- ವ್ಯಸನಿಗಳಿಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಲಹೆ
- ಬಸವಮಾರ್ಗದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ
ಮೈಸೂರು : ಯುವಕರು ಸಮಾಜ ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆ ವಿನಃ ವ್ಯಸನಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗಿ ಬಾಳಬಾರದು ಎಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಬಸವಮಾರ್ಗ ಫೌಂಡೇಶನ್ ವತಿಯಿಂದ ಬಸವಮಾರ್ಗ ಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕುಲವನ್ನು ಬೆಳಗಬೇಕೆ ವಿನಃ, ಕುಲ ನಾಶಕ್ಕೆ ಮುನ್ನುಡಿ ಬರೆಯಬಾರದು. ಇಂದಿನ ವೇಗದ ಜಗತ್ತಿನಲ್ಲಿ ಯುವಕರು ಮಧ್ಯಪಾನ ಸೇರಿದಂತೆ ನಾನಾ ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸಲಹೆ ನೀಡಿದರು.
ಈ ಆತ್ಮ ಪರಮಾತ್ಮನ ಭಿಕ್ಷೆಯಾಗಿದೆ. ಆತ್ಮ ಪರಮಾತ್ಮನನ್ನು ಸೇರಿದಾಗ ಮಾತ್ರ ಮನುಷ್ಯನ ಜನ್ಮ ಪಾವನವಾಗುತ್ತದೆ. ಆದರೆ ಕುಡಿತದ ವ್ಯಸನಕ್ಕೆ ಬಲಿಯಾಗಿ ಪರಮಾತ್ಮನನ್ನು ಸೇರುವ ಮಾರ್ಗವನ್ನು ನಾವೆಲ್ಲರೂ ಮುಚ್ಚಿಕೊಳ್ಳುತ್ತಿದ್ದೇವೆ. ದೇಹ ಸದೃಢವಾಗಿಸಲು ಯೋಗಾ, ವ್ಯಾಯಾಮ, ಸಾತ್ವಿಕ ಆಹಾರ ನೀಡಬೇಕು. ಮನಸ್ಸನ್ನು ಸದೃಢ ವಾಗಬೇಕಾದರೆ ಜ್ಞಾನಬೇಕು. ಆತ್ಮ ಸದೃಢವಾಗಬೇಕಾದರೆ ಭಗವಂತನನ್ನು ಸ್ಮರಿಸಬೇಕು. ಇದರಿಂದ ಜೀವನ ಪಾವನವಾಗುತ್ತದೆ ಎಂದರು.
ವ್ಯಸನಿಗಳು ಇಂದಿನಿಂದಲೇ ದೊಡ್ಡ ಸಂಕಲ್ಪವನ್ನು ಮಾಡಬೇಕು. ಮುಂದಿನ ದಿನಗಳಲ್ಲಿ ಈ ಕುಡಿತದ ದಾಸ್ಯದಿಂದ ಹೊರಬಂದು ಸಮಾಜ ಸೇವೆಗೆ ನನ್ನ ಜನ್ಮವನ್ನು ಮುಡಿಪಾಗಿ ಇಡುತ್ತೇನೆ ಎಂದು ನಿರ್ಧಾರ ಮಾಡಬೇಕು. ನಿಮ್ಮ ಹಿಂದೆ ಹೆಂಡತಿ, ಮಕ್ಕಳು, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಸವಮಾರ್ಗ ಸಂಸ್ಥೆ ನಿಜಕ್ಕೂ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಸಮಾಜಕ್ಕೆ ಹೊರೆ ಎಂದು ಭಾವಿಸುವ ವ್ಯಸನಿಗಳಿಗೆ ಹೊಸ ಜೀವನವನ್ನು ಕಲ್ಪಿಸುವ ಮೂಲಕ ಎಲೆ ಮರೆಕಾಯಿಯಂತೆ ಸೇವೆ ಮಾಡುತ್ತಿದೆ. ಸಂಸ್ಥೆಯ ಸೇವೆ ಕೇಲವ ಮೈಸೂರಿಗೆ ಮಾತ್ರ ಸೀಮಿತವಾಗದೇ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸ್ಥಾಪನೆಯಾಗಲಿ. ಆ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿ ಎಂದು ಆಶೀರ್ವದಿಸಿದರು.
ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಬಸವಣ್ಣ ಮಾತನಾಡಿ, ಮನುಷ್ಯನಿಗೆ ರೋಗ ಬಂದರೆ ಆತನಿಗೆ ಎಲ್ಲರೂ ನೆರವಾಗುತ್ತಾರೆ. ಆದರೆ ವ್ಯಸನ ಎನ್ನುವ ರೋಗಕ್ಕೆ ತುತ್ತಾದರೆ ಮನೆಯಲ್ಲೇ ಆತನಿಗೆ ಜಾಗ ಇರುವುದಿಲ್ಲ. ಆತನನ್ನು ಈ ರೋಗದಿಂದ ಗುಣಪಡಿಸಬೇಕು ಎಂದು ಕೆಲವರು ಚಿಂತಿಸುವುದೂ ಇಲ್ಲ. ಆಗಾದರೆ ಅಮಲು ರೋಗಿಗಳು ಎಲ್ಲಿ ಹೋಗಬೇಕು. ಅವರಿಗೆ ಯಾವ ಆಶ್ರವಿದೆ. ಈ ನಿಟ್ಟಿನಲ್ಲಿ ಮಠ, ಮಾನ್ಯಗಳು ಅಮಲು ರೋಗಿಗಳಿಗೆ ಸಹಾಯ ಮಾಡಬೇಕು. ಸಮಾಜವನ್ನು ಸರಿ ಮಾರ್ಗದಲ್ಲಿ ಮುನ್ನೆಡಸಲು ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ನಾನೂ ಕೂಡ ಸತತ 17 ವರ್ಷಗಳ ಕಾಲ ಕುಡಿತದ ಚಟಕ್ಕೆ ಬಲಿಯಾಗಿದ್ದೆ. ಕೊನೆಗೆ ಅದರಿಂದ ಹೊರಬಂದು ವ್ಯಸನಿಗಳ ಸೇವೆ ಮಾಡಲು ಬಸವಮಾರ್ಗ ಸಂಸ್ಥೆ ಸ್ಥಾಪನೆ ಮಾಡಲಾಯಿತು. ಈ ಸಂಸ್ಥೆಗೆ ಭಗವಂತನೇ ಫೌಂಡರ್. ಈ ಸಂಸ್ಥೆ ನನ್ನದಲ್ಲ. ಇದು ಅಮಲು ರೋಗಿಗಳ ಸಂಸ್ಥೆ ಎಂದು ನುಡಿದರು.
ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಕಾಯಕ ಯೋಗಿ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್, ಲಿಂಗಾಯತ ಮಹಾಸಭಾದ ಮಂಡ್ಯ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ, ಅರ್ಚಕರ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಸೇರಿದಂತೆ ಇತರರು ಇದ್ದರು.