ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರ ಬೆಂಬಲದೊಂದಿಗೆ ನವೆಂಬರ್ 8ರಂದು ನಗರದಲ್ಲಿ ಭಕ್ತ ಶ್ರೀ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಾಜ, ಸಂಘಟನೆಗಳ ಮುಖಂಡರು, ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ನಗರದ ಪ್ರವಾಸಿಮಂದಿರದಲ್ಲಿ ಕನಕದಾಸರ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲು ಹಾಗೂ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.
ಸಭೆಯಲ್ಲಿದ್ದ ಮುಖಂಡರು ಮಾತನಾಡಿ ಅದ್ದೂರಿಯಾಗಿ ಕಾರ್ಯಕ್ರಮ ಏರ್ಪಾಡು ಮಾಡಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು ವ್ಯವಸ್ಥೆ ಇರಬೇಕು. ಪ್ರಮುಖ ಮಾರ್ಗಗಳನ್ನು ಸ್ವಚ್ಚತೆ, ತಳಿರು ತೋರಣದಿಂದ ಅಲಂಕರಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಬೇಕು. ಕನಕದಾಸರ ಜಯಂತಿ ಕಾರ್ಯಕ್ರಮದ ಬಳಿಕ ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ಬೀರೇಶ್ವರ ಕಲಾ ಬಳಗದಿಂದ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಕಾರ್ಯಕ್ರಮ ಯಶಸ್ವಿಗೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಕನಕದಾಸರ ಜಯಂತಿ ಆಚರಣೆ ಅಂಗವಾಗಿ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಶಿಷ್ಟಾಚಾರ ಅನುಸಾರ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಕನಕದಾಸರ ಬದುಕು, ಸಾಧನೆ ವಿಚಾರಧಾರೆಗಳ ಕುರಿತು ಮಾತನಾಡಲು ಮುಖ್ಯ ಭಾಷಣಕಾರರನ್ನು ಆಹ್ವಾನಿಸಬೇಕಿದ್ದು, ಈ ಸಂಬಂಧ ಮುಖಂಡರು ನೀಡುವ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುವುದು ಎಂದರು.
ಮುಖಂಡರಾದ ಆರ್. ಉಮೇಶ್, ಸಿ.ಎನ್. ಬಾಲರಾಜು, ಬಿ. ಶಿವಲಿಂಗೇಗೌಡ, ಬಿ. ಮಹದೇವಸ್ವಾಮಿ, ಬೀರೇಗೌಡ, ಗೋವಿಂದ, ಬ್ಯಾಡಮೂಡ್ಲು ಬಸವಣ್ಣ, ಎಂ.ಸಿ. ರಾಜು, ಕೆ.ಎಸ್. ರೇವಣ್ಣ, ಡಿ. ಮಂಜು, ಆರ್. ಶಿವಣ್ಣ, ಮಹದೇವಸ್ವಾಮಿ, ಮಾದಾಪುರ ರವಿಕುಮಾರ್, ಕೆ.ಆರ್. ನಾರಾಯಣ, ಜಿ. ಮಹೇಶ, ಸುಬ್ಬೇಗೌಡ, ಬೀರೇಗೌಡ ಕೆ. ಬಸವನಪುರ, ಮಹದೇವೇಗೌಡ, ಜಿ. ಬಂಗಾರು, ಬೆಳ್ಳೇಗೌಡ, ಹೆಚ್.ಎಂ. ಶಿವಕುಮಾರ್, ಚೆನ್ನೇಗೌಡ, ನಂಜುಂಡೇಗೌಡ, ರಾಜೇಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.