
ಬಹುಭಾಷಾ ಚಿತ್ರ ರಸಿಕರ ಪಾಲಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಮ್ ರವರ ಹಾಡುಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಅಮಿತಾನಂದ!. ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ, ಭಾರತೀಯ ಸಿನಿಮಾ ಲೋಕದ ಜೀವ ಧ್ವನಿಯಾಗಿದ್ದ ಎಸ್.ಪಿ.ಬಿ
ರವರ ಹಾಡುಗಳನ್ನು ಏಕಾಂತದಲ್ಲಿ ಕೇಳುವಾಗ ಹೇಳಿಕೊಳ್ಳಲಾಗದ, ವರ್ಣನಾತೀತ ಮಧುರ ಭಾವನೆಗಳನ್ನು ಎಲ್ಲರ ಮನದಂಗಳದಲ್ಲಿ ಮೂಡಿಸಿಬಿಡುತ್ತವೆ. ಇವರ ಹಾಡುಗಳನ್ನು ಕೇಳುತ್ತಾ ಹೋದರೆ ಮೈ-ಮನಗಳು ರೋಮಾಂಚನಗೊಳ್ಳುತ್ತವೆ! ನೋವುಗಳು ದೂರವಾಗುತ್ತವೆ! ನಲಿವುಗಳಿಂದ ಮನ ಪ್ರಫುಲ್ಲಗೊಳ್ಳುತ್ತದೆ!.
ಹಾಡುವ ಹಕ್ಕಿ ಈಗ ಮೌನಕ್ಕೆ ಶರಣಾಗಿದ್ದರೂ ಸಹ ಅವರು ಹಾಡಿರುವ ಪ್ರತಿಯೊಂದು ಹಾಡುಗಳ ಮೂಲಕ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಬದುಕಿದ್ದರೆ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೊಡಗಿರುತ್ತಿದ್ದರು. ಅವರ ಜೊತೆ ಅವರ ಅಭಿಮಾನಿಗಳು ಕೂಡ.
ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ 4, 1946 ರಲ್ಲೀ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಾರೆ ‘ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ’ ಎಂದು.
ಒಂದು ಚಲನಚಿತ್ರ ಯಶಸ್ಸು ಪಡೆಯಬೇಕಾದರೆ ಚಿತ್ರಗೀತೆಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ನಿರ್ಮಾಪಕರ ಜೊತೆಗೆ ಸಾಹಿತ್ಯ, ಸಂಗೀತ, ಗಾಯನ, ನಟನೆ ಎಲ್ಲವೂ ಸೇರಿ ಚಿತ್ರ ತಯಾರಾಗುತ್ತದೆ. ಗಾಯನ ಕ್ಷೇತ್ರದಲ್ಲಿ ಸಾರ್ವಭೌಮತ್ವವನ್ನು ಸಾಧಿಸಿರುವ ಗಾನಮಾಧುರ್ಯ ದ ಮೇರುಪರ್ವತ ಎಸ್ಪಿ ಸರ್ ಹಾಡಿರುವ ಒಂದೊಂದು ಗೀತೆಗಳೂ ಸಹ ಅಮರ ಮಧುರ!.
ಪ್ರತಿ ಹಾಡುಗಳನ್ನು ಸಹ ಹಾಡುವಾಗ ಏನಾದರೊಂದು ವಿಶೇಷತೆಯನ್ನು ದಾಖಲಿಸುವ ಪ್ರಯತ್ನ ಪ್ರತಿಹಂತದಲ್ಲೂ, ಪ್ರತಿಕ್ಷಣದಲ್ಲೂ ಇವರ ಮನಸ್ಸು ಯೋಚನಾಲಹರಿಯಲ್ಲಿ ಹಾತೊರೆಯುತ್ತಿತ್ತು. ಪ್ರತಿ ಹಾಡಿಗೂ ಸಹ ಅವರ ಸಿದ್ಧತೆ, ಬದ್ಧತೆ, ಸಮಯಪ್ರಜ್ಞೆ ಇತರರಿಗೆ ಮಾದರಿಯಾಗಿದೆ.
ಇವರ ಮನಸ್ಸು ಯಾವಾಗಲೂ ಹಾಡುಗಳಲ್ಲೇ ತುಂಬಿ ತುಳುಕಿತ್ತು. ಒಂದು ರೀತಿಯಲ್ಲಿ ವಿಭಿನ್ನ ಶೈಲಿಯ ಹಾಡುಗಳ ಸ್ಪೆಷಲಿಸ್ಟ್ ಆಗಿದ್ದರು!. ಸುಮಾರು ಹದಿನೈದು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದು ಎಂದರೆ ತಮಾಷೆಯೇ?! ಇವರು ಹಾಡಿರುವ ಪ್ರತಿಯೊಂದು ಹಾಡುಗಳು ಸಹ ಸುವರ್ಣಾಕ್ಷರಗಳಿಂದ ಬರೆದಿಡುವಂತಹವು. ಇದೊಂದು ಯಾರು ಮುರಿಯಲಾಗದ ದಾಖಲೆಯೇ ಸರಿ. ಇದರಿಂದಾಗಿಯೇ ಇವರು ಗಿನ್ನಿಸ್ ದಾಖಲೆಗೆ ಸೇರಿದ್ದಾರೆ.
ಇವರು ಹಾಡು ಹಾಡಲು ಶುರು ಮಾಡಿದಾಗಿನಿಂದ ಅಂತಿಮ ದವರೆಗೂ ಸಹ ಒಂದಲ್ಲ ಒಂದು ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ.
ಕನ್ನಡದಲ್ಲಿ ಒಂದೇ ದಿನ 17 , ಹಿಂದಿಯಲ್ಲಿ 19 ಹಾಡುಗಳನ್ನು ಧ್ವನಿಮುದ್ರಣ ಮಾಡಿರುವುದು, ನಾಲ್ಕು ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಯಾಗಿರುವುದು, ಇನ್ನೂ ಅನೇಕ ಗಳ ನಡುವೆ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ತಮ್ಮ ಜೀವನದುದ್ದಕ್ಕೂ ಹಾಡಿಗಾಗಿ, ತಮ್ಮನ್ನು ತಾವು ಮುಡಿಪಾಗಿಟ್ಟು ಅದರಂತೆಯೇ ಪ್ರಶಸ್ತಿಗಳನ್ನು ಪಡೆದುಕೊಂಡವರು ಇದು ಒಂದೆಡೆಯಾದರೆ, ಸಾರ್ವಜನಿಕ ಕ್ಷೇತ್ರಗಳಲ್ಲೂ ಸಹ ಇವರು ಅಪ್ರತಿಮ ರಾಗಿದ್ದಾರೆ. ಅನೇಕ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಇವರು ಸರಳ ಸುಂದರವಾಗಿ ಭಾಗವಹಿಸಿ, ತಮ್ಮ ಪ್ರತಿಭೆ ಮೆರೆಯುತ್ತಿದ್ದರು. ಹಲವು ಪ್ರಾಯೋಜಕತ್ವ ಕಾರ್ಯಕ್ರಮ ಗಳಲ್ಲೂ ಸಹ ಇವರು ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದರು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಖಾಸಗಿ ವಾಹಿನಿಯೊಂದರ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದಲ್ಲಿ ಕರ್ನಾಟಕದ ಮಟ್ಟಿಗೆ ಅನೇಕ ಬಾಲಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. “ಎದೆ ತುಂಬಿ ಹಾಡುವೆನು” ಕಾಲಘಟ್ಟದ ಕಾರ್ಯಕ್ರಮದಲ್ಲಿ ಅವರು ಪ್ರತಿಯೊಂದು ಸಾಲುಗಳ ಬಗ್ಗೆ ಅಂದರೆ ಯಾವುದೇ ಹಾಡಿನ, ಪದಗಳ ಏರಿಳಿತ ಯಾವ ರೀತಿಯಲ್ಲಿ ಇರಬೇಕು. ಶೃತಿ ಬದ್ಧತೆಯ ಬಗ್ಗೆ ಎಲ್ಲದರ ಬಗ್ಗೆಯೂ ತಿಳಿಹೇಳುತ್ತಿದ್ದರು. ಮುಂದಿನ ಹಾಡು ಹಾಡುವಷ್ಟರಲ್ಲೇ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತಿದ್ದರು. ಈ ಕಾರ್ಯಕ್ರಮ ಕರ್ನಾಟಕದಾದ್ಯಂತ ಜನ ಮನ್ನಣೆ ಪಡೆಯಿತು. ನಾನಂತೂ ಈ ಕಾರ್ಯಕ್ರಮ ಬರುವುದನ್ನೇ ಕಾತುರದಿಂದ ಜಾತಕಪಕ್ಷಿಯಂತೆ ಕಾಯುತ್ತ ಕುಳಿತಿದ್ದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಚಿತ್ರೀಕರಣದ ಸಂದರ್ಭದಲ್ಲಿ ನನಗೂ ಕೂಡ ನಾಲ್ಕೈದು ಬಾರಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಈ ಗಾನಕೋಗಿಲೆ ಯನ್ನು ಭೇಟಿ ಮಾಡಿದ್ದು, ನಿಜಕ್ಕೂ ಸವಿ-ಸವಿ-ನೆನಪು ಮೂಡಿಸುತ್ತದೆ. ಅವರ ಜೊತೆ ಫೋಟೋ ತೆಗೆಸಿಕೊಂಡು, ಹಸ್ತಾಕ್ಷರ ಪಡೆದ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಂತರ ದಿನಗಳಲ್ಲಿ ಮೈಸೂರಿಗೆ ಬಂದಾಗ ಹಲವು ಬಾರಿ ಅವರ ಗಾಯನದ ಸುಧೆಯನ್ನು ಸವಿದಿದ್ದೇವೆ.
ಕಾಕತಾಳೀಯ ಎನ್ನುವಂತೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಮೈಸೂರಿನಲ್ಲಿ ಹಾಡಿದ್ದೇ ಕೊನೆಯ ಕಾರ್ಯಕ್ರಮವಾಯಿತು!. ಜೊತೆಗೆ ಇವರ ಜೋಡಿಯ ಮತ್ತೊಂದು ಖ್ಯಾತಿ ಎಸ್ ಜಾನಕಿ ರವರು ಕೂಡ ಮೈಸೂರಿನ ಕಾರ್ಯಕ್ರಮದಲ್ಲಿ ಹಾಡಿ ಅಲ್ಲಿಯೇ ನಿವೃತ್ತಿ ಘೋಷಿಸಿದರು. ಜಾನಕಿ ಮೇಡಂ ರವರು ಈಗಲೂ ಕೂಡ ಮೈಸೂರಿನ ಬಳಿ ವಾಸವಾಗಿದ್ದಾರೆ. ಬಾಲು ಸರ್ ನಿಧನದ ನಂತರ ಬಹಳ ಭಾವನಾತ್ಮಕವಾಗಿ ಮಾತನಾಡಿ ಅವರ ಹಾಡುಗಾರಿಕೆ ಸಂದರ್ಭದಲ್ಲಿ ಸವಿನೆನಪುಗಳನ್ನು ಕಂಡುಂಡ ಅನೇಕ ಪ್ರಮುಖ ಘಟನೆಗಳನ್ನು ಬಹಳ ನೋವಿನಿಂದಲೇ ಹಂಚಿಕೊಂಡರು.
ಒಬ್ಬ ಗಾಯಕನಿಗೆ ಏನೆಲ್ಲಾ ಗುಣಗಳು ಇರಬೇಕು ಎಲ್ಲವನ್ನೂ ಅಂತರ್ಗತ ಮಾಡಿಕೊಂಡಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೊಸ ಗಾಯಕರಿಗೂ ಸಹ ಪ್ರೋತ್ಸಾಹ ಮಾಡುತ್ತಿದ್ದರು.
ಇನ್ನು ಎಸ್ ಪಿ ಬಿ ರವರು ಹಾಡಿರುವ ಹಾಡುಗಳ ಚಮತ್ಕಾರದ ಬಗ್ಗೆ ಹೇಳಿದರೆ ದಿನಪೂರ್ತಿ, ತಿಂಗಳು ಪೂರ್ತಿ, ವರ್ಷಪೂರ್ತಿ ಆದರೂ ಸಾಲದು. ಎಲ್ಲಾ ನಟರಿಗೂ ಅವರದೇ ರೀತಿಯಲ್ಲಿ ಹಾಡಿ ಚಿತ್ರಕ್ಕೆ ನ್ಯಾಯ ದೊರಕಿಸಿ ಕೊಡುತ್ತಿದ್ದರು. ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಾವು ಆಯಾ ನಟರುಗಳನ್ನು ನೆನೆಸಿಕೊಂಡು ಕಣ್ಮುಚ್ಚಿಕೊಂಡು ಹಾಡಿನ ಮಾಧುರ್ಯವನ್ನು ಸವಿಯುತ್ತ ಹೋದಂತೆ ಆಯಾ ನಟರುಗಳು ಹಾಡಿದ್ದಾರೇನೋ ಎಂದೆನಿಸದೇ ಇರದು!. ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್ನಾಗ್, ಶಿವರಾಜ್ ಕುಮಾರ್, ಇನ್ನು ಮುಂತಾದ ನಟರುಗಳ ಚಿತ್ರಗೀತೆಗಳನ್ನು ಮನ ತಣಿಸುವಂತೆ ಎದೆತುಂಬಿ ಹಾಡಿದ್ದಾರೆ.
ಅನೇಕ ಸಂಗೀತ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿಯೂ ಸಹ ಭಾಗವಹಿಸಿ ಇಡೀ ಕಾರ್ಯಕ್ರಮಕ್ಕೆ ಸೊಬಗು ತರುತ್ತಿದ್ದರು.
ಕನ್ನಡ ನಾಡು- ನುಡಿಯನ್ನು ಪ್ರತಿಬಿಂಬಿಸುವಂತೆ ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ. ಹಲವು ಚಿತ್ರದ ಗೀತೆಗೂ ಸಹ ನಟಿಸಿದ್ದಾರೆ. “ನಾನು ಮತ್ತೊಮ್ಮೆ ಹುಟ್ಟುವುದಾದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಎನ್ನುವ ಆಸೆಯನ್ನು ಇಟ್ಟುಕೊಂದಿದ್ದರು. ಇದನ್ನು ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.
ನಿಜಕ್ಕೂ ಇವರು ಕನ್ನಡಿಗರ ಮನೆ -ಮನೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕನ್ನಡವನ್ನು ಕಲಿತು ತಮ್ಮದೇ ಆದ ಭಾಷಾ ಸೊಗಡಿನ ಮೂಲಕ ವಿಮರ್ಶಕ ದೃಷ್ಟಿಯಿಂದ ಎತ್ತರಕ್ಕೇರಿದ್ದರು. ಪ್ರತಿಯೊಂದು ಹಾಡಿನಲ್ಲೂ ಸಹ ಅವರ ಕಲಿಕೆ ಮೇಲಿರುತ್ತಿತ್ತು. ಮಗುವಿನಂತ ಮನಸ್ಸನ್ನು ಇಟ್ಟುಕೊಂಡಿದ್ದವರು. ಹಿರಿಯರು, ಕಿರಿಯರು ಎನ್ನದೆ ಎಂದೂ ಭೇದ-ಭಾವ ಮಾಡದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಮಾತನಾಡಿಸುವ, ಪ್ರೋತ್ಸಾಹಿಸುವ ಗುಣವನ್ನು ಹೊಂದಿದ್ದರು.
ಅಂತಿಮವಾಗಿ ಜಯಂತ್ ಕಾಯ್ಕಿಣಿ ಅವರು ಬರೆದಿರುವ ಕರೋನಾ ಜಾಗೃತಿ ಕುರಿತ ಹಾಡನ್ನು ಹಾಡಿದ್ದರು. ಒಬ್ಬ ಗಾಯಕ ಸಾಂಸ್ಕೃತಿಕವಾಗಿ ಏನೇನೆಲ್ಲಾ ಸಾಧನೆ ಮಾಡಬೇಕು ಎಲ್ಲವನ್ನು ಸಹ ಮಾಡಿ ಮುಗಿಸಿದರು.
“ಸ್ನೇಹ ಪ್ರೀತಿ ನನ್ನುಸಿರು” ಎಂದು ಹಾಡಿದ ಅವರು ಹಲವು ಸಂಗೀತ ನಿರ್ದೇಶಕರು, ನಿರ್ಮಾಪಕರೊಂದಿಗೆ, ನಟ- ನಟಿಯ ರೊಂದಿಗೆ ಸುಮಧುರ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ” ನಾ ಹಾಡಲು ನೀವು ಕೂಡ ಹಾಡಬೇಕು” ಎಂದು ಆಸೆ ಪಡುತ್ತಿದ್ದವರು. “ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ” “ಸುಂದರಿ ಸುಂದರಿ” “ಮಾಮ ಮಾಮ ಮಸ್ತಿ” ಅದರಲ್ಲೂ ಬಂಧನ ಚಿತ್ರದಲ್ಲಿ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ….’ ಹಾಡನ್ನು ಹಾಡುವಾಗ ಬಹಳ ಭಾವನೆ ತುಂಬಿ ತಾವೇ ನಟಿಸಿದ್ದರೇನು ಎಂಬ ರೀತಿಯಲ್ಲಿ ವಿಷ್ಣುವರ್ಧನ್ ರವರ ನಟನೆಗೆ ಧ್ವನಿಯಾದರು. ಹಾಡಿನ ಕೊನೆಯಲ್ಲಿ ಅವರು ಕೆಮ್ಮುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಹಾಡನ್ನು ಹಾಡಿದ ನಂತರ ಅವರು ಒಂದು ವಾರ ಸುಧಾರಿಸಿಕೊಂಡರಂತೆ!. ಈ ಬಗ್ಗೆ ಸ್ವತಃ ರಾಜೇಂದ್ರಸಿಂಗ್ ಬಾಬು ಅವರು ಬೆಂಗಳೂರು ಆಕಾಶವಾಣಿಯಲ್ಲಿ ದಿನಂಪ್ರತಿ ಪ್ರಸಾರವಾದ ಚಲನಚಿತ್ರ ಗಳನ್ನು ಆಧರಿಸಿದ “ರಜತಾಂತರಂಗ”- ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಜೊತೆಗೆ ಅದೇ ಚಿತ್ರದ ನೂರೊಂದು ನೆನಪು ಎದೆಯಾಳದಿಂದ ಈ ಹಾಡಿನ ಚಿತ್ರೀಕರಣ ಮೈಸೂರಿನ ಲಲಿತ ಮಹಲ್ ಹೋಟೆಲ್ ನಲ್ಲಿ ಚಿತ್ರೀಕರಣವಾಯಿತು. ಚಿತ್ರೀಕರಣಕ್ಕೆ ತಕ್ಕಂತೆ ಹಾಡಿದ ಹಾಡನ್ನು ಪರದೆ ಮೇಲೆ ನೋಡಿ ಎಸ್ಪಿ ರವರು ಅಚ್ಚರಿಪಡುತ್ತ ಫೆಂಟಾಸ್ಟಿಕ್ ಎಂದರಂತೆ!. ಇಂತಹ ಅದೆಷ್ಟೋ ಘಟನೆಗಳು ಪ್ರತಿ ಹಾಡಿನಲ್ಲೂ ಕೂಡ ಬರುತ್ತವೆ.
“ವೀಕೆಂಡ್ ವಿತ್ ರಮೇಶ್” ಕಾರ್ಯಕ್ರಮದಲ್ಲಿ ಎಸ್ಪಿ ರವರ ಕಾರ್ಯಕ್ರಮ ಅದ್ಭುತವಾಗಿತ್ತು!. ಅವರಿಗೆ ಕನ್ನಡದ ಬಗೆಗಿನ ಪ್ರೀತಿ ಅಪಾರವಾದದ್ದು. ಪರ ಭಾಷೆಯಿಂದ ಕನ್ನಡಕ್ಕೆ ಬಂದು ಕನ್ನಡವನ್ನು ಕಲಿತು ಅದರೊಳಗೆ ಬೆರೆತು ತಲ್ಲೀನರಾದರು. ಜೊತೆಗೆ ಅನೇಕ ಸಾಧನೆಯೊಂದಿಗೆ ಬೆರಗು ಮೂಡಿಸಿದರು. ಅವರು ಅನೇಕ ಚಿತ್ರಗಳಲ್ಲಿ ಕೂಡಾ ನಟಿಸಿದ್ದಾರೆ ಎಂಬುದು ಕೂಡ ಒಂದು ದಾಖಲೆ.
ಹೀಗೆ ವಿವಿಧ ಭಾಷೆಯ ಚಲನಚಿತ್ರ ಗೀತೆಗಳನ್ನು ಅಲ್ಲದೆ ಇವರು ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳಲ್ಲೂ ಸಹ ತಮ್ಮ ಸೊಗಡನ್ನು ಪಸರಿಸಿದರು. ಮಲೆಮಹದೇಶ್ವರ, ರಾಘವೇಂದ್ರ ಸ್ವಾಮಿಗಳು, ಚಾಮುಂಡಿ ಮಾತೆ, ಮುಂತಾದ ದೇವ-ದೇವತೆಗಳ ಕುರಿತು ಹಾಡಿ ಭಕ್ತಿ-ಭಾವ ಮೂಡಿಸುತ್ತಾರೆ.
ಭಾವಗೀತ ಪ್ರಪಂಚದಲ್ಲಿ ಕೂಡ ತಮ್ಮ ಕೊಡುಗೆ ಅಪಾರ ಉದಾಹರಣೆಯೆಂದರೆ ದೊಡ್ಡರಂಗೇಗೌಡರು ರಚಿಸಿರುವ “ಬೇವು-ಬೆಲ್ಲ” “ಮಾವು ಬೇವು” ಮುಂತಾದ ಭಾವಗೀತೆಗಳ ಗುಚ್ಛದಲ್ಲಿ ಭಾವನೆಯಿಂದ ಹಾಡಿದ್ದಾರೆ.
ಸೆಪ್ಟೆಂಬರ್ 25 ದಿನ ಅತ್ಯಂತ ನೋವಿನ ಸಂಗತಿ. ನನ್ನ ಹುಟ್ಟುಹಬ್ಬ ದಿನ ಕೂಡ. ಇವತ್ತೇ ನಮಗಿಷ್ಟವಾದವರನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವ ಮಾತಿದೆ. ಅವತ್ತು ನಿಜಕ್ಕೂ ನನಗೆ ಬೇಸರವಾಯಿತು.
ಇಷ್ಟೆಲ್ಲಾ ಸಾಧನೆ ಮಾಡಿರುವ ಎಸ್ಪಿಬಿ ರವರು ನಮ್ಮನ್ನು ಖಂಡಿತ ಬಿಟ್ಟು ಹೋಗಿಲ್ಲ. ತಾವು ಇದುವರೆಗೂ ಹಾಡಿರುವ ಹಾಡುಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮನೆ- ಮನ ಗೆದ್ದಿದ್ದಾರೆ. ಮನಸೂರೆಗೊಂಡಿದ್ದಾರೆ. ಇವರ ಹಾಡಿನ ಶ್ರೀಮಂತಿಕೆಗೆ ಸಾವಿಲ್ಲ. ಇವರು ಹಾಡಿರುವ ಹಾಡುಗಳನ್ನು ಕೇಳುತ್ತಾ ಹೋದರೆ ಜೀವನದಲ್ಲಿ ಬರುವ ನೋವುಗಳಿಗೆ ಒಂದು ರೀತಿಯಲ್ಲಿ ಸಂಜೀವಿನಿಯಂತೆ ದಿವ್ಯೌಷಧ ಸಿಗುತ್ತದೆ!. ಒಟ್ಟಿನಲ್ಲಿ ನೀವು ಎಂದೆಂದಿಗೂ ಅಮರ ಮಧುರ.
ಐವತ್ತಕ್ಕೂ ಹೆಚ್ಚು ದಿನ ಕರೋನದ ಕಬಂಧಬಾಹು ವಿನಲ್ಲಿ ಸಿಲುಕಿದ್ದ ಗಾಯಕ ಹಂತಹಂತವಾಗಿ ಚೇತರಿಸಿಕೊಳ್ಳುತ್ತ ಕೊನೆಗೂ ಅದರಿಂದ ಹೊರಬಂದರೂ, ಹೃದಯ ಮತ್ತು ಶ್ವಾಸಕೋಶ ಸ್ತಂಭನದಿಂದಾಗಿ ಕೊನೆಗೂ ನಮ್ಮನ್ನಗಲಿದರು.
ಆದರೆ ಒಂದು ಮಾತು…… ಪ್ರತಿದಿನ ಆಕಾಶವಾಣಿಯಲ್ಲಿ ಅಥವಾ ಟಿವಿಗಳಲ್ಲಿ ಇವರ ಒಂದಲ್ಲ ಒಂದು ರೀತಿಯ ಗೀತೆಗಳು ಪ್ರಸಾರವಾಗುತ್ತಲೇ ಇರುತ್ತವೆ ಅವುಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಮೈ- ಮನಗಳಿಗೆ ಮುದನೀಡುತ್ತದೆ. ಅವರಿಲ್ಲದ ಹುಟ್ಟುಹಬ್ಬ ಈಗ ಆಚರಿಸುವಂತಾಗಿದೆ.
ಅವರು ದೂರದಲ್ಲೆಲ್ಲೋ ಹಾಡುಗಳ ತಯಾರಿಯಲ್ಲಿ ಅಥವಾ ಹೊಸ ಹಾಡುಗಳ ಗಾಯನದ ಲೋಕದಲ್ಲಿ ಮುಳುಗಿದ್ದಾರೆ. ಅವರಿಗಿದೋ ನಮ್ಮ ಸವಿ ಸವಿ ನೆನಪುಗಳು.
ಕಾಳಿಹುಂಡಿ ಶಿವಕುಮಾರ್, ಲೇಖಕ, ವಿಮರ್ಶಕ, ಮೈಸೂರು.