ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ಷಣ ಕ್ಷಣವೂ ಜಾಗರೂಕರಾಗಿರಬೇಕು : ಎಚ್.ವಿದ್ಯಾ

ಮೈಸೂರು: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ಷಣ ಕ್ಷಣವೂ ಜಾಗರೂಕರಾಗಿರಬೇಕು. ಒಂದು ಕ್ಷಣ ಮೈಮರೆತರೂ ಸ್ಪರ್ಧೆಯಿಂದಲೇ ಹೊರಗುಳಿಯಬೇಕಾಗುತ್ತದೆ ಎಂದು ಎಂಎಂಸಿಆರ್‍ಐ ಹಣಕಾಸು ಸಲಹಾ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಎಚ್.ವಿದ್ಯಾ ತಿಳಿಸಿದರು.

ತಾಲ್ಲೂಕಿನ ರಮ್ಮನಹಳ್ಳಿಯ ಸಂತ ಜೋಸಫರ ಪದವೀಧರರ ದಿನಾಚರಣೆ ಸಮಾರಂಭದಲ್ಲಿ ಮಹಿಳಾ ಕಾಲೇಜು ಅಂತಿಮ ವರ್ಷದ ಪದವೀಧರರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀವು ಮುಂದಿಡುವ ಪ್ರತಿಯೊಂದು ಹೆಜ್ಜೆಯೂ ಕಲಿಕೆಯಷ್ಟೇ ಮುಖ್ಯವಾಗುತ್ತವೆ. ಜೋಪಾನವಾಗಿ ಎಲ್ಲವನ್ನು ಖುಷಿಯಿಂದ ನಿರ್ವಹಿಸಿಕೊಂಡು ಮುಂದೆ ಸಾಗಬೇಕು. ಆಗ ಗೆಲುವು ಖಂಡಿತಾ ನಿಮ್ಮದಾಗುತ್ತದೆ ಎಂದು ತಿಳಿಸಿದರು.

ಹೊಸದೊಂದು ಕನಸು, ಹುರುಪು, ಉತ್ಸಾಹ ಹೊತ್ತು ಹೊರ ಹೋಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ. ನಿಮ್ಮೆಲ್ಲ ಇಷ್ಟಾರ್ಥಗಳು ಈಡೇರಲಿ ಎಂದು ಶುಭ ಹಾರೈಸಿದರು. ವ್ಯಕ್ತಿತ್ವವನ್ನು ಇನ್ನಷ್ಟು ಮತ್ತಷ್ಟು ರೂಪುಗೊಳಿಸಿಕೊಳ್ಳುವುದೇ ನಿಜವಾದ ಶಿಕ್ಷಣ, ಸಾಮಾಜಿಕ ಜವಾಬ್ದಾರಿಯನ್ನು ಕಲಿಸದ, ಸಮಾಜದ ಜನರ ಬಗ್ಗೆ ಕಾಳಜಿಯನ್ನು ವಹಿಸದ, ನನ್ನವರೆನ್ನುವುದನ್ನು ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ. ಪದವಿ ಪೂರ್ಣಗೊಳಿಸಿದ ನಂತರ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಸಮಾಜಕ್ಕೆ ಉತ್ತಮ ಪ್ರಜೆಯಾಗಿ, ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ, ನಿಮ್ಮ ಮುಂದಿನ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ನಂತರ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ನೆನಪಿನ ಕಾಣಿಕೆಯನ್ನು ವಿತರಿಸಿ ಶುಭ ಕೋರಿದರು. ಎಂಡಿಇಎಸ್ ಕಾರ್ಯದರ್ಶಿ ಫಾ.ವಿಜಯ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪೃಥ್ವಿ ಎಸ್ ಶಿರಹಟ್ಟಿ, ಎಂಡಿಇಎಸ್ ಆಡಳಿತಾಧಿಕಾರಿ ಫಾ.ಅವಿನಾಶ್, ಖಜಾಂಚಿ ಫಾಮದಲೈ ಮುತ್ತು, ಸಿಇಒ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಸೆಬಿ ಮಾವೇಲಿ, ಸಾತಗಳ್ಳಿಯ ಸಂತ ಜೋಸೆಫರ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಕ್ರಿಸ್ಟಿಯಾನ ಫೆರೇರಾ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *