ಚಾಮರಾಜನಗರ: ಸಾರಿಗೆ ನಿರೀಕ್ಷಕರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ ಚಾಲಕ ಮತ್ತು ಬಸ್ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಚಾಮರಾಜನಗರ ಪ್ರವಾಸಿ ಬಸ್ ಮಾಲೀಕರ ಸಂಘದ ವತಿಯಿಂದ ನಗರದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರಿಗೆ ದೂರು ಸಲ್ಲಿಸಲಾಯಿತು.
ಮೈಸೂರು ಮತ್ತು ಚಾಮರಾಜನಗರ ಪ್ರವಾಸಿ ಬಸ್ ಮಾಲೀಕರ ಪದಾಧಿಕಾರಿಗಳು ಮತ್ತು ಸದಸ್ಯರು ನ.15 ರಂದು ಹೊರರಾಜ್ಯದ ನೋಂದಣಿ ಬಸ್ಗಳು ನಮ್ಮ ರಾಜ್ಯಕ್ಕೆ ತೆರಿಗೆ ಕಟ್ಟದೆ ನಮ್ಮ ರಾಜ್ಯದಲ್ಲಿ ಸಂಚರಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಸೂಚನೆ ಆದೇಶದ ಮೇರೆಗೆ ಚಾಮರಾಜನಗರ ಸಾರಿಗೆ ನಿರೀಕ್ಷಕರು ನ.12 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಗುಂಡ್ಲುಪೇಟೆ ತಾಲ್ಲೂಕು ಬೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಮೈಸೂರು ಕಡೆಯಿಂದ ಬಂದ
ಚಾಲಕನು ಸಾರಿಗೆ ನಿರೀಕ್ಷಕರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ರಾಷ್ಟ್ರೀಯ ಹೆದ್ದಾರಿಗೆ ಬಸ್ ಅನ್ನು ಅಡ್ಡಲಾಗಿ ನಿಲ್ಲಿಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಸಾರಿಗೆ ನಿರೀಕ್ಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿ ಅವರಿಗೆ ಬೆದರಿಕೆಯನ್ನು
ಹಾಕಿರುತ್ತಾನೆ. ಆದುದರಿಂದ ಸದರಿ ವಾಹನ ಮತ್ತು ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಸಾರಿಗೆ ನಿರೀಕ್ಷಕರು ನಿರ್ಭಯದಿಂದ ತಮ್ಮ ಕರ್ತವ್ಯ ನಿರ್ವಹಿಸಲು ಸೂಕ್ತ ಪೊಲೀಸ್ ಬಂದುಬಸ್ತನ್ನು ಮಾಡಿಕೊಡಬೇಕು ಎಂದು ಡಾ.ಬಿ.ಟಿ.ಕವಿತಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು ಸಂಘದ ಅಧ್ಯಕ್ಷ ಚಾ.ಸಿ.ಸೋಮನಾಯಕ
ಕಾರ್ಯದರ್ಶಿ ಬಾಲಾಜಿ ಆರ್, ಉಪಾಧ್ಯಕ್ಷ ಪ್ರಜ್ವಲ್, ಸದಸ್ಯರಾದ ಉಜೀಂವುಲ್ಲಾ, ಮೋಹನ್ ಕುಮಾರ್, ಅಕ್ರಂಪಾಷ, ಶಶಿ, ನವೀನ್, ದೀಪು, ದರ್ಶನ, ರಂಗಸ್ವಾಮಿ ಇತರರು ಭಾಗವಹಿಸಿದ್ದರು.