ಆಧುನಿಕ ಸಮಾಜಕ್ಕೆ ಬಸವಣ್ಣನವರ ಸಂದೇಶ

ಸಾಂಸ್ಕೃತಿಕ ನಾಯಕನೆಂದು ಹೆಗ್ಗಳಿಕೆಯಲ್ಲಿ, ಭಕ್ತ ಭಂಡಾರಿ ಮಹಾ ಮಾನವತವಾದಿ, ಕಲ್ಪವೃಕ್ಷದ ಕಡಲು, ಕಾಮಧೇನುವಿನಂತಹ ಮನಸ್ಸನ್ನು ಒಳಗೊಂಡ ಜೀವಂತ ಸಾಕ್ಷಿಯ ಬೆಳಗು ಬಸವಣ್ಣನವರು, ಅಷ್ಟೇ ಅಲ್ಲದೆ ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಸಹ ಕರೆಸಿಕೊಂಡವರು ಬಸವಣ್ಣನವರು. ಅದಕ್ಕಾಗಿಯೇ ಅಲ್ಲಮ ಪ್ರಭುಗಳು ಬಸವಣ್ಣನವರನ್ನು ಯುಗದ ಉತ್ಸಾಹ ಎಂದು ಕರೆದಿದ್ದಾರೆ, ಬಸವಣ್ಣನವರು ಕೇವಲ ವ್ಯಕ್ತಿಯಲ್ಲ ಒಂದು ಯುಗಮಾನದ ಶಕ್ತಿಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಯ ಅಲೆಯನ್ನು ಎಬ್ಬಿಸಿ ಸಂಚಲನವನ್ನು ಉಂಟು ಮಾಡಿದ್ದು ಮಾತ್ರವಲ್ಲದೆ ವಚನ ಚಳುವಳಿಯ ಕ್ರಾಂತಿಪುರುಷರು, ಭಕ್ತಿ ಭಂಡಾರಿ ಎನಿಸಿಕೊಂಡವರು ಅವರು. ಎಲ್ಲಾ ವರ್ಗದ ಜನರಿಗೆ ಲಿಂಗತಾರತಮ್ಯವಿಲ್ಲದೆ ಸಮಾನತೆಯ ತತ್ವದೊಂದಿಗೆ ಆದರ್ಶವಾದ ಬದುಕನ್ನು ಬದುಕಿ, ಬಾಳಿದ ಬಸವಣ್ಣನವರ ಬದುಕೇ ಒಂದು ಸಂದೇಶ, ಬಸವಣ್ಣನವರು ಜನರಲ್ಲಿ ವೈಚಾರಿಕತೆಯನ್ನು ಹೆಚ್ಚಿಸಿ ಮೂಢನಂಬಿಕೆ ಮತ್ತು ಆಧುನಿಕತೆಯ ಸಾಮಾಜಿಕ ಪಿಡುಗಾದ ಜಾತಿಪದ್ಧತಿಯನ್ನು ಇಲ್ಲವಾಗಿಸಲು ತಮ್ಮ ಜೀವನ ಮತ್ತು ಜೀವವನ್ನೇ ಮುಡುಪಾಗಿಟ್ಟರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ವಚನಗಳ ಮೂಲಕ ಸಾರಿದ  ಸದ್ವಿಚಾರಗಳು ಮತ್ತು ವೈಚಾರಿಕ ಮನೋಭಾವವನ್ನು ಬೆಳೆಸಲು ಅನುವಾದುದು ತಾವೇ ನಿರ್ಮಿಸಿದ ಅನುಭವ ಮಂಟಪ. ಈ ವೇದಿಕೆಯಲ್ಲಿ ಎಲ್ಲರು ಕಲೆತು ಕುಳಿತು ಸದ್ವಿಚಾರ ಸದಾಚಾರಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ವಿಚಾರಗಳ ಫಲಶ್ರುತಿಯಿಂದ ವಚನಗಳು ರಚನೆಯಾದವು.

ಬಸವೇಶ್ವರರ ಕಾಲದಲ್ಲಿ ಧರ್ಮವೇ ಎಲ್ಲದರ ಕೇಂದ್ರ ಬಿಂದುವಾಗಿತ್ತು. ಧರ್ಮವೆಂದರೆ ಆಧುನಿಕತೆಯಲ್ಲಿನ ರೊಚ್ಚಿಗೇಳಿಸುವಂತದ್ದಲ್ಲ ಬದಲಿಗೆ ದಯೆ, ಕರುಣೆ ಮಾನವೀಯ ನೆಲೆಯಲ್ಲಿ ಜೀವನದ ಸೆಲೆಯನ್ನು ಸಮೃದ್ಧಗೊಳಿಸುವ ಮನುಷ್ಯತ್ವದ ಚಟುವಟಿಕೆಗಳ ಒಟ್ಟು ಮೊತ್ತವೇ ಆಗಿತ್ತು.
ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ಧರ್ಮದ ಬಗ್ಗೆ ಹೊಸ ವ್ಯಾಖ್ಯಾನವನ್ನೇ ನೀಡಿ ಧರ್ಮದ ಹಿಂದಿನ ಮೂಲಸತ್ಯದ ಬೇರು ದಯ-ಕರಣೆ ಇವುಗಳನ್ನು ಹೊರತಾದ ಧರ್ಮ ಧರ್ಮವೇ ಅಲ್ಲ ಎಂಬ ಭಾವನೆ ಇವತ್ತಿಗೂ ಪ್ರಸ್ತುತ ಧರ್ಮ ರಾಜಕಾರಣದಲ್ಲಿ ಧರ್ಮವನ್ನು ಸ್ವಾರ್ಥಪರತೆಯಿಂದ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಬಂಡವಾಳ ಮಾಡಿಕೊಂಡಿರುವುದು ಶೋಚನೀಯವೇ ಸರಿ. ಅಲ್ಲದೆ ಮಠ ಮಂದಿರಗಳ, ಗುಡಿ ಗುಂಡಾರಗಳ ನಿರಾಕಣೆಯೂ ಬಸವಣ್ಣ ಮತ್ತು ಇತರ ವಚನಕಾರರ ಮೂಲ ಉದ್ದೇಶವಾಗಿತ್ತು. ಇದಕ್ಕೆ ಬಸವಣ್ಣನವರೇ ಹೇಳುವಂತೆ
ಉಳ್ಳವರು ಶಿವಾಲಯವ ಮಾಡುವರು!
ನಾನೇನ ಮಾಡುವ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
 ಶಿರವೇ ಹೊನ್ನ ಕಳಶವಯ್ಯ! ಕೂಡಲಸಂಗಮದೇವ ಕೇಳಯ್ಯ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
ಈ ವಚನದಲ್ಲಿ ನಶಿಸಿ ಹೋಗುವ ಉಳ್ಳವರ ದೇವಾಲಯಕ್ಕಿಂತ ಶಾಶ್ವತವಾದ ಜಂಗಮ ಜ್ಯೋತಿಯ ಅಸ್ಥಿತ್ವವನ್ನು ಎತ್ತಿ ಹಿಡಿದಿರುವುದು ನಿಜಕ್ಕೂ ಪ್ರಸ್ತುತತೆಯ ಕೇಂದ್ರಬಿಂದು. ಎಲ್ಲಿ ಹುಡುವುದು ಕಾಣದ ದೇವರನು ಹುಡುಕುವುದಾದರೆ ಹುಡುಕಬೇಕು ಪ್ರೀತಿ, ಕರುಣೆ, ಮಾನವೀಯತೆ, ಅಂತಃಕರಣದ ಭಾವದಲಿಯೇ ಹೊರತು ಇನ್ನೆಲ್ಲೂ ಅಲ್ಲ, ಅಂತೆಯೇ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ.. ಎಂಬ ಜಿ.ಎಸ್.ಶಿವರುದ್ರಪ್ಪನವರು ಕೂಡ ತಮ್ಮ ಕವಿತೆಯಲ್ಲಿ ಇದನ್ನೇ ಸಾರಿದ್ದಾರೆ.
ಆಡಂಬರ ಮತ್ತು ಡಾಂಬಿಕ ಭಕ್ತಿಯ ನಟನೆಯ ಬಗ್ಗೆ, ತೋರಿಕೆಯ ಭಕ್ತಿಯ ಸ್ವರೂಪ ಹೇಗೆ ಜನರನ್ನು ಶೋಷಣೆ ಮಾಡಿತ್ತಿದೆ ಎಂಬುದಕ್ಕೆ
ಕಲ್ಲ ನಾಗರ ಕಂಡಡ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ
 ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ
ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ಈ ವಚನವು ಒಂದು ಕ್ರಾಂತಿಕಾರಕವಾದ ವಚನವಾಗಿದೆ ಜನರ ಸ್ವಭಾವ ಅವನ ನಡೆಯೊಳಗಿನ ಢಂಬಾಚಾರ ಹೇಗೆ ವ್ಯಕ್ತವಾಗಿದೆ ಎಂದು ತಿಳಿಸುತ್ತಾ ಇನ್ನಾದರೂ ಎಚ್ಚರಿಕೆಯಿಂದ ವೈಚಾರಿಕವಾಗಿ ಬದುಕಬೇಕು ಎಂದು ತಿಳಿಸಿದ್ದಾರೆ.

ಭಕ್ತಿಯ ಮಾಡಲು ಆತ್ಮಶುದ್ಧಿ ತನುಶುದ್ಧಿ ಭಾವಶುದ್ಧಿ ಮುಖ್ಯ ಎಂದು ಸಹ ಹೇಳಿದ್ದಾರೆ. ನೈಜ ಭಕ್ತಿಯೇ ಪರಮಶ್ರೇಷ್ಠವಾದ ಭಕ್ತಿ ಎಂದು ಹೇಳಿ ಶಿವಪಥವನ್ನು ಅರಿಯುವ ದಾರಿಯ ಬಗ್ಗೆ ತಿಳಿಸುತ್ತಾರೆ.

ರಾಜಕೀಯ ದೊಂಬರಾಟದಲ್ಲಿ ಏನೆಲ್ಲವುಗಳು ಸಾಧ್ಯವಿದೆ ಹಾಗೂ ರಕ್ಷಕರೇ ಭಕ್ಷಕರಾದರೆ ಒದಗುವ ವಿಘಟನೆಯನ್ನು ಮತ್ತೊಂದು ವಚನ ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು/
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ/
ನಾರಿ ತನ್ನ ಮನೆಯಲ್ಲಿ ಕಳುವಡೆ/
ತಾಯ ಮೊಲೆವಾಲು ನಂಜಾಗಿ ಕೊಲುವಡೆ/
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ.
ಇಡೀ ಜಗತ್ತಿಗೆ ಬೆಂಕಿಯು ಹರಡಿಕೊಂಡು ಉರಿಯತೊಡಗುವ/ ಏರಿಯೇ ಕೆರೆಯ ನೀರೆಲ್ಲವನ್ನೂ ಬೇಲಿಯೇ ಬೆಳೆಯೆಲ್ಲವನ್ನೂ ಮೇಯುವ/ ಮನೆಯೊಡತಿಯೇ ತನ್ನ ಮನೆಯ ಒಡವೆ ವಸ್ತುಗಳನ್ನು ಕದಿಯುವ/ ತಾಯಿಯ ಎದೆಹಾಲೇ ಮಗುವಿನ ಸಾವಿಗೆ ಕಾರಣವಾಗುವ ಈ ಐದು ರೂಪಕಗಳ ಮೂಲಕ ವಚನಕಾರನು ಸಾಮಾಜಿಕ ಒಕ್ಕೂಟಗಳ ನಡುವೆ ಸಿಲುಕಿ ತೊಳಲಾಡುವ ವ್ಯಕ್ತಿಯ ಮೂಕವೇದನೆಯನ್ನು ಚಿತ್ರಿಸಿದ್ದಾನೆ.

ಜನಸಮುದಾಯದ ಒಳಿತಿಗೆಂದು ಮಾನವರೇ ಕಟ್ಟಿಕೊಂಡಿರುವ ಜಾತಿ,ಮತ,ಕುಟುಂಬ, ವಿದ್ಯೆ, ಆರೋಗ್ಯ, ನ್ಯಾಯ, ಆಡಳಿತದ ನೆಲೆಗಳನ್ನು ಸಾಮಾಜಿಕ ಒಕ್ಕೂಟಗಳೆಂದು ಕರೆಯುತ್ತಾರೆ. ಇವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತಿರುವಒಕ್ಕೂಟಗಳ ಗದ್ದುಗೆಯಲ್ಲಿರುವ ವ್ಯಕ್ತಿಗಳು ನೀಚರಾಗಿ, ಕ್ರೂರಿಗಳಾಗಿ, ವಂಚಕರಾಗಿ ನಡೆದುಕೊಳ್ಳತೊಡಗಿದಾಗ ವ್ಯಕ್ತಿಯ ಜನಸಮುದಾಯದ ಬದುಕು ನೂರೆಂಟು ಬಗೆಯ ಸಂಕಟಗಳಿಗೆ ಗುರಿಯಾಗಿ ನರಳತೊಡಗುತ್ತದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ. ಓದುಗರಿಗೆ, ಕೇಳುಗರಿಗೆ ಚೆನ್ನಾಗಿ ಮನದಟ್ಟಾಗುವಂತೆ ತಿಳಿಸಬೇಕೆಂಬ ಉದ್ದೇಶದಿಂದ ಬಸವಣ್ಣನವರು ತಾವು ಹೇಳಬೇಕಾದ ಸಂಗತಿಯನ್ನು ಮತ್ತೊಂದು ಸಂಗತಿಯೊಡನೆ ಜತೆಗೂಡಿಸಿ ಬಣ್ಣಿಸುವ ನುಡಿರಚನೆಯನ್ನು ‘ರೂಪಕ/ಶಬ್ದಚಿತ್ರ’ ಎಂದು ಕರೆಯುತ್ತಾರೆ. ಕಾಯುವೇ ಮನವೇ ಕೊಲ್ಲುವ ದಾರುಣ ನೀಚ ಪ್ರವೃತ್ತಿಗೆ ಆಧುನಿಕ ಜಗತ್ತು ಮುಂದಾಗಿರುವಾಗ ಮಾನವೀಯ ಮತ್ತು ನೈತಿಕ ಮೌಲ್ಯಗಳು ತಮ್ಮ ಅಸ್ವತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ.

ಒಟ್ಟಾರೆ ಬಸವಣ್ಣನವರು ಕತ್ತಲ ಮನೆಗೆ ಬೆಳಕ ಮುಡಿಸಲು ಆಗಮಿಸಿ ಬೆಳಕ ಜ್ಯೋತಿ, ಮಹಾಮಾನವತವಾದಿ, ಅಣ್ಣರ ಅಣ್ಣ ಭಕ್ತಿಗೆ ಸಮೃದ್ಧಿಯ ಬೆಡಗು, ವಿಶ್ವಮಾನವ ಎಂಬೆಲ್ಲ ನುಡಿದೀಪ ಹಚ್ಚಿದರೂ ಅವರು ಎಂದಿಗೂ ಆರದ ದೀಪ ಅವರ ರಚನೀಯ ವಚನಗಳು. ಅನುಗಾಲ ಬೆಳಗುವ ಬೆಳಕು. ಇಂದಿಗೂ ಬಸವಣ್ಣನವರು ಸರ್ವರ ಹೃದಯ ಮಂದಿರದಲ್ಲಿ ಅತ್ಯುನ್ನತವಾದ ಮಹತ್ವವನ್ನು ಪಡೆದುಕೊಂಡಿದ್ದಾರೆ. ವಚನಗಳ ಸಂದೇಶ ಅರ್ಥ ಮಾಡಿಕೊಂಡಿದ್ದೇ ಆದರೆ ಸಮಾಜದ ಕುರೂಪಗಳು ಬದಲಾಗಿ ಹೊಸ ಸ್ವರೂಪ ರೂಪವೆತ್ತಲು ಸಾಧ್ಯವಾಗುತ್ತದೆ. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದು ಅವರ ಆದೃಶ ಬದುಕನ್ನು ಹಾಗೂ ಅವರ ವಿದ್ವತ್ ಪೂರ್ಣವಾದ ವಚನಗಳ ಸಂದೇಶವನ್ನು ಆಧುನಿಕ ಯುವ ಮನಸ್ಸುಗಳಿಗೆ ದಾಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಂತೆಯೇ ಕೇಂದ್ರ ಸರ್ಕಾರವು ಸಂಸತ್ತಿನ ಭವನದಲ್ಲಿ  ಬಸವಣ್ಣನವರ ಆದರ್ಶವಾಗಿ ನೆಲೆ ನಿಲ್ಲುವ ಕಳಬೇಡ ಕೊಲಬೇಡ….. ವಚನವನ್ನು ಅಳವಡಿಸಿ ಬಸವಣ್ಣನವರ ಇರುವಂತಿಕೆಯನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಅಷ್ಟೇ ಅಲ್ಲದೇ ಇಂದು ಬಸವಣ್ಣನವರ 890ನೇ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಭಕ್ತಿಯ ನೆಲೆಯಿಂದ ಆಚರಣೆ ಮಾಡುತ್ತಿದ್ದೇವೆ ಆಚರಣೆಯೊಂದಿಗೆ ಅವರು ಸಾರಿರುವ ಸಂದೇಶ ಜಡ್ಡುಗಟ್ಟಿದ ಸಮಾಜವನ್ನು ಎಚ್ಚರಗೊಳಿಸಲಿ ಎಂಬುದೇ ನನ್ನ ಉದ್ದೇಶ ಈ ಲೇಖನ.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ,
ಹಾಗೂ ಹವ್ಯಾಸಿ ಬರಹಗಾರ,
ಮೈಸೂರು.

Leave a Reply

Your email address will not be published. Required fields are marked *