ಬೇಡಗುಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ : ಅಹವಾಲುಗಳ ಅಲಿಕೆ, ಆಶ್ರಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ

ಚಾಮರಾಜನಗರ: ತಾಲೂಕಿನ ಬೇಡಗುಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಬುಧವಾರ (ಮಾ.25) ಭೇಟಿ ನೀಡಿ ಸೋಲಿಗ ಸಮುದಾಯದವರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು. 

  ಬೇಡಗುಳಿಯಲ್ಲಿರುವ ಸೋಲಿಗರ ಹಾಡಿಗಳಿಗೆ ತೆರಳಿದ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಸ್ಥಳೀಯರು ಹಾಡಿಗಳಲ್ಲಿನ ಕುಡಿಯುವ ನೀರು, ವಿದ್ಯುತ್, ವಸತಿ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

  ಇದೇ ವೇಳೆ ಟಿವಿಎಸ್, ಎಸ್.ಎಸ್.ಟಿ ವತಿಯಿಂದ ಬೇಡಗುಳಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಯವರು ಮಹಿಳೆಯರು ಶಿಕ್ಷಣವನ್ನು ಮುಂದುವರಿಸಬೇಕು. ಮಕ್ಕಳು ಶಾಲೆಯನ್ನು ತೊರೆಯಬಾರದು ಎಂದು ಸಲಹೆ ಮಾಡಿದರು. 

  ಗಿರಿಜನ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಚಾಮರಸಿ ಬ್ರಾಂಡ್ ಮೂಲಕ ಪ್ರಚಾರ ಮಾಡಿ ಸ್ವಾವಲಂಬನೆ ಸಾಧಿಸುವಂತೆ ತಿಳಿಸಿದರು. ಅಲ್ಲದೇ ಸ್ತ್ರೀ ಸೌಖ್ಯ ಯೋಜನೆಯಡಿ ಮಹಿಳೆಯರು ಕ್ಯಾನ್ಸರ್ ತಪಾಸಣೆಗೆ ಒಳಗಾಗುವಂತೆ ಜಾಗೃತಿ ಮೂಡಿಸಿದರು.

  ಬೇಡಗುಳಿಯ ಆಶ್ರಮ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. 

  ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *