ನಡೆದಾಡುವ ದೇವರಾಗಿದ್ದ, ತ್ರಿವಿಧ ದಾಸೋಹಿ “ಡಾ ಶಿವಕುಮಾರ ಸ್ವಾಮೀಜಿ”

ಮಾನವ ಜನ್ಮ ಸಿಗುವುದೇ ಅಪರೂಪ ಅದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪ ಗಳಿರಾ......"ಎಂದು ಪುರಂದರದಾಸರು ಯಾವತ್ತೋ ಹೇಳಿ ಹೋದರು. ಆದರೆ ಆ ಒಂದು ಜನ್ಮ ಸಿಕ್ಕಿದ ನಂತರ ನಾವು ಆ ಜನ್ಮವನ್ನು ಸಾರ್ಥಕ್ಯ ಗೊಳಿಸುವುದರ ಬದಲು ಸುಮ್ಮನೆ ಕಾಲರಣ ಮಾಡಿ ಎಲ್ಲವನ್ನು ಬೇಕು ಬೇಕು ಎನ್ನುವ ಸಂಸ್ಕೃತಿಯೊಂದಿಗೆ ನಮ್ಮ ಮನವನ್ನೆಲ್ಲ ಅಲ್ಲಿ ಬಿಟ್ಟು ಇರುವುದೆಲ್ಲವ ಬಿಟ್ಟು ಇರದುದೆಡೆಗೆ ಯೋಚಿಸಿ, ನೆಮ್ಮದಿಯನ್ನು ಕಳೆದುಕೊಂಡು ಬದುಕುವ ಮಂದಿಯೇ ಹೆಚ್ಚು!. 

ಸತ್ತ ನಂತರವೂ ಕೂಡ ಒಂದು ಬದುಕಿದೆ ಎಂದರೆ ಅದನ್ನು ಯಾರು ಕೂಡ ನಂಬುವುದಿಲ್ಲ!. ನಾವು ಬದುಕಿದ್ದಾಗ ಏನು ಸಾಧನೆ ಮಾಡುತ್ತೇವೆ ಅವೆಲ್ಲಾ ಬರುತ್ತವೆ!. ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ವರ್ಷ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಅಂತಹ ಗಣ್ಯರನ್ನು ನಾವು ನೆನಪಿಸಿಕೊಳ್ಳುವುದು ಸಹಜವಾಗಿದೆ.

ಅಂತಹ ಗಣದಲ್ಲಿ ಮೇರು ವ್ಯಕ್ತಿತ್ವ ಹೊಂದಿರುವ  ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಯಾಗಿದ್ದವರು ಅವರೇ ಶಿವಕುಮಾರ ಸ್ವಾಮೀಜಿಗಳು. 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ 3, 1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು.

‘ಸ್ವಾಮೀಜಿ ತಮ್ಮ ಆಸನದಲ್ಲಿ’ ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು, ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು..

ಶ್ರೀಗಳ ಪೂರ್ವಾಶ್ರಮ ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಶಿವಣ್ಣ ಜನಿಸಿದರು. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ- ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು.

ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಊರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು. ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1926ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತಿದ್ದರು. ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರು ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು. ಇದು ಶ್ರೀಗಳ ಪ್ರಾರಂಭದ ಸಂಗ್ರಹ ಯೋಗ್ಯ ವಿಷಯಗಳು.

ಎಲ್ಲರಿಗೂ ಮಾದರಿಯಾಗಿದ್ದ ಶ್ರೀಗಳ ದಿನಚರಿ........
"ನಮ್ಮ ದಿನಚರಿ ಹೇಗಿರುತ್ತದೆ ಅಲ್ಲಿ ನಮ್ಮ ಸಾಧನೆಯು ಅಡಗಿರುತ್ತದೆ"- ಎನ್ನುವ ಮಾತೊಂದು ಇದೆ. ಇದಕ್ಕೆ ಸಾಕ್ಷಿಯಾಗಿದ್ದವರು ನಮ್ಮ ಶಿವಕುಮಾರ ಸ್ವಾಮೀಜಿಗಳು. ಪ್ರತಿದಿನವೂ ಸಹಾ ತಪ್ಪದೇ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆ ಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, 'ಸಿಹಿ' ಹಾಗೂ 'ಖಾರ ಚಟ್ನಿ' ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, 'ಬೇವಿನ-ಚಕ್ಕೆ ಕಷಾಯ' ಸೇವನೆ ಮಾಡುತ್ತಿದ್ದರು. ಈ ರೀತಿಯಾಗಿ ಕಟ್ಟುನಿಟ್ಟಿನ ದಿನಚರಿಯನ್ನು ಅವರು ಪಾಲಿಸುತ್ತಿದ್ದರು. ಇವರ ಈ ದಿನಚರಿಯಿಂದಲೇ ಅವರು ಶತಾಯುಷಿಗಳಾದರು.

ಇವರ ದಿನಚರಿಯಲ್ಲಿ ಪ್ರಾರ್ಥನೆಗೆ ಹೆಚ್ಚು ಆದ್ಯತೆ ಇರುತ್ತಿತ್ತು. ಜೊತೆಗೆ ಸರಳವಾದ ಆಹಾರ, ಸರಳವಾದ ಉಡುಪು, ಶರಳವಾದ ವ್ಯಕ್ತಿತ್ವ ಎಲ್ಲವನ್ನು ಕೂಡ ಮೈಗೂಡಿಸಿಕೊಂಡಿದ್ದರು.

ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು. ಮಠದ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ “ಕಾಯಕವೇ ಕೈಲಾಸ” ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಉಳ್ಳವರಾಗಿದ್ದರು.

ದಿನಚರಿಯಲ್ಲಿ ಭಕ್ತರ ಭೇಟಿಗೆ ಆದ್ಯತೆ

ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯ ವರೆವಿಗೆ ನಿರಂತರವಾಗಿ ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು,ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಿದ್ದರು. ಸಂಜೆ 4ಗಂಟೆಯ ನಂತರ ಪುನಃ ಭಕ್ತಗಣದ ಬೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ 9 ಗಂಟೆಯವರೆವಿಗೂ ನಡೆಯುತ್ತಿತ್ತು.

ವಿಶ್ರಾಂತಿ

ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು!. ಇದು ಅವರ ದಿನಚರಿಯಲ್ಲಿದ್ದ ವಿಶೇಷ!!.

ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿ ನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಅವರು ಬದುಕಿದ್ದಾಗ ಜೀವನ ಇದೇ ರೀತಿ ಸಾಗಿತು. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇತ್ತು. ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಇದರೊಂದಿಗೆ ಹಲವರಿಗೆ ಮಾರ್ಗದರ್ಶಕರಾಗಿದ್ದಾರೆ, ದಾರಿದೀಪವಾಗಿದ್ದಾರೆ, ಅನೇಕ ವಿದ್ಯಾರ್ಥಿಗಳ ಪಾಲಿಗಂತೂ ಇವರು ಕಣ್ಣಿಗೆ ಕಾಣುವ ದೇವರಾಗಿದ್ದಾರೆ.

ನಿರಂತರ ಸಾಮಾಜಿಕ ಕಾರ್ಯಗಳು!.

ಅವರು ತಮ್ಮ ಬದುಕಿದ್ದಕ್ಕೂ ಮಾಡಿದ ಸಾಮಾಜಿಕ ಕಾರ್ಯಗಳು ಒಂದೇ? ಎರಡೇ?.

ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 130 ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದರು. ನರ್ಸರಿಯಿಂದ ಪ್ರಾರಂಭವಾಗಿ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಸೇರಿವೆ. ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು.ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು. ಸ್ವಾಮಿ ಅವರ ಮಠದಲ್ಲಿ 10000 ಕ್ಕಿಂತ ಹೆಚ್ಚು ಮಕ್ಕಳು ಇದ್ದಾರೆ. 5 ವಯಸ್ಸಿನಿಂದ 16 ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ (ತ್ರಿವಿಧ ದಾಸೋಹ) ಅನ್ನು ಒದಗಿಸುವ ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ತೆರೆದಿರುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರು ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ. ಕರ್ನಾಟಕ ಸರಕಾರವು 2007 ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು.
ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿದರು ಮತ್ತು ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಯ ಉಪಕ್ರಮಗಳನ್ನು ಶ್ಲಾಘಿಸಿದರು.

ಸಂದ ಪ್ರಶಸ್ತಿಗಳು…..

ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ 1965ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಪೂಜ್ಯ ಸ್ವಾಮೀಜಿಯವರ 100 ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ “ಕರ್ನಾಟಕ ರತ್ನ”- ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.

2015ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ”- ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2017 ರಲ್ಲಿ, ಕರ್ನಾಟಕ ಸರಕಾರ ಮತ್ತು ಅವರ ಭಕ್ತರು ಸ್ವಾಮೀಜಿಯವರ ಸಾಮಾಜಿಕ ಸೇವೆಗಾಗಿ ಅವರಿಗೆ ಭಾರತ ರತ್ನ ನೀಡಲು ಮನವಿ ಮಾಡಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ವಾಮಿಜಿಯವರ ಮಾನವೀಯ ಕೆಲಸದ ಗುರುತಿಸುವಿಕೆಗಾಗಿ ಭಾರತ ರತ್ನವನ್ನು ನೀಡಲು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಸ್ವಾಮೀಜಿಯವರ ಬಗ್ಗೆ ಜಿ.ಎಸ್.ಶಿವರುದ್ರಪ್ಪ
ಸದ್ದು ಗದ್ದಲವಿರದ ಸಾಧನೆಯಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ. ಎಂದಿದ್ದಾರೆ.

ವಯೋಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ 2018ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅರೋಗ್ಯ ಸುಧಾರಿಸಿದ ಕಾರಣ ಸ್ವಾಮೀಜಿಯವರನ್ನು ಮಠಕ್ಕೆ ಹಿಂದಿರುಗಿ ಕರೆತರಲಾಗಿತ್ತು. 2019 ಜನವರಿ 21 ರಂದು ಬೆಳಗ್ಗೆ ರಕ್ತದೊತ್ತಡ ಏರುಪೇರಾಗಿ ಶ್ರೀಗಳು ಸಿದ್ಧಗಂಗಾದ ಹಳೆಯ ಮಠದಲ್ಲಿ ಕೊನೆಯುಸಿರೆಳೆದರು. ಅವರಿಗೆ ೧೧೧ ವರ್ಷ ವಯಸ್ಸಾಗಿತ್ತು. ಈಗ ಸಿದ್ದಿಗಂಗಾ ಸ್ವಾಮೀಜಿಗಳು ಬದುಕಿದ್ದರೆ……118 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.

ಅವರು ಸತ್ತ ನಂತರವೂ ಕೂಡ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಕೂಡ ಶಿವಕುಮಾರ ಸ್ವಾಮೀಜಿಯವರನ್ನ ನೆನೆಯದ ಜನರಿಲ್ಲ!. ಅವರು ಮನೆ ಮನದಲ್ಲೂ ಕೂಡ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಒಂದು ಶಿಕ್ಷಣ ಕ್ಷೇತ್ರ, ಸಮಾಜ ಕ್ಷೇತ್ರದ ಸಾಧನೆ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ತಮ್ಮ ಒಂದು ದಿನಚರಿಯಿಂದ ಎಷ್ಟೋ ಮಂದಿ ವಿದ್ಯಾರ್ಥಿಗಳ ಬಾಳಿಗೆ ಅತ್ಯುತ್ತಮ ವೇದಿಕೆಯನ್ನು ನಿರ್ಮಿಸಿ ಕೊಟ್ಟರು. ಅವರನ್ನು ನಾವು ಒಂದು ದಿನ ಅಲ್ಲ, ನಮ್ಮ ಉಸಿರಿರುವ ತನಕವೂ ಕೂಡ ಸ್ಮರಿಸಿಕೊಳ್ಳಲೇಬೇಕು. ಇಂತಹ ತ್ರಿವಿಧ ದಾಸೋಹಿಗಳು ಮತ್ತೊಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಕಾಳಿಹುಂಡಿ ಶಿವಕುಮಾರ್ ಮೈಸೂರು.

Leave a Reply

Your email address will not be published. Required fields are marked *