರ್ಗಗಳ ಮೂಲಕ ಕಿಸೆ ತುಂಬಿಸಿಕೊಂಡು ಅಭಿವೃದ್ಧಿಯ ಜಾಹೀರಾತು ಫಲಕವನ್ನು , ಅಸತ್ಯವನ್ನು ಬಿತ್ತರಿಸುತ್ತಿರುವ ರಾಜಕೀಯ ವ್ಯವಸ್ಥೆಯು ಬಹಳ ಅಪಾಯಕಾರಿಯಾದದ್ದು. ಧರ್ಮ ಧರ್ಮಗಳ ನಡುವೆ, ಸಮಾಜ ಸಮಾಜದ ನಡುವೆ ಸಂಘರ್ಷವನ್ನು ತಂದು ಹಾಕಿ ಅಧಿಕಾರದ ಗದ್ದುಗೆಯನ್ನೇರುವ ಪ್ರಸ್ತುತದ ರಾಜಕೀಯ ಧುರೀಣರ ಮನಸ್ಥಿತಿ ಅಶಾಂತಿಯ ನಿರ್ಮಾಣಕ್ಕೆ ಎಡೆಯಾಗಿದೆ. ಇಂತಹ ಅಶಾಂತ ವಾತಾವರಣದಲ್ಲಿ ಕಾರಣಿಕರಾಗಿ, ಮಹಾಮಂತ್ರಿಗಳಾಗಿ, ಕಲ್ಯಾಣ ಸಾಮ್ರಾಜ್ಯದಲ್ಲಿ ಬಸವಣ್ಣನವರು ನಿರ್ವಹಿಸಿದ ಆಡಳಿತ ಬಹಳ ಸ್ಮರಣೀಯ ಮತ್ತು ಪ್ರಸ್ತುತ ರಾಜಕೀಯ ವ್ಯವಸ್ಥೆ ಅಧ್ಯಯನ ಮಾಡಲು ಸೂಕ್ತ ನಿದರ್ಶನವಾಗಿದೆ. ಹುಡುಕಿದರೂ ಸೂಜಿಮೊನೆ ಯಷ್ಟು ಕಳಂಕವನ್ನು ಹೊಂದಿರದೆ ಮಾದರಿ ಆಡಳಿತ ನೀಡಿ ಕಲ್ಯಾಣ ರಾಜ್ಯವನ್ನು ಸುಖಿ ಕಲ್ಯಾಣ ರಾಜ್ಯವನ್ನಾಗಿ ಪರಿವರ್ತಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಜನಸೇವೆಯೇ ಜನಾರ್ಧನ ಸೇವೆ ಎಂದು ಹೆಸರಿಗಷ್ಟೇ ಪರಿಪಾಲನೆ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಕೆಲಸಗಳಿಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ , ಭ್ರಷ್ಟಾಚಾರವನ್ನು ಅನುಸರಿಸುವ, ರಾಜ್ಯದ ಬೊಕ್ಕಸವನ್ನು ಬರಿದು ಮಾಡುವತನವು ಬಸವಣ್ಣನವರ ಕಾಯಕನಿಷ್ಠೆಯನ್ನು, ರಾಜ್ಯದ ಬೊಕ್ಕಸದ ಹಣ ವ್ಯರ್ಥವಾಗದೆ ಪಾಲನೆ ಮಾಡಿದ ತನವನ್ನು ಕಲಿಯಬೇಕಾಗಿದೆ.
ನುಡಿದಂತೆ ನಡೆ ನಡೆದಂತೆ ನುಡಿ ಎಂಬ ಮಾತಿನಂತೆ ಬದುಕಿದಷ್ಟು ಕಾಲವೂ ಇವರ ಜೀವನವು ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬ ನುಡಿಯ ಸಾರಕ್ಕೆ ಹೋಲಿಕೆ ಇಲ್ಲದಂತಾಗಿದೆ. ಕಲ್ಲು ಮನಸ್ಸಿನಲ್ಲಿ ಮೃದುತ್ವವನ್ನು ಅರಳಿಸುವ ಪ್ರವರ್ತಕ ರಾಗಿ ಒಬ್ಬ ಕಳ್ಳನನ್ನು ಮನುಷ್ಯನನ್ನಾಗಿ ಬದಲಾಯಿಸಿ ಶರಣರನ್ನಾಗಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ.
ಆಧುನಿಕ ಸಂಸತ್ತು ಎಂದೇ ಕರೆಯಲ್ಪಡುವ ವಿಶ್ವದ ಮೊದಲ ಸಂಸತ್ತನ್ನು ಅನುಭವ ಮಂಟಪವೆಂಬ ಹೆಸರಿನ ಮೂಲಕ ಸ್ಥಾಪಿಸಿದರು. ಅದು ಇಂದಿನ ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಸತ್ತಿನ ಕಾಯಕಗಳಿಗೂ ಮೇಲಾದ ಸಾಧನೆಯನ್ನು ಮಾಡಿದೆ ಎಂದರೆ ತಪ್ಪಾಗಲಾರದು. ಅಲ್ಲಮ ಪ್ರಭುಗಳ ಘನ ಅಧ್ಯಕ್ಷತೆಯಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಶರಣೆ ನೀಲಾಂಬಿಕೆ ಅಕ್ಕ ನಾಗಲಾಂಬಿಕೆ ಮುಂತಾದ ಶ್ರೇಷ್ಠ ವಚನಕಾರ್ತಿಯರು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಹರಳಯ್ಯ, ಮೋಳಿಗೆ ಮಾರಯ್ಯ, ಡೋಹರ ಕಕ್ಕಯ್ಯ, ಇವರೇ ಮುಂತಾದ ಶ್ರೇಷ್ಠ ವಚನಕಾರರ ಮಹಾಸಂಗಮ ಸ್ಥಳವಾಗಿ ಸ್ತ್ರೀ ಪುರುಷರ ಅಸಮಾನತೆ, ಮೇಲುಕೀಳೆಂಬ ವರ್ಗ ಸಂಘರ್ಷಕ್ಕೆ ತೆರೆ ಎಳೆದ ಮೊದಲ ಸಮತವಾದದ ಮೂಲ ನೆಲೆಯಾಗಿದೆ. ಇಂದು ನಡೆಯುವ ಸಂಸತ್ತಿನ ಕಲಾಪದಂತಲ್ಲದೆ ಪ್ರತಿನಿತ್ಯ ಕಾಯಕ ಮಾಡಿ , ಬಂದ ಪ್ರತಿಫಲದಿಂದ ಶರಣರಿಗೆ ದಾಸೋಹವನ್ನು ಬಡಿಸಿ ಅಸಮಾನತೆ, ಅಂಧಕಾರ, ಮೂಢನಂಬಿಕೆ, ಇವೇ ಮುಂತಾದ ಸಮಾಜಕ್ಕೆ ಕಂಟಕವಾದ ವಿಷಯಗಳನ್ನು ಸರಿಪಡಿಸುವ ಆರೋಗ್ಯದಾಯಕ ಚರ್ಚೆಗಳು ಪ್ರತಿನಿತ್ಯ ಅಲ್ಲಿ ನಡೆಯುತ್ತಿದ್ದವು. ಈ ಕಾಯಕವು ಇಂದಿನ ಅಭಿವೃದ್ಧಿಯೇತರ ದೇಶಗಳ ಸಂಸತ್ತುಗಳಲ್ಲಿ ನಡೆಯುವ ಚರ್ಚೆಯನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ಸಮೂಹ ಮಾಧ್ಯಮಗಳಿಲ್ಲದ, ಸಂಪರ್ಕ ಸಾಧನಗಳಿಲ್ಲದ, ಮೊಬೈಲ್ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಂ ಇಲ್ಲದ ಆ ಕಾಲದಲ್ಲಿ ಸಾವಿರಾರು ನದಿಗಳು ವಿಶಾಲ ಸಾಗರವನ್ನು ಸೃಷ್ಟಿಸುವಂತೆ ಅನೇಕ ಶರಣರು ಕಲ್ಯಾಣವೆಂಬ ಪವಿತ್ರ ಸಂಗಮದಲ್ಲಿ ನೆರೆಯಲು ಬಸವಣ್ಣನವರು ಕಾರಣಕರ್ತರಾಗಿರುವುದು ಸುಲಭದ ಮಾತೇನಲ್ಲ. ಮನಮನಗಳು ಒಂದಾಗಿ ವ್ಯವಸ್ಥೆಯನ್ನು ಸರಿದೂಗಿಸುವ ನಿರ್ಧಾರಗಳ ಕಾಯಕ ಶರಣ ಪರಂಪರೆಯ ಒಮ್ಮತವನ್ನು ಸಾರುವುದಾಗಿದೆ. ಹೀಗೆ ಬಸವಣ್ಣನವರು ಶರಣರ ಮಹಾಸಂಗಮವನ್ನು ಸೇರಿಸಿ, ಕಲ್ಯಾಣದಲ್ಲಿ ಹನ್ನೆರಡನೆಯ ಶತಮಾನದ ಅಭಿವೃದ್ಧಿಯ ಪರ್ವವನ್ನು ಜಗತ್ತಿಗೆ ಸಾರಿದ ಕೀರ್ತಿವಂತರಾಗಿದ್ದಾರೆ. ಇಲ್ಲಿ ನೆರೆದ ಶರಣ ಪರಂಪರೆ ‘ದಹಿಸುವ ಬೆಂಕಿಯಿಂದ ಹಾರಿದ ಕಿಡಿಗಳಂತೆ’ ಸಿಡಿದು ಕಾಯಕ, ದಾಸೋಹ, ಜ್ಞಾನ ವೆಂಬ ತ್ರಿವಿಧ ದಾಸೋಹವನ್ನು ಸಮಾಜಕ್ಕೆ ಉಣಬಡಿಸಲು ಒಂದೊಂದು ಜ್ಯೋತಿಗಳಾಗಿ, ಬಸವ ಮಾರ್ಗದ ಬಿಂದುಗಳಾಗಿ ಕರ್ನಾಟಕದಾದ್ಯಂತ ಆಧ್ಯಾತ್ಮದ ನೆಲೆಯಾಗಿ ಪವಿತ್ರ ಶರಣರ ಕ್ಷೇತ್ರಗಳಾಗಿ ಮಾರ್ಪಾಡಾಗಿದೆ. ಅಂದು ಬಸವ ಹಚ್ಚಿದ ಹಣತೆಯು ಇಂದೂ ಸಹ ಆರದೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ.
ಹಚ್ಚುವುದಾದರೆ ದೀಪವನ್ನೇ ಹಚ್ಚು ಬೆಂಕಿಯನ್ನಲ್ಲ
ಆರಿಸುವುದಾದರೆ ನೋವನ್ನು ಆರಿಸು ನಗುವನ್ನಲ್ಲ ಎಂಬ
ದ ರಾ ಬೇಂದ್ರೆಯವರ ನುಡಿಯ ಸಾರಕ್ಕೆ ಸಂಪೂರ್ಣವಾಗಿ ಹೋಲಿಕೆಯಾಗುವ ಬಸವಣ್ಣನವರ ಕಾಯಕ, ಜೀವನ, ಆದರ್ಶ ಎಂದೆಂದು ಚಿರವಾಗುವಂತದ್ದು. ಅಲ್ಲದೆ ಅನುಸರಣೀಯವಾದಂತಹದ್ದು.
ಮಾತಿಗೆ ಮಾತು ಬೆಳೆಸಿ, ಸಂಘರ್ಷಗಳನ್ನು ತಂದೊಡ್ಡದೆ, ಕಾಯಕದಿ ಸಾಮಾಜಿಕ ಸಮಸ್ಯೆ ಗಳನ್ನು ನಿರ್ಮೂಲನೆ ಮಾಡಿ, ನವ ಸಮಾಜದ ನಿರ್ಮಾತೃಗಳಾಗಿ ವಿರೋಧಿಗಳನ್ನು ಬೆರಗುಗೊಳಿಸಿದ ಸಹನಶೀಲರು. ಕರುನಾಡ ಭೂಮಿಯಲ್ಲಿ ಅವತರಿಸಿ, ಜಗ ಬೆಳಗುವ ತ್ರಿವಿಧ ದಾಸೋಹ ವೆಂಬ ಹಣತೆಯಲ್ಲಿ ಭಕ್ತಿಯೆಂಬ ತೈಲವೆರೆದು ಕಾಯಕವೆಂಬ ಬತ್ತಿ ಇಟ್ಟು, ಪರಿಶ್ರಮವೆಂಬ ಜ್ಯೋತಿ ಹಚ್ಚಿ ಕೈಲಾಸವನ್ನು ನಿರ್ಮಿಸಿ ಬಸವಣ್ಣನವರು ಜಗಜ್ಯೋತಿಯಾದರು.
ಹಚ್ಚುವ ಬಸವ ದೀವಿಗೆಯ
ಅಂಧಕಾರ ತೊಲಗಿಸುವ ದಿವ್ಯಜ್ಯೋತಿಯ
ಜಡತ್ವ ಅಳಿದು ಸೃಜನಶೀಲತೆ ಬೆಳೆದು
ಸರ್ವಮನಗಳು ಕಾಯಕದಿ ಏಳಿಗೆಯಲ್ಲಿ ಮಿಂದು
ಕೈಲಾಸವ ನಿರ್ಮಿಸಲಿ ಭುವಿಯಲಿ ಎಂದೆಂದು
ಇದುವೇ ಬಸವ ಯುಗದ ದಿವ್ಯ ಸಾರವೆಂದ ನನ್ನೊಡೆಯ ಗುರು ಮಹಾದೇವ
ಸರ್ವರಿಗೂ ಬಸವ ನಮನಗಳು

ಬಾಗಳಿ ಮಹೇಶ್ ( ಬಾಮ )
ಕನ್ನಡ ಶಿಕ್ಷಕರು,