ವರದಿ: ಕೆ.ಟಿ.ಮೋಹನ್ ಕುಮಾರ್
ಕೆ.ಆರ್.ನಗರ (ಮೈಸೂರು ಜಿಲ್ಲೆ): ಪ್ರತಿಯೊಬ್ಬರೂ ಸಹಕಾರ ಮನೋಭಾವನೆಯೊಂದಿಗೆ ತಮ್ಮ ಬದುಕನ್ನು ನಡೆಸಬೇಕು ಎಂದು ಖ್ಯಾತ ಮೂಳೆ ತಜ್ಞ ವೈದ್ಯ ಡಾ.ಕೆ.ಆರ್.ಗೌತಮ್ ಹೇಳಿದರು.
ಅವರು ಕೆ.ಆರ್.ನಗರ ಪಟ್ಟಣದಲ್ಲಿ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಹೊರ ತಂದಿರುವ 2026ನೇ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಹನೀಯರುಗಳ ಬಗ್ಗೆ ಕೇವಲ ನಾವು ಮಾತನಾಡುವುದು ಮುಖ್ಯವಲ್ಲ ಅವರು ನಡೆದು ಬಂದ ಹಾದಿಯಲ್ಲಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಯಾರಿಗೆ ಯಾವ ಅವಶ್ಯಕತೆ ಇರುತ್ತದೆ ಅಂತಹವರಿಗೆ ಅದನ್ನು ಪೂರೈಸಿದರೆ ಅದಕ್ಕೆ ಒಂದು ಬೆಲೆ ಇರುತ್ತದೆ. ಯಾವುದೇ ಅವಶ್ಯಕತೆ ಇಲ್ಲದವರಿಗೆ ನೆರವಾದರೆ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ.
ಇರುವವರಿಗೆ ನೆರವಾಗುವ ಬದಲು ಇಲ್ಲದವರಿಗೆ ನೆರವಾಗುವ ಮೂಲಕ ಅವರ ಬದುಕಿಗೆ ಆಸರೆಯಾಗುವ ಕೆಲಸವನ್ನು ಮಾಡುವ ಮೂಲಕ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕು ಎಂದರು.
ಜೀವನದಲ್ಲಿ ಪರಸ್ಪರ ದ್ವೇಷ, ಅಸೂಯೆ, ತಾರತಮ್ಯ ನೀತಿಗಳನ್ನು ಬಿಟ್ಟು ಎಲ್ಲರೊಂದಿಗೂ ಪ್ರೀತಿ, ವಿಶ್ವಾಸ, ಸಹಬಾಳ್ವೆಯೊಂದಿಗೆ ನಡೆದುಕೊಳ್ಳಬೇಕು. ನಮ್ಮ ಜೀವಿತಾವಧಿಯಲ್ಲಿ ಅಶಕ್ತರಿಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸೊಸೈಟಿಯು ಯಾವುದೇ ಆಡಂಬರಗಳಿಗೆ ಆದ್ಯತೆಯನ್ನು ನೀಡದೆ ಸೊಸೈಟಿಯನ್ನು ಗಟ್ಟಿಯಾಗಿ ಕಟ್ಟಿ ಬೆಳೆಸುವ ಕೆಲಸದೊಂದಿಗೆ ಸಾರ್ವಜನಿಕರಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಿರುವುದು ಉತ್ತಮ ಸೇವೆಯಾಗಿದೆ ಎಂದರು.
ಸಾಲಿಗ್ರಾಮದಲ್ಲಿ ಆರಂಭಗೊಂಡ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಜನರ ನಂಬಿಕೆಗೆ ಪಾತ್ರವಾಗುವ ಮೂಲಕ ಕೆ.ಆರ್.ನಗರ ಪಟ್ಟಣದಲ್ಲಿ ಮತ್ತೊಂದು ಶಾಖೆಯನ್ನು ತೆರೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸೊಸೈಟಿಯು ಉತ್ತಮವಾಗಿ ನಡೆಯುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವೈದ್ಯ ಡಾ.ಕೆ.ಆರ್.ಗೌತಮ್, ಪತ್ರಕರ್ತರಾದ ಕೆ.ಟಿ.ಮೋಹನ್ ಕುಮಾರ್ ಮತ್ತು ಜೈನಹಳ್ಳಿ ಬಸವರಾಜು ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ
ಕೆ.ಆರ್.ಶ್ಯಾಮಸುಂದರ್, ಉಪಾಧ್ಯಕ್ಷೆ ಭಾಗ್ಯಗುರುರಾಜ್, ನಿರ್ದೇಶಕರುಗಳಾದ ಎಂ.ಎಸ್.ನರಸಿಂಹ, ಮಂಜುನಾಥ,
ಕೆ.ಎ.ಶಶಿಕುಮಾರ್, ನೇತ್ರಾವತಿ ಸುರೇಶ್,
ಎಸ್.ಕೆ.ಕಮಲರೇಣುಕೇಶ್, ವೃತ್ತಿಪರ ನಿರ್ದೇಶಕರಾದ ಅಶ್ವಿನಿ ಸ್ಪಿನ್ ಕೃಷ್ಣ, ಡಿ.ಆರ್.ಅವಿನಾಶ್, ಸಿಇಓ ಸಿಂಧೂ ಮಂಜುನಾಥ್, ಸಿಬ್ಬಂದಿ ಮಮತಾರಾಜೇಶ್ ಗೌಡ, ವಕೀಲ ಸ್ಪಿನ್ ಕೃಷ್ಣ, ಉದ್ಯಮಿ ಅನಿಲ್ ಕುಮಾರ್, ಮುಖಂಡರುಗಳಾದ ನವೀನ್, ಸುರೇಶ, ಗುರುರಾಜ್, ರೇಣುಕೇಶ್ ಸೇರಿದಂತೆ ಹಲವರು ಇದ್ದರು.