ಚಾಮರಾಜನಗರ: ಭಾರತ ಸೇವಾದಳದ ಪ್ರಥಮ ಮಹಾದಂಡನಾಯಕರಾದ ಐ.ಎನ್.ಎ. ರಾಮರಾವ್ ರವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ಭಾರತ ಸೇವಾದಳದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಯಂತಿ ಕಾರ್ಯಕ್ರಮದಲ್ಲಿ ಐ.ಎನ್.ಎ. ರಾಮರಾವ್ ಅವರ ಭಾವಚಿತ್ರಕ್ಕೆ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟಪ್ಪ ನಾಗಪ್ಪಶೆಟ್ಟಿ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಐಎನ್ಎ ರಾಮರಾವ್ರವರು ಚಾಮರಾಜನಗರ ಜಿಲ್ಲೆಯ ಹೆಬ್ಬಸೂರು ಗ್ರಾಮದವರು. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ಚಂದ್ರಬೋಸ್ ರವರ ಸಹಚರರಾಗಿ ಸೇವೆ ಸಲ್ಲಿಸಿ, ತದ ನಂತರ ಅಖಿಲ ಭಾರತ ಸೇವಾದಳದ ಪ್ರಥಮ ದಂಡನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ರಾಜ್ಯಾದ್ಯಂತ ಸೇವಾದಳದ ಸಂಘಟನೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಐಎನ್ಎ ರಾಮರಾವ್ರವರು ಅಪ್ಪಟ ದೇಶಭಕ್ತರಾಗಿದ್ದರು. ಅತ್ಯಂತ ಸರಳಜೀವಿಯಾಗಿದ್ದರು. ತನ್ನ ಕೊನೆಯ ಉಸಿರಿರುವವರೆಗೂ ಸೇವಾದಳದ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಾ, ದೇಶಪ್ರೇಮವನ್ನು ಮೆರೆದಂತಹ ಧೀಮಂತ ನಾಯಕರು ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸೇವಾದಳದ ಜಿಲ್ಲಾ ಕೋಶಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಸಂಘಟನಾ ಕಾರ್ಯದರ್ಶಿ ಜೋಸೆಫ್, ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ, ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ್ ನಾಯಕ್, ಅರುಣ್.ಎ, ಶಿವಣ್ಣ ಮತ್ತಿತರರಿದ್ದರು.