ಚಾಮರಾಜನಗರ: ಸಮಸ್ಯೆ, ಸಂಕಷ್ಟಗಳೇ ಆತ್ಮಹತ್ಯೆಗೆ ಪರಿಹಾರವಲ್ಲ. ಮನುಷ್ಯ ಜೀವನ ಪಕ್ವತೆ, ಪರಿಪೂರ್ಣತೆಗಾಗಿ ಸಾಧನೆಗೈದು ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ಸಲಹೆ ಮಾಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಸಮಸ್ಯೆ, ಸಂಕಷ್ಟಗಳು ಇದ್ದೇ ಇರುತ್ತವೆ. ಹಾಗಂತ ಯಾರೂ ಸಹ ಆತ್ಮಹತ್ಯೆಗೆ ಮುಂದಾಗಬಾರದು. ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ರೈತರ ಸಾಲ ವಿಚಾರಗಳು ಆತ್ಮಹತ್ಯೆಗೆ ಪ್ರಚೋದಿಸಬಹುದು. ಇಂತಹ ಸಂದರ್ಭಗಳಲ್ಲಿ ನೊಂದವರಿಗೆ ಸಮಾಧಾನ, ಸಾಂತ್ವನ ಅವಶ್ಯವಾಗಿದೆ. ಮನುಷ್ಯನ ಜೀವನವು ಬಾಲ್ಯ, ಯೌವ್ವನ, ಮುಪ್ಪು ಈ ಮೂರು ಹಂತಗಳನ್ನು ಒಳಗೊಂಡಿದ್ದು, ಸ್ವಾಭಾವಿಕ ಸಾವು ಬರುವ ತನಕ ನಾವು ಬದುಕಲೇಬೇಕಾಗಿದೆ. ಈಸಬೇಕು, ಇದ್ದು ಜಯಿಸಬೇಕು ಎಂಬಂತೆ ಏನಾದರೂ ಸಾಧನೆಗೈದು ಪರಿಪೂರ್ಣ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.
ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ, ಆತ್ಮಹತ್ಯೆ ಮಹಾಪಾಪ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ದೃತಿಗೆಡದೇ ಪರಿಹಾರೋಪಾಯ ಕಂಡುಕೊಳಬೇಕೇ ವಿನಹ ಆತ್ಮಹತ್ಯೆ ಮಾಡಿಕೊಳ್ಳಬಾರದು. ಮಾನಸಿಕ ಖಿನ್ನತೆಗೆ ಮನೋವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು. ಪ್ರಕೃತಿ ವಿರುದ್ಧವಾಗಿ ಯಾರು ಹೋಗಬಾರದು. ಸ್ವಾಭಾವಿಕ, ಸಹಜ ಹಾಗೂ ಸರಳ ಜೀವನ ರೂಢಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಈಶ್ವರ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಭೂಮಿಯ ಮೇಲಿನ ಒಂದೇ ಜನ್ಮ ನಮ್ಮದಾಗಿದೆ. ಯಾರೂ ಸಹ ಆತ್ಮಹತ್ಯೆಗೆ ಮುಂದಾಗಬಾರದು. ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು. ವೈದ್ಯರಿಂದ, ಸ್ನೇಹಿತರಿಂದ ಮಾನಸಿಕ ಖಿನ್ನತೆಗೆ ಸಲಹೆ ಪಡೆದು ಆತ್ಮಹತ್ಯೆ ಮಾನೋಭಾವದಿಂದ ಹೊರಬರಬೇಕು. ಜೀವನಪ್ರೀತಿ ರೂಪಿಸಿಕೊಳ್ಳಬೇಕು. ಒತ್ತಡ ಜೀವನ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರಳ ಬದುಕು ಕಟ್ಟಿಕೊಳ್ಳಬೇಕು. ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆ ಹೊಂದಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾವು ಸ್ವಾಭಾವಿಕವಾಗಿರಬೇಕು. ಜೀವನದ ಜಿಗುಪ್ಸೆಯಿಂದ ಮಾಡಿಕೊಳ್ಳುವುದೇ ಆತ್ಮಹತ್ಯೆಯಾಗಿದೆ. ಯುವಕರು ಹೆಚ್ಚಾಗಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಪ್ರತಿ ವರ್ಷ 7 ಲಕ್ಷ ಆತ್ಮಹತ್ಯೆ ಸಂಭವಿಸುತ್ತಿದ್ದು, ಕೋವಿಡ್ ಬಳಿಕ ಇದು ಇನ್ನೂ ಹೆಚ್ಚಾಗಿದೆ. ಪ್ರತಿ 40 ಸೆಕೆಂಡ್ಗೆ 1 ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿದೆ. ಆತ್ಮಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಪ್ರತಿ ತಾಲೂಕಿನಲ್ಲಿ ಮನೋಚೈತನ್ಯ ಕ್ಲಿನಿಕ್ ತೆರೆದು ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಮಾನಸಿಕ ಸ್ಥೈರ್ಯ ತುಂಬಲಾಗುತ್ತಿದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮನೋರೋಗ ತಜ್ಞರಾದ ಡಾ. ಎಂ.ಎನ್. ರಾಜೇಶ್ ಅವರು ಆತ್ಮಹತ್ಯೆ ಕುರಿತು ಸವಿವರವಾಗಿ ಮಾತನಾಡಿದರು.
ಇದೇ ವೇಳೆ ಚಾಮರಾಜನಗರ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಆತ್ಮಹತ್ಯೆ ತಡೆ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.