ಚಾಮರಾಜನಗರ: ಶಾಲೆಗಳ ಉನ್ನತೀಕರಿಸುವ ಕಾರ್ಯದಲ್ಲಿ ಸರ್ಕಾರದ ಜೊತೆ ಸೇವಾ ಸಂಸ್ಥೆಗಳು ಸಹ ಕೈಜೊಡಿಸಬೇಕು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಪಿ.ಡಬ್ಲೂ.ಡಿ ಕಾಲೋನಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ದತ್ತು ತೆಗೆದುಕೊಂಡಿರುವ ಚಾಮರಾಜನಗರದ ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಾಗೂ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಇಂತಹ ಕಾರ್ಯಗಳಿಗೆ ಸೇವಾ ಸಂಸ್ಥೆಗಳು ಬೆಂಬಲವಾಗಿ ನಿಲ್ಲಬೇಕು. ಬಸವರಾಜೇಂದ್ರ ಟ್ರಸ್ಟ್ ನಂತಹ ಸಂಸ್ಥೆಗಳು ಶಾಲೆಗಳ ನೆರವಿಗೆ ನಿಂತಿರುವುದು ಶ್ಲಾಘನೀಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಜೊತೆಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯದ ಸತ್ಪ್ರಜೆಗಳನ್ನಾಗಿಸುವ ಕಾರ್ಯದಲ್ಲಿ ನಾಗರಿಕರ ಪಾತ್ರವೂ ಸಹ ಪ್ರಮುಖವಾಗಿದೆ. ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆಗೆ ಗುಣಾತ್ಮಕ ಶಿಕ್ಷಣವು ಸಹ ಅಗತ್ಯವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಅವರು ಮಾತನಾಡಿ ನನ್ನ ಶಾಲೆ ನನ್ನ ಕೊಡುಗೆ, ಸ್ಕೌಟ್ ಗೈಡ್ಸ್ ತರಬೇತಿಗಳ ಮೂಲಕ ಹಳೆ ವಿದ್ಯಾರ್ಥಿಗಳು ಶಾಲೆಗಳಿಗೆ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಈ ಶಾಲೆಯ 2021-22ನೇ ಸಾಲಿನ ದಾಖಲಾತಿ ಸಂಖ್ಯೆಯು 62 ಇದ್ದು, ನಂತರ 2022-23ರಲ್ಲಿ 119, 2023-24ನೇ ಸಾಲಿನಲ್ಲಿ 210 ದಾಖಲಾತಿ ಏರಿಕೆ ಕಂಡಿದೆ ಎಂದರು.
ಪ್ರಸ್ತುತ 2025-26ನೇ ಸಾಲಿಗೆ 320 ಮಕ್ಕಳ ದಾಖಲಾತಿಯಾಗಿದ್ದಾರೆ ಈ ಶಾಲೆಗೆ. 1 ರಿಂದ 8ನೇ ತರಗತಿಯವರೆಗೆ ಇದ್ದ ಶಾಲೆಯನ್ನು ಎಲ್.ಕೆ.ಜಿ. ಯಿಂದ 9ನೇ ತರಗತಿಯವರೆಗೆ ಮುಂದುವರೆಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿಗೆ 10ನೇ ತರಗತಿಯವರೆಗೆ ಮುಂದುವರೆಯಲಿದೆ. ಚಾಮರಾಜನಗರ ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಶಾಲೆಗೆ 8 ಕೊಠಡಿಗಳು, 5 ಮಂದಿ ಶಿಕ್ಷಕರು, ಒಂದು ಶಾಲಾವಾಹನ, ಒಂದು ಬೋರ್ವೆಲ್, ಪಿಠೋಪಕರಣ, ಪುಸ್ತಕ, ಸಮವಸ್ತ್ರದ ಜೊತೆಗೆ ಕಂಪ್ಯೂಟರ್ ನೀಡಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಆದರ್ಶ ಶಾಲೆಯನ್ನಾಗಿ ಮಾಡಲಾಗುತ್ತದೆ ಎಂದು ರಾಮಚಂದ್ರರಾಜೇ ಅರಸ್ ಅವರು ತಿಳಿಸಿದರು.
ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಬಸವರಾಜೇಂದ್ರ ಅವರು ಮಾತನಾಡಿ ಸಂಸ್ಥೆಗಳಿಂದ ದಾನ ಕೊಡುವುದು ದೊಡ್ಡದಲ್ಲ. ಅದು ಉತ್ತಮ ರೀತಿಯಲ್ಲಿ ಸದ್ಬಳಕೆ ಆಗುವುದು ಮುಖ್ಯವಾಗಿದೆ. ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಯ ಅರಿವು ಅಗತ್ಯವಾಗಿದೆ. ಮಾತೃ ಭಾಷೆಯೊಂದಿಗೆ ವೃತ್ತಿಪರ ಜೀವನಕ್ಕಾಗಿ ಇತರೆ ಭಾಷೆಯನ್ನು ಕಲಿಯುವುದು ಅಗತ್ಯವಾಗಿದೆ. ಈ ಉದ್ದೇಶದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಮಕ್ಕಳಿಗೆ ಕಲಿಸಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಸದಸ್ಯರಾದ ಕುಮುದ ಕೇಶವಮೂರ್ತಿ, ಎಂ.ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸೋಮನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಎಸ್. ಉಮಾ, ಮುಖ್ಯ ಶಿಕ್ಷಕರಾದ ಮಾಲಿನಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related