ಆಧುನಿಕವಾಗಿ ಮನುಷ್ಯ ಎಷ್ಟೇ ಮುಂದುವರೆದಿದ್ದರೂ ವಿಜ್ಞಾನ ಅಗೋಚರಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಕುತೂಹಲದ ಕಣ್ಣುಗಳು ಅಂತಹ ಅಗೋಚರಗಳನ್ನು ಬಗೆಯುವ ರಹಸ್ಯಗಳನ್ನು ಬಯಲುಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸಾಕಷ್ಟು ಕೆಲಸ ಮಾಡಿವೆ. ಇಪ್ಪತ್ತೊಂದನೆ ಶತಮಾನದಲ್ಲಿ ಜೀವಿಸುತ್ತಿರುವ ನಾವುಗಳು ವಿಜ್ಞಾನದ ಮತ್ತು ತಂತ್ರಜ್ಞಾನದ ಅಂತಃಕರಣದಲ್ಲಿ ಅದರ ಜೋಗುಳದಲ್ಲಿ ಅಷ್ಟೇ ಅಲ್ಲದೆ ಅದರ ತೊಡೆಯ ಮೇಲೆ ನಿದ್ರೆ ಬಂದರೂ ಬಾರದಿದ್ದರೂ ಮಲಗಿದ್ದೇವೆ. ಆದರೆ ಈ ಬಗೆಯ ವ್ಯಾಪಕದ ಗುರುತಿಗೆ ಬುನಾದಿ ರೂಪದ ಕೆಲಸಗಳನ್ನು ಕೈಗೊಂಡ ಮಹಾತ್ಮರು ಸಿ.ವಿ.ರಾಮನ್ ಅವರು. ಒಂದು ಕಾಲಕ್ಕೆ ಭಾರತವೆಂದರೆ ದೈವದ ಅಡಿಗಲ್ಲಿನ ಮೇಲೆ ನಿಂತಿರುವ ಕಂದಾಚಾರ ಮೂಢನಂಬಿಕೆಗಳ ಆಶ್ರಯದಲ್ಲಿ ಜೀವಿಸುತ್ತಿರುವ ಸಂಪ್ರದಾಯ ಮನಸ್ಸುಗಳ ಬೃಂದಾವನ ಎಂದು ಪರಿಭಾವಿಸಿದ್ದರು. ಇಂತಹ ಸಂಕುಚಿತ ಪದವಿಗಳ ಬೆನ್ನು ಮೂಳೆ ಮುರಿದು ಜಗತ್ತಿನ ಕೌತುಕದ ಕಣ್ಣುಗಳು ಭಾರತಾಂಬೆಯ ಕಡೆ ತಿರುಗಿ ನೋಡುವಂತೆ ಮಾಡಿದ್ದು ರಾಮನ್ ಪರಿಣಾಮ ಎಂದೇ ಸುವಿಖ್ಯಾತವಾಗಿರುವ ಬೆಳಕಿನ ವಕ್ರೀಭವನ ಕುರಿತಾದ ಸಂಶೋಧನೆ. ಈ ಬಗೆಯ ಅವರ ಬೆಳಕನ್ನು ಕುರಿತಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದ ದಿನವೇ 28 ಫೆಬ್ರವರಿ 1928 ಆದ್ದರಿಂದ ಫೆಬ್ರವರಿ 28ರ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ.
ಸಾಧನೆಯ ಪಥದಲ್ಲಿ ಸಾಗುವಾಗ ಗೋಚರವಾಗುವ ಮುಖಗಳು ನೂರು ನೂರಾರು ಅಂತಹ ವಿರಳ ಸಾಧನೆಯ ವ್ಯಕ್ತಿತ್ವ ಕುರುಹು ನಮ್ಮ ಸಿ.ವಿ.ರಾಮನ್. ಅವರ ಪೂರ್ಣ ಹೆಸರು ಚಂದ್ರಶೇಖರ್ ವೆಂಕಟ ರಾಮನ್. ಕುತೂಹಲದ ಕಣ್ಣುಗಳು ಹೊಸದನ್ನು ತಿಳಿದುಕೊಳ್ಳಲು ಸದಾ ಕಾತರವಾಗಿರುತ್ತವೆ ಎಂಬುದಕ್ಕೆ ರೂಪಕವಾಗಿ ನಿಂತ ಸಿ.ವಿ.ರಾಮನ್ ಅವರು ಬೆಳಕಿನ ಬಗ್ಗೆ ವಿಶೇಷವಾದ ಆಸಕ್ತಿಯನ್ನು ತಾಳಿ ಅದರ ನೋಟದ ಬಗ್ಗೆ ಹೊಸಬೆಳಕನ್ನು ಮೂಡಿಸುವ ಪ್ರಯತ್ನದಿಂದ ಬೆಳಕಿನ ಚದುರುವಿಕೆಯ ಕುರಿತು ವಿಶೇಷ ಉಪನ್ಯಾಸ ನೀಡುವುದರ ಮೂಲಕ ಹಾಗೂ ಬೆಳಕಿನ ಆವಿಷ್ಕಾರದ ಹಾದಿಯಲ್ಲಿ ವಿಜ್ಞಾನ ವಿಶ್ವಕ್ಕೆ ಹೊಸಬೆಳಕು ತಂದು ಜಗತ್ತಿನ ಮನಸ್ಸುಗಳ ಗಮನ ಸೆಳೆದ ಚಂದ್ರಶೇಖರ ವೆಂಕಟರಾಮನ್ ಜನಿಸಿದ್ದು 1888ರ ನವೆಂಬರ್ 7ರಂದು. ತಮಿಳು ನಾಡಿನ ತಂಜಾವೂರು ಜಿಲ್ಲೆಯ ತಿರುಚಿನಾಪಳ್ಳಿ ಪಟ್ಟಣದ ಸಮೀಪದ ಅಯ್ಯನಪಟ್ಟಿ ಗ್ರಾಮದಲ್ಲಿ. ತಂದೆ ಚಂದ್ರಶೇಖರ ಅಯ್ಯರ್ ವೃತ್ತಿಯಲ್ಲಿ ಭೌತಶಾಸ್ತ್ರ ಅಧ್ಯಾಪಕರು. ತಾಯಿ ಪಾರ್ವತಿ ಅಮ್ಮಾಳ, ಮಕ್ಕಳ ಸ್ಕೂಲು ಮನೇಲಲ್ವೆ ಎಂಬ ಕೈಲಾಸಂ ಅವರ ಮಾತಿನಂತೆ ಸುಸಂಸ್ಕೃತ ಕುಟುಂಬದ ಎಲ್ಲಾ ಸದ್ವಿಚಾರಗಳು ರಾಮನ್ ಅವರ ಮೇಲೆ ಒಳ್ಳೆಯ ಪರಿಣಾಮ ಪ್ರಭಾವವನ್ನೇ ಬೀರಿತು ಜೊತೆಗೆ ಪ್ರೋತ್ಸಾಹದ ಬೆಂಬಲ ಲಭ್ಯವಾಯಿತು ಹಾಗಾಗಿ ಚಿಕ್ಕಂದಿನಿಂದಲೇ ಪ್ರಚಂಡ ಪ್ರತಿಭೆಯಾಗಿ ಆರಳಿದ ರಾಮನ್ ತಮ್ಮ 11ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದರು. ನಂತರ 2 ವರ್ಷಗಳಲ್ಲಿ ಯೂನಿವರ್ಸಿಟಿಯ ಇಂಟರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ತಮ್ಮ 13ನೇ ವಯಸ್ಸಿಗೇ ಬಿ.ಎ. ವಿದ್ಯಾಭ್ಯಾಸಕ್ಕಾಗಿ ಮದರಾಸಿನ ಪ್ರತಿಷ್ಟಿತ ಪ್ರೆಸಿ ದ್ದರು. ಆ ಕಾಲೇಜಿನಲ್ಲೇ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿ ಪದಕದೊಂದಿಗೆ ಬಿ.ಎ. ಪದವಿ ಗಳಿಸಿದರು. ಡೆನ್ಸಿ ಕಾಲೇಜಿಗೆ ದಾಖಲಾದರು. ಆ ಕಾಲೇಜಿನಲ್ಲಿ ಅತ್ಯುತ್ತಮ ಹಾಗೂ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದರು. 1904ರಲ್ಲಿ ಇಂಗ್ಲಿಷ್ ನೊಂದಿಗೆ ಭೌತಶಾಸ್ತ್ರ ಅಧ್ಯಯನ ಮಾಡಿ ಚಿನ್ನದ ಪದಕದೊಂದಿಗೆ ಬಿ.ಎ. ಪದವಿ ಪಡೆದುಕೊಂಡರು. 1907 ಜನವರಿಯಲ್ಲಿ ಪದಕ ಮತ್ತು ಬಹುಮಾನದೊಡನೆ ಭೌತಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ ಪಡೆದ ರಾಮನ್ನರು ಆದೇ ವರ್ಷ ಐಎಫ್ಎಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಅದೇ ಸಮಯಕ್ಕೆ ಅವರಿಗೆ ಕೊಲ್ಕತ್ತಾದ ಅಕೌಂಟೆಂಟ್ ಜನರಲ್ ಕಛೇರಿಯಲ್ಲಿ ಸಹಾಯಕ ಜನರಲ್ ಅಕೌಂಟೆಂಟ್ ಆಗಿ ಸರ್ಕಾರಿ ಹುದ್ದೆಯೂ ದೊರೆಕಿತು. ಸರ್ಕಾರಿ ಕೆಲಸದಲ್ಲಿದ್ದರೂ ಕುತೂಹಲ ಎಂಬುದು ಅವರನ್ನು ಪ್ರವೃತ್ತಿಯಾಗಿ ಹೂ ಬಿಟ್ಟಿದ್ದ ಭೌತಶಾಸ್ತ್ರವನ್ನು ಕುರಿತಾದ ವಿಶೇಷ ಕಾಳಜಿ ಮತ್ತಷ್ಟು ಜೊತೆಗೂಡಿಕೊಂಡು ಅದರ ಬಗ್ಗೆ ಇನ್ನಷ್ಟು ಆಸಕ್ತಿ ಹೊಂದಿ ಅದನ್ನು ತಾವೇ ಬಿಡಲಾರದೆ ಹೋದರು. ಹಾಗಾಗಿ ಮಹೇಂದ್ರಲಾಲ್ ಸರಕಾರ್ ಎಂಬ ವೈದ್ಯರು ಸ್ಥಾಪಿಸಿದ್ದ ಕೊಲ್ಕತ್ತಾದ “ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್’ ಸಂಸ್ಥೆಗೆ ಅವರು ಸದಸ್ಯರಾಗಿ ಸೇರಿ ನಂತರ ಅಲ್ಲಿ ಕಾರ್ಯದರ್ಶಿಯೂ ಆದರು.
ರಾಮನ್ ಅವರ ವಿಜ್ಞಾನದ ಪ್ರತಿಭೆ ಪ್ರಪಂಚದಾದ್ಯಂತ ಹರಡುತ್ತಿರುವಂತೆಯೇ 1921ರಲ್ಲಿ ಇಂಗ್ಲೆಂಡಿನಲ್ಲಿ ಬೇಸಿಗೆಯ ವಿಜ್ಞಾನ ಮೇಳದಲ್ಲಿ ಭಾಗವಹಿಸಲು ಅವರಿಗೆ ವಿಶೇಷ ಆಹ್ವಾನ. ಇದು ರಾಮನ್ ಮತ್ತು ಅವರು ಪ್ರತಿನಿಧಿಸುತ್ತಿದ್ದ ಭಾರತಕ್ಕೆ ಗೌರವವಾಗಿತ್ತು ಹಡಗಿನಲ್ಲಿ ಪ್ರಯಾಣ ಬೆಳೆಸಿದ ಅವರು ಸಮುದ್ರದ ನೀರನ್ನೇ ಕುತೂಹಲದಿಂದ ನೋಡುತ್ತಾ ಸಮುದ್ರದ ನೀರು ನೀಲಿಯಾಗಿರುವು ದೇಕೆ? ಎಂಬ ಪ್ರಶ್ನೆಯನ್ನು ತಲೆಯಲ್ಲಿ ತುಂಬಿಕೊಂ ಡರು. ಇಂಗ್ಲೆಂಡಿನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಮತ್ತೆ ಭಾರತಕ್ಕೆ ಹಡಗಿನಲ್ಲಿ ಹಿಂದಿರುಗಿದ ಅವರು ಸೂರ್ಯನ ಬಿಸಿಲಿನಲ್ಲಿ ಸಮುದ್ರ ನೀಲಿ ಬಣ್ಣ ತಾಳುತ್ತಿ ರುವುದನ್ನು ಸೂಕ್ಷ್ಮವಾಗಿ ಗಮನಿಸಿದರು. “ಸೂರ್ಯನ ರಶಿಯ ಬೆಳಕು ಈ ನೀರಿನಲ್ಲಿ ಹರಡಿ ಹೋಗಿರುವುದೇ ಸಮುದ್ರದ ನೀರು ನೀಲಿಯಾಗಿರುವುದಕ್ಕೆ ಕಾರಣ ಎಂಬ ಸತ್ಯವನ್ನು ಕಂಡುಕೊಂಡರು. ಈ ವಿಷಯವನ್ನು ಕುರಿತು ಆಳವಾಗಿ ಚಿಂತಿಸಿ “THE COLOUR OF THE SEA” ಪ್ರಬಂಧವನ್ನು ಹಡಗಿನಲ್ಲಿ ಪ್ರಯಾ ಣಿಸುತ್ತಲೇ ಬರೆದರು. ನಂತರ ಅದನ್ನು “NATURE” ಪತ್ರಿಕೆಗೆ ಕಳುಹಿಸಿದರು. ಇದು ರಾಮನ್ ಪರಿಣಾಮದ ಬೆಳಕಿನ ಸಂಶೋಧನೆಗೆ ನಾಂದಿಯಾಯಿತು. 1922ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾದ ರಾಮನ್ನರು 1924ರಲ್ಲಿ ಕೆನಡಾ, ಅಮೆರಿಕ ಮುಂತಾದ ದೇಶಗಳ ಪ್ರವಾಸ ಕೈಗೊಂಡರು. ಕ್ಯಾಲಿ ಪೋರ್ನಿಯಾದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರಿಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ನೀಡಿತ್ತು. ಅವರ ಪ್ರತಿಭೆಯ ಪ್ರಖರ ಹೆಚ್ಚಾದಂತೆಲ್ಲಾ ಪ್ರಪಂಚದ ಪ್ರಸಿದ್ಧ ವಿಜ್ಞಾನಿಗಳೆಲ್ಲಾ ರಾಮನ್ನರ ಒಡನಾಟಕ್ಕೆ ಹಾತೊರೆಯುತ್ತಿದ್ದರು. ಹಾಗಾಗಿ ದೇಶ ವಿದೇಶಗಳ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ, ಚರ್ಚೆ ಮುಂತಾಗಿ ಅವರು ತಮ್ಮನ್ನು ಸಂಪೂರ್ಣ ವಿಜ್ಞಾನಕ್ಕೆ ತೆರೆದುಕೊಂಡಿದ್ದರು.
ಅಂದಿನ ಕಾಲಕ್ಕೆ ರಾಮನ್ ಅವರು ಬಳಸಿಕೊಂಡ ಉಪಕರಣಗಳು ಸಾಮಾನ್ಯವಾದವುಗಳಾಗಿದ್ದವು. ಅತ್ಯದ್ಭುತ ಸಂಶೋಧನೆ ನಡೆಸಿ ತಮ್ಮ ರಾಮನ್ ಪರಿಣಾಮಕ್ಕೆ 1930ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದರು. ಭಾರತದ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ತೋರಗೊಟ್ಟರು. “ಪ್ರಾಯೋಗಿಕ ಭೌತಶಾಸ್ತ್ರ ದಲ್ಲಿ ರಾಮನ್ ಪರಿಣಾಮವು 1920ರ ದಶಕದ ಮೂರು ಅಥವಾ ನಾಲ್ಕು ವಿಶೇಷ ಸಂಶೋಧನೆಗಳಲ್ಲಿ ಒಂದಾಗಿದೆ ಮತ್ತು ವಸ್ತುಗಳ ರಚನೆಯನ್ನು ತಿಳಿ ಯಲು ಮಹತ್ವದ್ದಾಗಿದೆ” ಎಂದು ಅಂದಿನ ರಾಯಲ್ ಸೊಸೈಟಿ ಅಧ್ಯಕ್ಷರೂ ಆಗಿದ್ದ ಖ್ಯಾತ ವಿಜ್ಞಾನಿ ರುದರ್ ಪೋರ್ಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಾಮನ್ನರ ಸಂಶೋಧನೆ ನೋಡಿ ಪ್ರಸಿದ್ಧ ವಿಜ್ಞಾನಿ ಐನ್ ಸ್ಟೈನ್ ಸಹ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಸದಾ ಒಂದಲ್ಲ ಒಂದು ಬಗೆಯ ಪ್ರಯೋಗಶೀಲತೆಯಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದ ರಾಮನ್ ಅವರು ಶಬ್ದ, ಬಣ್ಣ, ಬೆಳಕಿನ ಬಗ್ಗೆ ಆಸಕ್ತಿವೊಂದಿ ಅವುಗಳ ಮೇಲೆ ಪ್ರಯೋಗವನ್ನು ಮಾಡುತ್ತಲೇ ಇದ್ದರು. 1933ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೆ ಬೆಂಗಾವಲಾಗಿ ನಿಂತು ಅದರ ಅನಂತರದ ಅಧ್ಯಕ್ಷರು ಆದರು. ಅಲ್ಲದೆ 1947ರಲ್ಲಿ ಬೆಂಗಳೂರಿನಲ್ಲಿಯೇ ರಾಮನ್ ರೀಸರ್ಚ್ ಇನ್ಸ್ಟಿಟ್ಯೂಟ್ ಎಂದೇ ಪ್ರಖ್ಯಾತವಾಗಿರುವ ಸ್ಥಾಪಿಸಿ ತಮ್ಮ ಕೊನೆಯ ದಿನಗಳವರೆಗೂ ಅಲ್ಲಿಯೇ ಸಂಶೋಧನಾ ಕಾರ್ಯದಲ್ಲಿ ನಿರತರಾದರು.ಅಂತಿಮವಾಗಿ ಹೇಳಬೇಕೆಂದರೆ ಸರ್. ಸಿ.ವಿ.ರಾಮನ್ ಒಬ್ಬ ಹೃದಯವಂತ ಮನುಷ್ಯನಾಗಿ ದೇಶಿ ವಿಜ್ಞಾನಿಯಾಗಿ ಗುರುತಿಸಿಕೊಂಡು ನಮ್ಮ ನಾಡಿನ ದಿವ್ಯತೆಯನ್ನು ಭವ್ಯತೆಯ ಬೆಳಕನ್ನು ಹೊರ ಜಗತ್ತಿಗೆ ತಲುಪಿಸಿದ ರಾಯಭಾರಿಯಾಗಿದ್ದಾರೆ. ಭಾರತದಲ್ಲಿ ಏನಿದೆ ಎಂದು ಪ್ರಶ್ನೆ ಕೇಳುವ ಬಾಯಿಗಳಿಗೆ ಭಾರತದಲ್ಲಿ ಎಲ್ಲವು ಇದೆ ಎಲ್ಲವೂ ಸಾಧ್ಯವೆಂದು ತಮ್ಮ ಸಂಶೋಧನೆಗಳ ರೂಪಗಳಲ್ಲಿ ಸಾಕ್ಷಿಕರಿಸಿದ್ದಾರೆ. ಜ್ಞಾನ ಅರಳದ ಹೊರತು ವಿಜ್ಞಾನ ಬೆಳೆಯಲಾರದು, ವಿಜ್ಞಾನ ಅರದ ಹೊರತು ತಂತ್ರಜ್ಞಾನ ಬೆಳೆಯಲಾರದು ತಂತ್ರಜ್ಞಾನ ಅರಳದ ಹೊರತು ದೇಶದ ಘನತೆ-ಅಭಿವೃದ್ಧಿಯ ಪ್ರಗತಿ ಕಾಣಲಾಗದು.
ವಿಜ್ಞಾನ ಜಗತ್ತಿನ ಬಾಂದಳದಲ್ಲಿ ದೈತ್ಯ ಪ್ರತಿಭೆಯಾಗಿ ಗುರುತಿಸಿಕೊಂಡು ಅದ್ವಿತೀಯ ಸಾಧನೆಗೈದ ರಾಮನ್ ಅವರಿಗೆ 1924ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ, 1925ರಲ್ಲಿ ರಷ್ಯನ್ ಆಕಾಡೆಮಿ ಆಫ್ ಸೈನ್ಸ್ನ ಗೌರವ, 1928ರಲ್ಲಿ ರೋಮನ್ ವಿಜ್ಞಾನ ಸಂಘದಿಂದ ಮೆಟ್ಯೂಸಿ ಪದಕ, 1929ರಲ್ಲಿ ಬ್ರಿಟಿಷ್ ಪ್ರಭುತ್ವದಿಂದ ನೈಟ್ ಪದವಿಯೊಡನೆ ಸರ್ ಬಿರುದು. 1930ರಲ್ಲಿ ನೊಬೆಲ್ ಪ್ರಶಸ್ತಿ ಮತ್ತು ಅದೇ ವರ್ಷ ಲಂಡನ್ನಿನ ರಾಯಲ್ ಸೊಸೈಟಿಯಿಂದ ಹೂಸ್ ಪ್ರಶಸ್ತಿ, 1954ರಲ್ಲಿ ಭಾರತರತ್ನ ಪ್ರಶಸ್ತಿ, ದೇಶ-ವಿದೇಶಗಳ ಹಲವಾರು ಪ್ರಷ್ಠಿತ ವಿವಿಗಳಿಂದ ಗೌರವ ಡಾಕ್ಟರೇಟ್ ಪದವಿಗಳ ಸುರಿಮಳೆ ಸೇರಿದಂತೆ ಅಸಂ ಖ್ಯಾತ ಗೌರವಗಳು, ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಸಿ.ವಿ.ರಾಮನ್ ಅವರು 1970 ನವೆಂಬರ್ 21ರಂದು ನಿಧನರಾದರೂ ಬೆಳಕು ಇರುವವರೆಗೂ ಸೂರ್ಯನ ಪ್ರಖರತೆ ಇರುವವರೆಗೂ ಆರದ ದೀಪವಾಗಿ ಸದಾ ಬೆಳಗುವ ಹಣತೆಯಾಗಿ ಗೋಚರವಾಗುತ್ತಲೇ ಇರುತ್ತಾರೆ.
ಬೆಳಕೇ ಜಗದ ಭೌತಜೀವ ಅಭೌತ ಜೀವಗಳ ತೂಗುವ ತೊಟ್ಟಿಲು, ಬದುಕನ್ನು ಬೆಳಕಿನಿಂದ ಬದುಕಿಸುವಂತೆ ಅನಾವರಣವಾದ ಬೆಳಕು ಬದುಕಿನ ಆವಿಷ್ಕಾರವೇ ವಿಜ್ಞಾನ ಅದರ ಬಳ್ಳಿಯ ಹೂಗಳು ನಾವು -ನೀವು.

ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹಿಂದೂಸ್ಥಾನ್ ಕಾಲೇಜು ಹಾಗೂ
ಹವ್ಯಾಸಿ ಬರಹಗಾರ, ಮೈಸೂರು.