ಸಂಸ್ಕೃತ ವಿದ್ವಾಂಸಕರಾದ ಎಚ್.ವಿ.ನಾಗರಾಜರಾವ್ ಅಭಿಮತ
ಬಸವಮಾರ್ಗ ಸಂಸ್ಥೆಯಲ್ಲಿ ಯೋಗ ಮತ್ತು ಕುಡಿತ ಬಿಡಿಸುವ ಶಿಬಿರ ಸಮಾರೋಪ
ಮೈಸೂರು : ಯೋಗದ ಕಾರಣದಿಂದ ಭಾರತ ಇಂದು ವಿಶ್ವ ಗುರುವಾಗಿದೆ ಎಂದು ಸಂಸ್ಕೃತ ವಿದ್ವಾಂಸಕರಾದ ಎಚ್.ವಿ.ನಾಗರಾಜರಾವ್ ಹೇಳಿದರು.
ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 21 ದಿನಗಳ ಪ್ರಥಮ ಯೋಗ ಮತ್ತು 47 ನೇ ಕುಡಿತ ಬಿಡಿಸುವ ಶಿಬಿರದ ಅಂಗವಾಗಿ ಭಾನುವಾರ ಹೆಬ್ಬಾಳಿನಲ್ಲಿ ಇರುವ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗ ಭಾರತದಲ್ಲಿ ಹುಟ್ಟಿ ಇಂದು ವಿಶ್ವವ್ಯಾಪಿ ಹರಡಿಕೊಂಡಿದೆ. ವಿಶ್ವಕ್ಕೆ ಭಾರತ ಕೊಟ್ಟ ಅತಿ ದೊಡ್ಡ ಕೊಡುಗೆಯಲ್ಲಿ ಯೋಗ ಅಗ್ರ ಸ್ಥಾನದಲ್ಲಿ ಇದೆ. ಯೋಗ ಎಂದರೆ ಕೇವಲ ಆಸನ ಮಾತ್ರವಲ್ಲ. ಜೀವನದ ನಿಜವಾದ ಸಾರ ಯೋಗದಲ್ಲಿ ಅಡಗಿದೆ. ಯೋಗಿಗಳು ಮೊದಲು ಯೋಗದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯನ ಸಾಧನೆಗೆ ದೊಡ್ಡ ಅಡ್ಡಿ ಎಂದರೆ ಅದು ವ್ಯಸನ. ಚಟಗಳಿಗೆ ಬಲಿಯಾದರೆ ಅದು ಜೀವನವೇ ಅಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಮೊದಲು ವ್ಯಸನಗಳಿಂದ ಹೊರ ಬರಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿಕೊಂಡು ಈ ದಾಸ್ಯದಿಂದ ಹೊರಬರಬೇಕು. ಚಟದಿಂದ ದೂರವಾದರೆ ಯಾವುದಾದರೂ ಸಾಧನೆ ಮಾಡಬಹುದು. ಅದಕ್ಕೆ ನಿರಂತರ ಪ್ರಯತ್ನ ಬೇಕು. ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಂಡು ನೀವು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ ಅವರು ಮಾತನಾಡಿ, 48ನೇ ಕುಡಿತ ಬಿಡಿಸುವ ಶಿಬಿರದಲ್ಲಿ 21 ದಿನಗಳ ಮೊದಲ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರ ಸಂಪೂರ್ಣ ಯಶಸ್ವಿಯಾಗಿದೆ. ವ್ಯಸನಿಗಳ ಮನಃ ಪರಿವರ್ತನೆಗೆ ಸಂಸ್ಥೆಯಲ್ಲಿ ಯೋಗವನ್ನು ಒಂದು ಭಾಗವನ್ನಾಗಿ ಅನುಸರಿಸಲಾಗುತ್ತಿದೆ. ವ್ಯಸನಮುಕ್ತ ಕೇಂದ್ರವನ್ನು ಆಶ್ರಮ ಮತ್ತು ಗುರುಕುಲದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. 21 ದಿನಗಳ ಈ ಶಿಬಿರದಲ್ಲಿ ಯೋಗವನ್ನು ಗುಣಮಟ್ಟದಲ್ಲಿ ನೀಡಲಾಗಿದೆ. ಇದರಿಂದ ವ್ಯಸನಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಸವಮಾರ್ಗ ಸಂಸ್ಥೆಯಲ್ಲಿ ಇದುವರೆಗೆ 10 ಸಾವಿರಕ್ಕೂ ಹೆಚ್ಚು ವ್ಯಸನಿಗಳು ಚಿಕಿತ್ಸೆ ಪಡೆದು ಹೊರ ಹೋಗಿದ್ದಾರೆ. ಅವರೆಲ್ಲ ಇಂದು ಕುಡಿತದಿಂದ ಹೊರ ಬಂದು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅವರಂತೆ ನೀವೂ ಆಗಬೇಕು. ವ್ಯಸನದಿಂದ ಹೊರಬಂದು ಕುಟುಂಬ ಹಾಗೂ ಸಮಾಜಕ್ಕೆ ನೀವೆಲ್ಲ ಉತ್ತಮ ಪ್ರಜೆಯಾಗಿ ಬಾಳಬೇಕು. ಇಲ್ಲಿಂದ ಮನೆಗೆ ತೆರಳಿದ ಮೇಲೆ ಇಲ್ಲಿ ಹೇಳಿಕೊಟ್ಟ ಯೋಗವನ್ನು ನಿತ್ಯ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಯೋಗ ಪ್ರಮಾಣ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್, ವ್ಯವಸ್ಥಾಪಕರಾದ ಬಾಲಸುಬ್ರಹ್ಮಣ್ಯಂ, ಸಂಜಯ್ ಇತರರು ಉಪಸ್ಥಿತರಿದ್ದರು.