ಬೇಂದ್ರೆ ಜನಮಿಡಿತದ ವರಕವಿ

ಸಹಜಕವಿ ಆಡಿದರೆ ಹಾಡು. ಕಾವೇರಿದರೆ ಮಾತೆಲ್ಲ ಮಂತ್ರ. ಪದವಿಟ್ಟಾಗ ಪದಪದಕು ಪದವಿ. ಉರಿನಾಲಗೆಯ ನಡೆಮಡಿಯ ಮಲೆ ಐ- ತರುವ ತಾರಣಿ. ನುಡಿಗೆ ಗುಡಿಕಟ್ಟಿ ಮಾತನ್ನೆ ಮಾತೆ ಮಾಡಿದ ಪುಣ್ಯವಂತ. ಬಾಳುದ್ದಕೂ ಮುಳ್ಳಿನಾವುಗೆ ಮೆಟ್ಟಿ ನಡೆದಾತ. ಯಾತಕ್ಕು ಸೊಪ್ಪು ಹಾಕದೆ ನೋವ ನುಂಗಿ ಕಂಬನಿಯನ್ನೆ ನೀಲಮಣಿ ಮಾಡಿ ಬೆರಳಿಗೆ ಹರಳು, ಕೊರಳೆತ್ತಿ ಹಾಡಿದವ ಪಾಡಾಗಿ, ಕೆರೆಯ ನೀರನು ಕೆರೆಗೆ ಎರೆದು, ಈ ಮಣ್ಣಿಗೇ ನಕ್ಷತ್ರ ಲೋಕಗಳ ಕರೆದವನು. ಮುಚ್ಚಿದ್ದ ಅರ್ಥದ್ವಾರವ ಹಾರು ಹೊಡೆದು, ಕ್ಷಾರೋದಧಿಯ ಕಡೆದು, ಸುಧೆಯನ್ನೆತ್ತಿ ಕೊಟ್ಟವನು-ತನ್ನ ಕೊರಳಲ್ಲಿ ಗರಳವ ಧರಿಸಿ; ಸ್ವರದಲ್ಲಿ ಎದೆತಣಿವ ದೇವಗಂಗೆಯ ಹರಿಸಿ. ಎಂದು ವರಕವಿ ಬೇಂದ್ರೆಯವರ ಕುರಿತು ತಮ್ಮ ಮುಕ್ತಕಂಠದಿಂದ ಅಕ್ಷರ ಕುಂಚದಿಂದ ಕಡೆದು ನಿಲ್ಲಿಸಿದ್ದಾರೆ ಧೀಮಂತ ಕವಿ ಎಚ್. ಎಸ್. ವೆಂಕಟೇಶಮೂರ್ತಿ. ಅವರ ಅಕ್ಷಯ ಕಾವ್ಯದಿಂದ ಅನುರಣಿತವಾದ ಭಂಡಾರದಲ್ಲಿ ಅಡಗಿ ಕುಳಿತಿರುವ ಬೇಂದ್ರೆಯವ ಕಾವ್ಯದ ಖನಿ, ಸಾಹಿತ್ಯದ ಬನಿ, ವ್ಯಕ್ತಿತ್ವದ ಗಣಿ ಅನಾವರಣವಾಗುತ್ತದೆ. ಹಾಗೆ ನೋಡಿದರೆ ಬೇಂದ್ರೆಯವರು ಕನ್ನಡ ನಾಡಿಗೆ ದೊರಕಿದ ಮಾಣಿಕ್ಯ-ಕಾಮಧೇನು- ಕಲ್ಪವೃಕ್ಷ. ಕವನಗಳ ಒಡಲಲ್ಲಿ ರೂಪ ಲಾವಣ್ಯವ ಕಡೆದು ಬಾಗು ಬಳಕುಗಳ ಸೆರೆ ಹಿಡಿದು ಪದಗಳಲ್ಲಿ ಚಿತ್ರತ್ವವ ಬರೆದ ಚಿತ್ರಕಲಾವಿದರು ಬೇಂದ್ರೆಯವರು. ಬಡತನದ ಬೇಗೆಯಲ್ಲಿ ಬದುಕನ್ನು ಬರೆದು, ಬೆವರಿನ ಬೆಲೆಯಲ್ಲಿ ಜೀವನ ನಲಿದು ಅರಳಿಸಿದ ಶ್ರೇಷ್ಠ ಜನಮಿಡಿತ ಶಬ್ಧಗಾರುಡಿ ಎಂದು ಕರೆಸಿಕೊಂಡವರು ಬೇಂದ್ರೆಯವರು.
ಕವಿಯೇ ಆಗಲಿ ಸಾಹಿತಿಯೇ ಆಗಲಿ ಆತನಿಗೆ ಕರ್ಮಯೋಗವೇ ಕಾವ್ಯಯೋಗ ಎಂದು ದೃಢವಾಗಿ ನಂಬಿದ್ದ ಬೇಂದ್ರೆಯವರು ಈ ಬಗೆಯ ಕಾವ್ಯಯೋಗವನ್ನು ತಮ್ಮ ಕವಿತೆಗಳಲ್ಲಿ ನಿರೂಪಿಸಿದ್ದಾರೆ. ಎನ್ನ ಪಾಡು ಎನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ಎಂದು ರಸಪಾಕವನ್ನು ಕಾವ್ಯಪಾಕವಾಗಿ ಉಣಬಡಿಸಿದ ಕಾವ್ಯಬಾಣಸಿಗರೂ ಬೇಂದರೆಯವರಾಗಿದ್ದಾರೆ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಕವಿತೆಗಳನ್ನು ಮನಮುಟ್ಟುವಂತೆ ಹಾಡಿ ಬರೆದು ಸಹೃದಯ ಮನವನ್ನು ತಣಿಸಿದ್ದಾರೆ. ಅನುಭಾವಿಯ ನೆಲೆಯಲ್ಲಿ ತಾವು ಅನುಭವಿಸಿದ ಯಾತನೇ ಕೀರ್ತನೆಯಾಗುವ ತನಿವಣ್ಣಿನ ರಸವಾಗುವ ಬಗೆ ಮಾತ್ರ ಭಿನ್ನ-ವಿಭಿನ್ನ, ಈ ಮಾತಿನ ಬಗೆಗೆ ಒಂದು ಸಾದೃಶ್ಯದ ನೋಟ ಬೀರುವ ಕವಿತೆ ‘ನೀ ಹಿಂಗ ನೋಡಬ್ಯಾಂಡ ನನ್ನ, ನೀ ಹಿಂಗ ನೋಡಿದರೆ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ…..
ತಮ್ಮ ಮಗನನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದಾಗ ಹೆಂಡತಿಯ ಅಶಕ್ತ ನಿಲುವನ್ನು ಕಂಡು ಮೂರ್ತವೆತ್ತ ಕವಿತೆಯೇ ಇದಾಗಿದ್ದು, ಎಂತವನ ಕಲ್ಲು ಹೃದಯವನ್ನು ಹನಿಗಣ್ಣಾಗಿಸಿ ಕರಗಿಸುವ ಶಕ್ತಿ ಮಡದಿಯ ನೋವನ್ನು ಗುರುತಿಸಿ ತೋರಿದ ಅನುಕಂಪವು ಮಾತ್ರ ಮನಕ್ಕೆ ತಟ್ಟುವಂತದ್ದು. ಈ ಮೊದಲೇ ತಿಳಿಸಿದಂತೆ ಬಡತನದ ಮಡಿಲಲ್ಲಿಯೇ ಜೀವನ ಸವೆಸಿದ ಬೇಂದ್ರೆಯವರು ಬಡತನದಲ್ಲೂ ನನಗೆ ಅಹಂಕಾರವಿದೆ-ಹರಿದ ಅಂಗಿಯಲ್ಲು ಬಡತನವೇ ಇಣುಕಿ ನೋಡುತ್ತಿದೆ ಏನೋ ಎನ್ನುವ ಮಟ್ಟಿಗೆ ಬದುಕಿದವರು. ಆದರೆ ಬಡತನವು ಬೇಂದ್ರೆಯವರ ದಾಂಪತ್ಯ ಜೀವನಕ್ಕೆ ಸೋಂಕಾಗಿ ಕಾಡದೆ ಹಲವು ಪುಣ್ಯ ಕವಿತೆಗಳು ಜನುಮ ತಾಳಲು ಅನುವಾದ ಬಗೆ ಮಾತ್ರ ಗಮನಿಸಬೇಕಾದ ಅಂಶ. ಇದಕ್ಕೆ ಪುಷ್ಟಿಕರವಾಗಿ ಎದ್ದು ನಿಲ್ಲುವ ಕವಿತೆ
ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ನಿಜಕ್ಕೂ ಬೇಂದ್ರೆಯವರು ಆಶಾವಾದದ ಮೇರು ಶಿಖರ, ಅವರು ಬದುಕನ್ನು ಕಾಣುವ ನಿಲುವಿಗೆ ಇದು ಸಾಕ್ಷಿಗನ್ನಡಿ, ಪುಟ್ಟ ವಿಧವೆ ಕವಿತೆಯಲ್ಲಿ ಬಾಲ್ಯ ವಿವಾಹದಿಂದ ಒದಗುವ ಸಮಸ್ಯೆಯನ್ನು ಕಡೆದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಾಗಿ ಬಡತನ-ಸಿರಿತನ‌ ಕೊನೆತನಕ ನಿಲ್ಲುವುದೇ ಎನ್ನುತ ಭರವಸೆಯ ಹೊಸ್ತಿಲಲ್ಲಿ ನಿಂತು
ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂಬ ಮೂರು ಸಾಲುಗಳಲ್ಲಿಯೇ ಕರಿಯನ್ನು ಕನ್ನಡಿಯಲ್ಲಿ ಅಡಗಿಸುವಂತೆ ಬದುಕನ್ನು ಸೆರೆ ಹಿಡಿದ ಬೇಂದ್ರೆಯವರು ಕನ್ನಡಕ್ಕೆ ದಕ್ಕಿದ್ದು ಕನ್ನಡಿಗರ ಸುಕೃತವೇ ಸರಿ. ಕನ್ನಡತನದ ಬಗ್ಗೆ ಮಾತನಾಡುತ್ತಾ ಒಂದು ಕಡೆ ಅವರು ಹೇಳಿದ್ದು ಮಾತ್ರ ಇನ್ನು ಕಿವಿಯಲ್ಲಿ ಅನುರಣಿಸುವ ಮಾಧುರ್ಯದ ಮುತ್ತಿನ ಮಾತು ಕನ್ನಡಿಗರು ಕನ್ನಡವ ಕನ್ನಡಿಕರಿಸಬೇಕು. ಕನ್ನಡವನ್ನು ಉಸಿರಾಡದ ಹೊರತು ಕನ್ನಡ ಹಸಿರಾಗಲು ಸಾಧ್ಯವಿಲ್ಲ ಎಂಬ ಹಂಬಲ ಅವರ ಮಾತಿನ ತುಡಿತದಲ್ಲಿ ಅಡಗಿದೆ.
ಇಷ್ಟೆಲ್ಲಾ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸಿದ್ದು ಇಲ್ಲಿ ನಿಮಿತ್ತ ಮಾತ್ರ.

ಬೇಂದ್ರೆಯವರ ಜೀವನ ಮತ್ತು ಸಾಹಿತ್ಯದ ಹೆಜ್ಜೆಗುರುತು. ಬೇಂದ್ರೆಯವರು ಹುಟ್ಟಿದ್ದು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು. ಇಷ್ಟೇ ಅಲ್ಲದೆ ವಿಪುಲವಾದ ಸಾಹಿತ್ಯದ ಕೊಡುಗೆಯಿಂದ ಕನ್ನಡ ನಾಡಿನ ಜನಮಾನಸದಲ್ಲಿ ವರಕವಿ ಬೇಂದ್ರೆಯಾಗಿ ಎಲ್ಲರ ಹೃದಯ ಸಿಂಹಾಸನದಲ್ಲಿ ವಿರಾಜಮಾರಾಗಿ ಸೂರ್ಯ-ಚಂದ್ರರಂತೆ ಉಸಿರಾಗಿ-ಹಸಿರಾಗಿ-ಹೆಸರಾಗಿ ಇರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.

ಬೆಂದರೆ ಬೇಂದ್ರೆ ಆದಾರು ಕೆಲವರು,
ಬೆಂದವರೆಲ್ಲ ಎಲ್ಲಿ ಬೇಂದ್ರೆ ಆಗುವರು,
ಹುಟ್ಟಿದ ಹುಣಸೆಯ ಹೂವೆಲ್ಲ ಕಾಯಾಗುವುದೇ,
ಆ ಕಾಯಿ ಹಣ್ಣಾಗುವುದೇ ಅದರಂತೆ ನಮ್ಮ ಬೇಂದ್ರೆ,

ಎಲ್ಲರಿಗೂ ಪಾಡು ಇದ್ದೇ ಇದೆ ಆದರೂ
ನಮ್ಮ ಬೇಂದ್ರೆ ಪಾಡನ್ನು ಹಾಡಾಗಿಸಿ
ಕಲ್ಲು ಸಕ್ಕರೆಯ ಸವಿಉಣಿಸಿ ವರಕವಿಯಾದರು.

ತಿಳಿನೀರ ಅಲೆ ಮೇಲೆ ತಿಳಿಕವಿತೆಗಳ ಮೂಡಿಸಿ ಬರೆದು,
ನಾಡಿಗೆ ವಸಂತವ ಕೈ ಮಾಡಿ ಕರೆದು,
ಕವಿ ಮನವ ಕನ್ನಡದಿ ತೆರೆದು,
ಭೌತಿಕ ಸಿರಿಗಿಂತ ಬೌದ್ಧಿಕ ಸಿರಿಯಲ್ಲಿ ಮೆರೆದು,
ನಾಕುತಂತಿಯಲ್ಲಿ ಸ್ವರಾಲಾಪ ಮಿಡಿದು,
ಮುಡಿಗೇರಿತು ಜ್ಞಾನಪೀಠವು ಒಲಿದು…

ನಗುತಿರಲಿ ಕವಿಮನ ಅರಳಲಿ ಹೂಬನ,
ಬಾಡದಿರಲಿ ಸಹೃದಯತನ,
ಅದುವೇ ಕವಿ ಕರ್ಣರಸಾಯನ,
ನಾಡಿಗೆ ಸಂಪತ್ತು ವರಕವಿಯ ಕವನ,
ನಿಮಗಿದೋ ನಮ್ಮ ಅನಂತ ಅನಂತ ನಮನ…

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ,
ಹವ್ಯಾಸಿ ಬರಹಗಾರ,
ಮೈಸೂರು.

Leave a Reply

Your email address will not be published. Required fields are marked *