ಚುರು ಚುರು ಬಿಸಿಲು ಉಬ್ಬೇರಿಸಿ ಸುಡುತ್ತಿದೆ,
ಉದುರಿದ ಎಲೆಗಳಿಂದ ಬೋಳು
ಅಂಬರದಂತೆ ಕಾಣುವ ಮರಗಳು,
ಬೆವತು ಬಸವಳಿದ ಜೀವರಾಶಿಗಳು,
ನಗುವಿನ ಚೈತನ್ಯವಿಲ್ಲದೆ ಒಣಗಿದ ಭೂತಾಯ ಒಡಲು,
ದಾಹತಣಿಸಲಾಗದೆ ಮರುಗುತ್ತಿರುವ ಜೀವಜಲದ ಕಡಲು
ಉರಿಬಿಸಿಲ ಧಗೆಯಲ್ಲಿ ಮೂಡಿದ ಸಾಲುಗಳು
ಮುದುಡಿ ಬಾಡಿ ಒಣಗುವವು ಅಂತರಂಗದೊನಲು.
ಇದೇನಪ್ಪ ಈತ ಯುಗಾದಿ ಅಂತ ಶೀರ್ಷಿಕೆ ಬಳಸಿ, ಒಣ ಬಣ ಬಣ ಅಂತ ಕವನ ಗೀಚ್ತಾ ಇದ್ದಾನೆ ಅಂತ ದಯವಿಟ್ಟು ಓದುಗ ಮಿತ್ರರಾರು ಅನ್ಯಥಾ ಭಾವಿಸಬೇಡಿ. ಲೇಖನದ ಉದ್ದೇಶ ಯುಗಾದಿಯನ್ನೇ ಕುರಿತಾಗಿದ್ದು, ಈ ಬಾರಿ ಯುಗಾದಿ ಆಚರಣೆ ಮಾಡುತ್ತಿರುವ ಮನಸ್ಸುಗಳಿಗೆ ಕವನದಲ್ಲಿ ಚಿತ್ರಿತವಾಗಿರುವ ಭಾವ ಪಡಿಮೂಡಿದ ಬಗೆಯನ್ನು ತಿಳಿಸಿದೆ ಅಷ್ಟೇ. ಅದಕ್ಕಾಗಿ ಲೇಖನಕ್ಕೆ ಪೂರಕವಾಗಿ ಕವಿತೆಯಲ್ಲಿ ವಾತವರಣದ ಒಂದು ಸಣ್ಣ ಎಳೆಯನ್ನು ಎಸಳಿನಂತೆ ರಚಿಸಿರುವೆನು. ಹಬ್ಬಗಳು ಜಡವಾದ ಮನಸ್ಸುಗಳು ಜೀವ ಚೈತನ್ಯಗೊಳಿಸಿ ಲವಲವಿಕೆಯಲ್ಲಿ ತಾಜಾತನದಿಂದ ಒಂದಷ್ಟು ಮನೋರಂಜನೆ, ಬಾಂಧವ್ಯಗಳ ಬೆಸುಗೆ, ದೂರವಾದ ಮನಸ್ಸುಗಳನ್ನು, ಅಂತರವಿರುವ ಭಾವದ ಹಕ್ಕಿಗಳನ್ನು ಹತ್ತಿರಕ್ಕೆ ಸೆಳೆಯುವ ಸಂಬಂಧ ಸೇತುವೆ. ಯುಗಾದಿ ಎರಡು ಪದಗಳ ಸಂಯೋಜಿತವಾಗಿ ಜೀವಿಸಿರುವ ಪದಬೃಂದ ಅಂದರೆ ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು ವಿಷಯ ನಿಪುಣರು ಅರ್ಥೈಸುವ ಕಾರ್ಯ ಮಾಡಿದ್ದಾರೆ.
ಉಗಾದಿ ಎಂದು ಹಳ್ಳಿ ಮಾತಲ್ಲಿ ಯುಗಾದಿ ಎಂದು ಗ್ರಾಂಥಿಕವಾಗಿ ಕರೆಯಲಾಗುವ ಹಿಂದೂಗಳಿಗೆ ಪ್ರಾರಂಭವಾಗುವ ಹೊಸ ವರುಷವೇ ಈ ಯುಗಾದಿಯಾಗಿದೆ. ಯುಗಾದಿ ಎಂಬ ಪದ ಬಿಡಿಸಿದಾಗ ಯುಗ ಆದಿ ಎಂಬ ಎರಡು ಪದಗಳ ಸಂಯೋಜನೆಯಿಂದ ಒಡಮೂಡಿದ ಭಾವದ ಬೆಳಕು. ಅಲ್ಲದೇ ತ್ರಿ ಮೂರ್ತಿಗಳಲ್ಲಿ ಒಬ್ಬರಾದ ಬ್ರಹ್ಮನು ಜಗತ್ತನ್ನು ಸೃಷ್ಟಿಸಿದ ದಿನವೆಂದು ಕೂಡ ಐತಿಹ್ಯಗಳು ಮಾತಾಡುತ್ತವೆ. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವಾದ ದಿನವು ಇದಾಗಿದೆ ಎಂದು ಮತ್ತೊಂದು ಸಂಗತಿ ಲಭಿಸುತ್ತದೆ.ಸೂರ್ಯುನು ಚೈತ್ರ ಶುದ್ಧ ಪಾಡ್ಯಮಿಯ ದಿನ ಭೂಮಧ್ಯರೇಖೆಯ ಮೇಲೆ ಇರುವುದರಿಂದ ಈ ದಿನವನ್ನು ಯುಗಾದಿ ಯುಗದ ಆದಿ ಎಂದು ಕರೆಯುತ್ತಾರೆ.
ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಯುಗಾದಿಯು ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡ ಹಬ್ಬವಾಗಿದೆ. ಅಷ್ಟೇ ಅಲ್ಲದೆ ಯುಗಾದಿಯು ಶಾಲಿವಾಹನ ಶಕಸಂವತ್ಸರದ ಮೊದಲ ಹಬ್ಬವೂ ಆಗಿದೆ. ಯುಗಾದಿ ಎಂದರೆ ಯುಗದ ಆದಿ, ಹಿಂದೂಗಳಿಗೆ ವರುಷದ ಆರಂಭ. ಯುಗಾದಿ ಎಂಬ ಸಂಸ್ಕೃತ ಭಾಷೆಯ ಪದದ ತದ್ಭವ ರೂಪವೇ ಉಗಾದಿ. ಈ ಹಿಂದೆ ಉಗಾದಿ ಹಬ್ಬವನ್ನು ಉಳುಮೆ ಹಬ್ಬವೆಂದು ಆಚರಿಸುತ್ತಿದ್ದರು. ‘ಉ’ ಎಂದರೆ ಉಳುಮೆ ಅಥವಾ ನೇಗಿಲು ಹೂಡುವುದು, ‘ಗ’ ಎಂದರೆ ಚಲನೆ, ‘ಆದಿ’ ಎಂದರೆ ಆರಂಭ ಎಂದು ಅರ್ಥೈಸಿಕೊಳ್ಳಬಹುದು. ನಮ್ಮ ದೇಶ ಪ್ರಾಥಮಿಕವಾಗಿ ಕೃಷಿ-ವ್ಯವಸಾಯವನ್ನೇ ಪ್ರಾಧಾನವಾಗಿಸಿಕೊಂಡ ದೇಶವಾಗಿದೆ. ಕೃಷಿ ಸಂಸ್ಕೃತಿಯ ಪರಂಪರೆ, ಆಚರಣೆಗಳಿಗೆ ತನ್ನದೇ ಆದ ವಿಶೇಷ ಸಂಗತಿಗಳು ತಳುಕು ಹಾಕಿಕೊಂಡು ಅಸ್ಥಿತ್ವಕ್ಕೆ ಬಂದಿರುವುದು ವಾಡಿಕೆ. ಯಾವುದೇ ಹಬ್ಬಗಳ ಆಚರಣೆಯಲ್ಲಿ ಹಳ್ಳಿ-ಜನಪದ-ಪರಂಪರೆ-ಸಂಸ್ಕೃತಿಯ ಮೂಲ ಬೇರುಗಳು ಭದ್ರಚಮವಾಗಿ ನೆಲೆ ಊರಿರುತ್ತವೆ. ಯಾವುದನ್ನೇ ಆಗಲೇ ಆಚರಣೆಗಾಗಿ ಆಚರಣೆ ಎಂದರೆ ಅದರ ಮಹತ್ವದ ಅರಿವು ನಮಗಾಗುವುದಿಲ್ಲ. ಹಬ್ಬದ ಆಚರಣೆಯ ಒಳಗು-ಹೊರಗು ಒಂದು ಹಿನ್ನೆಲೆ, ಸಾಂಸ್ಕೃತಿಕ ಜಗತ್ತಿನ ಮನಸ್ಸುಗಳು ಇದರಲ್ಲಿ ಕೆಲಸ ಮಾಡಿರುತ್ತವೆ. ಅಂದರೆ ಮುಂಗಾರು ಮಳೆ ಪ್ರಾರಂಭವಾಗಿ ನೆಲವನ್ನು ತಂಪುಗೊಳಿಸಿ, ಅವಂಧ್ಯೆಯಾದ ಭೂತಾಯ ಮಡಿಲಿನಿಂದ ಮಣ್ಣಿನ ವಾಸನೆ ಎದ್ದಾಗ ವ್ಯವಸಾಯದ ಕಾರ್ಯಗಳು ಹೊನ್ನಾರಿನೊಂದಿಗೆ ನೇಗಿಲು ಹೂಡಿ ಉಳುವ ಮೂಲಕ ಆರಂಭವಾಗಿಸುವುದೇ ರೈತರನ್ನು ಜೀವಚೈತನ್ಯಗೊಳಿಸುವ ಮೊದಲ ಹೆಜ್ಜೆಗಳು.
ಹಿಂದೂಗಳ ವರುಷದ ಪ್ರಾರಂಭದ ದಿನವಾದ್ದರಿಂದ ಈ ದಿನವು ಅತ್ಯಂತ ಮಹತ್ವದ ದಿನ ಹಾಗೂ ಶುಭದಿನವೆಂದು ನಿರ್ಧರಿಸಿ ಯಾವುದೇ ಶುಭವಾದ, ಮಂಗಳಕರವಾದ ಕಾರ್ಯಗಳನ್ನು, ಇಲ್ಲವೇ ಕ್ರಿಯಾಸಿದ್ಧಿಯನ್ನು ನೀಡುವ ಫಲದಾಯಕವಾದ ಯೋಜನೆಗಳನ್ನು ಕೈಗೊಳುತ್ತಾರೆ ಏಕೆದರೆ ಈ ದಿನದಲ್ಲಿ ಕೈಗೊಂಡ ಕಾರ್ಯಗಳು ಆದಷ್ಟು ಯಶಸ್ವಿಯಾಗುತ್ತವೆ ಎಂಬ ನಂಬಿಕೆಯು ಕೂಡ ಬಲವಾಗಿ ಮಿಳಿತವಾಗಿದೆ. ಹಾಗಾಗಿ ವ್ಯಾಪಾರಿಗಳು, ರೈತರು, ವರ್ತಕರು ಒಳ್ಳೆಯ ಮನಸ್ಸಿನಿಂದ ಶುಭವಾಗಲೆಂದು ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅಲ್ಲದೇ ಕಳೆದ ವರ್ಷದ ಲಾಭ-ನಷ್ಟಗಳನ್ನು ಅವಲೋಕಿಸಿ ನೋವು ನಲಿವುಗಳೊಂದಿಗೆ ಹೊಸ ಲೆಕ್ಕ- ಬಾಬ್ತುಗಳನ್ನು ಇದೇ ದಿನದಿಂದಲೇ ಆರಂಭಿಸುವುದು ಲೋಕರೂಢಿ.
ಈಗಾಗಲೇ ಸಂಕ್ರಾಂತಿಯ ಸವಿಯಲ್ಲಿ ಹಿಂಗಾರಿನ ಬೆಳೆಯಲ್ಲಿ ಸುಗ್ಗಿಯ ಘಮಲಿನಿಂದ ಮನೆ ಮನಗಳು ಹಿಗ್ಗಿ ಸಮೃದ್ಧಿಯ ಬನದಲ್ಲಿ ನಲಿದಾಡಿರುತ್ತವೆ. ಪ್ರಕೃತಿಯ ಹೊಸ ಮೆರಗು ಜೀವಕಳೆಗೊಂಡು ನಳ ನಳಿಸುತ್ತಿರುತ್ತದೆ. ಕಾರುಣ್ಯವಿಲ್ಲದೆ ತನ್ನ ಇಚ್ಚೆಯಂತೆ ಸುರಿದ ಬೆಂಕಿಕೆಂಡದಲ್ಲಿ ಉರಿದು ಉರಿದು ಬೆಂದಿದ್ದ ನಿಸರ್ಗಕ್ಕೆ ತಂಪನೆರೆಯುವ ಕಾಲವೂ ಇದೇ ಆಗಿರುವುದರಿಂದ ಮಾವು, ಬೇವು, ಹೊಂಗೆ ಮರಗಳಲ್ಲಿ ಹೊಸಚಿಗುರು ಚಿಗುರಿ ಹಸಿರಿನ ಕಿರೀಟ ಧರಿಸಿ ಪ್ರಕೃತಿ ಮಾತೆ ರಮಣೀಯವಾಗಿ ಕಾಣಲು ವಸಂತನನ್ನು ಕಾಣುವ ಎಲ್ಲಾ ಬಗೆಯ ವೇದಿಕೆ ಯುಗಾದಿಯ ಹಬ್ಬದಿಂದ ಸಜ್ಜುಗೊಂಡಿರುತ್ತದೆ.
ಜೀವನ ಸೌಂದರ್ಯ
ಕತ್ತಲನ್ನು ಅಂಧಕಾರವೆಂದು,
ಬೆಳಕನ್ನು ಸುಜ್ಞಾನವೆಂದು,
ಒಳ್ಳೆಯದನ್ನು ಸದ್ಗುಣಗಳೆಂದು,
ಕೆಟ್ಟದನ್ನು ದುರ್ಗುಣಗಳೆಂದು, ಕಿವಿಯನ್ನು ನಾದವನ್ನು
ಆನಂದಿಸುವ ಬಗೆ ಎಂದು,
ಕಣ್ಣುಗಳು ಸೌಂದರ್ಯವನ್ನು ಸವಿಯುವ ಭಾವದ ಹೊನ್ನೆಂದು,
ನಾಸಿಕವು ಸುವಾಸನೆಯ ಆಗ್ರಣಿಸುವ ಶ್ವಾಸವೆಂದು,
ನಾಲಿಗೆಯು ಸವಿರುಚಿ-ಸಿಹಿಮಾತಿನ ಹೂರಣವೆಂದು
ಬಗೆಯುವ ಬಗೆಯೇ ಜೀವನ ಸೌಂದರ್ಯ.
ಕಣ್ಣುಗಳೇ ಇಲ್ಲದಿದ್ದರೇ ನಿಸರ್ಗದಲ್ಲಿ ಘಟಿಸುವ ಅದೆಷ್ಟೋ
ಸೌಭಾಗ್ಯಗಳು ಗೋಚರವಾಗದೆ ಕತ್ತಲಲ್ಲಿಯೇ ಕರಗುತ್ತಿದ್ದವು ಎಂದಳು ನನ್ನವ್ವ ಸಾಕವ್ವ.
ಜೀವನ ಸೌಂದರ್ಯವೆಂಬುದು ಕಾಣುವ ಕಣ್ಣಿನಲ್ಲಿ ಅಡಗಿರುವ ಔದಾರ್ಯದಿಂದ ತಿಳಿಯುತ್ತದೆ ಈ ಬಗೆಯ ಔದಾರ್ಯವನ್ನು ಕರುಣಿಸುವ ಸೌಭಾಗ್ಯವೇ ವಸಂತನ ಆಗಮನ. ಆತನ ಆಗಮನದಿಂದ ಹೊಸ ಜೀವಕಳೆ ಗರಿಗೆದರುತ್ತದೆ.
ವರಕವಿ ದ.ರಾ ಬೇಂದ್ರೆಯರೇ ಅವರು ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…. ಇಲ್ಲಿಯ ಕವಿಯ ಭಾವ ಪ್ರಕೃತಿಯಲ್ಲಿ ನಿತ್ಯ ನೂತನತೆ ಅಡಗಿದೆ. ಹಳೆಯ ಕೊಳೆ ಕಳೆದು ಹೊಸ ಜೀವಕಳೆ ಬೆಳೆಯಲು ನಿಸರ್ಗವು ತನ್ನಲ್ಲಿಯೇ ನಿರ್ಮಿಸಿಕೊಂಡಿರುವ ಒಂದು ಅದ್ಭುತವಾದ ನಿಯಮ ಆದರೆ ಮನುಷ್ಯನ ನಿಯಮಗಳು ಇದಕ್ಕೆ ವ್ಯತಿರಿಕ್ತವಾದುದು ಒಂದೇ ಬಾಲ್ಯ ಒಂದೇ ಹರೆಯ ಒಂದೇ ಮುಪ್ಪು ಒಮ್ಮೆಲೇ ಸಾವು ದಾಳಿ ಮಾಡಿ ಒಡಲನ್ನು ಬಡಿದು ಜೀವವನ್ನೇ ಹಾರಿಸಿಕೊಂಡು ಹೋಗಿ ಬಿಟ್ಟರೆ ಅಲ್ಲಿಗೆ ಜೀವ-ಜೀವನ ಮುಕ್ತಾಯವಾದಂತೆ ಎಂದಿದ್ದಾರೆ. ಹಾಗೆಯೇ ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ಈ ಸಾಲುಗಳು ಕೂಡ ಹಳೆಯ ಕಹಿ ಸತ್ಯಗಲಕ ಮರೆತು ಹೊಸತನದೊಂದಿಗೆ ಬದುಕು ಕಟ್ಟಿಕೊಳ್ಳಲು ಮನಸ್ಸನ್ನು ಒಗ್ಗಿಸಿಕೊಳ್ಳಬೇಕಾದ ಅಗತ್ಯವನ್ನು ಸಾರಿದ್ದಾರೆ.
ಯುಗಾದಿಯಂದು ವಿಶೇಷವಾಗಿ ಅಭ್ಯಂಜನ ಸ್ನಾನ ಮಾಡಲಾಗುತ್ತದೆ. ಅಂದರೆ ನೀರಿಗೆ ಬೇವಿನ ಎಲೆಯನ್ನು ಹಾಕಿ ನೀರು ಕಾಯಿಸಿ, ಹರಳೆಣ್ಣೆಯನ್ನು ಕೈ-ಕಾಲು, ಮೈಗೆಲ್ಲಾ ನೇವಿಸಿ ಸ್ವಲ್ಪ ಸಮಯವಾದ ಮೇಲೆ ಕೆಂಡಕಾರುವ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವ ಬಗೆ ಅನುಪಮವಾದುದು. ಬೇವಿನ ಸೊಪ್ಪು ಕ್ರಿಮಿನಾಶಕ(ಹಿಂದೆ ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುತ್ತಿದ್ದರು), ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ, ಹಾಗೆಯೇ ಮನೆಯ ಬಾಗಿಲಿಗೆ ಬೇವಿನಸೊಪ್ಪು, ಮಾವಿನ ಸೊಪ್ಪಿನ ಅಲಂಕಾರವನ್ನು ಮಾಡುತ್ತಾರೆ ಎಂಬುದನ್ನು ಮರೆಯುವಂತಿಲ್ಲ ಹಿರಿಯರು ಏನೇ ಮಾಡಿದರು ಅದಕ್ಕೊಂದು ಸೈದ್ದಾಂತಿಕ ಎಳೆ, ವೈಜ್ಞಾನಿಕ ಕಳೆ ಇರುವುದು ಗಣ್ಯ ಸಂಗತಿ. ಇಂದು ಈ ಬಗೆಯ ಸ್ನಾನದ ಮಹತ್ವ ಅರಿಯದೆ ಸ್ನಾನವೇ ಒಂದು ಬಗೆಯ ಕೃತಕತೆಗೆ ಒಳಗಾಗಿ ಕಾಗೆ ಸ್ನಾನದಂತಾಗಿದೆ, ಮನೆಯ ಬಾಗಿಲಿಗೆ ಕೃತಕ ಪ್ಲಾಸ್ಟಿಕ್ ಎಲೆಯ ಹೂವು ಎಲೆಯ ತೋರಣಗಳು ರಾರಾಜಿಸುತ್ತಿವೆ.
ಯುಗಾದಿಯ ಮತ್ತೊಂದು ವಿಶೇಷ ಬೇವು-ಬೆಲ್ಲ
ಜೀವನವೆಂದರೆ ಸೋಲು-ಗೆಲುವು, ಸುಖ-ದುಃಖ, ಜನನ-ಮರಣ, ನಗು-ಅಳು, ಏರು-ಇಳಿ, ಉಬ್ಬು-ತಗ್ಗು ಇದ್ದದ್ದೇ. ಗೆದ್ದಾಗ ತಲೆತಗ್ಗಿಸಿ ನಡೆದು ಸೋತಾಗ ತಲೆಎತ್ತಿ ನಡೆಯಬೇಕಾದ ಅಗತ್ಯವನ್ನು ಸಾರುವ ಮೂಲ ಬೇರಿನಲ್ಲಿ ಮೊಳೆಕೆಗೊಂಡಿದೆ ಸೋಲಿರಲಿ ಗೆಲುವಿರಲಿ ಸಮಚಿತ್ತ ಭಾವ, ಸಾಮರಸ್ಯದ ಮನೋಬಲ ಸದಾ ಜಾಗೃತವಾಗಿರಲಿ, ಆತ್ಮೋದ್ದಾರ, ಜೀವನೋತ್ಸಾಹದ ಬಾಳಿಗೆ ಬೆಳಕಾಗಿರಲಿ, ಆಧುನಿಕ ಜಂಜಡವಾದ ಬದುಕಿನಲ್ಲಿ ನಾನಾ ಕಾರಣಗಳಿಗಾಗಿ ತಮ್ಮನ್ನು ತಾವೇ ಮರೆತು ಹೋಗುತ್ತಿರುವ ವಾತಾವರದಲ್ಲಿ ಈ ಬಗೆಯ ಹಬ್ಬದ ಆಚರಣೆಗಳು ಜೀವನ ಸೌಂದರ್ಯನ್ನು ವೃದ್ಧಿ ಮಾಡುತ್ತವೆ. ಮನುಷ್ಯತ್ವದ ಎಳೆಗಳನ್ನು ಜೀವಂತಗೊಳಿಸುವಿಕೆ ಆಚರಣೆಯ ಹಿರಿಯಭಾವ ಎಂಬುದನ್ನು ಸಾರುವ ಯುಗಾದಿಯಲ್ಲಿ ಮುಖ್ಯವಾಗಿ ಬೇವು ಬೆಲ್ಲವನ್ನು ಮಿಶ್ರಣಗೊಳಿಸಿ ಕಷ್ಟ-ಸುಖವನ್ನು ಬಾಳಿನಲ್ಲಿ ಸಮ ಪ್ರಮಾಣದಲ್ಲಿ ಸ್ವಾಗತಿಸಬೇಕು ಎಂದು ಸಾರುವ ಹಿನ್ನಲೆಯಲ್ಲಿ ಸ್ವೀಕರಿಸಲಾಗುತ್ತದೆ. ಸಂಬಂಧಿಕರು ಬಂಧು ಬಳಗವನ್ನು ಹಬ್ಬಕ್ಕೆ ಆಹ್ವಾನಿಸಿ ಹೋಳಿಗೆ ಊಟವನ್ನು ಉಣ ಬಡಿಸಲಾಗುತ್ತದೆ. ಮನುಜನೆಂದ ಮೇಲೆ ನೋವುಗಳು ಸಹಜ ಆ ಎಲ್ಲವುಗಳ ಮರೆತು ಈ ದಿನವಾದರೂ ಸಂತೋಷ ಸಂಭ್ರಮದ ಗಳಿಗೆಗಳಲ್ಲಿ ಭಾಗಿಯಾಗುವಂತೆ ಮಾಡುವುದು ಬೇಸರ ಕಳೆಯಲೆಂದು ಇಸ್ಪೀಟೆಲೆಗಳ ಆಟವನ್ನು ಆಡಿ(ಆದರೆ ಈ ಆಟ ಇಂದು ಚಟವಾಗಿ ಮನೆ-ಮಟ, ಆಸ್ತಿ, ಸಂಪತ್ತನ್ನು ಕಳೆದುಕೊಳ್ಳಲು ದಾರಿ ಮಾಡಿಕೊಟ್ಟು ಎಷ್ಟೋ ಕುಟುಂಬಗಳು ಬೀದಿ ಪಾಲಾಗಿರುವುದಂತು ದುರಂತ ಸತ್ಯ) ಇಡೀ ದಿನವು ಸಂಭ್ರಮ, ಸಂತಸದ ಹೊಳೆಯಾಗಿಸುವ ಮನೋಭಾವ ಹಬ್ಬದ ಮಹಾ ಉದ್ದೇಶ.

–ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹಿಂದೂಸ್ಥಾನ್ ಕಾಲೇಜು ಹಾಗೂ
ಹವ್ಯಾಸಿ ಬರಹಗಾರ, ಮೈಸೂರು,