ಚಾಮರಾಜನಗರ: ಹಾಡಿಗಳಿಗೆ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಪುಣಜನೂರಿನಿಂದ ಸಂಪ್ರದಾಯಿಕ ವಿದ್ಯುತ್ ಜಾಲಕ್ಕೆ ಸಂಪರ್ಕ ವಿಸ್ತರಿಸುವ ಜಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಚಾಲನೆ ನೀಡಿದರು.
ಈ ಕಾಮಗಾರಿಗೆ ಬೇಡುಗುಳಿಯಲ್ಲಿ ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ ಅವರು ಫೆಬ್ರವರಿ 3 ರಂದು ವಿದ್ಯುಕ್ತವಾಗಿ ಚಾಲನೆ ನೀಡಿದ್ದರು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಈ ಯೋಜನೆಯಡಿ ಹರದನಹಳ್ಳಿ ಉಪವಿಭಾಗಕ್ಕೆ ಒಳಪಡುವ (ಬಿಳಗಿರಿ ರಂಗನಾಥ ಹುಲಿ ಸಂರಕ್ಷಣಾ ವಿಭಾಗ) ಮೊಣಕೈಪೆÇೀಡು, ಬೇಡುಗುಳಿ, ಮಾರಿಗುಡಿ ಪೆÇೀಡು, ಕಾಡಿಗೆರೆ ಮತ್ತು ಬಂಡಿಗೆರೆ ಹಾಡಿಗಳಲ್ಲಿರುವ 365 ಮನೆಗಳಿಗೆ ಸಾಂಪ್ರದಾಯಿಕ ವಿದ್ಯುತ್ ಜಾಲದಿಂದ ಭೂಮಿಯೊಳಗೆ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಇದರಿಂದ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ನಿರಂತರವಾಗಿ ವಿದ್ಯುತ್ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ 9.4 ಕೋಟಿ ರೂ. ಗಳಗೆ ಟೆಂಡರ್ ನೀಡಲಾಗಿದೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು 6 ತಿಂಗಳೊಳಗಾಗಿ ಮುಕ್ತಾಯಗೊಳಿಸಲಾಗುವುದು. ಇಲ್ಲಿಯವರೆಗೂ ಹಾಡಿಗಳಿಗೆ ಸೋಲಾರ್ ನಿಂದ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ರಾತ್ರಿ ವೇಳೆಯಲ್ಲಿ ಹಾಗೂ ಮಳೆ ನಿರಂತರವಾಗಿರುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಆದೇಶದನ್ವಯ ಭೂಮಿಯೊಳಗೆ ಕೇಬಲ್ ಅಳವಡಿಸಿ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ನೀಡಲು ನಿಯಮಾನುಸಾರ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.