ಬದುಕು ಎಂದಿಗೂ ನಿಂತ ನೀರಲ್ಲ ಅದು ಸದಾ ಕಾಲ ಹರಿಯುವ ತೊರೆ. ನಿಂತ ನೀರಾದ ಬದುಕು ಕೆರೆ ಎಂಬುದು ಕರೆಸಿಕೊಳ್ಳುತ್ತದೆ, ಆದರೆ ಹರಿಯಿತ್ತಾ ಸಾಗಿದಾಗ ತೊರೆ ಎಂದು ಕರೆಸಿಕೊಂಡು ಜೀವ ಚೈತನ್ಯದ ಚಿಲುಮೆಯನ್ನು ತನ್ನೊಳಗೆ ಗರ್ಭಿಕರಿಸಿಕೊಳ್ಳುತ್ತದೆ. ಅಟ್ಮೇಲೆ ಒಲೆ ಉರಿತು ಕೆಟ್ಮೇಲೆ ಬುದ್ಧಿ ಬಂತು, ಕಲ್ತಿದ್ ಬುಡೆ ಕಲ್ಕೇತಿ ಅಂದ್ರೆ ಊರ್ಬಿಟ್ರು ಬಿಡಲ್ಲ ಅಂದ್ಲಂತೆ, ಹುಟ್ಗುಣ ಸುಟ್ರು ಹೋಗಲ್ಲ ಎಂಬೆಲ್ಲ ಮಾತುಗಳು ಬದಲಾಗು, ಬದಲಾವಣೆಗೆ ನೀ ಮೊದಲಾಗು ಎಂದೇ ತಿಳಿಸುತ್ತಿವೆ. ಅನುಪಯುಕ್ತವೆನಿಸಿದ ಅಕಾರ್ಯಕ್ಕೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಅಗತ್ಯವಾದ ಕಾರ್ಯಕ್ಕೆ ತನ್ನ ಮನವನ್ನು ಒಗ್ಗಿಸಿಕೊಂಡರೆ ಅನರ್ಘ್ಯವಾದ ಕಾರ್ಯ ಸಾಧನೆಯನ್ನು ಮಾಡುವುದರಲ್ಲಿ ಅನುಮಾನವೇ ಇಲ್ಲ. ಲೇಸ ಮರೆತು ಕಷ್ಟಕ್ಕೆ ಕಡಿದಾಡುವವರೇ ಜಗದಲ್ಲಿ ತುಂಬಿರುವಾಗ ಬದಲಾಗುವ ಮನಸುಗಳು ಬದಲಾಗುವುದಾದರೂ ಎಲ್ಲಿ. ಬದಲಾವಣೆ ಜಗದ ನಿಯಮ. ಹೌದು ಸದಾ ಕಾಲ ಹರಿಯುವ ನದಿಯು ಬದಲಾಗುತ್ತದೆ. ಬದಲಾಗಬೇಕು ನಿಜ ಹಾಗೆಂದ ಮಾತ್ರಕ್ಕೆ ನಮ್ಮನ್ನು ನಾವು ಗುರುತಿಸಲಾರದಷ್ಟು, ಮೈ ಮರೆತು ಹೋಗುವಷ್ಟು ಬದಲಾಗಬಾರದು. ವ್ಯಕ್ತಿ ಬದಲಾವಣೆಗೆ ಸದಾ ಹಂಬಲಿಸುತ್ತಿರುತ್ತಾನೆ. ಅದಕ್ಕಾಗಿಯೇ ಹೊಸ ಹೊಸ ವಸ್ತುಗಳು ಉತ್ಪನ್ನವಾಗುತ್ತಿರುವುದು. ಅವುಗಳನ್ನು ಹೊಂದುವುದರಿAದ ತಮ್ಮಲೇನೋ ವಿಭಿನ್ನತೆಗೆ ಮೇಲ್ಪಂಕ್ತಿಯಾಗುತ್ತದೆ ಎಂದು, ಇಲ್ಲವೇ ಒಣಪ್ರತಿಷ್ಠೆಗೆ ಕೊಂಬು ಮೂಡಿಸಲು ಸಹಕಾರಿಯಾಗುತ್ತದೆ ಎಂಬ ಮತಿಯಭ್ರಾಂತಿಗೆ ಇಂದಿನ ಜನಾಂಗ ಒಳಗಾಗಿದೆ. ಅದರ ಮುನ್ನೆಲೆಯಿಂದಲೇ ನವನಾಗರೀಕತೆಯ ಜೀವನ ಜೀವಂತಿಕೆ ಪಡೆದು ಉಸಿರಾಡುತ್ತಿದೆ.
ಸಾಮಾನ್ಯವಾಗಿ ಬದಲಾವಣೆ ಎಂದರೆ ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವುದು, ಮಾರ್ಪಾಡು ಮಾಡಿಕೊಳ್ಳುವುದು ಎಂಬರ್ಥವಿದೆ. ಅಂತೆಯೇ ಬದಲಾಗುವುದೆಂದರೆ ಇರುವ ಸ್ಥಿತಿಯಿಂದ ಕದಲುವುದು ಎಂದರ್ಥ. ಅಂದರೆ ಇರುವ ಸ್ಥಿತಿಯಿಂದ ಉತ್ತಮತ್ವಕ್ಕೆ ಏರುವುದು ಇಲ್ಲವೆ ಇರುವುದಕ್ಕಿಂತಲೂ ಅಧೋಗತಿಗೆ ಜಾರುವುದು. ಮೊದಲ ಸ್ಥಿತಿ ಅನುಸರಣ ಯೋಗ್ಯವಾಗಿರುತ್ತದೆ, ಎರಡನೇಯ ಸ್ಥಿತಿ ಯೋಗ್ಯರನ್ನು ಅಯೋಗ್ಯರನ್ನಾಗಿ ಮಾಡುತ್ತದೆ. ಅದಕ್ಕಾಗಿಯೇ ಭಕ್ತಿಭಂಡಾರಿ ಬಸವಣ್ಣನವರು
ನೂರನೋದಿ, ನೂರ ಕೇಳಿದಡೇನು?
ಆಸೆ ಹರಿಯದು, ರೋಷ ಬಿಡದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ
ಜಾತಿ ಡಂಬರ ನೋಡಿ ನಗುವ
ನಮ್ಮ ಕೂಡಲಸಂಗಮದೇವ.
ಆದರೆ ಆಸೆಯನ್ನು ಬಿಡದೆ, ಕ್ರೋಧವನ್ನು ತ್ಯಜಿಸದೆ ಎಷ್ಟು ಓದಿದರೇನು? ಎಷ್ಟು ಕೇಳಿದರೇನು? ಅವರು ಮಡಿ ಸ್ನಾನ ಮಾಡಿದರೂ ಪವಿತ್ರವಾಗಲೂ ಸಾಧ್ಯವಿಲ್ಲ, ಮಾತಿನಲೊಂದು ಮನದಲ್ಲೊಂದು ಇರುವ ಜಾತಿ ಜಾತಿ ಎನ್ನುವವರ ನೋಡಿ ನಗುತ್ತಿದ್ದಾನೆ ನಮ್ಮ ಕೂಡಲಸಂಗಮದೇವ ಎಂಬ ಮಾತು ಅಕ್ಷಶಃ ಸತ್ಯವಾದುವು. ಎಷ್ಟೆಲ್ಲಾ ಧರ್ಮಗ್ರಂಥಗಳನ್ನು, ವೇದ, ಉಪನಿಷತ್ತುಗಳು, ಆಗಮ-ಶಾಸ್ತçಗಳು, ವ್ಯಕ್ತಿತ್ವ ವಿಕಶನದ ಹೊತ್ತಗೆಗಳನ್ನು, ವೈಚಾರಿಕ ಸಾಹಿತ್ಯವನ್ನು, ವಚನಗಳನ್ನು ಓದಿದರೂ, ಏನ್ನೆಲ್ಲಾ ಪುರಾಣ, ಪುಣ್ಯಕಥೆಗಳನ್ನು ಪಾಂಡಿತ್ಯ ಪೂರ್ಣ ಉಪನ್ಯಾಸಗಳನ್ನು ಕೇಳಿದರೂ ವ್ಯಕ್ತಿಯು ಏಕೆ ಬದಲಾಗುವುದಿಲ್ಲ ಬದಲಿಗೆ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಭಾವ ದೂರವಾಗಿ ಬದಲಾವಣೆಗೆ ಮೈ ಒಡ್ಡಿಕೊಳ್ಳಬೇಕು.
ಎರಡು ಬೇರೆ ಬೇರೆ ಶ್ವೇತ ವರ್ಣದ ಬಟ್ಟೆಗಳಿದ್ದು ಒಂದು ಬಟ್ಟೆಗೆ ನೀಲಿ ಮತ್ತು ಮತ್ತೊಂದು ಬಟ್ಟೆಗೆ ಕಾವಿಯನ್ನು ಹಾಕಿ ಪರಿಕ್ಷಿಸಿದರೆ ನೀಲಿ ಬಣ್ಣ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಆದರೆ ಕಾವಿ ತನ್ನ ಬಣ್ಣವನ್ನು ಎಂದಿಗೂ ಬಿಡದೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತದೆ. ಅದೇ ರೀತಿ ನಾವು ನೀಲಿಗೆ ಅದ್ದಿರುವ ವಸ್ತçಗಳಾಗದೆ ಕಾವಿ ಬಣ್ಣಕ್ಕೆ ಅದ್ದಿರುವ ವಸ್ತçಗಳಾಗಬೇಕು. ಇದೇ ನಿಜವಾದ ಬದಲಾವಣೆ. ಅರಿವಿನಿಂದ ಗಳಿಸಿಕೊಂಡ ಆದರ್ಶಗಳನ್ನು ಗಾಳಿಗೆ ತೂರಿ ಬಿಡದೆ ಅವುಗಳನ್ನು ಅಂತರAಗದಲ್ಲಿ ಹಿಡಿದಿಟ್ಟುಕೊಂಡು ಮುಂದೆ ಸಾಗಬೇಕು. ಅದು ಅಷ್ಟು ಸುಲಭದ ಮಾತಲ್ಲ. ವ್ಯಕ್ತಿಯ ಒಳ ಮನಸ್ಸು ಬದಲಾವಣೆಯನ್ನು ತಡೆಯುತ್ತಿರುತ್ತದೆ. ತನ್ನ ಬದಲಾವಣೆಗೆ ತಾನೇ ಮುಳ್ಳಾಗುತ್ತಿರುತ್ತದೆ. ಒಳಗಿನ ಆ ಮುಖವನ್ನು ಎದುರಿಸುವುದು ಸರಳ ಸುಲಭವಲ್ಲ ಆಗೆಂದರೆ ನೈಜತೆಗೆ ನಾವು ಮುಖಾಮುಖಿಯಾಗುವುದು ಎಂದರ್ಥ. ಹೊರ ಮುಖ ನಾವೇ ನಿರ್ಮಿಸಿಕೊಂಡ ಭ್ರಮಾಲೋಕವಾಗಿರುತ್ತದೆ. ಆ ಭ್ರಮಾಲೋಕದಲ್ಲಿ ನಾನೇ ಸರಿ ನನ್ನದೆ ಸತ್ಯ ಎಂಬ ಒಣ ಧೋರಣೆಗಳು ಮನವನ್ನು ಆಳುತ್ತಿರುತ್ತವೆ. ನಾವು ಸಮಸ್ಯೆಗಳನ್ನು, ತಪ್ಪುಗಳನ್ನು ಜಗದಲ್ಲಿ ಹುಡುಕುತ್ತಿರುತ್ತೇವೆ ಆದರೆ ನಮ್ಮೊಳಗಿನ ಆ ತಪ್ಪುಗಳ ಬಗ್ಗೆ ಸ್ವಲ್ಪವೂ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಾವು ಬದಲಾದರೆ ಸುತ್ತಣ ಜಗತ್ತು ಬದಲಾಗುತ್ತದೆ ಎಂಬ ಸಾಮಾನ್ಯ ವಿಚಾರವನ್ನು ತಿಳಿಯದ ಮಹಾಶಯರು ಇರುತ್ತಾರೆ. ಎಲ್ಲಿಯೋ ಓದಿದ್ದು, ಕೇಳಿದ್ದು ನಿರುಮ್ಮಳವಾಗಿ ಕೈಬೀಸಿ ಬಯಲ ಹೆಜ್ಜೆಯನ್ನು ಹಾಕಲು ವ್ಯವಸ್ಥೆ ಮಾಡಿದಾಗಲೂ ಆಕಾಶದಲ್ಲಿ ಹಾರಲು ಆಗದಷ್ಟು ರೆಕ್ಕೆಗಳು ಬಲುಭಾರವಾಗಿರುತ್ತವೆ. ಅದಕ್ಕೆಲ್ಲಾ ನಾವು ಜೋತು ಬಿದ್ದಿರುವ ನಂಬಿಕೆಗಳು, ಆಚರಣಾ ವಿಷಯಗಳು ನಮ್ಮನ್ನು ಸೆರೆಮನೆಯ ಬಂಧಿಖಾನೆಯಲ್ಲಿ ಬದಲಾವಣೆಯ ಸುಳಿಗಾಳಿಯ ಸ್ಪರ್ಶವನ್ನು ಸವಿದಷ್ಟು ಬಂಧಿಸಿರುತ್ತವೆ.
ವ್ಯಕ್ತಿಯು ನಿತ್ಯ ಜೀವನದಲ್ಲಿ ಅರಿತೋ ಅರಿಯದೆಯೋ ನೂರಾರು ತಪ್ಪುಗಳನ್ನು ಕೈಗೊಳ್ಳುತ್ತಿರುತ್ತಾನೆ ಆದರೆ ಅದೇ ತಪ್ಪುಗಳನ್ನು ಪದೆ ಪದೆ ಮಾಡದೆ ಹೊಸ ತಪ್ಪುಗಳಿಗೆ ಅವಕಾಶ ಮಾಡಿಕೊಡಬೇಕು. ಏಕೆಂದರೆ ತಪ್ಪು ಮಾಡುವುದು ಸಹಜ ತಿದ್ದಿ ನಡೆಯೋನು ಮನುಜ ಅಂತೆಯೇ ನಾವು ಮಾಡಿದ ತಪ್ಪುಗಳಿಂದಲೂ ಕಲಿಯಬೇಕಾಗಿರುವುದು ಅಪಾರವಾಗಿರುತ್ತದೆ. ಅಂತಹ ತಪ್ಪುಗಳಿಂದ ನಮ್ಮ ನಡೆಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ತರಗತಿಯನ್ನು ಬೋಧಿಸುವಾಗ ಸಾಕಷ್ಟು ಅನುಭವದ ಮತ್ತು ಸ್ಪೂರ್ತಿದಾಯಕವಾದ ಕಥೆಗಳನ್ನು ಹೇಳುತ್ತಲೇ ಪಾಠವನ್ನು ಬೋಧಿಸುವುದು ನನ್ನ ಹವ್ಯಾಸವಾದರೂ ವಿದ್ಯಾರ್ಥಿ ಮಹಾಶಯರು ಅವುಗಳಿಗೆ ವಿಮುಖರಾಗಿಯೇ ವರ್ತಿಸುವುದನ್ನು ಕಂಡಾಗ ಮನಕೆ ದುಗುಡವಾಗುತ್ತದೆ. ಕಾಪಿ ಮಾಡುವುದು ನಮ್ಮ ಆಜನ್ಮ ಸಿದ್ಧಹಕ್ಕು ಎಂಬAತೆ ತಮ್ಮ ಹಕ್ಕನ್ನು ಅದೆಗೋ ಕಣ್ಣಂಚಲ್ಲೇ ಚಲಾಯಿಸಿ ಬಿಟ್ಟಿರುತ್ತಾರೆ. ಈ ತಪ್ಪಿನ ಅರಿವಾಗುವುದಾದರೂ ಎಂದು ಕಾದು ನೋಡಬೇಕಿದೆ. ನಮ್ಮ ಬೋಧನೆ ಅವರ ಪಾಲಿಗದುವೆ ವೇದನೆ, ರೋಧನೆ ಎನಿಸುತ್ತದೋ ಏನೋ ಅರಿಯದು. ಕೋಣನ ಮುಂದೆ ಕಿಂದರಿ ಬಾರಿಸಿದಂತೆ ಮುಂದುವರೆದು ಕುರುಡನ ಮುಂದೆ ಎಷ್ಟೇ ಅದ್ಭುತ ನೃತ್ಯ ಮಾಡಿದರೇನು?, ಕಿವುಡನ ಎದುರು ಸುಶ್ರಾವ್ಯವಾಗಿ ಹಾಡಿದರೇನು? ಇಬ್ಬರೂ ಆ ಎರಡು ಅಮೋಘ ಪ್ರತಿಭೆಯನ್ನು ಆಸ್ವಾದಿಸಲಾರರು. ಆದ್ದರಿಂದ್ದ ಪ್ರತಿಯೋರ್ವರೂ ತಮ್ಮ ತಮ್ಮ ಮಿತಿಯನ್ನು ಅರಿತುಕೊಂಡು ನಡೆಯದಿದ್ದರೆ ನಮ್ಮ ವ್ಯಕ್ತಿತ್ವ ಅರಳುವುದಿಲ್ಲ.
ಹವ್ಯಾಸ ಬದಲಿಸು ಹಣೆ ಬರಹ ಬದಲಾದೀತು
ದೃಷ್ಟಿ ಬದಲಿಸು ದೃಶ್ಯ ಬದಲಾದೀತು.
ದೋಣಿ ಬದಲಿಸುವ ಅಗತ್ಯವಿಲ್ಲ
ದಿಕ್ಕು ಬದಲಾಯಿಸಿದರೆ ಸಾಕು,
ಬದುಕಿನ ದಡವನ್ನು ಮುಟ್ಟಬಹುದು
ಹಾಗೆಯೇ ಸಾಧನೆಯ ಶಿಖರವನ್ನು ಏರಬಹುದು||.
ಈ ಅಮೃತವಾಣಿಗೆ ಇಂಬುಗೊಡುವಂತ ನೀತಿಕಥೆಯೊಂದು ಪ್ರಸ್ತುತ ಲೇಖನವನ್ನು ಗಟ್ಟಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಆ ಕಥೆ ಈ ರೀತಿ ಇದೆ. ಒಂದು ವಠಾರ ವಠಾವರವೆಂದರೆ ಕೇಳಬೇಕು ಸಾಕಷ್ಟು ಸಂಸಾರಗಳು ವಾಸವಾಗಿರುತ್ತವೆ. ಅದರಲ್ಲಿ ಒಂದು ಮನೆಗೆ ನವದಂಪತಿಗಳು ಹೊಸದಾಗಿ ಬಾಡಿಗೆಗೆ ಬರುತ್ತಾರೆ. ಅಕ್ಕ-ಪಕ್ಕದವರಿಗೆ ಕುತೂಹಲ ಅಲ್ಲಲ್ಲ ಕೆಟ್ಟ ಕುತೂಹಲ ಯಾಕೆಂದರೆ ನಮ್ಮ ಜನರ ಸ್ವಭಾವವೇ ಅಷ್ಟು ಅನಿಸುತ್ತದೆ ತನ್ನ ತಟ್ಟೆಯಲ್ಲಿ ಹೆಗಣ ಸತ್ತು ಬಿದ್ದಿದ್ದರೂ ಪಕ್ಕದವರ ತಟ್ಟೆಯಲ್ಲಿ ಸತ್ತ ನೊಣವ ತೋರಿಸಿ ತಾವೇನೋ ಮಹಾನ್ ಘನಕಾರ್ಯ ಮಾಡಿದೆವು ಎಂಬ ಜಂಬದಿAದ ಬೀಗುವವರಿಗೇನು ಕಮ್ಮಿ ಇಲ್ಲ. ಇಂತದ್ದೆ ಒಂದು ಮನಸ್ಥಿತಿಯ ಹೆಂಗಸು ಮನೆಯ ಎದುರಲ್ಲೇ ವಾಸಿಸುತ್ತಿರುತ್ತಾಳೆ. ಒಂದೆರಡು ದಿನಗಳು ಕಳೆಯಲು ನವದಂಪತಿಯ ಹೆಂಡತಿ ಬೆಳಗ್ಗೆ ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕಿರುವುದನ್ನು ಎದುರು ಮನೆಯ ಹೆಂಗಸು ಕಿಟಕಿಯಿಂದಲೇ ನೋಡುತ್ತಾ “ನೀಟಾಗಿ ಬಟ್ಟೆ ಒಗೆಯಲು ಈಕೆಗೆ ಗೊತ್ತಿಲ್ಲದಿರಬಹುದು ಅಲ್ಲವಾದರೆ ಕೊಳೆಯು ಹೋಗುವಂತ ಸೋಪು ಅವಳಲ್ಲಿ ಇಲ್ಲದಿರಬಹುದು. ಇದು ಪ್ರತಿ ದಿನದ ಸುದ್ದಿಯಂತೆ ಎದುರು ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲ ಕಿಟಕಿಯಿಂದ ನೋಂಡುತ್ತಲೇ ತನ್ನ ಪತಿಯೊಂದಿಗೆ ಕುಹಕವಾಡುತ್ತಾ ಇರಲು ಆತ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದು ಬಿಡುತ್ತಿದ್ದ. ಹೀಗೆ ಕಾಲ ಉರುಳಿತು. ಒಂದು ದಿನ ಬೆಳಗ್ಗೆ ಎದುರಿಗೆ ನೋಡಿದಾಗ ಒಣಗಿಸಲು ನೇತು ಹಾಕಿದ್ದ ಬಟ್ಟೆಗಳು ಶುಚಿಯಾಗಿರುವುದನ್ನು ಕಂಡು ಅತ್ಯಾಶ್ಚರ್ಯದಿಂದ ತನ್ನ ಪತಿಯೊಂದಿಗೆ “ರೀ ನೋಡಿ ಆಕೆ ಇಂದು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಯಾರಿಂದಲೋ ಕಲಿತ್ತಿದ್ದಾಳೆ ಎನಿಸುತಿದೆ. ನನಗಂತೂ ಆಕೆಯನ್ನು ನೆನೆಸಿಕೊಂಡರೆ ತಡೆಯಲಾರದ ನಗು ಬರುತ್ತಿದೆ” ಎಂದು ನಗುವಿನ ಕಟ್ಟೆ ಒಡೆಯುವಷ್ಟು ಗಹಗಹಿಸುತ್ತಿರಲು, ಪತಿ ಮಹಾಶಯ ಇಂದು ನೀನು ನಿದ್ದೆಯ ಮಂಪರಿನಿಂದ ಏಳುವುದಕ್ಕೆ ಮೊದಲೇ ನಾನು ಎದ್ದು ನಮ್ಮ ಮನೆಯ ಕಿಟಕಿ ಗಾಜುಗಳನ್ನು ಒಂದು ರವಷ್ಟು ಧೂಳಿಲ್ಲದಂತೆ ಶುಚಿಗೊಳಿದೆ ಎಂದು ಹೇಳಿದ ಗಂಡನ ಮಾತಿಗೆ ದಂಗು ಬಡಿದ ಮೋರೆಯನ್ನು ಒರೆಸಿಕೊಳ್ಳುತ್ತಾ ತನ್ನ ತಪ್ಪಿಗಾಗಿ ತನ್ನನ್ನೇ ಹಳಿದುಕೊಳ್ಳುವಂತಾಯಿತು.
ಆಕೆಗೆ ತನ್ನ ಮಾತೆ ಉಗುಳಿನಂತೆ ಮುಖಕ್ಕೆ ರಾಚುತ್ತಿತ್ತು. ಇಂತಹ ಎಷ್ಟೋ ಮಂದಿ ತನ್ನ ತಪ್ಪುಗಳನ್ನೇ ಮರೆ ಮಾಡಿ ಮತ್ತೊಬ್ಬರ ತಪ್ಪುಗಳನ್ನು ಕೆದಕುವ ಕೆಲಸದಲ್ಲಿ ನಿಸ್ಸೀಮರಾಗಿರುತ್ತಾರೆ. ಅಂಥವರು ತಮ್ಮ ಒಳಗಣ್ಣಿನ ಕಿಟಕಿಯ ಧೂಳನ್ನು ತೆಗೆಯದ ಹೊರತು ಸಮಾಜದಲ್ಲಿ ಇಲ್ಲದಿರುವ ಧೂಳು ಹೋಗುದಿಲ್ಲ. ಅದರೊಂದಿಗೆ ಸಮಾಜವನ್ನು ನೋಡುವ ಕಣ್ಣು ಕೂಡ ಬದಲಾಗಬೇಕು. ಹೇಗೆಂದರೆ ನಾವು ಮನೆಯಿಂದ ದೇವಾಲಯಕ್ಕೆ ಪೂಜೆಗೆಂದು ಬಾಳೇಹಣ್ಣು, ಕಾಯಿ, ಕರ್ಪೂರ, ಗಂಧದ ಕದ್ದಿ ಇತ್ಯಾದಿ ಇತ್ಯಾದಿ ತೆಗೆದು ಹೋಗುತ್ತಿರುತ್ತೇವೆ ಮನೆಯಿಂದ ತೆಗೆದುಕೊಂಡು ಹೋಗುತ್ತಿರುವ ಹಣ್ಣು ಕೇವಲ ಹಣ್ಣು ಮಾತ್ರ, ಅದೇ ದೇವಾಲದ ಒಳಗೆ ಹೊರಗೆ ಬಂದಾಗ ಹಣ್ಣು ಹಣ್ಣಾಗಿ ಉಳಿದಿರುವುದಿಲ್ಲ ಅದು ಪ್ರಸಾದವಾಯಿತು ನಾವ್ಯಾರು ಹಣ್ಣು ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ ಬದಲಿಗೆ ಪ್ರಸಾದ ಸ್ವೀಕರಿಸಿ ಎನ್ನುತ್ತೇವೆ ಆಗಾದರೆ ಹಣ್ಣು ಬದಲಾಯಿತೇ ಇಲ್ಲ ಹಣ್ಣನ್ನು ನೋಡುವ ನಮ್ಮ ಕಣ್ಣು ಬದಲಾಯಿತು. ಆದ್ದರಿಂದ ದೃಷ್ಟಿ ಬದಲಾದರೆ ಸೃಷ್ಟಿ ಬದಲಾವಣೆ ಆಗಿಯೇ ಆಗುತ್ತದೆ. ಅದಕ್ಕಾಗಿ ಬದಲಾಗು ಮನವೇ ಬದಲಾವಣೆಗೆ ನೀ ಮೊದಲಾಗು ಏನಾದರೂ ಆಗು ಮೊದಲು ವಾಸ್ತವದ ಬದುಕಿಗೆ ಮುಖವಾಗು ಆದರೆ ಮುಖವಾಡವಲ್ಲ.
ಬದುಕುವುದಾದರೆ ಬೆಳಕಿನೊಂದಿಗೆ ಬದುಕೋಣ ಕತ್ತಲಿನ ಚಿಂತೆ ನಮಗೇಕೆ, ಬದುಕುವುದಾದರೆ ಜ್ಯೋತಿಯೊಂದಿಗೆ ಬದುಕೋಣ ಬೆಂಕಿನ ಸಹವಾಸ ನಮಗೇಕೆ, ಬದುಕುವುದಾದರೆ ತಿಳಿನೀರಿನೊಂದಿಗೆ ಬದುಕೋಣ ನಿಂತನೀರಿನ ವಾಸನೆ ನಮಗೇಕೆ, ಬದುಕುವುದಾದರೆ ಖುಷಿ-ಸಂತೋಷ-ನಗುವಿನ ಒಡವೆಯೊಂದಿಗೆ ಬದುಕೋಣ ಅಳುವಿನ ಲೋಕದಗೊಡವೆ ನಮಗೇಕೆ, ಬದುಕುವುದಾದರೆ ಆರೋಗ್ಯದಿಂದ ಬದುಕೋಣ ಹೊಟ್ಟೆಕಿಚ್ಚಿನ ಅನಾರೋಗ್ಯದ ಬಾಧೆ ನಮಗೇಕೆ, ಬದುಕುವುದಾದರೆ ಸಜ್ಜನರೊಂದಿಗೆ ಬದುಕೋಣ ಕೊಳಕು ಮನಸ್ಸಿ ಹಾವುಗಳೊಂದಿಗಿನ ಸರಸ ನಮಗೇಕೆ, ಬದುಕುವುದಾದರೆ ಇವತ್ತು ಬದುಕೋಣ ನೆನ್ನೆಗಳ ಚಿಂತೆ ನಾಳೆಗಳ ಭ್ರಮೆ ನಮಗೇಕೆ, ಬದುಕುವುದಾದರೆ ತಂಗಾಳಿಯೊಂದಿಗೆ ಬದುಕೋಣ ಬಿರುಗಾಳಿಯ ಬಿರುಸು ನಮಗೇಕೆ, ಮಗುವಿನಂತ ಮನಸಿರಲಿ ಎದೆಯಲ್ಲಿ ನಿಷ್ಕಲ್ಮಶವಿರಲಿ ಹೃದಯದಲ್ಲಿ ಎಂದಳು ನನ್ನವ್ವ ಸಾಕವ್ವ ಎಂಬ ಮಾತುಗಳನ್ನು ಮನದಲ್ಲಿ ಬಸಿದುಕೊಂಡು ಬದಲಾಗುವ ಸಮಾಜದೊಂದಿಗೆ ನಾವು ಕೂಡು ಬದಲಾಗುತ್ತಾ ಅಪ್ಟೇಟ್ ಆಗಿ ಬದುಕಿದರೆ ಆಗ ಅದು ಬಲು ಸುಂದರ, ಹೃದಯವೇ ಬಾಳ ಮಂದಿರ.

ಪರಮೇಶ ಕೆ, ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹವ್ಯಾಸಿ ಬರಹಗಾರ, ಮೈಸೂರು.