ನಿಮ್ಮ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಲು ಉನ್ನತ ಶಿಕ್ಷಣ ಹೆಚ್ಚು ಸಹಕಾರಿ : ಡಾ. ಉಮೇಶ ಎಸ್ ಸಲಹೆ

ಮೈಸೂರು: ನಿಮ್ಮ ವೃತ್ತಿ ಬದುಕಿನಲ್ಲಿ ಉನ್ನತ (ಮೇಲಿನ) ಸ್ಥಾನಕ್ಕೆ ಏರಲು ಉನ್ನತ ಶಿಕ್ಷಣ ಹೆಚ್ಚು ಸಹಕಾರಿಯಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ ಎಸ್. ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಫೋಕಸ್ ಆನ್ ಯುವರ್ ಗೋಲ್” (“ನಿಮ್ಮ ಗುರಿಯತ್ತ ಗಮನ”) ಎಂಬ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಬಿಕಾಂ, ಬಿಬಿಎ, ಬಿಸಿಎ ಬಳಿಕ ಮುಂದೇನು ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.

ಇಂದಿನ ಜಗತ್ತನ್ನು ಸ್ಪರ್ಧಾತ್ಮಕ ಯುಗ ಎಂದು ಕರೆಯುಲಾಗುತ್ತಿದೆ. ಈ ಸ್ಪರ್ಧೆಗೆ ತಂತ್ರಜ್ಞಾನದ ಅರಿವು ಅತ್ಯಂತ ಮುಖ್ಯವಾದದ್ದು. ಆ ತಂತ್ರಜ್ಞಾನದ ಅರಿವು ನಿಮಗೂ ಇರಬೇಕು. ಅದರೊಂದಿಗೆ ನೀವು ಉನ್ನತ ಮಟ್ಟಕ್ಕೆ ಬೆಳೆಯಬೇಕಾದದ್ದು ಇಂದಿನ ಅಗತ್ಯ ಎಂದು ಹೇಳಿದರು.
ಕಲಿಕೆಯಲ್ಲಿ ಮಿತಿ ಇರಬಾರದು. ಜ್ಞಾನದ ದೃಷ್ಟಿಯಿಂದ ಎಲ್ಲವನ್ನು ಕಲಿಯಬೇಕಾದದ್ದು ಅಗತ್ಯವಾದುದು. ಕಲಿಕೆಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಅದರಿಂದ ಗಳಿಕೆಯತ್ತ ಮುಖ ಮಾಡಬೇಕು. ಇದು ಜೀವನದಲ್ಲಿ ಸಾಧನೆಗೆ ದಾರಿ ಎಂದು ಅಭಿಪ್ರಾಯಪಟ್ಟರು.

ವಾಣಿಜ್ಯ ಕೋರ್ಸ್ ಗಳೆಂದರೆ ಅದು ಬ್ಯಾಂಕಿಂಗ್, ಕಚೇರಿ ಗುಮಾಸ್ತಿಕೆ ಕೆಲಸಗಳಷ್ಟೇ ಅಲ್ಲ. ಈ ಪದವಿಯ ಮೂಲಕವೂ ಯುಪಿಎಸ್ಸಿ ಅಂತಹ ಕೇಂದ್ರ ಸರ್ಕಾರದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬಹುದು ಮತ್ತು ಹುದ್ದೆಗಳನ್ನು ಪಡೆದು ಸಾಧಿಸಬಹುದು ಎಂಬುದಕ್ಕೆ ಸಾಕಷ್ಟು ವಿವರಗಳನ್ನು ನೀಡಿದರು.


ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪದವಿ ಒಂದು ಅರ್ಹಸ್ಥಾನ ಅಷ್ಟೇ. ಬಳಿಕ ಪರೀಕ್ಷೆಯಲ್ಲಿ ನೀವು ಆಯ್ದುಕೊಳ್ಳುವ ವಿಷಯಗಳು ನಿಮ್ಮ ವಾಣಿಜ್ಯಕ್ಕೆ ಸಂಬಂಧಿಸಿದವಾದರೂ ಆಗಬಹುದು. ಇಲ್ಲವೇ ವಿಜ್ಞಾನ, ಕಲಾ ವಿಭಾಗಗಳಿಂದಲೂ ನೀವು ಆರಿಸಿಕೊಂಡು ಪರೀಕ್ಷೆಯನ್ನು ಎದುರಿಸಬಹುದು. ಆದರೆ ಆ ಪರೀಕ್ಷೆಯ ಗುಣಮಟ್ಟಕ್ಕೆ ತಕ್ಕಂತೆ ನೀವು ಓದಿಕೊಂಡಿರಬೇಕು. ನಿಮ್ಮ ಉತ್ತರಗಳು ನಿಮ್ಮ ಜ್ಞಾನವನ್ನು ಸಾರುವಂತಿರಬೇಕು ಎಂದು ಅರಿವು ನೀಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಕಾರ್ಯದರ್ಶಿಗಳಾದ ಸೋನಿಯಾ ಉಮಾಪತಿ ರಾಜು ಅವರು ಮಾತನಾಡಿ, ಇ ಕಾಮರ್ಸ್ ಎಂಬುದು ಇಂದು ಎಲ್ಲೆಡೆ ಕೇಳಿ ಬರುತ್ತಿರುವ ವಿಷಯ. ಅದರಲ್ಲಿ ಬೆಳೆಯಲು ವಾಣಿಜ್ಯ ವಿದ್ಯಾರ್ಥಿಗಳಿಗೆ ಹೇರಳವಾದ ಅವಕಾಶಗಳಿವೆ. ಹಾಗಾಗಿ ನೀವು ಅದರತ್ತ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಅಗತ್ಯ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಕ್ಷ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಮಹೇಶ ಎಂ.ಬಿ. ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತುಕೊಳ್ಳುವ, ಆಸಕ್ತಿಯಿಂದ ಕೇಳುವ, ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ. ಮೊಬೈಲ್ ಒಂದೇ ನಿಮ್ಮ ಪ್ರಪಂಚವಾಗಿದೆ. ನಮ್ಮ ಕಾಲಕ್ಕೆ ಹೋಲಿಸಿದರೆ ನಿಮಗಿಂತ ಹೆಚ್ಚಿನ ಖುಷಿಯನ್ನು ನಾವು ತರಗತಿಯಲ್ಲಿ, ಕಾಲೇಜಿನಲ್ಲಿ ಪಡೆಯುತ್ತಿದ್ದೆವು. ಅದಕ್ಕೆಲ್ಲಾ ಮೊಬೈಲ್ ಇಲ್ಲದಿದ್ದುದೇ ಮುಖ್ಯ ಕಾರಣ ಎಂದು ವಿವರಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಮೂರೂ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *