ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗವು ತನ್ನ 13ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಬಳಗದ ಸಂಸ್ಥಾಪನಾಧ್ಯಕ್ಷರಾದ ದಿವಂಗತ ಎಂ ಕೆ ರುಕ್ಮಿಣಿ ರವರ ಹೆಸರಿನಲ್ಲಿ ಕೊಡ ಮಾಡುವ "ಸದ್ಬಾವನಾ ಪ್ರಶಸ್ತಿ"ಯನ್ನು ಈ ಬಾರಿ ಆಕಾಶವಾಣಿಯ ಖಾಯಂ ಕೇಳುಗ, ವಿಮರ್ಶಕ, ಲೇಖಕ ಕಾಳಿಹುಂಡಿ ಶಿವಕುಮಾರ್ ರವರಿಗೆ ನೀಡಲಾಗಿದೆ. ಅವರು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕಪರಿಶೋಧನಾಧಿಕಾರಿಯಾಗಿ ಪ್ರಸ್ತುತ ಸಾಲಿಗ್ರಾಮ ತಾಲೂಕು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಬರುವ ಭಾನುವಾರ ಬೆಳಿಗ್ಗೆ 10.30 ಕ್ಕೆ (ಫೆಬ್ರವರಿ- 23) ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ಆಕಾಶವಾಣಿ ಉಪ ನಿರ್ದೇಶಕರಾದ ಎಸ್ ಎಸ್ ಉಮೇಶ್ ರವರು ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿರವರು ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡಪ್ರಭದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮುಖ್ಯ ಅತಿಥಿಗಳಾಗಿರುವರು. ಸಂಘದ ಅಧ್ಯಕ್ಷ ಕಣ್ಣೂರು ವಿ ಗೋವಿಂದಾಚಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಬಳಗದ ಕಾರ್ಯದರ್ಶಿ, ಟಿ ಎನ್ ರಾಜೇಶ್ವರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.