ನಗರದಲ್ಲಿ‌ ವಿಶೇಷ ಗಮನ ಸೆಳೆದ ಬೈಸಿಕಲ್ ಜಾಥಾ

ಚಾಮರಾಜನಗರ: ಸುಸ್ಥಿರ ಭವಿಷ್ಯಕ್ಕಾಗಿ ಎಂಬ ಸದಾಶಯದೊಂದಿಗೆ ನಗರದಲ್ಲಿಂದು ನಡೆದ ಬೈಸಿಕಲ್ ಜಾಥಾ ವಿಶೇಷ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜನೆಯಾಗಿದ್ದ ಬೈಸಿಕಲ್ ಜಾಥಾ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕೇಂದ್ರ ಆವರಣದ ಬಳಿ ಚಾಲನೆಗೊಂಡಿತು. ತದನಂತರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯವಾಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಹಸಿರು ನಿಶಾನೆ ತೋರುವ ಮೂಲಕ ಬೈಸಿಕಲ್ ಜಾಥಾಗೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಅವರು, ಖೇಲೋ ಇಂಡಿಯಾ ಯೋಜನೆಯ ಫಿಟ್ ಇಂಡಿಯಾ ಉಪಕ್ರಮದ ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಸಲುವಾಗಿ ನಗರದಲ್ಲಿ ಬೈಸಿಕಲ್ ಜಾಥಾವನ್ನು ಏರ್ಪಡಿಸಲಾಗಿದೆ.
ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ದೈಹಿಕವಾಗಿ ಚಟುವಟಿಕೆಯಿಂದ ಇರಲು ಬೈಸಿಕಲ್ ಸವಾರಿ ಅನುಕೂಲವಾಗಿದೆ ಎಂದರು.

ಸ್ವಾಮಿವಿವೇಕಾನಂದರು ಹೇಳಿರುವ ರೀತಿಯಲ್ಲಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಹೀಗಾಗಿ ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.

ಈ ಹಿಂದೆ ಮಕ್ಕಳು ಮನೆಯಿಂದ ಹೊರ ಬಂದು ಆಟವಾಡುತ್ತಿದ್ದರು.ಆದರೆ ಇಂದು ಮಕ್ಕಳು ಟಿ.ವಿ. ಮೊಬೈಲ್ ಪ್ರಭಾವಕ್ಕೆ ಒಳಗಾಗಿ ಹೊರಗೆ ಆಟವಾಡುವುದು ಕಡಿಮೆಯಾಗುತ್ತಿದೆ.ಮನೆಯ ಒಳಗಿನ ಆಟಗಳಿಗೆ ಮಾತ್ರ ಆಸಕ್ತಿ ತೋರುತ್ತಿದ್ದಾರೆ.ಈ ಬೆಳವಣಿಗೆ ಆರೋಗ್ಯ ಕಾರಣದಿಂದ ಒಳ್ಳೆಯದಲ್ಲ ಎಂದರು.

ಇಂದಿನ ಸೈಕಲ್ ಜಾಥಾದಲ್ಲಿ ಮಕ್ಕಳು ಸಹ ಪಾಲ್ಗೊಂಡ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ಮಾತನಾಡಿ, ಬೈಸಿಕಲ್ ಆರೋಗ್ಯದ ದೃಷ್ಠಿಯಿಂದ ಒಂದು ಒಳ್ಳೆಯ ಸಾಧನ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯಕ್ಕೆ, ಪರಿಸರಕ್ಕೆ ಪೂರಕವಾಗಿರುವುದು ಬೈಸಿಕಲ್ ಬಳಕೆ. ಇದರಿಂದ ವಾಯುಮಾಲಿನ್ಯ ತಡೆಗಟ್ಟಬಹುದು. ವೈಯುಕ್ತಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಬೈಸಿಕಲ್ ಬಳಕೆಯಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್,ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿದರು.

ಡಿವೈಎಸ್‌ಪಿ ಲಕ್ಷ್ಮಯ್ಯ , ಸೋಮಣ್ಣ, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಚಾಲೇಂಜರ್‍ಸ್ ಸ್ಕೇಟ್ ಅಕಾಡೆಮಿ ತರಬೇತುದಾರ ಫುರ್ಖಾನ್ ಪಾಷಾ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *