ಚಾಮರಾಜನಗರ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ನಿರಂಜನ್ ಹೀರೇಮಠ್ಳನ್ನು ಕಾಲೇಜಿನ ಆವರಣದಲ್ಲೇ ನಿರ್ಧಾಕ್ಷಿಣ್ಯವಾಗಿ ಚೂರಿಯಲ್ಲಿ ಇರಿದು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸರ್ಕಾರವನ್ನು ಒತ್ತಾಯಿಸಿ ತಮ್ಮ ಮನವಿ ಪತ್ರವನ್ನು ಶನಿವಾರ ಕನ್ನಡ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಲ್ಲಿಸಿದರು.
ನಂತರ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ ಅವರು, ನೇಹಾ ನಿರಂಜನ್ ಹೀರೇಮಠ್ ಈ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ಮನುಷ್ಯ ಕುಲಕ್ಕೆ ಮಾಡಿದ ಅಪಮಾನವಾಗಿದೆ. ಇಡೀ ನಾಗರೀಕ ಸಮಾಜವೇ ತಲ್ಲಣಗೊಂಡಿದೆ. ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ತೀವ್ರಗೊಳಿಸಿ, ಶೀಘ್ರವಾಗಿ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗು.ಪುರುಷೋತ್ತಮ್, ಪಣ್ಯದಹುಂಡಿ ರಾಜು, ಚಾ.ರ.ಕುಮಾರ್, ಸಾಗರ್ ರಾವತ್, ರಾಜಪ್ಪ, ನಂಜುಂಡಶೆಟ್ಟಿ ಇದ್ದರು.