- ಆಯುಷ್ ಸಹಾಯಕ ನಿರ್ದೇಶಕ ಲಕ್ಷ್ಮೀ ನಾರಾಯಣ ಶೆಣೈ ಬೇಸರ
- ಬಸವಮಾರ್ಗ ಕುಡಿತ ಬಿಡಿಸುವ ಉಚಿತ ಶಿಬಿರ ಸಮಾರೋಪ
ಮೈಸೂರು : ಕುಡಿತದ ವ್ಯಸನದಿಂದ ಆರೋಗ್ಯದೊಂದಿಗೆ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧ ಹಾಳಾಗುತ್ತದೆ ಎಂದು ಆಯುಷ್ ಸಹಾಯಕ ನಿರ್ದೇಶಕ ಲಕ್ಷ್ಮಿ ನಾರಾಯಣ ಶೆಣೈ ಹೇಳಿದರು.
ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಕೇಂದ್ರದಿಂದ ಹಮ್ಮಿಕೊಂಡಿದ್ದ 10 ದಿನಗಳ ಕುಡಿತ ಬಿಡುವ ಉಚಿತ ಶಿಬಿರ ಸಮಾರೋಪ ಸಮಾರಂಭದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಡಿತ ನಿಮಗೆ ತಾತ್ಕಾಲಿಕ ಉನ್ಮಾದ ನೀಡಬಹುದು ಆದರೆ ಇದರಿಂದ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ ಎನ್ನುವುದನ್ನು ಮರೆಯಬೇಡಿ. ಕುಟುಂಬದ ಎಲ್ಲ ಸದಸ್ಯರು ಇದರ ಫಲಾನುಭವಿಗಳಾಗುತ್ತಾರೆ. ನಿಮ್ಮ ಮನಸ್ಸು ನಿಮ್ಮ ನಿಮ್ಮ ನಿಯಂತ್ರಣದಲ್ಲಿ ಇರಲಿ. ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡು ಬದಲಾವಣೆ ಕಡೆದೆ ಮುನ್ನುಗಿ ಎಂದು ಸಲಹೆ ನೀಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವಿಜಯನಗರ ಶಾಖೆಯ ಉಸ್ತುವಾರಿ ಮಾತಾಜಿ ಬಿ.ಕೆ.ಸಂಧ್ಯಾ ಮಾತಾಡಿ, ಹಲವಾರು ಜನ್ಮದ ಬಳಿಕ ನಮಗೆ ಮಾನವ ಜನ್ಮ ಸಿಕ್ಕಿದೆ. ಈ ಜನ್ಮವನ್ನು ವ್ಯಸನಕ್ಕೆ ಬಲಿಯಾಗಿ ಹಾಳು ಮಾಡುಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು, ಪರಮಾತ್ಮನ ಧ್ಯಾನ ಮಾಡಿದರೆ ಜೀವನಕ್ಕೆ ಮುಕ್ತಿ ದೊರೆಯುತ್ತದೆ ಎಂದರು.
ಜಿ.ಎಸ್.ಎಸ್.ಸಂಸ್ಥೆಯ ಮುಖ್ಯಸ್ಥರಾದ ಯೋಗಾತ್ಮ ಶ್ರೀಹರಿ ಮಾತನಾಡಿ, 10 ದಿನ ಶಿಬಿರ ನಡೆದಿದೆ. ಹಲವಾರು ಉಪನ್ಯಾಸ ನಡೆದಿದೆ. ಹಲವಾರು ಮಾರ್ಗದರ್ಶನ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂದಿನಿಂದ ಹೊಸ ಮನುಷ್ಯರಾಗಿ ಬದುಕಬೇಕು ಎಂದು ಸಲಹೆ ನೀಡಿದರು.
ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಮಾತನಾಡಿ, ಶಿಬಿರದ ಹತ್ತು ದಿನವೂ ಯೋಗ, ಧ್ಯಾನ, ಸಂಗೀತ ಕಾರ್ಯಕ್ರಮ, ತರಗತಿಗಳು, ವಿಶೇಷ ಆಹ್ವಾನಿತರಿಂದ ಉಪನ್ಯಾಸ, ಕಾರ್ಯಕ್ರಮ, ವಿಶೇಷ ಆಹಾರ ಪದ್ಧತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ಕೇಳಿಸಿಕೊಂಡರೆ ಯಾವುದೆ ಉಪಯೋಗ ಇಲ್ಲ. ಬದುಕಲ್ಲಿ ಅಳವಡಿಕೊಂಡಾಗ ಮಾತ್ರ ಇದು ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ನಾಳೆಯಿಂದ ನೀವು ಹೊಸ ಬದುಕನ್ನು ಪ್ರಾರಂಭ ಮಾಡಬೇಕು. ಅದಕ್ಕೆ ಬಸವಮಾರ್ಗ ಸಂಸ್ಥೆ ಸದಾ ವ್ಯಸನಿಗಳ ಜತೆ ಇರುತ್ತದೆ ಎಂದು ತಿಳಿಸಿದರು.
ಸಸಿ ವಿತರಣೆ: ವಿಶ್ವ ಪರಿಸರ ದಿನದ ಅಂಗವಾಗಿ ಜಿಎಸ್ ಎಸ್ ಸಂಸ್ಥೆಯಿಂದ ಶಿಬಿರಾರ್ಥಿಗಳಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತರಬೇತುದಾರ ಬಾಲಸುಬ್ರಹ್ಮಣ್ಯಂ, ಯೋಗ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ಸಂಜಯ್ ಇತರರು ಇದ್ದರು.
ಚಿತ್ರ : ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಕೇಂದ್ರದಿಂದ ಹಮ್ಮಿಕೊಂಡಿದ್ದ 10 ದಿನಗಳ ಕುಡಿತ ಬಿಡುವ ಉಚಿತ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಗಣ್ಯರು ಗಿಡಕ್ಕೆ ನೀರೆರೆದರು. ಲಕ್ಷ್ಮಿ ನಾರಾಯಣ ಶೆಣೈ, ಬಿ.ಕೆ.ಸಂದ್ಯಾ, ಬಸವಣ್ಣ ಇದ್ದಾರೆ.