ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಯೊಂದು ಚಿಂತನೆಗಳು ಎಂದೆಂದಿಗೂ ಕೂಡ ಮೌಲ್ಯಯುತವಾದದ್ದು

ಭಾರತದ "ಸಂವಿಧಾನದ ಪಿತಾಮಹ" ಎಂದೇ ಪ್ರಸಿದ್ಧರಾದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಇಂದು ದೇಶಾದ್ಯಂತ ಶ್ರದ್ದೆ, ಭಕ್ತಿ ಮತ್ತು ಗೌರವಗಳಿಂದ ಆಚರಿಸಲಾಗುತ್ತಿದೆ.  ಭಾರತದಂತಹ ವಿಶಾಲವಾದ ದೇಶಕ್ಕೆ ಒಪ್ಪುವಂತಹ ಸಂವಿಧಾನವನ್ನು ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಅವರು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ.

ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಅವರ ಸಲ್ಲಿಸಿದ ಸೇವೆ ನಿಜಕ್ಕೂ ಅಭಿನಂದನೀಯ. ಅವರು ಒಂದೇ ಬಾರಿಗೆ ಸಂವಿಧಾನವನ್ನು ರಚಿಸಲಿಲ್ಲ ಎಲ್ಲರಿಗೂ ಅನುಕೂಲವಾಗುವಂತಹ ಸಂವಿಧಾನವನ್ನು ರಚಿಸಲು ಸಲುವಾಗಿ ಅನೇಕ ಗಣ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮಾರ್ಗದರ್ಶನವನ್ನು ಕೂಡ ಪಡೆದುಕೊಂಡು, ನಿರಂತರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದರು.
ವಿಶ್ವದ ಬಹುತೇಕ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಅನೇಕರನ್ನ ಭೇಟಿ ಮಾಡಿದರು, ಸಂದರ್ಶಿಸಿದರು. ಅವರಿಂದ ವಿಷಯಗಳನ್ನು ಪಟ್ಟಿ ಮಾಡಿಕೊಂಡರು. ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ, ಜೊತೆಗೆ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಹಲವು ಜನಾಂಗಗಳು ಇರುವ ನಮ್ಮ ಭಾರತದಲ್ಲಿ ಅಂದರೆ ಇಲ್ಲಿನ ವಾಸ್ತವ ಸ್ಥಿತಿಗೆ ಹೊಂದುವಂತಹ ಎಲ್ಲಾ ರೀತಿಯಲ್ಲೂ ಕೂಡ ಅನುಕೂಲವಾಗುವಂತಹ ಸಂವಿಧಾನವನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಂತರದಲ್ಲಿ ಅದು ಒಂದು ರೀತಿಯಲ್ಲಿ ಎಲ್ಲರ ಜನಮನ್ನಣೆ ಗಳಿಸಿತು. ಇಡೀ ವಿಶ್ವದಲ್ಲೇ ಅತಿದೊಡ್ಡದಾದ ಸಂವಿಧಾನ ನಮ್ಮದು ಎಂಬ ಕೀರ್ತಿಗೆ ಪಾತ್ರವಾಯಿತು.

ಮುಂದುವರೆದು ಹೇಳುವುದಾದರೆ……… ಭಾರತದ ಸಂವಿಧಾನ ಒಂದು ವಿಶಿಷ್ಠವಾದ ಸಂವಿಧಾನ ಎನಿಸಿಕೊಂಡಿದ್ದು, ಯಾರೇ ಆಡಳಿತ ಮಾಡಿದರು ಕೂಡ ಅವರಿಗೆ ಒಂದು ರೀತಿಯಲ್ಲಿ ಮುನ್ನುಡಿಯಾಗುತ್ತದೆ. ಅದರಲ್ಲು ಆಡಳಿತಗಾರರಿಗೆ ದಿಕ್ಸೂಚಿಯೂ ಕೂಡ ಆಗುತ್ತದೆ. ಇವುಗಳೆಲ್ಲದರ ಜೊತೆಗೆ ನಮ್ಮ ಜನರ ಮೂಲಭೂತ ಹಕ್ಕುಗಳ ಸಂರಕ್ಷಕನಾಗಿರುವುದನ್ನು ಕಾಣಬಹುದಾಗಿದೆ.

ಈ ನಮ್ಮ ಸಂವಿಧಾನವನ್ನು ದೇಶದಲ್ಲಿ 26.01.1950 ರಂದು ಜಾರಿ ಗೊಳಿಸಲಾಯಿತು. ಈ ದಿನವನ್ನು ಗಣರಾಜ್ಯೋತ್ಸವ ಎಂದು ಸಹಾ ಪ್ರತಿ ವರ್ಷ ಆಚರಿಸಲಾಗುತ್ತದೆ. ಅಂಬೇಡ್ಕರ್ ರವರು ಬದುಕಿದ ರೀತಿಯೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಅವರು ತಮ್ಮ ಜೀವನವನ್ನು ಸುಲಭವಾಗಿ, ಸುಖವಾಗಿ ಕಳೆಯಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗೂ ಕೂಡ ಹೋರಾಟದ ಬದುಕನ್ನ ಕಂಡವರು. ಜೊತೆಗೆ ನೊಂದವರು ಕೂಡ. ತಮಗೆ ಆದ ಅಪಮಾನಗಳು ಬೇರೆ ಯಾರಿಗೂ ಕೂಡ ಆಗಬಾರದು ಎಂಬ ದೃಢಸಂಕಲ್ಪವನ್ನು ತಾವೇ ಮಾಡಿದರು. ಅದನ್ನ ಕಾರ್ಯರೂಪಕ್ಕೆ ಕೂಡ ತಂದರು. ಎಲ್ಲಾ ವರ್ಗದಲ್ಲೂ ಕೂಡ ಬಡವರ್ಗದವರು ಇರುವುದರಿಂದ ಎಲ್ಲರಿಗೂ ಕೂಡ ಮೀಸಲಾತಿ ಸವಲತ್ತು ಸಿಗಬೇಕು ಎನ್ನುವ ಮಹಾ ಗುರಿಯನ್ನು ಇಟ್ಟುಕೊಂಡಿದ್ದರು.

ಇಂತಹ ಅನೇಕ ಉದಾತ್ತ ಚಿಂತನೆಗಳನ್ನ ತಮ್ಮ ಕಾರ್ಯಾವಧಿಯಲ್ಲಿ ರೂಪಿಸಿದವರು ಅಂಬೇಡ್ಕರ್ ರವರು ಅದಕ್ಕಲ್ಲವೇ ಅವರನ್ನು
“ಸಾಮಾಜಿಕ ಪರಿವರ್ತನೆಯ ಹರಿಕಾರ” ಎಂದು ಸಹ ಕರೆದದ್ದು. ಡಾ. ಅಂಬೇಡ್ಕರ್ ಏಪ್ರಿಲ್ 14, 1891 ರಂದು ಮಹಾರಾಷ್ಟ್ರದ ಕುಗ್ರಾಮವೊಂದರಲ್ಲಿ ಜನಿಸಿದರು. ತಮ್ಮ ಬಾಲ್ಯಾವಸ್ಥೆಯಲ್ಲೇ ಅಸ್ಪೃಶ್ಯತೆಯ ಸುಳಿಯಲ್ಲಿ ಸಿಲುಕಿದ್ದರು. ಬಾಲಕ ಅಂಬೇಡ್ಕರ್
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ಪದ್ಧತಿಯ ವಿರುದ್ಧ ಚಿಕ್ಕ ವಯಸ್ಸಿನಲ್ಲಿ ಕೂಡ ದನಿ ಎತ್ತಿದರು.

ಈ ಸಮಾಜದಲ್ಲಿ ಅತಿಯಾಗಿ ಬೇರೂರಿದ್ದ ಈ ಜಾತಿ ವ್ಯವಸ್ಥೆಯ ಬಗ್ಗೆ, ವರ್ಣಾಶ್ರಮದ ನೀತಿಯ ಬಗ್ಗೆ ತಾರತಮ್ಯದ ಬಗ್ಗೆ ತೀರ್ವವಾಗಿ ವಿರೋಧಿಸುತ್ತಾ ಬಂದರು. ಈ ಹಂತದಲ್ಲಿ ಅವರಿಗೆ ಅಪಾರ ನೋವುಗಳು ಅವರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಬಂದವು. ಅವನ್ನೆಲ್ಲ ನುಂಗಿಕೊಂಡು ಶಾಂತ ರೀತಿಯಲ್ಲಿ ತಾಳ್ಮೆಯಿಂದ ಒಂದು ಯೋಜನಾ ಬುದ್ಧ ಅಂಶವನ್ನು ತದನಂತರದಲ್ಲಿ ಹಾಕಿಕೊಂಡು, ಹಲವಾರು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ನೈತಿಕ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದವರು ಅಂಬೇಡ್ಕರ್ ರವರು.
ಬಾಲ್ಯದಲ್ಲಿ ಅಲ್ಲದೆ ತಾವು ಓದುತ್ತಿದ್ದ ಸಂದರ್ಭದಲ್ಲಿ ಕೂಡ ಅನೇಕ ಕಷ್ಟಗಳನ್ನು ಕೂಡ ಎದುರಿಸಿದರು. ಒಂದು ರೀತಿಯಲ್ಲಿ ಅವರ ಕುಟುಂಬದಲ್ಲಿ ಬಡತನ ಇದ್ದರೂ ಕೂಡ ಓದುವ ಛಲವನ್ನು ಕೂಡ ಅವರು ಎಂದು ಬಿಡಲಿಲ್ಲ.

1912 ರಲ್ಲಿ ಅಂದಿನ ಬಾಂಬೆ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನು ಪಡೆದ ಅಂಬೇಡ್ಕರ್, ನಂತರ, ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಎಂ.ಎ. ಪಿಹೆಚ್‌ಡಿ ಪದವಿ ( ಅರ್ಥಶಾಸ್ತ್ರ) ಪಡೆದರು. ನಂತರದ ವರ್ಷಗಳಲ್ಲಿ ಅವರು ಹಲವಾರು ವಿಶ್ವವಿದ್ಯಾನಿಯಗಳಿಂದ ಗೌರವ ಡಾಕ್ಟರೇಟ್ ಗಳನ್ನು ಸಹಾ ಪಡೆದರು. ನಮ್ಮ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲೂ ಕೂಡ ಅಧ್ಯಯನ ನಡೆಸುತ್ತಾ, ಎಲ್ಲವನ್ನು ತಿಳಿದುಕೊಳ್ಳುತ್ತಾ, ಅಲ್ಲಿಂದಲೇ ಭಾರತವನ್ನ ಸಮೃದ್ಧದೆಡೆಗೆ ಕೊಂಡೊಯ್ಯಲು ಯೋಜನೆಗಳನ್ನ ರೂಪಿಸಿದರು. ಒಂದು ಮೂಲದ ಪ್ರಕಾರ ಡಾ.ಬಿ.ಆರ್. ಅಂಬೇಡ್ಕರ್ ವಿವಿಧ ವಿಶ್ವವಿದ್ಯಾನಿಲಯಗಳಿಂದ ಒಟ್ಟು 32 ಪದವಿಗಳನ್ನು ಪಡೆದಿದ್ದರು ಎನ್ನುವ ಅಂಶವು ಕಂಡು ಬರುತ್ತದೆ. ಇದೊಂದು ದಾಖಲೆಯೇ ಸರಿ. ನಾವು ಬಾಲ್ಯದಲ್ಲಿ ಯೋಗ್ಯ ಶಿಕ್ಷಣವನ್ನು ನೀಡಿದ್ದೆ ಆದಲ್ಲಿ ಈ ರೀತಿಯ ಸಮಾಜಮುಖಿ ಚಿಂತನೆಗಳು ಎಲ್ಲರಲ್ಲೂ ಕೂಡ ಮೂಡುತ್ತವೆ ಎನ್ನುವುದಕ್ಕೆ ಇವರು ಸಾಕ್ಷಿಯಾದರು. ಇವರು ತಮ್ಮ ಬಾಲ್ಯ ಮತ್ತು ನಂತರದಲ್ಲಿ ಕಷ್ಟಗಳ ಸುರಿಮಳೆಗೆ ಸಿಲುಕಿದರೂ ಕೂಡ ಎಲ್ಲೋ ಒಂದು ಕಡೆ ಸ್ವಾತಂತ್ರ್ಯದ ಬಗ್ಗೆಯೂ ಕೂಡ ಗಮನ ಹರಿಸುತ್ತಿದ್ದರು.
ಅದೇ ವೇಳೆಯಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅಂಬೇಡ್ಕರ್ ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು.
ತಾವು ಓದಿದ ವಿಷಯದಲ್ಲಿ ಎಲ್ಲವನ್ನು ಕೂಡ ತಿಳಿದುಕೊಂಡಿದ್ದರು. ಅದರಲ್ಲೂ ಇವರ ಕಾನೂನಿನ ಪಾಂಡಿತ್ಯವನ್ನು ಮನಗಂಡು
ಇವರನ್ನು ” ಕರಡು ಸಂವಿಧಾನ ರಚನಾ ಸಮಿತಿ ” ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ದೀರ್ಘ ಕಾಲದ ಅಧ್ಯಯನದ ನಂತರ, ಅಂಬೇಡ್ಕರ್ ರವರು ವಿಶ್ವ ದಲ್ಲೇ ಅತಿ ದೊಡ್ಡ ಹಾಗೂ ದೀರ್ಘವಾದ ಲಿಖಿತ ಸಂವಿಧಾನವನ್ನು ನೀಡುವ ಮೂಲಕ” ಇಡೀ ವಿಶ್ವದಲ್ಲೇ ಭಾರತದ ಸಂವಿಧಾನಕ್ಕೆ ಮಹತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟರು. ಇಡೀ ವಿಶ್ವವೇ ನಮ್ಮ ಭಾರತದತ್ತ ಚಿತ್ತಹರಿಸಲು ಪ್ರೇರಕರ ಶಕ್ತಿಯಾದರು.
1947 ಆಗಸ್ಟ್ 15 ರಂದು ದಿವಂಗತ ಪಂಡಿತ್ ಜವಹರಲಾಲ್ ನೆಹರೂ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಯಾದ ಪ್ರಪ್ರಥಮ ದೇಶಿಯ ಸರ್ಕಾರದಲ್ಲಿ ಅಂಬೇಡ್ಕರ್ ದೇಶದ ಪ್ರಪ್ರಥಮ ಕಾನೂನು ಸಚಿವರಾಗಿ ನೇಮಕಗೊಂಡರು. ಇದು ಅವರ ಜೀವನದ ಒಂದು ಅತ್ಯಮೂಲ ಘಟನೆಯಾಯಿತು. ದುರದೃಷ್ಟವಶಾತ್, ತಮ್ಮ ಮಹತ್ವಾಕಾಂಕ್ಷೆಯ ” ಹಿಂದೂ ಕೋಡ್ ” ಮಸೂದೆಗೆ ಸ್ವಪಕ್ಷೀಯರಿಂದಲೇ ವಿರೋಧ ಕೇಳಿ ಬಂದಾಗ ಹಾಗೂ ಸದರಿ ಮಸೂದೆಗೆ ಸಂಸತ್ತಿನಲ್ಲಿ ಸೋಲುಂಟಾದಾಗ, ತೀವ್ರ ಮನನೊಂದು ತಮ್ಮ ಹುದ್ದೆಗೆ 27.09.1951 ರಂದು ರಾಜಿನಾಮೆ ನೀಡಿದರು.

ಹೀಗೆ ಸಿಕ್ಕಾಧಿಕಾರವನ್ನು ಉಪಯೋಗಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸಿದರು. ನಂತರ ಅಲ್ಲೇ ಅವಮಾನಗಳು ಬಂದಾಗ ಅದನ್ನೇ ತಿರಸ್ಕರಿಸಿದರು. ಇದು ಅವರು ಕಂಡುಕೊಂಡಿದ್ದ ತಮ್ಮ ಜೀವನದ ಅತ್ಯುನ್ನತ ವ್ಯಕ್ತಿತ್ವವಾಗಿತ್ತು. ಇವರು ಕೇವಲ ಪಠ್ಯವ ದಿನ ಜೊತೆಗೆ ಬೇರೆ ಬೇರೆ ವಿಷಯಗಳ ಬಗ್ಗೆಯೂ ಕೂಡ ನಿರಂತರವಾಗಿ ಅಧ್ಯಯನವನ್ನು ಮಾಡಿಕೊಂಡು ಬಂದಿದ್ದರು. ಅವುಗಳೆಲ್ಲರ ಫಲವಾಗಿ ಅಂಬೇಡ್ಕರ್ ರವರು
ಓರ್ವ ಶ್ರೇಷ್ಠ ಬರಹಗಾರರೂ ಆಗಿದ್ದರು.

ಡಾ.ಅಂಬೇಡ್ಕರ್ ಭಾರತದಲ್ಲಿ ಜಾತಿ ಪದ್ದತಿ, ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ, ಬುದ್ದಿಸಂ ಮತ್ತು ಕಮ್ಯೂನಿಸಂ ಸೇರಿದಂತೆ ಹಲವಾರು ಮೌಲಿಕ ಕೃತಿಗಳನ್ನು ರಚಿಸುವುದರ ಜೊತೆಗೆ ಹಲವಾರು ಸಂಶೋಧನಾ ಲೇಖನಗಳನ್ನು ಸಹಾ ಬರೆದಿದ್ದಾರೆ. ಯಾವತ್ತೋ ಬರೆದ ಅವರ ಚಿಂತನೀಯ, ಮೌಲಯುತ ಬರಹಗಳು ಇವತ್ತಿಗೂ ಕೂಡ ನಮ್ಮ ಸಮಾಜಕ್ಕೆ ಮಾರ್ಗದರ್ಶಿ ಸೂಚಿಯಾಗಿವೆ. ಜೊತೆಗೆ ನೊಂದವರ ಪಾಲಿಗೆ ಬೆಳಕಾಗಿವೆ. ಜೊತೆಗೆ ಸ್ಪಷ್ಟ ಮಾಹಿತಿಯನ್ನು ಕೂಡ ನೀಡುತ್ತಿವೆ. ಇದು ಅವರ ಓದಿಗೆ ಮತ್ತು ಬರಹಕ್ಕೆ ಇದ್ದ ತಾಕತ್ತಾಗಿತ್ತು!.
ಹಿಂದೂ ಧರ್ಮದ ಕಂದಾಚಾರಗಳಿಂದ ಭ್ರಮನಿರಸನಗೊಂಡ ಅಂಬೇಡ್ಕರ್ ತಮ್ಮ ಅಸಂಖ್ಯಾತ ಬೆಂಬಲಿಗರೊಂದಿಗೆ 1956 ರ ಅಕ್ಟೋಬರ್ ನಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿ, ಬೌಧ್ದ ಧರ್ಮವನ್ನು ಸ್ವೀಕರಿಸಿದರು. ಅದಾದ ಕೆಲವೇ ದಿನಗಳಲ್ಲಿ ಡಾ.ಅಂಬೇಡ್ಕರ್ ನಮ್ಮಿಂದ ಬಾರದ ಲೋಕಕ್ಕೆ ತೆರಳಿ ದೂರವಾದರು.

ಅವರು ಇಂದು ಭೌತಿಕವಾಗಿ ನಮ್ಮೊಟ್ಟಿಗೆ ಇಲ್ಲದಿದ್ದರೂ ಕೂಡ ಅವರು ರಚಿಸಿದ ಸಂವಿಧಾನದ ತತ್ವ ಸಿದ್ಧಾಂತಗಳು, ಅಮೂಲಾಗ್ರ ಸತ್ವಯುತ ಚಿಂತನಗಳು ಇವೆಲ್ಲದರ ಮೂಲಕ ಸದಾ ನಮ್ಮ ಮನೆ- ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಈಗಲೂ ಕೂಡ ಅಂಬೇಡ್ಕರ್ ಅವರ ಕುರಿತಾಗಿ ಅನೇಕ ಗ್ರಂಥಾಲಯಗಳಲ್ಲೂ ಕೂಡ ಅವರ ಪುಸ್ತಕಗಳು ಸಿಗುತ್ತವೆ. ಜೊತೆಗೆ ಅಂಬೇಡ್ಕರ್ ವಿಶ್ವವಿದ್ಯಾಲಯಗಳು ಇರುವುದರಿಂದ ಮತ್ತಷ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟಾಗಿದೆ. ಅನೇಕ ಸವಲತ್ತುಗಳು ಕೂಡ ಸಿಗುತ್ತಿವೆ. ಇದರಿಂದಾಗಿ ಅಧ್ಯಯನ ಮಾಡುವ ಯಾವುದೇ ಜನಾಂಗಕ್ಕೂ ಕೂಡ ಅಂಬೇಡ್ಕರ್ ಅವರ ಚಿಂತನೆಗಳು ನಿರಂತರವಾಗಿ ಬೆಳಕಾಗಿವೆ. ವ್ಯಕ್ತಿತ್ವದಲ್ಲಿ….. ಜ್ಞಾನದಲ್ಲಿ…… ಇವರು ಬೃಹತ್ ಆಲದ ಮರದಂತಿದ್ದದ್ದರು.

ಅಂಬೇಡ್ಕರ್ ರವರು ಓರ್ವ ಶ್ರೇಷ್ಠ ನ್ಯಾಯವಾದಿಯಾಗಿ, ಅರ್ಥಶಾಸ್ತ್ರಜ್ಞರಾಗಿ, ಲೇಖಕರಾಗಿ, ಚಿಂತಕರಾಗಿ, ಶ್ರೇಷ್ಠ ವಾಗ್ಮಿಯಾಗಿ, , ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ಕಾನೂನು ಸಚಿವರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಶ್ರೇಷ್ಠ ಮಾನವತಾವಾದಿಯಾಗಿ ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತುಗಳು ಇವತ್ತಿಗೂ ಕೂಡ ಹಸಿ ಹಸಿ ನೆನಪನ್ನು ಮೂಡಿಸುತ್ತವೆ.

ಶ್ರೇಷ್ಠ ರಾಜನೀತಿಜ್ನರಿಗೆ 1990 ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಸರ್ಕಾರ ದೇಶದ ಪರಮೋಚ್ಚ ನಾಗರೀಕ ಪದವಿಯಾದ ” ಭಾರತ ರತ್ನ” ವನ್ನು ನೀಡಿ ಗೌರವಿಸಿತು. ನಿಜಕ್ಕೂ ಇವರು ನಮ್ಮ ಭಾರತದ ಪ್ರತಿಯೊಬ್ಬ ನಾಗರಿಕರ ಪಾಲಿಗೆ ರತ್ನಕ್ಕಿಂತಲೂ ಮಿಗಿಲಾದವರು. ಅವರ ಹುಟ್ಟುಹಬ್ಬವನ್ನ ಭಾರತದ್ದೆಲ್ಲೆಡೆ ಎಲ್ಲಾ ಜನಾಂಗದವರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಆಚರಿಸುತ್ತಾ ಬಂದಿದ್ದಾರೆ. ಅದು ಕೇವಲ ಆಚರಣೆಯಾಗದೆ ಅವರ ಜನ್ಮ ದಿನಾಚರಣೆ ದಿನದಂದು ಅವರು ನಮಗೆಲ್ಲ ಬಿಟ್ಟು ಹೋಗಿರುವ ಸಂವಿಧಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಸಂವಿಧಾನದಲ್ಲಿ ಇರುವ ಹಕ್ಕುಗಳನ್ನು ಪಡೆದುಕೊಂಡು, ಕರ್ತವ್ಯಗಳನ್ನ ಚಾಚು ತಪ್ಪದೇ ನಿರ್ವಹಿಸಲೇಬೇಕು. ಆಗ ಮಾತ್ರ ನಮ್ಮ ಭಾರತ ಸಂವಿಧಾನಕ್ಕೆ ನಾವು ಸಲ್ಲಿಸಿದ ದಿಟ್ಟ ಗೌರವವಾಗುತ್ತದೆ. ನಾವು ಆ ಜಾತಿ, ಈ ಜಾತಿ, ಬಡವ- ಶ್ರೀಮಂತ ಎಂಬ ತಾರತಮ್ಯವನ್ನು ಬದಿಗಿಟ್ಟು “ವಿವಿಧತೆಯಲ್ಲಿ ಏಕತೆ”- ಎನ್ನುವಂತೆ ನಮ್ಮ ಎಲ್ಲಾ ಭಾರತೀಯರು ಕೂಡ ಒಟ್ಟಾಗಿ, ಏನೇ ಕಷ್ಟ ಬಂದರೂ ಕೂಡ ಸಂಕಲ್ಪವನ್ನು ಮಾಡಲೇಬೇಕು.

ಅದರಲ್ಲೂ ನಮ್ಮ ಯುವಜನತೆ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಕೇವಲ ಓದುವುದರ ಮೂಲಕ ಅಲ್ಲದೆ, ತಮ್ಮ ತಮ್ಮ ಜೀವನದಲ್ಲೂ ಕೂಡ ಅಳವಡಿಸಿಕೊಳ್ಳಬೇಕು. ನಮ್ಮ ಭಾರತ ಸಂವಿಧಾನವನ್ನ ಗೌರವಿಸಬೇಕು. ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಇಂತಹ ಶ್ರೇಷ್ಠ ಹೋರಾಟಗಾರರನ್ನು ಸದಾ ನೆನಪಿಸಬೇಕು. ಅವರ ಜಯಂತಿಗಳು ಮತ್ತು ಸಂಸ್ಮರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಮೀಸಲಾಗಬಾರದು. ಅದು ಒಂದು ರೀತಿಯಲ್ಲಿ ಸಾಂಕೇತಿಕವಾಗಿ ವರ್ಷಪೂರ್ತಿ ಮುನ್ನುಡಿಯಂತೆ ಮಾಡಿಕೊಂಡು, ಸದಾ ಜಾಗೃತವಾಗಿದ್ದುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗೋಣ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *