ವ್ಯಸನಮುಕ್ತ ಜೀವನಕ್ಕೆ ಆದರ್ಶ ಮೌಲ್ಯಗಳು ಅಡಿಗಲ್ಲಾಗಬೇಕು

ಮೈಸೂರು ವಿವಿಯ ಡಾ.ಜೆ.ಲೋಹಿತ್ ಅಭಿಮತ

ಬಸವಮಾರ್ಗ ಸಂಸ್ಥೆಯಲ್ಲಿ ‘ಜೀವನ ಉತ್ಸಾಹ ‘ ಉಪನ್ಯಾಸ ಕಾರ್ಯಕ್ರಮ

ಮೈಸೂರು : ವ್ಯಸನಮುಕ್ತ ಜೀವನಕ್ಕೆ ಆದರ್ಶ ಮೌಲ್ಯಗಳು ಅಡಿಗಲ್ಲಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ಡಾ.ಜೆ.ಲೋಹಿತ್ ಅಭಿಪ್ರಾಯಪಟ್ಟರು.

ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಕೇಂದ್ರದ ವತಿಯಿಂದ ಭಾನುವಾರ ಕೇಂದ್ರದ ಆವರಣದಲ್ಲಿ‌ ಆಯೋಜಿಸಿದ್ದ ‘ಜೀವನ ಉತ್ಸಾಹ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಬದುಕಿಗೆ ನಾವೇ ಶಿಲ್ಪಿಗಳಾಗಿದ್ದು, ವ್ಯಸನಮುಕ್ತ ಜೀವನಕ್ಕೆ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದಾ ಚಂಚಲವಾಗಿರುವ ಮನಸನ್ನು ಹಿರಿಯರು ಮರ್ಕಟಕ್ಕೆ ಹೋಲಿಕೆ ಮಾಡಿದ್ದಾರೆ. ಮನಸ್ಸು ಮತ್ತು ಬುದ್ದಿ ನಮ್ಮ ಹಿಡಿತದಲ್ಲಿ ಇರಬೇಕು. ಒಂದು ವೇಳೆ ಆ ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲ ಎಂದರೆ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಹಾರಾಡುತ್ತದೆ. ವ್ಯಸನಕ್ಕೆ ಬಲಿಯಾದವರಲ್ಲಿ ನಕಾರಾತ್ಮಕ ಯೋಚನೆಗಳು ಬರುವುದು ಸಹಜ. ಆದರೆ ಸಕಾರಾತ್ಮಕ ಯೋಚನೆ ಬೆಳಸಿಕೊಳ್ಳಲು ಹಾಗೂ ಉತ್ತಮ ಬದುಕು ಕಲ್ಪಿಸಿಕೊಳ್ಳುವುದಕ್ಕೂ ಅವಕಾಶ ಇದೆ ಎನ್ನುವುದನ್ನು ಮರೆಯಬಾರದು. ಆ ಭರವಸೆಯನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು ಎಂದು ಉತ್ಸಾಹ ತುಂಬಿದರು.

ಜೀವನದ ನಿಜವಾದ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ಜೀವನ ನಡೆಸಬೇಕು. ಇತರರಿಗೆ ಮಾದರಿಯಾಗಿ ಬಾಳಬೇಕು. ಇದಕ್ಕೆ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಗೆಳೆಯರ ಸಹವಾಸ ಮಾಡಬೇಕು. ಉತ್ತಮ ಪುಸ್ತಕಗಳನ್ನು ಓದವೇಕು. ಜತೆಗಡ ಬದಲಾವಣೆಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕನ್ನು ಸವಾಲಾಗಿ ಸ್ವೀಕಾರ ಮಾಡಿ ವ್ಯಸನದಿಂದ ಹೊರಬರಬಂದು ಸಮಾಜಕ್ಕೆ ಆಸ್ತಿಯಾಗಿ ನಾವು ಬಾಳಬೇಕು ಎಂದು ಮಾರ್ಗದರ್ಶನ ಮಾಡಿದರು.

ವ್ಯಸನಕ್ಕೆ ಬಲಿಯಾದವರನ್ನು ಮತ್ತೆ ಸಮಾಜ ಸ್ವೀಕಾರ ಮಾಡುವುದಿಲ್ಲ. ನಂಬುವುದಿಲ್ಲ. ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಸಮಾಜ ನಮ್ಮನ್ನು ಅನುಮಾನದಿಂದಲೇ ನೋಡುತ್ತದೆ ಎಂದು ಬಹುತೇಕ ವ್ಯಸನಿಗಳು ಹೇಳುತ್ತಾರೆ. ಇದು ಸಹಜ. ಇಷ್ಟು ದಿನ ನಾವು ವ್ಯಸನದಿಂದ ಹಲವಾರು ಸಮಸ್ಯೆ, ಅವಾಂತರಗಳನ್ನು ಸೃಷ್ಟಿ ಮಾಡಿರುತ್ತೇವೆ. ಸುಲಭವಾಗಿ ಯಾರೂ ಕೂಡ ನಮ್ಮನ್ನು ನಂಬುವುದಿಲ್ಲ. ಆದರೆ ಇತರರಲ್ಲಿ ಆ ನಂಬಿಕೆಯನ್ನು ಮೂಡಿಸುವುದಕ್ಕೆ ನಿಮ್ಮ ಪ್ರಮಾಣಿಕ ಪ್ರಯತ್ನ ನಿರಂತರವಾಗಿ ಇರಬೇಕು. ಒಂದಲ್ಲ ಒಂದು ದಿ‌ನ ಸಮಾಜ ನಿಮ್ಮನ್ನು ನಂಬುತ್ತದೆ, ಒಪ್ಪುತ್ತದೆ ಎಂದು ಪ್ರಶ್ನೆವೊಂದಕ್ಕೆ ಉತ್ತರ ನೀಡಿದರು.

ಕೃಷ್ಣ ಮತ್ತು ಕರ್ಣ ಒಮ್ಮೆ ಭೇಟಿಯಾದಾಗ ಕರ್ಣ ತನ್ನ ನ್ಯೂನತೆಗಳನ್ನು ಹೇಳಿಕೊಳ್ಳುತ್ತಾನೆ. ಆ ಕಾರಣಗಳಿಂದ ನಾನು ದುರ್ಯೋಧನನ ಪಕ್ಷ ವಹಿಸಬೇಕಾಯಿತು ಎಂದು ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುತ್ತಾನೆ. ಆದರೆ ಕೃಷ್ಣನಿಗೂ ಹುಟ್ಟಿದಾಗಿನಿಂದ ಹಲವಾರು ಸಮಸ್ಯೆಗಳು ಇದ್ದವೂ. ಆದರೆ ಆತ ಅಧರ್ಮದ ಪರ ಎಂದೂ ನಿಲ್ಲಲಿಲ್ಲ.‌ ಹುಟ್ಟಿದಾಗಿಂದ ತನಗೆ ಎಷ್ಟೆ ಕಷ್ಟ ಬಂದರೂ ಕೃಷ್ಣ ಧರ್ಮ ತ್ಯಜಿಸಲಿಲ್ಲ. ಆ ಕಾರಣದಿಂದಲೇ ಕೃಷ್ಣ ದೈವತ್ವದ ಕಡೆ ಸಾಗಿದ. ಇದು ನಮಗೂ ‌ಅನ್ವಯವಾಗಬೇಕು. ನಮ್ಮ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ ನೆಪಹೇಳಿ ವ್ಯಸನಕ್ಕೆ ದಾಸರಾಗಬಾರದು. ಅಧರ್ಮದ ಮಾರ್ಗ ತುಳಿಯಬಾರದು. ಕೃಷ್ಣ ನಮಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಗ‌ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ವ್ಯವಸ್ಥಾಪಕ ಸಂಜಯ್, ರವೀಂದ್ರ, ಮಹೇಶ್ ಇತರರು ಇದ್ದರು.

Leave a Reply

Your email address will not be published. Required fields are marked *