ಚಿದ್ರೂಪ ಅಂತಃಕರಣ

ಮಾನವನ ಬಗ್ಗೆ ತಿಳಿದೇ ಇದೆ, ಆದರೆ ಮಾನವನಿಗೆ ಸಂಬಂಧಿತವೇ ಆದ ಈ ಸಾರ್ಕೊಫೇಗಸ್’ಗಳ ಬಗ್ಗೆ ಸಾಮಾನ್ಯರಿಗೆ ಹೆಚ್ಚಿಗೆ ತಿಳಿದಿಲ್ಲ. ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಇದರ ಬಳಕೆ ತೀರ ವಿರಳ ಇರುವುದು ಇದಕ್ಕೆ ಪ್ರಮುಖ ಕಾರಣ. ಆದರೆ ಪ್ರಪಂಚದ ಇನ್ನಿತರ ಜನಾಂಗಗಳಲ್ಲಿ ಸಾರ್ಕೊಫೇಗಸ್’ಗಳ ಬಳಕೆಯನ್ನು ಹೆಚ್ಚಾಗಿ ಕಾಣಬಹುದು.
ಮಾನವನ ಬಹು ಸಂಪ್ರದಾಯ ವಿಕಸನದಲ್ಲೇ ಈ ಸಾರ್ಕೊಫೇಗಸ್’ಗಳ ಹುಟ್ಟು ಮತ್ತು ನಿರಂತರ ಬಳಕೆ ಅಡಗಿದೆ. ನನಗೆ ಸಾರ್ಕೊಫೇಗಸ್’ಗಳ ಪರಿಚಯವಾಗಿದ್ದು ನನ್ನ ಬಾಲ್ಯದಲ್ಲಿ, ಆದರೆ ಆ ಆಚರಣೆಗೆ ಸ್ಪಷ್ಟ ಅರಿವು ಸಿಕ್ಕಿದ್ದು ಇತ್ತೀಚೆಗೆ. ಕ್ರಿಶ್ಚಿಯನ್ ಸಮುದಾಯದವರ ಶವ ಸಂಸ್ಕಾರ ಸಂಸ್ಕೃತಿಯಲ್ಲಿ ಸತ್ತವರನ್ನು ಸ್ವಚ್ಛಗೊಳಿಸಿ ಹೊಸ ಉಡುಗೆಯೊಂದಿಗೆ ಸತ್ತ ವ್ಯಕ್ತಿ ಬಳಸಿದ ಪ್ರಿಯ ವಸ್ತುಗಳನ್ನು ಶವಪೆಟ್ಟಿಗೆಯಲ್ಲಿರಿಸಿ, ಆ ಪೆಟ್ಟಿಗೆಯನ್ನು ವಸ್ತ್ರಲಂಕಾರ ಮಾಡಿ ಮಣ್ಣಿನಲ್ಲಿ ಹೂಳುತ್ತಿದ್ದರು.
ನಾನು ಆ ಚಿತ್ರಣ ಕಂಡಾಗ ಅದರಲ್ಲೇನೋ ವಿಶೇಷತೆ ಇದೆ ಎಂದು ಆಗ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಆಲಂಬಾಡಿ ಎಂಬ ಹಳ್ಳಿಯಲ್ಲಿ ಸುಮಾರು ಕ್ರಿ.ಪೂರ್ವದ್ದಾದ ಸಾರ್ಕೋಫೇಗಸ್ ಒಂದನ್ನು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವಿ ಶೋಭಾ ಎಂಬ ವಿದ್ವಾಂಸರು ಸಂಶೋಧಿಸಿ ಪ್ರದರ್ಶನ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಸಿಕ್ಕ ಸಾರ್ಕೋಫೇಗಸ್ ಒಂದರ ಬಗ್ಗೆ ಮಾಹಿತಿ ಹಂಚಿಕೊಂಡರು. ಆಗ ಈ ಸಾರ್ಕೊಫೇಗಸ್’ಗಳ ಐತಿಹ್ಯ ಅದರ ಬಳಕೆಯ ಉದ್ದೇಶ ಮತ್ತು ಇದನ್ನು ರೂಢಿಗೊಳಿಸಿಕೊಂಡ ಜನಾಂಗಗಳ ನಂಬುಗೆ ಹಾಗೂ ನಾನು ಬಾಲ್ಯದಲ್ಲಿ ಕಂಡ ಕ್ರಿಶ್ಚಿಯನ್ ಶವಸಂಸ್ಕಾರ ಪದ್ಧತಿಗೆ ಬೆಸುಗೆ ಹಾಕಿತ್ತು.
ಸಾರ್ಕೊಫೇಗಸ್ ಎಂದರೆ ಕನ್ನಡದಲ್ಲಿ ಶವ ಸಂಪುಟ, ಶವಪೆಟ್ಟಿಗೆ ಎಂದು ಕರೆಯಲಾಗುತ್ತದೆ. ಆಂಗ್ಲಭಾಷೆಯಲ್ಲಿ ‘ಕಾಫಿನ್’ ಎಂದು ಕರೆಯಲಾಗುತ್ತದೆ. ಈ ‘ಕಾಫಿನ್’ ಅನ್ನು ಮರದಿಂದ ಮಾಡಲಾಗುತ್ತದೆ. ಇದು ಕ್ರಿಶ್ಚಿಯನ್’ರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾರ್ಕೊಫೇಗಸ್ ಎಂಬ ಪದವು ಗ್ರೀಕ್ ಭಾಷೆಯ ‘ಸಾಕ್ಸ್೯’ ಮತ್ತು ‘ಫೇಜಿನ್’ ಎಂಬ ಪದಗಳಿಂದ ವ್ಯುತ್ಪತ್ತಿ ಪಡೆದಿದೆ. ಸಾರ್ಕ್ಸ್ ಎಂದರೆ ‘ಮಾಂಸ’ ಮತ್ತು ಫೇಜಿನ್ ಎಂದರೆ ತಿನ್ನುವುದು. ಅಂದರೆ ಮಾಂಸವನ್ನು ತಿನ್ನುವುದು ಎಂದಾಯ್ತು. ಹಾಗೆಯೇ ಶಿಲೆಗೆ ನಿರ್ದಿಷ್ಟವಾಗಿ ‘ಲಿಥೋಸ್ ಸಾರ್ಕೋಫಾಗಸ್’ ಎಂಬ ಪದದಿಂದ ‘ಮಾಂಸ ತಿನ್ನುವ ಕಲ್ಲು’ ಎಂಬ ಅರ್ಥ ವ್ಯುತ್ಪತ್ತಿಯಾಯಿತು.
ಶವಪೆಟ್ಟಿಗೆಯನ್ನು ಸಾರ್ಕೊಫೇಗಸ್ ಎಂದು ಕರೆಯುವ ಈಜಿಪ್ಟಿಯನ್ನರು, ಗ್ರೀಕರು, ರೋಮನ್ನರು ಹಾಗೂ ಇನ್ನಿತರ ಜನಾಂಗದವರು ಇದನ್ನು ಕಲ್ಲಿನಿಂದ ತಯಾರಿಸುತ್ತಾರೆ. ಸಾಮಾನ್ಯವಾಗಿ ಸುಣ್ಣದ ಶಿಲೆಯನ್ನೇ ಬಳಸುತ್ತಾರೆ. ಹೀಗೆ ಸುಣ್ಣದ ಶಿಲೆಯಲ್ಲೇ ನಿರ್ಮಿಸಲು ಎರಡು ಬಹುಮುಖ್ಯ ಕಾರಣವಿದೆ. ಮೊದಲನೆಯ ಕಾರಣ – “ಸುಣ್ಣದ ಶಿಲೆಯ ರಾಸಾಯನಿಕ ಗುಣಲಕ್ಷಣಗಳಿಂದ ಪೆಟ್ಟಿಗೆಯಲ್ಲಿ ಮೃತದೇಹ ಬಹುಬೇಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶವಗಳ ಮಾಂಸದ ವಿಭಜನೆಯು ಸುಗಮವಾಗಿ ನಡೆಯುತ್ತದೆ”. ಇನ್ನೊಂದು ಕಾರಣ – “ಸಾರ್ಕೊಫೇಗಸ್’ನ್ನು ಮಣ್ಣಿನಲ್ಲಿ ಹೂಳುವ ಬದಲಿಗೆ ನೆಲದ ಮೇಲೆಯೇ ಇರಿಸಲು ಹೀಗೆ ಮಾಡಲಾಗುತ್ತದೆ. (ಮಣ್ಣಿನಲ್ಲೂ ಹೂಳಬಹುದು) ಭಾರತದಲ್ಲಿ ಸಿಕ್ಕಿರುವ ಸಾರ್ಕೊಫೇಗಸ್’ಗಳು ಸುಡಾವೆ ಮಣ್ಣಿನಿಂದ ರಚನೆಯಾಗಿವೆ.
ಭಾರತದಲ್ಲಿ ಮೊಟ್ಟ ಮೊದಲು ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞ ಅಲೆಕ್ಸಾಂಡರ್ ರಿಯಾ ಅವರು ತಮಿಳುನಾಡಿನ ಪಲ್ಲವರಂ ಬೆಟ್ಟಗಳಲ್ಲಿ ಸಾರ್ಕೊಫೇಗಸ್’ನ್ನು ಪತ್ತೆಹಚ್ಚಿದರು. ಅದಾದ ನಂತರ ನಿಖರವಾಗಿ ಪುರಾವೆ ಸಮೇತ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬಿಳಿಗುಂಡಲ್ ಮತ್ತು ರಾಸಿಮನಲ್ ಗ್ರಾಮಗಳ ನಡುವೆ ಸುಮಾರು 2000 ಕ್ಕೂ ಅಧಿಕ ಸಮಾಧಿಗಳಿರುವುದು ವರದಿಯಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಬಗೆಯ ಶಿಲಾಯುಗದ ಸಮಾಧಿಗಳು ಹೆಚ್ಚಾಗಿ ಕಂಡು ಬಂದಿವೆ. ಆದರೆ ಈವರೆಗೆ ಕರ್ನಾಟಕದಲ್ಲಿ ನಾಲ್ಕು ಕಡೆ ಮಾತ್ರ ಗುರುತಾಗಿದೆ. ಬೆಂಗಳೂರಿನ ಜಡಿಗೇನಹಳ್ಳಿ, ಬಳ್ಳಾರಿಯ ಕುಡಿತಿನಿ, ರಾಯಚೂರಿನ ಮಸ್ಕಿ ಇತ್ತೀಚಿಗೆ ಮೊದಲೇ ಪ್ರಸ್ತಾಪಿಸಿದಂತೆ ಡಾ. ವಿ. ಶೋಭಾ ಮತ್ತು ಅವರ ತಂಡ ಶೋಧಿಸಿದ ಆಲಂಬಾಡಿಯ ಸುಡಾವೆ ಮಣ್ಣಿನಿಂದಾದ ಸಾರ್ಕೊಫೇಗಸ್.
ಸಾಮಾನ್ಯ ಜನರಿಗೆ ಇಂತಹ ಮಹತ್ವದ ಬಗ್ಗೆ ಅರಿವಿರದ ಸಂದರ್ಭದಲ್ಲಿ ಆದ ಅವಘಡದ ಬಗ್ಗೆ ಡಾ. ವಿ ಶೋಭಾ ಅವರು ತಮ್ಮ ಸಂಶೋಧನಾ ಕಾರ್ಯದಲ್ಲಾದ ಘಟನೆಯನ್ನು ವಿವರಿಸಿದಾಗ ತಿಳಿದು ಬಂತು. ಆಲಂಬಾಡಿ ಗ್ರಾಮದ ಸರ್ಕಾರಿ ಶಾಲೆಯ ಸುತ್ತ ಗೋಡೆ ನಿರ್ಮಿಸುವಾಗ ಪಾಯಕ್ಕೆಂದು ಹಗೆದ ಜಾಗದಲ್ಲಿ 2017ರಲ್ಲಿ ಈ ಸಾರ್ಕೊಫೇಗಸ್ ಕಂಡುಬಂದಿದೆ. ಶಾಲೆಯ ಉಪಾಧ್ಯಾಯರಾದ ಜಯರಾಮನ್ ಅವರು ಅದನ್ನು ಸುರಕ್ಷಿತವಾಗಿ ಶಾಲೆಯ ಆವರಣದಲ್ಲಿ ಇರಿಸಿದ್ದಾರೆ. ಇದು ಮೊದಲ ಬಾರಿಗೆ ಕಾರ್ತಿಕ್ ಎನ್ನುವ ಎಂ. ಎ ವಿದ್ಯಾರ್ಥಿ ಕಿರು ನಿಬಂಧನೆಗೆಂದು ಆಲಂಬಾಡಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ(2018) ಡಾ. ವಿ ಶೋಭಾ ಅವರಿಗೆ ಆ ಮೂಲಕ ತಿಳಿದಿದೆ. ಆಗದು ಹಾಳಾಗದೆ ಸರಿಯೇ ಇತ್ತು. ತದನಂತರ ಅದರ ಹೆಚ್ಚಿನ ಅಧ್ಯಯನಕ್ಕೆ ಮೇಲಧಿಕಾರಿಗಳ ಸಹಕಾರ ಪಡೆಯುವ ಉದ್ದೇಶ ಮತ್ತು ಅದೇ ಸಮಯಕ್ಕೆ ಕರೋನಾ ಮಹಾಮಾರಿಯಿಂದಾದ ಎಲ್ಲಾ ಕಾರ್ಯಗಳ ವಿಳಂಬದಿಂದ 2019ರಲ್ಲಿ ಮರಳಿ ಕಂಡಾಗ – ಅಲ್ಲಿನ ಸ್ಥಳೀಯರು ನಿಧಿಯಿದ್ದ ಜಾಗವಿರಬಹುದು, ನಿಧಿಯ ಶೋಧವಿರಬಹುದು ಹಾಗೂ ಯಾವುದೋ ಹಳೆಯ ಮಣ್ಣಿನ ಮಡಿಕೆ ಇರಬಹುದೆಂದು ತಪ್ಪಾಗಿ ಬಗೆದು ನಿರ್ಲಕ್ಷ್ಯದಿಂದ ಹಾನಿಗೊಳಿಸಿದ್ದರು. ಕೊನೆಗೆ ಹಾನಿಗೊಂಡ ಶವಪೆಟ್ಟಿಗೆಯನ್ನು ಮೈಸೂರಿನ ರಾಮಸ್ವಾಮಿ ಅವರ ಕಾರ್ಯಗಾರದಲ್ಲಿ ಮರುಜೋಡಿಸಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮಾನಸ ಗಂಗೋತ್ರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ.
ಮಾನವ ವಿಕಸನಗಳ ಹಾದಿಯಲ್ಲಿ ಬಹುದೂರ ಸಾಗಿ ನೆಲೆ ಕಂಡಿರಬಹುದು. ಆದರೆ ಆ ವಿಕಸನ ಹಂತಗಳಲ್ಲಾದ ಹೊಸ ಹೊಸ ಆವಿಷ್ಕಾರಗಳೆಲ್ಲವೂ ಮರೆಯುವಂತದ್ದಲ್ಲ ಅಥವಾ ಕೈಬಿಡುವಂತದ್ದಲ್ಲ. ಪರಂಪರೆಯ ಸಂಪ್ರದಾಯಗಳು ಈ ನಿಸರ್ಗದ ಜ್ಞಾನ. ಇದಕ್ಕೆ ಕೊಂಡಿಹಾಕಿಕೊಂಡಷ್ಟೂ ಊರ್ಜಿತವೇ ಹೊರತು ನಾಶವೇನಲ್ಲ. ನಮ್ಮಲ್ಲಿ ಪ್ರಾಚ್ಯ ಸಂಪತ್ತು ಇನ್ನೂ ಹೇರಳವಾಗಿ ಸಿಗುತ್ತಲೇ ಇರುತ್ತವೆ. ಅವುಗಳೇ ನಮ್ಮ ಅಸ್ತಿತ್ವದ ಸಾಕ್ಷಿ. ಅವುಗಳ ಸಂರಕ್ಷಣೆ ಪೀಳಿಗೆಗೆ ಉಪಕೃತವಾದ ಪ್ರಮೇಯ. ಒಂದು ಪೀಳಿಗೆಯ ನಂತರ ಮತ್ತೊಂದು ಪೀಳಿಗೆ ಜನ್ಮ ಪಡೆಯುತ್ತಲೇ ಇರುತ್ತದೆ. ಆದರೆ ನಶಿಸಿದ ಪೀಳಿಗೆಯ ಆವಿಷ್ಕಾರಗಳು ಸುಧೀರ್ಘವಾದ ಬಾಳ್ವೆಯನ್ನು ಹೊಂದಿವೆ. ದೀರ್ಘಾಯುಷ್ಯವನ್ನು ಹೊಂದಿವೆ. ಪೀಳಿಗೆಯಿಂದ ಪೀಳಿಗೆಗೆ ಜೀವವಾಗಿ, ಜೀವನವಾಗಿ ಉಳಿಯುತ್ತವೆ. ಪ್ರತಿಯೊಬ್ಬರಲ್ಲೂ ಪ್ರಾಚ್ಯ ಸಂಪತ್ತಿನ ಬಗ್ಗೆ ಮಾತೃವಿನ ಕಾಳಜಿ ಇರಲೇಬೇಕು. ಈಗಾಗಲೇ ಸಾಮ್ರಾಜ್ಯಶಾಹಿ ಕೃತ್ಯಗಳಲ್ಲಿ ಆಗಾಗ್ಗೆ ಹಲವಾರು ಸಂಸ್ಕೃತಿ ಸಂಪತ್ತು ನಾಶಹೊಂದಿವೆ. ಈಗಿರುವವರೂ ಸಹ ಸ್ವಾರ್ಥದಿಂದ, ಲೋಭ ಅಜ್ಞಾನದಿಂದ ಅಗೆದು ಬಗೆದು ನಾಶಗೊಳಿಸಿರುವುದೂ ಉಂಟು. ಜೊತೆಗೆ ಇದರ ಸಂರಕ್ಷಣೆಗೆಂದೇ ಇರುವ ಸರ್ಕಾರ, ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ಹಾಳಾಗುತ್ತಿರುವ ಪರಂಪರೆಯ ಸಂಪತ್ತು ಅಷ್ಟಿಷ್ಟಲ್ಲ. ಇಂತಹ ಅನಾಹುತಗಳಲ್ಲಿ ಯಾರ ಭಾಗಿತ್ವವೂ ಇರದ ಎಚ್ಚರಿಕೆಯ ಬಗ್ಗೆ ಈ ಚಿಕ್ಕ ಲೇಖನದ ಅರಿಕೆ.
ಪ್ರಾಚ್ಯ ಸಂಪತ್ತಿನ ಭೋಧನೆ, ಶೋಧ ಮತ್ತು ಅದರ ರಕ್ಷಣೆಯಲ್ಲಿರುವ ಡಾ. ವಿ ಶೋಭಾ ಮತ್ತು ಅವರ ತಂಡಕ್ಕೆ ಹಾಗೂ ಈ ಬಗೆಯಲ್ಲಿ ಜೀವನ ಶ್ರಮಿಸುತ್ತಿರುವ ಅನೇಕರಿಗೆ ಕೃತಜ್ಞತೆ.

ಮಂಜುನಾಥ ಬಿ.ಆರ್ (ಚಿ.ಮ.ಬಿ.ಆರ್)
ಯುವಸಾಹಿತಿ, ಎಚ್. ಡಿ ಕೋಟೆ, ಮೈಸೂರು.